ಕರ್ನಾಟಕದ ಧಾರ್ಮಿಕ ಸ್ಥಳಗಳಲ್ಲಿ ಕೊಪ್ಪಳದಲ್ಲಿರುವವರಿಗೆ ಹುಲಿಗೆಮ್ಮ ದೇವಸ್ಥಾನ ಕೂಡಾ ಒಂದು. ಕೊಪ್ಪಳ ಜಿಲ್ಲೆಯಲ್ಲಿರುವವರಿಗೆ ಈ ದೇವಿಯ ದೈವಿಕ ಶಕ್ತಿಯ ಬಗ್ಗೆ ಗೊತ್ತೇ ಇದೆ. ಯಾರಿಗೆ ಈ ತಾಯಿಯ ಬಗ್ಗೆ ಗೊತ್ತಿಲ್ಲವೋ ಅವರಿಗೆ ನಾವಿಂದು ಹುಲಿಗೆಮ್ಮನ ಪವಾಡದ ಬಗ್ಗೆ ತಿಳಿಸಲಿದ್ದೇವೆ.
ವ್ಯಾಘ್ರಪುರಿ
PC: Facebook
ಹುಲಗಿಯನ್ನು ಹಿಂದೆ ವ್ಯಾಘ್ರಪುರಿ ಎಂದು ಕರೆಯಲಾಗುತ್ತಿತ್ತು. ಆದರಿಂದ ಇದನ್ನು ವ್ಯಾಘ್ರೇಶ್ವರಿ ಎಂದು ಕರೆಯುತ್ತಾರೆ. ಸುಮಾರು ಎಂಟು ನೂರು ವರ್ಷಗಳಿಂದ ಇಲ್ಲಿ ದೇವಿಗೆ ಪೂಜೆಗಳು ನಡೆಸಲಾಗುತ್ತಿದೆ.ತುಂಗಾ ಭದ್ರಾ ತೀರದಲ್ಲಿ ನೆಲೆಸಿದ್ದಾಳೆ ಹುಲಿಗೆಮ್ಮ.
ದೊಡ್ಡ ಜಾತ್ರೆ
PC: Facebook
ಪ್ರತಿವರ್ಷವು ಭರತ ಹುಣ್ಣಿಮೆಯ ಒಂಭತ್ತು ದಿನಗಳ ನಂತರ ಇಲ್ಲಿ ದೊಡ್ಡ ಜಾತ್ರೆ ನಡೆಸಲಾಗುತ್ತದೆ. ಈ ಜಾತ್ರೆಗೆ ಕೊಪ್ಪಳದಿಂದಷ್ಟೇ ಅಲ್ಲದೆ ಇತರ ಜಿಲ್ಲೆಗಳಿಂದ, ಇತರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಆಂಧ್ರಪ್ರದೇಶ, ತಮಿಳುನಾಡಿನಿಂದ ಸಾಕಷ್ಟು ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.
ಕುದಿಯುವ ಪಾಯಸಕ್ಕೆ ಕೈ ಹಾಕಲಾಗುತ್ತದೆ
PC: Facebook
ಈ ಜಾತ್ರೆಯ ವಿಶೇಷತೆ ಏನೆಂದರೆ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಹೊರಗಡೆ ಬಯಲಿನಲ್ಲಿ ಪಾಯಸವನ್ನು ಮಾಡಲಾಗುತ್ತದೆ. ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ದೇವಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಇಲ್ಲಿನ ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ. ಆದರೆ ಕಾರ್ಯಕ್ರಮ, ಪೂಜಾ ವಿಧಾನಗಳು 10 ದಿನಗಳ ವರೆಗೆ ನಡೆಯುತ್ತದೆ.
ಎಂಟುನೂರು ವರ್ಷಗಳ ಇತಿಹಾಸ
PC: Facebook
ವಿಜಯದಶಮಿಯಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಾರೆ. ಇದಲ್ಲದೆ ಹುಣ್ಣಿಮೆ, ಮಂಗಳವಾರ, ಶುಕ್ರವಾರದಂದು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಈ ಕ್ಷೇತ್ರಕ್ಕೆ ಸುಮಾರು ಎಂಟುನೂರು ವರ್ಷಗಳ ಇತಿಹಾಸ ಇದೆ.
ತುಂಗಾಭದ್ರಾ ನದಿ ದಡದಲ್ಲಿದೆ
PC: Facebook
ತುಂಗಾಭದ್ರಾ ನದಿಯು ಇಲ್ಲಿ ಹರಿಯುತ್ತಿದ್ದಾಳೆ. ಶಕ್ತಿ ದೇವತೆಯ ಸ್ಥಳ ಇದಾಗಿದೆ. ಇಲ್ಲಿಗೆ ಬರುವ ಭಕ್ತರಿಗೆ ಒಳ್ಳೆಯದಾಗಿದೆ, ಹುಲಿಗೆಮ್ಮನ ಪವಾಡ ಅಲ್ಲಿಗೆ ಬಂದವರಿಗಷ್ಟೇ ತಿಳಿಯುತ್ತದೆ ಎನ್ನುತ್ತಾರೆ ಭಕ್ತರು.
ಪೌರಾಣಿಕ ಕಥೆ
PC: Facebook
ಈ ಕ್ಷೇತ್ರಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಯೊಂದಿದೆ. ಹಲವಾರು ವರ್ಷಗಳ ಹಿಂದೆ ಹುಲಗಿ ಎನ್ನುವ ಸ್ಥಳದಲ್ಲಿ ನಾಗಜೋಗಿ ಹಾಗೂ ಬಸವ ಜೋಗಿ ಎನ್ನುವ ಸಹೋದರರಿದ್ದರು. ಇವರು ಸವದತ್ತಿ ಯಲ್ಲಮ್ಮನ ಭಕ್ತರಾಗಿದ್ದರಿಂದ ಪ್ರತಿ ಹುಣ್ಣಿಮೆಗೆ ಸವದತ್ತಿಗೆ ಹೋಗಿ ತಾಯಿಯ ದರ್ಶನ ಪಡೆಯುತ್ತಿದ್ದರು.
ಹುಲಗಿಯಲ್ಲಿ ನೆಲೆಸಿದ ದೇವಿ
PC: Facebook
ಒಮ್ಮೆ ಸವದತ್ತಿಗೆ ಹೋಗುವಾಗ ದಾರಿ ಮಧ್ಯೆ ಜೋರಾಗಿ ಮಳೆ ಸುರಿಯುತ್ತದೆ. ಹಾಗಾಗಿ ಹುಣ್ಣಿಮೆಯ ದಿನ ಸವದತ್ತಿ ಯಲ್ಲಮ್ಮನ ದರ್ಶನ ಭಾಗ್ಯ ಪಡೆಯಲು ಸಾಧ್ಯವಾಗೋದಿಲ್ಲ. ಆಗ ಆ ಸಹೋದರರು ದಾರಿಮಧ್ಯೆಯೇ ಯಲ್ಲಮ್ಮನ ಧ್ಯಾನ ಮಾಡುತ್ತಾರೆ. ಅವರ ಭಕ್ತಿಗೆ ಮೆಚ್ಚಿ ಯಲ್ಲಮ್ಮ ಪ್ರತ್ಯಕ್ಷಳಾಗಿ. ಇನ್ನು ಮುಂದೆ ಸವದತ್ತಿಗೆ ಬರುವುದು ಬೇಡ ನಿಮ್ಮ ಊರಲ್ಲೇ ನೆಲೆಸುವುದಾಗಿ ಅಭಯ ನೀಡುತ್ತಾಳೆ.
ಇಲ್ಲಿರುವ ಇತರ ದೇವಸ್ಥಾನ
PC: Facebook
ಹೀಗೆ ಹುಲಿಗಿಯಲ್ಲಿ ಹುಲಿಗೆಮ್ಮನಾಗಿ ನೆಲೆಸಿದಳು . ಹಾಗಾಗಿ ಅದು ಹುಲಿಗಿ ಕ್ಷೇತ್ರವಾಗಿದೆ. ಹುಲಿಗೆಮ್ಮನ ದೇವಸ್ಥಾನದ ಮುಂದೆ ಮಾತಂಗಿ, ಪರಶುರಾಮ, ಸುಬ್ರಹ್ಮಣ್ಯ, ಪಾರ್ವತಿ, ಗಣಪತಿ, ನವಗ್ರಹಗಳ ಗುಡಿಗಳಿವೆ. ಸುಮಾರು 13 ನೆಯ ಶತಮಾನಕ್ಕೆ ಸೇರಿದ ದೇವಸ್ಥಾನ ಇದಾಗಿದ್ದು, ನಾಗಜೋಗಿ ಹಾಗು ಬಸವಜೋಗಿ ಎಂಬ ಇಬ್ಬರು ಭಕ್ತರ ಆಸೆಗಳನ್ನು ಈಡೇರಿಸಲು ರೇಣುಕಾಂಬ ದೇವಿಯೇ ಹುಲಿಗೆಮ್ಮಳಾಗಿ ನೆಲೆಸಿದ್ದಾಳೆ.
ವಿಕ್ರಮಾದಿತ್ಯ VI ಉಡುಗೊರೆಯಾಗಿ ನೀಡಿದ್ದ
PC: Facebook
ದೇವಸ್ಥಾನದಲ್ಲಿ ಇರುವ ಕೆತ್ತನೆಯ ಪ್ರಕಾರ ಈ ದೇವಸ್ಥಾನವನ್ನು ಚತುರ್ವೇದಿ ಭಟ್ಟರಿಗೆ ಒಬ್ಬ ಚಾಲುಕ್ಯ ರಾಜನಾದ ವಿಕ್ರಮಾದಿತ್ಯ VI ಉಡುಗೊರೆಯಾಗಿ ನೀಡಿದ್ದ. ದೇವಸ್ಥಾನದ ಮುಂದೆ 25 ಅಡಿ ಎತ್ತರದ ಧ್ವಜ ಸ್ಥಂಬವಿದ್ದು ಅದರ ಮುಂದೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.
ವಿಶೇಷ ಕಾರ್ಯಕ್ರಮಗಳು
PC: Facebook
ಕಂಕಣಧಾರಣ, ಅಕ್ಕಿಪಡಿ, ಮಹಾರಥೋತ್ಸವ, ಗಂಗಾ ದೇವಿ ಪೂಜೆ, ಶ್ರೀದೇವಿಗೆ ಪ್ರಸಾದ ವಿತರಣೆ, ಬಾಳೆದಂಡಿಗೆ ಆರೋಹಣ, ಪಾಯಸ ಅಗ್ನಿಕುಂಡ, ಕುಂಡದ ಪೂಜೆ, ಹಿಡಿದಕ್ಷಿಣೆ ಹೀಗೆ ಹಲವಾರು ಕಾರ್ಯಕ್ರಮಗಳು, ಪೂಜೆಗಳು ನಡೆಯುತ್ತವೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ದೇವಿಯ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ತಲುಪುವುದು ಹೇಗೆ?
PC: Facebook
ಕೊಪ್ಪಳದಿಂದ ಹುಲಗಿ 20ಕಿ.ಮಿ ಹಾಗೂ ಹೊಸಪೇಟೆಯಿಂದ 15ಕಿ.ಮೀ ದೂರದಲ್ಲಿದೆ. ಹುಲಿಗೆಮ್ಮ ದೇವಸ್ಥಾನಕ್ಕೆ ರಸ್ತೆ ಮತ್ತು ರೈಲಿನ ಮೂಲಕ ತಲುಪಬಹುದು. ಸಮೀಪದ ಎಲ್ಲಾ ಪಟ್ಟಣ, ನಗರಗಳಿಂದಲೂ ಕೂಡಾ ಇಲ್ಲಿಗೆ ಬಸ್ ಸೇವೆಗಳು ಲಭ್ಯವಿದೆ. ಹಂಪಿಯಿಂದ ಮುನಿರಾಬಾದ್ಗೆ ರೈಲಿನ ಮೂಲಕ ತಲುಪಬಹುದು ಮತ್ತು ಹೊಸಪೇಟೆ ಜಂಕ್ಷನ್ ಸಮೀಪದ ರೈಲ್ವೇ ಸ್ಟೇಷನ್ ಆಗಿದೆ.
ಪ್ರೇಕ್ಷಣೀಯ ತಾಣಗಳು
PC: Facebook
ಹುಲಗಮ್ಮ ದೇವಸ್ಥಾನ ಸುತ್ತಮುತ್ತ ಅನೇಕ ಪ್ರೇಕ್ಷಣೀಯ ತಾಣಗಳಿವೆ. ಮುನಿರಾಬಾದ್ ಡ್ಯಾಮ್ , ಋಷ್ಯಮೂಕ ಬೆಟ್ಟ, ಬಲಿ ಕಿಲಾ ಮತ್ತು ಪಂಪ ಸರೋವರವೂ ಕೂಡಾ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ರಾಮಾಯಣದಲ್ಲಿ ರಾಜನಾಗಿದ್ದ ಬಾಲಿ ಎಂಬ ರಾಜನ ಕೋಟೆ ಈ ಬಾಲಿ ಕಿಲವಾಗಿತ್ತು ಎಂದು ಹೇಳಲಾಗುತ್ತದೆ. ಇನ್ನು ರಾಮಾಯಣದ ಪ್ರಕಾರ ಸೀತೆಯನ್ನು ಹುಡುಕುವುದಕ್ಕೆ ಸಹಾಯ ಕೇಳಲು ರಾಮನು ಹನುಮಂತನನ್ನು ಮೊದಲು ಭೇಟಿಯಾಗಿದ್ದು ಋಷ್ಯಮೂಕ ಬೆಟ್ಟದಲ್ಲಿ ಎನ್ನಲಾಗುತ್ತದೆ.
ಕನಕಗಿರಿ
PC: Facebook
ಕೊಪ್ಪಳ ಜಿಲ್ಲೆಯಲ್ಲಿರುವ ಜನಪ್ರಿಯ ತಾಣಗಳಲ್ಲಿ ಕನಕಗಿರಿ ದೇವಸ್ಥಾನ ಕೂಡಾ ಸೇರಿದೆ. ಇದು ಅತ್ಯುತ್ತಮವಾದ ವಾಸ್ತುಶಿಲ್ಪವನ್ನು ಹೊಂದಿದ್ದು, ಪ್ರತಿವರ್ಷ ಕನಕಗಿರಿಯಲ್ಲಿ ನಡೆಯುವ ಫಾಲ್ಗುಣ ಹಬ್ಬಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕನಕ ಗಿರಿಯ ಹಳೆಯ ಹೆಸರು ಸುವರ್ಣಗಿರಿ.
ಸೋಮೇಶ್ವರ ದೇವಸ್ಥಾನ, ಪುರ
ಸೋಮೇಶ್ವರ ದೇವಸ್ಥಾನವು ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರದಲ್ಲಿದೆ. ಹೊಯ್ಸಳರ ಕಾಲದಲ್ಲಿನ ವಾಸ್ತುಶಿಲ್ಪ ಕೌಶಲ್ಯವನ್ನು ಈ ಸೋಮೇಶ್ವರ ದೇಗುಲ ಪ್ರದರ್ಶಿಸುತ್ತಿದೆ. ಈ ದೇವಸ್ಥಾನದ ಪ್ರಮುಖ ಮೂರ್ತಿಯೆಂದರೆ, ನಂದಿಯ ಮೇಲೆ ಕುಳಿತಿರುವ ಸೋಮೇಶ್ವರ.
ಕುಕನೂರು
ಕುಕನೂರು ಮಧ್ಯಯುಗದಲ್ಲಿ ನಿರ್ಮಾಣವಾದ ಕಟ್ಟಗಳಿಗೆ ಪ್ರಸಿದ್ಧಿಯಾಗಿದೆ. ಇಲ್ಲಿ ಅನೇಕ ಹಳೆಯ ದೇವಸ್ಥಾನಗಳಿವೆ. ನವಲಿಂಗ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಮಹಾಮಾಯ ದೇವಸ್ಥಾನವು ಇಲ್ಲಿನ ಪ್ರಮುಖ ದೇವಸ್ಥಾನಗಳಲ್ಲೊಂದು. ನವಲಿಂಗ ದೇವಸ್ಥಾನವು ತನ್ನ ಜನಪ್ರಿಯ ಶಿಲಾಶಾಸನಗಳಿಗೆ ಮತ್ತು 9ನೇ ಶತಮಾನದ ಮೂರ್ತಿಗಳಿಗೆ ಜನಪ್ರಿಯವಾಗಿದೆ. ಹೆಸರೇ ಹೇಳುವಂತೆ ಇಲ್ಲಿ 9 ಶಿವಲಿಂಗಗಳಿವೆ.
ಕೊಪ್ಪಳ ಕೋಟೆ
ಕೊಪ್ಪಳ ಕೋಟೆಯು ಕೊಪ್ಪಳದ ಹಿರೇಹಾಲ್ಲಾ ನದಿಯ ಎಡ ದಂಡೆಯಲ್ಲಿದೆ. ಕೊಪ್ಪಳ ಜಿಲ್ಲೆಯ ಅತ್ಯಂತ ಮಹತ್ವದ ಆಕರ್ಷಣೆಯೆಂದರೆ ಐತಿಹಾಸಿಕ ಕೊಪ್ಪಳ ಕೋಟೆ. ಇದು ಬಯಲು ಪ್ರದೇಶದಿಂದ 400 ಮೀ. ಎತ್ತರದಲ್ಲಿದೆ. ಟಿಪ್ಪು ಸುಲ್ತಾನ್ ಕೊಪ್ಪಳ ಕೋಟೆ ಯನ್ನು ಮರಾಠರಿಂದ 1786 ರಲ್ಲಿ ಹಿಂದಕ್ಕೆ ಪಡೆದು ಫ್ರಾನ್ಸ್ನ ಎಂಜಿನಿಯರ್ಗಳ ಸಹಾಯದಿಂದ ಕೋಟೆಯನ್ನು ಪುನರ್ನಿರ್ಮಿಸಲಾಯಿತು ಎನ್ನಲಾಗುತ್ತದೆ. ಜನರು ಸುಲಭವಾಗಿ ಕೊಪ್ಪಳವನ್ನು ರಸ್ತೆ ಮತ್ತು ರೈಲು ಮಾರ್ಗವಾಗಿ ತಲುಪಬಹುದು. ಕೊಪ್ಪಳ ಗುಂಟಕಲ್ ಮತ್ತು ಹುಬ್ಬಳ್ಳಿ ರೈಲ್ವೆ ಮಾರ್ಗದಲ್ಲಿದೆ. ಬೆಂಗಳೂರು, ವಿಜಯವಾಡ ಮತ್ತು ಬೆಳಗಾವಿ ಮುಂತಾದ ಎಲ್ಲಾ ಹತ್ತಿರದ ಸ್ಥಳಗಳಿಂದ ರೈಲುಗಳು ಲಭ್ಯವಿದೆ.