ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಮನಸ್ಸು ನಿಧಾನವಾಗಿ ದೇವರ ಪೂಜೆ, ಧ್ಯಾನ ಹಾಗೂ ತೀರ್ಥಯಾತ್ರೆಗೆ ಹೋಗಬೇಕು ಎಂದು ಬಯಸುತ್ತದೆ. ಅಂತಹ ಮನಸ್ಸಿಗೆ ಖುಷಿ ನೀಡುವ ಒಂದು ಪವಿತ್ರ ತೀರ್ಥಕ್ಷೇತ್ರವೆಂದರೆ 16 ಶತಮಾನಗಳ ಇತಿಹಾಸ ಹೊಂದಿರುವ ಕನಕಗಿರಿಯ ಕನಕಾಚಲಪತಿಯ ದೇಗುಲ. ಕನಕಗಿರಿಯಲ್ಲಿ ನೆಲೆಸಿರುವ ಕನಕಾಚಲಪತಿ
ಕನಕಾಚಲಪತಿ ದೇವಾಲಯ
ಕನಕ ಮುನಿಗಳು ತಪಸ್ಸನ್ನು ಮಾಡಿ ಸ್ವರ್ಣ ಮಳೆಯನ್ನು ಸುರಿಸಿದರು. ಬೆಟ್ಟದ ಮೇಲೆ ಚಿನ್ನ ಅಂದರೆ ಕನಕವೃಷ್ಟಿಯಾದ ಕಾರಣ ಈ ಗಿರಿಗೆ ಕನಕಗಿರಿ ಎಂದು ಹೆಸರು ಬಂತು ಎಂದು ಹೇಳಲಾಗುತ್ತದೆ. ಸ್ಕಂದ ಪುರಾಣದ ಪ್ರಕಾರ ತುಂಗಾಮಹಾತ್ಮೆಯಲ್ಲಿಯೂ ಕನಕಗಿರಿಯ ಬಗ್ಗೆ ಉಲ್ಲೇಖನವಿದೆ ಎಂದು ಹೇಳಲಾಗುತ್ತದೆ. ಈ ಗಿರಿ ಪ್ರದೇಶದಲ್ಲಿ ಪುಷ್ಪ, ಜಯಂತಿ, ಗುಪ್ತಗಾಮಿನಿಯಾದ ಗೋಪಿಕಾ ನದಿಗಳು ಹರಿಯುವ ಕಾರಣ ಇದು ಪುಣ್ಯಕ್ಷೇತ್ರ ಎನಿಸಿಕೊಂಡಿದೆ.
ಹಿನ್ನೆಲೆ
ಇತಿಹಾಸ ತಜ್ಞರ ಪ್ರಕಾರ ಮೌರ್ಯದೊರೆ ಅಶೋಕ ಚಕ್ರವರ್ತಿ ದಕ್ಷಿಣ ಭಾರತವನ್ನು ತನ್ನ ಅಧೀನದಲ್ಲಿ ಇರಿಸಿಕೊಂಡಿಕೊಂಡಿದ್ದ, ಅದರಲ್ಲಿ ಕನಕಗಿರಿಯು ಆತನ ನೆಚ್ಚಿನ ಪ್ರದೇಶವಾಗಿತ್ತು ಎನ್ನಲಾಗುತ್ತದೆ. ಇನ್ನೊಂದು ವಿಚಾರವೆಂದರೆ 2ನೇ ಶತಮಾನದ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲಮಿ ಉಲ್ಲೇಖಿಸಿರುವ ಕಲ್ಲಿಗೇರಿಸ್ ಎಂಬ ಸ್ಥಳವೇ ಕನಕಗಿರಿ ಆಗಿರಬೇಕು ಎನ್ನುವುದು ಇತಿಹಾಸ ತಜ್ಞರ ಅಭಿಪ್ರಾಯ.
ನಿರ್ಮಾಣಕ್ಕೆ ಕಾರಣ
ಗಜ್ಜರ ವಂಶದ ಮೊದಲ ದೊರೆ ಪರಸಪ್ಪ ನಾಯಕನ ಕನಸಿನಲ್ಲಿ 'ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀ ನರಸಿಂಹನಾಗಿ ನೆಲೆಸಿ ಭಕ್ತರ ಬೇಡಿಕೆಯನ್ನು ಈಡೇರಿಸುತ್ತೇನೆ ಎಂದು ಹೇಳಿದನಂತೆ.' ಈ ವಿಚಾರವನ್ನು ಆತ ತನ್ನ ಸಾಮ್ರಾಟ ವಿಜಯನಗರದ ಅಧಿಪತಿ ಪ್ರೌಢದೇವರಾಯನಿಗೆ ನಿವೇದಿಸಿಕೊಂಡನಂತೆ. ಆಗ ವಿಜಯ ನಗರ ಅರಸರು 12 ಗ್ರಾಮಗಳನ್ನು ಉಂಬಳಿ ನೀಡಿ, ಪಾಳೆಯ ಪಟ್ಟ ಕಟ್ಟಿ ಕನಕಾಚಲಪತಿಗೆ ನಿತ್ಯ ಪೂಜೆ ನಡೆಸಲು ಆದೇಶಿಸಿದರಂತೆ. ಹಾಗಾಗಿಯೇ ಈ ದೇಗುಲದ ಸ್ಥಾಪನೆಗೆ ಕಾರಣವಾಯ್ತು, ನಂತರದ ದಿನಗಳಲ್ಲಿ ಸ್ವಾಮಿಯ ಮಹಿಮೆ ಅರಿತ ವಿಜಯ ನಗರ ದೊರೆಗಳು ಕನಕಾಚಲಪತಿ ದೇವರ ಭಕ್ತರಾದರು ಎನ್ನಲಾಗುತ್ತದೆ.
ವಾಸ್ತು ಶಿಲ್ಪ
ಈ ದೇವಾಲಯದಲ್ಲಿರುವ ಕಂಬಗಳಲ್ಲಿ ದಶಾವತಾರದ ಕೆತ್ತನೆಗಳಿವೆ. ಮಧ್ಯ ರಂಗ ಮಂಟಪದ ಮೇಲ್ಭಾಗದಲ್ಲಿ ಉಮಾಮಹೇಶ್ವರ ವಿವಾಹ, ಸೀತಾ ರಾಮ ಕಲ್ಯಾಣ ಹಾಗೂ ಶ್ರೀರಾಮ ಪಟ್ಟಾಭಿಷೇಕ ಸೇರಿದಂತೆ ಅನೇಕ ಬಗೆಯ ಮಧ್ಯಕಾಲೀನ ವರ್ಣ ಶಿಲ್ಪಗಳಿವೆ. ದೇಗುಲದ ಪಂಚ ಕಳಶ ನಯನ ಮನೋಹರವಾಗಿದೆ.
ಇವುಗಳನ್ನು ನೋಡಬೇಕು
ಕನಕಗಿರಿಯಲ್ಲಿ ಮಧ್ಯಕಾಲೀನ ಕರ್ನಾಟಕದ ವಾಸ್ತು ಶಿಲ್ಪದಂತೆ ನಿರ್ಮಿಸಲಾದ ವೆಂಕಟಪತಿ ಜಲಕ್ರೀಡಾ ಭವನ, ಸುಂದರ ಶಿಲ್ಪಕಲೆಯಿಂದ ಕೂಡಿರುವ ಮಂಟಪಗಳು, ಉಪ್ಪರಿಗೆಗಳು, ಭಿತ್ತಿಗಳಲ್ಲಿರುವ ಮಿಥುನ ಶಿಲ್ಪಗಳು, ಶೃಂಗಾರ ಶಿಲ್ಪಗಳು ಹಾಗೂ ನವಾಬರ ಕಾಲದಲ್ಲಿ ನಿರ್ಮಿಸಲಾದ ಶಿಲ್ಪಗಳು, ಗಜಾಸುರರನ್ನು ಕೊಲ್ಲುತ್ತಿರುವ ನಟರಾಜ, ಕಲ್ಲಿನ ರಥಗಳು, ಪುಷ್ಕರಣಿ ನರಸಿಂಹ ತೀರ್ಥ ಹಾಗೂ ಇದರ ಬಳಿ ಇರುವ ಸೂರ್ಯ ನಾರಾಯಣ ದೇವಾಲಯವನ್ನೂ ಕಾಣಬಹುದು.
ವಿಶೇಷ ಪೂಜೆ
ಪ್ರತಿ ತಿಂಗಳು ಫಾಲ್ಗುಣ ಮಾಸದಲ್ಲಿ(ಮಾರ್ಚ್) ತಿರುಪತಿಯ ವೆಂಕಟೇಶನಿಗೆ ನಡೆಯುವ ರೀತಿಯಲ್ಲೇ ವೈಭವ ಬ್ರಹ್ಮರಥೋತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಅಂಕುರಾರ್ಪಣ, ಧ್ವಜಾಹಾರೋಣ, ಶೇಷೋತ್ಸವ, ಗರುಢೋತ್ಸವ, ಉಯ್ಯಾಲೋತ್ಸವ, ಶಯನೋತ್ಸವ, ಗಜೋತ್ಸವ, ವಸಂತೋತ್ಸವ ಸೇರಿದಂತೆ ಅನೇಕ ಬಗೆಯ ವಿಧಿ ವಿಧಾನಗಳು ಜರುಗುತ್ತವೆ.
ಎಷ್ಟು ದೂರ?
ಬೆಂಗಳೂರು ದಕ್ಷಿಣಭಾಗದಿಂದ ಹೋಗುವುದಾದರೆ 380 ಕಿ.ಮೀ. ಆಗುತ್ತದೆ. ಬೆಂಗಳೂರು ಪೂರ್ವದಿಂದ ಹೋಗುವುದಾದರೆ 200 ಕಿ.ಮೀ. ಕೊಪ್ಪಳದ ಸಿಟಿಯಿಂದ 3 ಕಿ.ಮೀ. ದೂರ.