ನಿಮಗೆ ಮಹಾತ್ಮಾ ಎಂದು ಕರೆಯಲ್ಪಡುವ ಗಾಂಧೀಜಿಯವರು ತಮ್ಮ ಕೊನೆಯ ದಿನಗಳನ್ನು ಎಲ್ಲಿ ಹಾಗೂ ಯಾವ ರೀತಿಯಾಗಿ ಕಳೆದಿದ್ದರೆಂಬುದು ತಿಳಿದಿದೆಯೆ? ಇಲ್ಲವೆಂದಾದಲ್ಲಿ ಈ ಲೇಖನವನೊಮ್ಮೆ ಓದಿ. ಇದು ಸೇವಾಗ್ರಾಮ ಎಂಬ ಪುಟ್ಟ ಪಟ್ಟಣದ ಕುರಿತು ತಿಳಿಸುತ್ತದೆ. ಗಾಂಧೀಜಿಯವರು ಇಲ್ಲಿನ ಆಶ್ರಮದಲ್ಲಿ 1936 ರಿಂದ 1948 ರವರೆಗೆ ವಾಸಿಸಿದ್ದರು.
ಆ ಪುಟ್ಟ ಗ್ರಾಮವೆ ಸೇವಾಗ್ರಾಮ. ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿದೆ. ಈ ಪುಟ್ಟ ಪಟ್ಟಣವು ಇಂದಿಗೂ ಶಾಂತಿ ಬಯಸುವ ಪ್ರತಿಯೊಬ್ಬರಿಗೂ ಪ್ರಶಾಂತವಾಗಿ ಕಾಲಕಳೆಯಲು ಅನುವು ಮಾಡಿಕೊಡುವಂತಹ ತಾಣವಾಗಿದೆ. ಈ ಗ್ರಾಮವು ಹಚ್ಚ ಹಸಿರಿನ ಕಾಡುಗಳ ನಡುವೆ ಮನೆಮಾಡಿಕೊಂಡಿದ್ದು, ಧ್ಯಾನಾಸಕ್ತರಿಗೆ ಮತ್ತು ಆಧ್ಯಾತ್ಮಿಕದ ಒಲವು ಉಳ್ಳವರಿಗೆ ಅತ್ಯಾನಂದ ನೀಡುವ ತಾಣವಾಗಿದೆ.
ಚಿತ್ರಕೃಪೆ: Muk.khan
ಸೇವಾಗ್ರಾಮವು ಮಹಾರಾಷ್ಟ್ರ ರಾಜ್ಯದಲ್ಲಿರುವ ಒಂದು ಗ್ರಾಮ. ಸೇವಾಗ್ರಾಮ ಹೆಸರು ಸೇವೆಗಾಗಿ ಮುಡಿಪಾದ ಗ್ರಾಮ ಎಂದು ಸೂಚಿಸುತ್ತದೆ. ಸೇವೆಯೆ ಪರಮ ಧರ್ಮ ಸದುದ್ದೇಶದ ಮೆರೆಗೆ ಇದು ಇಂದು ಸೇವಾಗ್ರಾಮವಾಗಿದೆ. ಇದಕ್ಕೂ ಮೊದಲು ಈ ಊರಿನ ಹೆಸರು ಶೇಗಾಂವ್ ಎಂದು ಇತ್ತು. 1940 ರಲ್ಲಿ ಮಹಾತ್ಮ ಗಾಂಧೀಜಿಯವರು ಇಲ್ಲಿ ತಂಗಲು ನಿರ್ಧರಿಸಿದಾಗ ಈ ಊರಿಗೆ ಸೇವಾಗ್ರಾಮ ಎಂಬ ಹೆಸರು ಬಂದಿತು.
ಸೇವಾಗ್ರಾಮದಲ್ಲಿ ಗಾಂಧಿ, 1940, ಚಿತ್ರಕೃಪೆ: Public.Resource.Org
ಸೇವಾಗ್ರಾಮವು ಮಹಾರಾಷ್ಟ್ರದಲ್ಲಿರುವ ವಾರ್ಧಾ ಜಿಲ್ಲಾ ಕೇಂದ್ರದಿಂದ ಕೇವಲ 8 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ತೆರಳಲು ಸುಲಭವಾಗಿದೆ. ವಾರ್ಧಾದಿಂದ ಬಾಡಿಗೆ ಕಾರು ಹಾಗೂ ಬಸ್ಸುಗಳು ಸೇವಾಗ್ರಾಮಕ್ಕೆ ತೆರಳಲು ದೊರೆಯುತ್ತವೆ. ಈ ಗ್ರಾಮದ ವೈಶಿಷ್ಟ್ಯವೆಂದರೆ ಇದು ಅನಾದಿ ಕಾಲದ ಭಾರತೀಯರ ಅತಿಥಿ ಸತ್ಕಾರ ಮತ್ತು ತೋರುವ ಆದರಗಳಿಗೆ ದ್ಯೋತಕವಾಗಿ ನಿಂತಿದೆ.
ಸೇವಾಗ್ರಾಮ ಆಶ್ರಮ
ಸೇವಾಗ್ರಾಮದಲ್ಲಿರುವ ಆಶ್ರಮವು ಇಲ್ಲಿನ ಪ್ರಧಾನ ಆಕರ್ಷಣೆಯಾಗಿದೆ. ಈ ಆಶ್ರಮವು ಗಾಂಧೀಜಿಯವರ ಜೀವನ ಶೈಲಿಗೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದೆ ಎಂದರೂ ತಪ್ಪಾಗಲಾರದು. ಇಲ್ಲಿ ಗಾಂಧೀಜಿಯವರು ತಮ್ಮ ಪತ್ನಿ ಕಸ್ತೂರಬಾ ಅವರೊಂದಿಗೆ ತಂಗಿದ್ದ ಕುಟಿರವು ಇಂದಿಗೂ ದೃಢವಾಗಿ ನಿಂತಿರುವುದನ್ನು ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ವೀಕ್ಷಿಸಬಹುದು.
ಇಲ್ಲಿನ ಕುಟಿರಗಳನ್ನು ಯಾವುದೇ ವಸ್ತುಗಳಿಂದ ಶೃಂಗಾರಗೊಳಿಸಿಲ್ಲ, ಬದಲಾಗಿ ಅವುಗಳನ್ನು ಸರಳ ರೀತಿಯಲ್ಲೆ ನಿರ್ಮಾಣ ಮಾಡಲಾಗಿದ್ದು ಸಹಜ ಸೌಂದರ್ಯದಿಂದ ಕಂಗೊಳಿಸುತ್ತವೆ. ಅಲ್ಲದೆ ಇದಕ್ಕಾಗಿ ನಾರಿನ, ಬಿದಿರಿನ ಮತ್ತು ಹಸಿ ಮಣ್ಣಿನ ಹೆಂಚುಗಳನ್ನು ಬಳಸಲಾಗಿದ್ದು, ಇವೆಲ್ಲವು ಗಾಂಧೀಜಿಯವರು ಅಳವಡಿಸಿಕೊಂಡಿದ್ದ ಸರಳ ಜೀವನದೆಡೆಗೆ ಬೆಳಕು ಚೆಲ್ಲುತ್ತವೆ.
ಗಾಂಧೀಜಿಯವ ಆಶ್ರಮದ ಅಡುಗೆ ಮನೆ, ಚಿತ್ರಕೃಪೆ: Ajay Tallam
ಇಲ್ಲಿನ ಆಶ್ರಮದಲ್ಲಿ ಮಹದೇವ ಕುಟಿ, ಕಿಶೋರ್ ಕುಟಿ, ಪರ್ಚುರೆ ಕುಟಿಯಂತಹ ಕೆಲವು ಕುಟಿರಗಳನ್ನು ಕಾಣಬಹುದು. ಇತಿಹಾಸದಲ್ಲಿ ಆಸಕ್ತಿಯುಳ್ಳವರಿಗೆ, ಸ್ವತಂತ್ರಪೂರ್ವ ಭಾರತದಲ್ಲಿ ಎಲ್ಲೆಡೆ ಪಸರಿದ್ಸಿದ್ದ ಸೂಕ್ಷ್ಮ ಸಂವೇದನೆಯನ್ನು ಕಲ್ಪಿಸಿಕೊಳ್ಳ ಬಯಸುವವರಿಗೆ ಈ ಸ್ಥಳವು ಆದರ್ಶಮಯ ಸ್ಥಳವಾಗಿ ಕಂಡುಬರುತ್ತದೆ ಎಂದರೂ ಅತಿಶಯೋಕ್ತಿಯೇನಲ್ಲ.
ಹಿಂದೆ ಗಾಂಧೀಜಿಯವರು ಇಲ್ಲಿ ಆಶ್ರಮವನ್ನು ಸ್ಥಾಪಿಸಿದಾಗ ಸುಮಾರು 1000 ಜನರು ಇಲ್ಲಿ ತಂಗಿದ್ದರು. ಇಂದು ಸೇವಾಗ್ರಾಮವು ಸ್ವಾತಂತ್ರ್ಯ ಭಾರತದ ರಾಷ್ಟ್ರ ಪಿತನ ಜೀವನಶೈಲಿಯನ್ನು ಖುದ್ದು ನೋಡುವ ಆಸಕ್ತಿಯಿಂದ ಆಗಮಿಸುವ ಪ್ರವಾಸಿಗರಿಂದ ವರ್ಷವಿಡೀ ತುಂಬಿ ತುಳುಕುವ ಗ್ರಾಮವಾಗಿದೆ.
ಪರಮಾರ್ಥ ನಿಕೇತನ : ಒಂದು ವಿಶೇಷ ಆಶ್ರಮ!
ಸೇವಾಗ್ರಾಮಕ್ಕೆ ಒಮ್ಮೆ ಭೇಟಿಕೊಟ್ಟರೆ ಈ ಗ್ರಾಮವು ತನ್ನ ಮನಮೋಹಕ ಸೌಂದರ್ಯದಿಂದಾಗಿ ಮತ್ತು ಅತಿಥಿ ಸತ್ಕಾರದಿಂದಾಗಿ ನಿಮ್ಮನ್ನು ಮರುಳು ಮಾಡದೆ ಇರಲಾರದು. ಹಾಗಾದರೆ ತಡವೇಕೆ ನೀವಿ ಒಂದು ಸಲ ಈ ಗ್ರಾಮಕ್ಕೆ ಭೇಟಿ ಕೊಟ್ಟು ನೋಡಿ.