ಜಗತ್ತಿನಲ್ಲಿರುವ 51 ಶಕ್ತಿಪೀಠಗಳ ಕುರಿತು ನಿಮಗಾಗಲೆ ತಿಳಿದಿರಬಹುದು. ಅವುಗಳಲ್ಲಿಯೂ, ಹಲವು ಮುಖ್ಯ ಶಕ್ತಿಪೀಠಗಳಿದ್ದು ಕೆಲವು ಧಾರ್ಮಿಕ ಉಲ್ಲೇಖಗಳು ಏಳು ಪ್ರಮುಖ ಶಕ್ತಿಪೀಠಗಳ ಕುರಿತು ತಿಳಿಸುತ್ತವೆ. ಅಂತಹ ಏಳು ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದೆ ಜ್ವಾಲಾ ಜೀ ದೇವಿ ಅಥವಾ ಜ್ವಾಲಾದೇವಿ ಶಕ್ತಿಪೀಠ.
ದೇವಿ ಭಾಗವತದಲ್ಲಿ ಉಲ್ಲೇಖಿಸಲಾದ ಆದಿ ಶಕ್ತಿಪೀಠಗಳು
ಇದರ ವಿಶೇಷವೆಂದರೆ ಸಾಮಾನ್ಯವಾಗಿ ಶಕ್ತಿಪೀಠಗಳಲ್ಲಿ ದೇವಿಯು ಪಿಂಡಿಯ ರೂಪದಲ್ಲಿರುವುದನ್ನು ಕಾಣಬಹುದು. ಆದರೆ ಇಲ್ಲಿ ಜ್ವಾಲಾ ದೇವಿಯು ಪರಮ ಪಾವನವಾದ ಜ್ಯೋತಿಯ ರೂಪದಲ್ಲಿರುವುದು ವಿಶೇಷ. ಹೌದು ನೀವು ಕೇಳುತ್ತಿರುವುದು ನಿಜ. ಇಲ್ಲಿನ ಕಲ್ಲು ಬಂಡೆಗಳ ಮಧ್ಯೆ ನೈಸರ್ಗಿಕ ಅನಿಲಗಳ ರಾಸಾಯನಿಕ ಪ್ರಕ್ರಿಯೆಗಳಿಂದ ಜ್ವಾಲೆಯು ಸದಾ ಊರಿಯುತ್ತಿರುತ್ತದೆ.
ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Erik Charlton
ಇಲ್ಲಿಗೆ ಭೇಟಿ ನೀಡುವ ಭಕ್ತರ ಪ್ರಕಾರ, ಶತಮಾನಗಳಿಂದಲೂ ಈ ಬೆಂಕಿಯು ನಿರಂತರವಾಗಿ ಊರಿಯುತ್ತಿದೆ ಎನ್ನಲಾಗಿದೆ. ಹಾಗಾಗಿ ಇಲ್ಲಿರುವ ಶಕ್ತಿ ದೇವಿಯು ಜ್ವಾಲೆಯ ರೂಪದಲ್ಲಿರುವುದರಿಂದ ಮಾತೆಯನ್ನು ಜ್ವಾಲಾ ದೇವಿ ಅಥವಾ ಜ್ವಾಲಾ ಜೀ ಎಂಬ ಹೆಸರಿನಿಂದಲೆ ಕರೆಯಲಾಗುತ್ತದೆ. ಈ ಜ್ವಾಲೆಯ ದರ್ಶನ ಮಾತ್ರದಿಂದಲೆ ಭಕ್ತರ ಸಕಲ ಕಷ್ಟ ಕಾರ್ಪಣ್ಯಗಳು ಸುಟ್ಟು ಹೋಗುತ್ತವೆ ಎಂದು ನಂಬಲಾಗಿದೆ.
ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Kim Carpenter
ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿರುವ ಜ್ವಾಲಾಮುಖಿ ಎಂಬ ಹೆಸರಿನ ಪಟ್ಟಣದಲ್ಲಿ ಈ ಜಗನ್ಮಾತೆಯು ಅನಾದಿ ಕಾಲದಿಂದಲೂ ನೆಲೆಸಿದ್ದಾಳೆ. ದಂತಕಥೆಯ ಪ್ರಕಾರ, ಶಕ್ತಿಪೀಠಗಳು ಸತಿ ದೇವಿಯ ಮೃತ ದೇಹದ ವಿವಿಧ ಭಾಗಗಳು ಕತ್ತರಿಸಿಕೊಂಡು ವಿವಿಧ ಸ್ಥಳಗಳಲ್ಲಿ ಬಿದ್ದಾಗ ರೂಪಗೊಂಡಿವೆ. ಅದರಂತೆ ಈ ಸ್ಥಳದಲ್ಲಿ ಮಾತೆಯ ನಾಲಿಗೆಯು ಬಿದ್ದ ಸ್ಥಳವೆಂದು ಪರಿಗಣಿಸಲಾಗಿದೆ.
ಚಿತ್ರಕೃಪೆ: Guptaele
ರುದ್ರಾವತಾರದ ಆದಿ ಶಕ್ತಿಯು ಸದಾ ನಾಲಿಗೆ ಹೊರಚಾಚಿ ಕ್ರೋಧಾಗ್ನಿಯನ್ನು ಉಗುಳುತ್ತಿರುವ ಸಂಕೇತವಾಗಿ ಇಲ್ಲಿ ದೇವಿಯ ಜ್ವಾಲೆಯ ರೂಪದಲ್ಲಿ ನೆಲೆಸಿದ್ದಾಳೆನ್ನಲಾಗಿದೆ. ಅಷ್ಟೆ ಅಲ್ಲ, ಈ ದೇವಾಲಯದಲ್ಲಿ ಒಟ್ಟು ಒಂಭತ್ತು ಸ್ಥಳಗಳಲ್ಲಿ ನೈಸರ್ಗಿಕವಾಗಿ ಊರಿಯುವ ಜ್ವಾಲೆಗಳನ್ನು ಕಾಣಬಹುದಾಗಿದ್ದು ಅವುಗಳು ಒಂಭತ್ತು ವಿವಿಧ ಗುಣಗಳ ಸಂಕೇತಗಳಾಗಿವೆಯಂತೆ!
ಚಿತ್ರಕೃಪೆ: Nswn03
ಸ್ಥಳ ಪುರಾಣದ ಪ್ರಕಾರ, ಹಿಂದೆ ಸತ್ಯ ಯುಗದಲ್ಲಿ ಪ್ರದೇಶದ ರಾಜನಾಗಿದ್ದ ಭೂಮಿ ಚಂದ್ರನು ಸತಿ ದೇವಿಯ ನಾಲಿಗೆ ಬಿದ್ದ ಸ್ಥಳದ ಕುರಿತು ಕನಸೊಂದನ್ನು ಕಂಡಿದ್ದನು. ಅದಕ್ಕೆ ಪೂರಕವೆನ್ನುವಂತೆ ಪ್ರದೇಶದ ದನಗಾಹಿಯೊಬ್ಬ ದನಗಳನ್ನು ಮೇಯಿಸುವಾಗ ಬೆಟ್ಟದ ಸ್ಥಳದಲ್ಲಿ ಸದಾ ಬೆಂಕಿ ಊರಿಯುತ್ತಿರುವುದರ ಕುರಿತು ರಾಜನಿಗೆ ತಿಳಿಸುತ್ತಾನೆ.
ಚಿತ್ರಕೃಪೆ: Guptaele
ರಾಜ ಅದು ದೇವಿಯ ಪವಾಡವೆಂದೆ ಬಗೆದು ಅಲ್ಲಿಗೆ ತೆರಳಿ, ಮಾತೆಯ ದರ್ಶನ ಪಡೆದು ದೇವಾಲಯ ನಿರ್ಮಿಸುತ್ತಾನೆ. ಆ ನಂತರದಲ್ಲಿ ಪಾಂಡವರೂ ಸಹ ಇಲ್ಲಿಗೆ ಭೇಟಿ ನೀಡಿ, ಶಾಶ್ವತವಾಗಿ ಊರಿಯುತ್ತಿರುವ ಜ್ವಾಲೆಯ ರೂಪದ ಮಾತೆಯ ದರ್ಶನ ಪಡೆದು ಈ ದೇವಾಲಯವನ್ನು ಇನ್ನಷ್ಟು ನವೀಕರಣಗೊಳಿಸಿದರು.
ಚಿತ್ರಕೃಪೆ: Guptaele
ಇನ್ನೊಂದು ನಂಬಿಕೆಯಂತೆ, ಮುಘಲ್ ದೊರೆ ಅಕ್ಬರನಿಗೆ ದೇವಿಯ ಈ ರೂಪದ ಕುರಿತು ತಿಳಿದು ಅದನ್ನು ಸುಳ್ಳು ಮಾಡಬೇಕೆಂಬ ದೃಷ್ಟಿಯಿಂದ ಜ್ವಾಲೆಯನ್ನು ನಂದಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾನಾದರೂ ಆ ಜ್ವಾಲೆ ನಂದಲಾರದೆ ದೊರೆಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಇದರ ಮಹಿಮೆಯನ್ನರಿತ ಅಕ್ಬರ್ ದೇವಿಗೆ ಬಂಗಾರದ ಚಾದರೊಂದನ್ನು ಅರ್ಪಿಸುತ್ತಾನೆ. ಆದರೆ ಸುವರ್ಣ ವಸ್ತು ಗೊತ್ತಿರಲಾರದ ಲೋಹವೊಂದಾಗಿ ಕಪ್ಪಾಗಿ ಪರಿವರ್ತಿತವಾಗುತ್ತದೆ. ಅದನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದೆ.
ಚಿನ್ನಮಸ್ತಾ ದೇವಿಯ ಚಿಂತಪೂರ್ಣಿ ಶಕ್ತಿಪೀಠ
ಇನ್ನೂ ಜ್ವಾಲಾಮುಖಿ ತಲುಪಲು ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಗಗ್ಗಲ್ ಅಥವಾ ಕಂಗ್ರಾ ವಿಮಾನ ನಿಲ್ದಾಣ. ಇದು 45 ಕಿ.ಮೀ ಗಳಷ್ಟು ದೂರದಲ್ಲಿದೆ. ಪಠಾನಕೋಟ್ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣವಾಗಿದ್ದು 125 ಕಿ.ಮೀ ಗಳಷ್ಟು ದೂರದಲ್ಲಿದೆ. ಇವೆರಡೂ ಸ್ಥಳಗಳಿಂದ ಜ್ವಾಲಾಮುಖಿಗೆ ತೆರಳಲು ಬಾಡಿಗೆ ಕಾರು ಹಾಗೂ ಬಸ್ಸುಗಳು ದೊರೆಯುತ್ತವೆ.