ವರ್ಷವಿಡೀ ಹಸಿರು ಸಿರಿಯಲ್ಲಿ ಕಂಗೊಳಿಸುವ ಕೇರಳ ಪ್ರವಾಸಿಗರಿಗೊಂದು ಸ್ವರ್ಗ ತಾಣ. ಬೆಂಗಳೂರಿನಿಂದ ಸ್ವಲ್ಪ ದೂರ ಎನಿಸಿದರು ಒಮ್ಮೆ ಬರಬೇಕಾದಂತಹ ಜಾಗವಂತೂ ಹೌದು. ಹಾಗೊಮ್ಮೆ ಬಿಡುವಿನ ಸಮಯದಲ್ಲಿ ಕೇರಳದಕಡೆ ಪ್ರಯಾಣ ಬೆಳೆಸಿದರೆ ನೋಡುವಂತಹ ಪ್ರದೇಶ ಹಲವಾರಿದೆ. ಪತ್ರಿಕೆಗಳ ಆದರ್ಶ ನಗರ : ಕೊಟ್ಟಾಯಂ
ಈ ಪುಣ್ಯ ಭೂಮಿಯಲ್ಲಿ ತನ್ನದೇ ಶ್ರೇಷ್ಠತೆಯಿಂದ ಪ್ರವಾಸಿಗರನ್ನು ಕೂಗಿ ಕರೆಯುವ ಸ್ಥಳವೆಂದರೆ ಕೊಟ್ಟಾಯಂ. ನಿಜ, ಈ ಪ್ರದೇಶ ಹಾಗೂ ಇದರೊಂದಿಗೆ ಕೊಂಡಿಯಂತಿರುವ ಕೆಲವು ಸ್ಥಳಗಳ ಬಗ್ಗೆ ತಿಳಿಯೋಣ ಬನ್ನಿ.
ತಿರುನಕ್ಕಾರ ಮಹಾದೇವ ದೇವಸ್ಥಾನ
ಕೊಟ್ಟಾಯಂನ ಮುಖ್ಯ ಆಕರ್ಷಣೆಗೆ ಪಾತ್ರವಾದ ಈ ದೇಗುಲ ನಗರದ ಮಧ್ಯ ಭಾಗದಲ್ಲಿದೆ. ಶಿವನ ಆರಾಧನೆ ಮಾಡುವ ಈ ದೇಗುಲದ ವಾಸ್ತುಶಿಲ್ಪ ಹಾಗೂ ಕಲಾಕೃತಿಗಳು ಕೇರಳ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ಗೋಡೆಯ ಮೇಲೆ ಆಕರ್ಷಕ ಚಿತ್ತಾರಗಳಿರುವುದು ಕಾಣಬಹುದು. ದೇವಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಪಾಲ್ಗುಣ ಉತ್ಸವವನ್ನು ಆಚರಿಸುತ್ತಾರೆ.
ಪೂಂಜರ್ ಅರಮನೆ
ಈ ಅರಮನೆಯನ್ನು ನೋಡುತ್ತಿದ್ದರೆ ಆ ಕಾಲದ ರಾಜವೈಭವದ ನೆನಪು ತಟ್ಟನೆ ಮನದಂಗಳಕ್ಕೆ ಇಳಿಯುತ್ತದೆ. ಇಲ್ಲಿ ರಾಜರ ಕಾಲದಲ್ಲಿ ಬಳಸಲಾಗುತ್ತಿದ್ದ ಪೀಠೋಪಕರಣಗಳು, ವಿಶೇಷ ವಸ್ತುಗಳು, ತಾಳೆಗರಿ, ಬಗೆ ಬಗೆಯ ದೀಪದ ಕುಂಡಗಳು ಹಾಗೂ ಭಗವಾನ್ ಈಶ್ವರನು ನೃತ್ಯಮಾಡುತ್ತಿದ್ದ ಶೈಲಿಯಲ್ಲಿ ಕೆತ್ತಿರುವ ಮೂರ್ತಿಗಳನ್ನು ಇಡಲಾಗಿದೆ. ಇದಕ್ಕೆ ಹತ್ತಿರವಾಗಿ ಮಧುರೈ ಮೀನಾಕ್ಷಿ ದೇಗುಲವಿದೆ.
ಎಲಿವೀಝಾ ಪೂಂಚಿರಾ
ಕೊಟ್ಟಾಯಂ ಪ್ರವಾಸದಲ್ಲಿ ನೋಡಲೇ ಬೇಕಾದ ಇನ್ನೊಂದು ಸ್ಥಳವೆಂದರೆ ಎಲಿವೀಝಾ ಪೂಂಚಿರಾ ಬೆಟ್ಟ. ದಟ್ಟ ಹಸಿರಿನಿಂದ ಕೂಡಿರುವ ಈ ಬೆಟ್ಟದ ತುದಿಯಲ್ಲಿ ನಿಂತರೆ ಆಕಾಶವನ್ನು ಮುಟ್ಟಲು ಇನ್ನೇನು ಸ್ವಲ್ಪವೇ ದೂರದಲ್ಲಿದ್ದೇವೆ ಎನ್ನುವ ಭ್ರಮೆ ಉಂಟಾಗುವುದರಲ್ಲಿ ಸಂದೇಹವಿಲ್ಲ. ಇಲ್ಲಿ ಎಲ್ಲಾ ಕಾಲದಲ್ಲೂ ಅತಿಯಾಗಿ ಗಾಳಿ ಬೀಸುವುದರಿಂದ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಇಲ್ಲಿಗೆ ಹೋಗುವಾಗಲೂ ಸ್ವಲ್ಪ ಜಾಗರೂಕತೆಯಿಂದ ಹೋಗಬೇಕು.
ನೆಟ್ಟಕಮ್
ನೆಟ್ಟಕಮ್ ಕೊಟ್ಟಯಂ ಹತ್ತಿರ ಬರುವ ಒಂದು ಹಳ್ಳಿ. ಇಲ್ಲಿ ವಿವಿಧೆಡೆಯಿಂದ ವಲಸೆ ಬಂದಿರುವ ಹೊಸ ಬಗೆಯ ಪಕ್ಷಿಗಳನ್ನು ನೋಡುವುದೇ ಒಂದು ಚೆಂದ. ನೀವು ಪ್ರಕೃತಿ ಸೌಂದರ್ಯ ಹಾಗೂ ಹಕ್ಕಿಗಳ ಬಗ್ಗೆ ಹೆಚ್ಚು ಆಸಕ್ತಿ ಇದ್ದವರಾಗಿದ್ದರೆ ನಿಮಗೆ ಸೌಂದರ್ಯ ಸವಿಯಲು ಇದೊಂದು ಸೂಕ್ತವಾದ ಸ್ಥಳ.
ಕೊಟ್ಟತವಲಂ
ನೆಟ್ಟಕಮ್ ಊರಿನಲ್ಲಿ ಇರುವ ಚಿಕ್ಕ ಹಳ್ಳಿ ಕೊಟ್ಟತವಲಂ. ಈ ಊರಿನ ಪ್ರಕೃತಿ ಸಿರಿ ನೋಡುತ್ತಿದ್ದಂತೆ ಮಸ್ಸಿನ ದುಗುಡವೆಲ್ಲ ಮಾಯವಾಗಿ ವಿಶ್ರಾಂತಿ ಪಡೆದಂತಹ ಅನುಭವವಾಗುತ್ತದೆ. ಇಲ್ಲಿಯ ಇನ್ನೊಂದು ವಿಶೇಷವೆಂದರೆ ಗುಹೆ ಇರುವುದು. ಪುರಾತನ ಕಾಲದ ಈ ಗುಹೆ ಅದ್ಭುತ ಮಾಹಿತಿ ಹಾಗೂ ವಿಸ್ಮಯಗಳನ್ನು ನಿಮ್ಮ ಮುಂದೆ ತೆರೆದಿಡುತ್ತವೆ. ಈ ಊರಿನ ಒಳಗೆ ಬಂದರೆ ಚಾರಣ, ಈಜುವುದು, ಮೀನುಹಿಡಿಯುವುದು, ಬೋಟಿಂಗ್ ಹೋಗುವುದು, ಉತ್ತಮ ಛಾಂiÀi ಚಿತ್ರಗಳನ್ನು ತೆಗೆಯುವ ಕೆಲಸಗಳನ್ನು ಮಾಡಬಹುದು.
ಥಿರುವೆರ್ಪು ದೇಗುಲ
ಈ ದೇಗುಲ ಕೊಟ್ಟಾಯಂ ನಿಂದ 7ಕಿ.ಮೀ. ದೂರದಲ್ಲಿದೆ. ಮೀನಾಚಿಲ ಎಂಬ ನದಿಯ ದಂಡೆಯ ಮೇಲಿರುವ ಈ ದೇಗುಲ 1500 ವರ್ಷಗಳಷ್ಟು ಹಳೆಯದು. ಶ್ರೀ ಕೃಷ್ಣ ದೇವರನ್ನು ಆರಾಧಿಸುವ ಈ ದೇವಾಲಯ ಮಹಾಭಾರತದ ಇತಿಹಾಸವನ್ನು ಒಳಗೊಂಡಿದೆ.
sಸೇಂಟ್ ಮೇರಿ ಓರ್ಥೋಡೆಕ್ಸ್ ಚರ್ಚ್
ಕೊಟ್ಟಾಯಂ ಪೇಟೆಯಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಈ ಚರ್ಚ್ ಪ್ರವಾಸಿಗರು ನೋಡಬಹುದಾದ ಇನ್ನೊಂದು ಸುಂದರವಾದ ಸ್ಥಳ. ಈ ಕ್ರೈಸ್ತ ದೇವಾಲಯವನ್ನು ಕೇರಳ ಮತ್ತು ಪೋರ್ಚುಗೀಸರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿಯ ಗೋಡೆಯ ಮೇಲೆ ದೇಸಿಯ ಹಾಗೂ ವಿದೇಶಿಯರ ಕಲಾಕೃತಿಯನ್ನು ನೋಡಬಹುದು.
ದೂರವೆಷ್ಟು?
ಬೆಂಗಳೂರಿನಿಂದ 395 ಕಿ.ಮೀ. ದೂರದಲ್ಲಿರುವ ಕೊಟ್ಟಾಯಂಗೆ ಅನೇಕ ರೈಲ್ವೇ ವ್ಯವಸ್ಥೆಗಳಿವೆ. ರೈಲು ಪ್ರಯಾಣದ ಮೂಲಕ ಅಲ್ಲಿಗೆ ತಲುಪಿದರೆ, ಅಲ್ಲಿಂದ ಬೇಕಾದ ಖಾಸಗಿ ವಾಹನಗಳನ್ನು ಬಳಸಿಕೊಂಡು ಸುತ್ತಾಡಬಹುದು.