ಸರ್ವೆ ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಒಂದು ಸತ್ಯವೆಂದರೆ ಹೆರಿಗೆಯು ಮಹಿಳೆಗೆ ಇನ್ನೊಂದು ಮರುಜನ್ಮವಿದ್ದಂತೆ. ಈ ಸಂದರ್ಭದಲ್ಲಿ ಮಹಿಳೆಗೆ ಆಗುವ ನೋವು ಅಷ್ಟಿಷ್ಟಲ್ಲ. ಅದನ್ನು ಪುರುಷರು ಊಹಿಸುವುದೂ ಸಹ ಅಸಾಧ್ಯವೆಂತಲೆ ಹೇಳಬಹುದು. ಹೆರಿಗೆಯ ನೋವು ತಾಳಲಾರದೆ ಮಹಿಳೆ ಮೃತಪಟ್ಟಿರುವ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
ಅಂದರೆ ಭೂಮಿಯ ಮೇಲಿರುವ ಒಂದು ಜೀವವು ಇನ್ನೂ ಭೂಮಿಗೆ ಕಾಲಿಡದ ಇನ್ನೊಂದು ಜೀವಕೆ ಕಾಲಿಡುವಂತೆ ಮಾಡುವ ಆ ಪ್ರಸಂಗವು ಅದ್ಭುತ ಹಾಗೂ ವರ್ಣನಾತೀತ. ಪ್ರತಿಯೊಬ್ಬ ಪುರುಷನು ತನ್ನ ಮಡದಿಯು ಹೆರಿಗೆಯ ನೋವನ್ನು ಅನುಭವಿಸುವಾಗ ಚಡಪಡಿಸದೆ ಇರಲಾರ. ಎಷ್ಟೊ ಜನರು ಹೆರಿಗೆ ಸುಸೂತ್ರವಾಗಲಿ ಎಂದು ದೇವರ ಮೊರೆ ಹೋಗುತ್ತಾರೆ.
ಚಿತ್ರಕೃಪೆ: Ssriram mt
ಆದರೆ ನಿಮಗೆ ಗೊತ್ತೆ ಭಾರತದಲ್ಲಿ ಇಂತಹ ಕೆಲವು ಪರಿಸ್ಥಿತಿಗೂ ಕೂಡ ಅನ್ವಯವಾಗುವಂತೆ ಕೆಲವು ಧಾರ್ಮಿಕ ಕೇಂದ್ರಗಳಿವೆ. ಅಂತಹ ಧಾರ್ಮಿಕ ಕೇಂದ್ರಗಳ ಪೈಕಿ ಪ್ರಸ್ತುತ ಲೇಖನದಲ್ಲಿ ಒಂದು ದೇವಾಲಯದ ಕುರಿತು ತಿಳಿಸಲಾಗಿದೆ. ಅದೆ ವೈದ್ಯನಾಥೇಶ್ವ ದೇವಾಲಯ. ಶಿವನು ಇಲ್ಲಿ ಸಾಕ್ಷಾತ್ ವೈದ್ಯನ ಅವತಾರದಲ್ಲಿದ್ದು ವೈದ್ಯೊ, ನಾರಾಯಣ, ಹರಿಃ ಎನ್ನುವಂತೆ ಭಕ್ತರ ನೋವನ್ನು ನಿವಾರಿಸುತ್ತಾನೆ.
ಅದರಲ್ಲೂ ವಿಶೇಷವಾಗಿ ಹೆರಿಗೆಯು ಯಾವ ವಿಘ್ನಗಳಿಲ್ಲದೆ ಸರಾಗವಾಗಿ ಸಾಗಲೆಂದು ಬಯಸುವವರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ದಂತಕಥೆಯಿದೆ. ಹಿಂದೆ ಈ ದೇವಾಲಯವಿರುವ ಪ್ರಾಂತದಲ್ಲಿ ಒಬ್ಬ ಶಿವನ ಪರಮ ಭಕ್ತನಿದ್ದ. ಅವನ ಹೆಂಡತಿಯೂ ಸಹ ಅವನಿಗೆ ತಕ್ಕುದಾಗಿದ್ದಳು ಹಾಗೂ ದೈವದಲ್ಲಿ ನಂಬಿಕೆಯಿರಿಸಿದವಳಾಗಿದ್ದಳು.
ಚಿತ್ರಕೃಪೆ: Srithern
ಆ ದಂಪತಿಗಳು ಸಂತಾನದ ನಿರೀಕ್ಷೆಯಲ್ಲಿದ್ದರು. ಕೊನೆಗೆ ಆ ಘಳಿಗೆ ಬಂದೆ ಬಿಟ್ಟಿತು. ದುರದೃಷ್ಟವಶಾತ್ ಗಂಡ ಆ ಸಮಯದಲ್ಲಿ ಅಲ್ಲಿರಲಿಲ್ಲ. ಹೆಂಡತಿಯು ತನ್ನ ತಾಯಿಗೆ ಬಂದು ಸಹಾಯ ಮಾಡುವಂತೆ ಸೂಚನೆ ಕಳುಹಿಸಿದಳು. ಆದರೆ ತಾಯಿಗೆ ಸಮಯಕ್ಕೆ ಸರಿಯಾಗಿ ಬರಲಾಗಲಿಲ್ಲ. ಇತ್ತ ಹೆರಿಗೆ ನೋವು ಜಾಸ್ತಿಯಾದಾಗ ಶಿವನನ್ನು ಕುರಿತು ಅತ್ಯಂತ ಭಕ್ತಿಯಿಂದ ಪ್ರಾರ್ಥಿಸಿದಳು.
ಶಿವನು ಹೆಂಡತಿಯ ತಾಯಿಯ ರೂಪದಲ್ಲಿ ಬಂದು ಅವಳ ಹೆರಿಗೆಯು ಸರಾಗವಾಗಿ ನಡೆಯುವಂತೆ ನೋಡಿಕೊಂಡ. ಅಲ್ಲದೆ ಅಲ್ಲೆ ನೀರನ್ನು ಭೂಮಿಯಿಂದ ಹೊರತೆಗೆದು ಆ ನೀರು ಆಕೆಯ ಗಾಯಕ್ಕೆ ಹಾಗೂ ದಣಿವಾರಿಸಲು ಸಹಾಯವಾಗುವಂತೆ ಮಾಡಿದ. ತದನಂತರ ತಾಯಿಗೆ ಮಗಳ ನೋವಿನ ಸುದ್ದಿ ತಿಳಿದು ಅವಸರವಸರದಿಂದ ಅಲ್ಲಿಗೆ ಬಂದರು. ತನ್ನ ತಾಯಿಯನ್ನು ನೋಡಿದ ಆಕೆಗೆ ಆಶ್ಚರ್ಯ ಉಂಟಾಗಿ ನಡೆದ ಸಂಗತಿ ತಿಳಿಯಿತು.
ಚಿತ್ರಕೃಪೆ: Srithern
ಹೀಗೆ ಇಬ್ಬರೂ ಶಿವನನ್ನು ಮನಸಾರೆಯಾಗಿ ವಂದಿಸಿ, ಪ್ರಾರ್ಥಿಸಿದರು. ಇನ್ನೊಂದು ಕಥೆಯ ಪ್ರಕಾರ, ತಿರುಮಲ ನಾಯಕ ಎಂಬ ದೊರೆಯು ಒಮ್ಮೆ ಅತೀವವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಯಾವ ವೈದ್ಯರಿಂದಲೂ ಅವನ ಬಾಧೆ ಸರಿಪಡಿಸಲಾಗಲಿಲ್ಲ. ಕೊನೆಗೆ ಕೆಲವು ಜ್ಞಾನಿಗಳ ಸಲಹೆಯಂತೆ ಆ ದೊರೆ ಈ ದೇವಾಲಯಕ್ಕೆ ಬಂದು ಸುಮಾರು 48 ದಿನಗಳ ಕಾಲ ದೇವರಿಗೆ ಸೇವೆ ಸಲ್ಲಿಸಿದ.
ಹೀಗೆ ಇವನು ಕಳೆಯುತ್ತಿದ್ದ ಒಂದೊಂದು ದಿನಕ್ಕೂ ಅವನ ನೋವು ಕರಗುತ್ತ 48 ದಿನಗಳ ಬಳಿಕ ಅವನು ಸಂಪೂರ್ಣ ಗುಣಮುಖನಾದನು. ಇದರಿಂದ ಸಂತಸಗೊಂಡ ದೊರೆಯು ಆ ದೇವಾಲಯದಲ್ಲಿ ನಟರಾಜ ಮಂಟಪವನ್ನು ಕಟ್ಟಿಸಿದ ಹಾಗೂ ತಾನು ಬಂದಿದ್ದ ದಂತ ಪಲ್ಲಕ್ಕಿಯನ್ನು ದೇವರಿಗೆಂದೆ ಕಾಣಿಕೆಯಾಗಿ ನೀಡಿದ.
ಚಿತ್ರಕೃಪೆ: Srithern
ಹೀಗಾಗಿ ಈ ವೈದ್ಯನಾಥೇಶ್ವರನ ದೇವಾಲಯವು ಸಾಕಷ್ಟು ಮಹತ್ವಗಳಿಸಿದೆ. ಕೇವಲ ಹೆರಿಗೆ ಮಾತ್ರವಲ್ಲದೆ ಯಾರೆ ಆಗಲಿ ಇತರೆ ದೈಹಿಕ ಸಮಸ್ಯೆಗಳಿದ್ದವರೂ ವಿಶೇಷವಾಗಿ ಹೊಟ್ಟೆಗೆ ಸಂಬಂಧಿಸಿದಂತೆ ಸಮಸ್ಯೆಗಳಿಂದ ಬಳಲುತ್ತಿರುವವರು ಈ ದೇವಾಲಯಕ್ಕೆ ಬಂದು ವೈದ್ಯನಾಥೇಶ್ವರನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರಿಂದ ಅವರಿಗೆ ಒಳಿತಾಗುತ್ತದೆ ಎಂದು ನಂಬಲಾಗಿದೆ.
ಅಪರೂಪದ ಧನ್ವಂತರಿ ದೇವಾಲಯ!
ಈ ವೈದ್ಯನಾಥೇಶ್ವರನ ದೇವಾಲಯವಿರಿವುದು ಮದವರ ವಿಲಗಂ ಎಂಬ ಪಟ್ಟಣದಲ್ಲಿ. ಇದು ತಮಿಳುನಾಡಿನ ವಿರುಧ್ ನಗರ ಜಿಲ್ಲೆಯ ಶ್ರೀವಿಲ್ಲಿಪುತೂರಿನಿಂದ ಕೇವಲ ಒಂದು ಕಿ.ಮೀ ಗಳಷ್ಟು ದೂರದಲ್ಲಿದೆ. ಮದುರೈನಿಂದ ಶ್ರೀವಿಲ್ಲಿಪುತೂರಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಮದುರೈನಿಂದ ಶ್ರೀವಿಲಿಪುತೂರು ಪಟ್ಟಣವು 80 ಕಿ.ಮೀ ಗಳಷ್ಟು ದೂರದಲ್ಲಿದೆ.