ಉತ್ತರ ಭಾರತದಲ್ಲಿರುವ ಉತ್ತರಾಖಂಡ್ ರಾಜ್ಯವು ಒಂದು ಪ್ರಖ್ಯಾತ ಪ್ರವಾಸಿ ರಾಜ್ಯವಾಗಿದ್ದು, ಜಗತ್ತಿನಾದ್ಯಂತ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. 'ದೇವತೆಗಳ ಭೂಮಿ' ಎಂದೆ ಪ್ರಖ್ಯಾತವಾಗಿರುವ ಉತ್ತರಾಖಂಡ ರಾಜ್ಯವು ತನ್ನ ಅದ್ವಿತೀಯ ಪ್ರಾಕೃತಿಕ ಸೌಂದರ್ಯದಿಂದಾಗಿ ಭೂಮಿಯ ಮೇಲಿನ ಸ್ವರ್ಗವೆಂದೆ ಪರಿಗಣಿಸಲ್ಪಟ್ಟಿದೆ.
ದೇಶೀಯ ವಿಮಾನ ಹಾರಾಟ ದರಗಳ ಮೇಲೆ ರೂ. 1000/- ಕಡಿತ ಪಡೆಯಿರಿ
ರಾಜ್ಯವು ಉತ್ತರ ಭಾಗದಲ್ಲಿ ಟಿಬೇಟ್ ಮತ್ತು ಪೂರ್ವದಲ್ಲಿ ನೇಪಾಲ ದೇಶಗಳಿಂದ ಸುತ್ತುವರೆದಿದೆ. ಭಾರತದ ರಾಜ್ಯಗಳಾದ ಉತ್ತರ ಪ್ರದೇಶವು ಇದರ ದಕ್ಷಿಣದಲ್ಲಿದ್ದು, ಹಿಮಾಚಲ್ ಪ್ರದೇಶವು ವಾಯವ್ಯ ದಿಕ್ಕಿನಲ್ಲಿದೆ. ಮೂಲತಃ ಉತ್ತರಾಂಚಲ ಎಂದೆ ಪರಿಚಿತವಾಗಿದ್ದ ಈ ರಾಜ್ಯಕ್ಕೆ 2007 ರಲ್ಲಿ ಉತ್ತರಾಖಂಡ ಎಂದು ಮರುನಾಮಕರಣ ಮಾಡಲಾಯಿತು. 13 ಜಿಲ್ಲೆಗಳನ್ನು ಹೊಂದಿರುವ ಈ ರಾಜ್ಯವನ್ನು, ಐತಿಹಾಸಿಕವಾಗಿ ಈ ಪ್ರದೇಶವನ್ನಾಳಿದ ಕುಮಾವೂನ್ ಮತ್ತು ಗಡ್ವಾಲ್ ಸಾಮ್ರಾಜ್ಯಗಳನುಸಾರವಾಗಿ ಕುಮಾವೂನ್ ಮತ್ತು ಗಡ್ವಾಲ್ ಎಂಬ ಎರಡು ಘಟಕಗಳಲ್ಲಿ ವಿಭಾಗಿಸಲಾಗಿದೆ.
ವಿಶೇಷ ಲೇಖನ : ಹರಿಯನೆಡೆ ದಾರಿ ತೋರುವ ಹರಿದ್ವಾರ
ರಾಜ್ಯವು ಕೇವಲ 13 ಜಿಲ್ಲೆಗಳನ್ನು ಒಳಗೊಂಡಿದೆ ಆದರೂ ಕೊನೆಯೆ ಇಲ್ಲವೆನೊ ಎಂಬಂತೆ ಅಸಂಖ್ಯಾತ ಪ್ರವಾಸಿ ಆಕರ್ಷಣೆಗಳನ್ನು ತನ್ನ ಮಡಿಲಲ್ಲಿ ಹುದುಗಿಸಿಟ್ಟುಕೊಂಡಿದೆ. ಅಚ್ಚರಿಯ ಸಂಗತಿಯೆಂದರೆ ಈ ಪಟ್ಟಿಯು, ಇಂದಿಗೂ ಶೋಧಿಸಲಾಗುತ್ತಿರುವ ಹೊಸ ಹೊಸ ತಾಣಗಳಿಂದ ಬೆಳೆಯುತ್ತಲೆ ಸಾಗುತ್ತಿದೆ. ಯಾತ್ರಾ ಕ್ಷೇತ್ರಗಳಿಂದ ಹಿಡಿದು ಸ್ಥಳ ವೀಕ್ಷಣೆ, ಚಾರಣ, ರಾಫ್ಟಿಂಗ್ ಹೀಗೆ ವೈವಿಧ್ಯತೆಯನ್ನು ಉಣಬಡಿಸುವ ತಾಣಗಳು ತಮ್ಮ ಸುಂದರ ಪ್ರಾಕೃತಿಕ ದೃಶ್ಯಾವಳಿಗಳಿಂದ ಹೆಸರುವಾಸಿಯಾಗಿದ್ದು, ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ವಿಶೇಷ ಲೇಖನ : ಭಾರತದ ವಿಶಿಷ್ಟ ಆಧ್ಯಾತ್ಮಿಕ ರಾಜಧಾನಿ
ಪ್ರಸ್ತುತ ಲೇಖನದ ಮೂಲಕ ಉತ್ತರಾಖಂಡ ರಾಜ್ಯದಲ್ಲಿ ಯಾವೇಲ್ಲ ಸುಂದರ ಸ್ಥಳಗಳು, ತೀರ್ಥ ಕ್ಷೇತ್ರಗಳು ಹಾಗೂ ವನ್ಯಜೀವಿ ಧಾಮಗಳಿವೆ ಎಂಬುದರ ಕುರಿತು ತಿಳಿಯಿರಿ.
ಉತ್ತರಾಖಂಡ ಆಕರ್ಷಣೆಗಳು:
ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರ ರಿಷಿಕೇಶ 'ದೇವಭೂಮಿ' ಎಂದೇ ಪ್ರಸಿದ್ದಿ ಪಡೆದಿದೆ. ಗಂಗಾ ನದಿ ದಂಡೆಯ ಮೇಲೆ ರಿಷಿಕೇಶ ನೆಲೆ ನಿಂತಿರುವ ಕಾರಣಕ್ಕೆ ಹಿಂದೂ ಧಾರ್ಮಿಕರಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಪ್ರತಿವರ್ಷ ಲಕ್ಷಾಂತರ ಭಕ್ತ ಮಹಾಶಯರು ರಿಷಿಕೇಶಕ್ಕೆ ಭೇಟಿ ನೀಡಿ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸುತ್ತಾರೆ. ಈ ಸ್ಥಳ ಹೆಚ್ಚು ಪ್ರಸಿದ್ದಿ ಪಡೆದಿರುವುದು ಪುರಾತನವಾದ ದೇವಸ್ಥಾನ ಹಾಗೂ ಆಶ್ರಮಗಳಿಂದ. ಹಲವಾರು ಯೋಗ ಮತ್ತು ಧ್ಯಾನ ಕೇಂದ್ರಗಳು ಇಲ್ಲಿದ್ದು ಅನುಭವಿ ಯೋಗ ಗುರುಗಳು ಇಲ್ಲಿ ತರಬೇತಿ ನೀಡುತ್ತಾರೆ. ಹಿಂದೂ ಪುರಾಣ ಕಥೆ ರಾಮಾಯಣದ ಪ್ರಕಾರ, ರಾವಣನ ಸಂಹಾರ ಮಾಡಿದ ನಂತರ ಶ್ರೀರಾಮ ಇದೇ ಸ್ಥಳದಲ್ಲಿ ಧ್ಯಾನಕ್ಕೆ ಕುಳಿತನಂತೆ.
ಚಿತ್ರಕೃಪೆ: Iqbal Mohammed
ಉತ್ತರಾಖಂಡ ಆಕರ್ಷಣೆಗಳು:
ರಿಷಿಕೇಶದಲ್ಲಿರುವ ಲಕ್ಷ್ಮಣ ಝೂಲಾ 450 ಅಡಿ ಎತ್ತರದ ಸಸ್ಪೆನ್ಶನ್ ಸೇತುವೆಯಾಗಿದ್ದು ನದಿಗಳು, ದೇವಸ್ಥಾನಗಳು ಮತ್ತು ಆಶ್ರಮಗಳ ಮೋಹಕ ನೋಟ ಇಲ್ಲಿ ಸಿಗುತ್ತದೆ. ಮೂಲತಃ ಇದು ನಾರಿನ ಸೇತುವೆಯಾಗಿದ್ದು 1939 ರಲ್ಲಿ ಇದನ್ನು ತೂಗಾಡುವ ಕಬ್ಬಿಣದ ಸೇತುವೆಯಾಗಿ ಮಾರ್ಪಡಿಸಿ ಕಟ್ಟಲಾಗಿದೆ. ಶ್ರೀರಾಮನ ತಮ್ಮ ಲಕ್ಷ್ಮಣ ಒಮ್ಮೆ ಈ ಸೇತುವೆಯ ಮೂಲಕ ಗಂಗಾ ನದಿಯನ್ನು ದಾಟಿದನೆಂಬ ಕಥೆಯಿದೆ. ಹೀಗಾಗಿ ಈ ಸೇತುವೆಗೆ ಲಕ್ಷ್ಮಣ ಝೂಲಾ ಎನ್ನಲಾಗುತ್ತದೆ. ಪ್ರಸಿದ್ದ ಸ್ವರ್ಗ್ ಆಶ್ರಮ ಇಲ್ಲಿಂದ 2 ಕಿಲೋ ಮೀಟರ್ ಅಂತರದಲ್ಲಿದೆ. ಹತ್ತಿರದಲ್ಲಿರುವ ರಾಮ್ ಝೂಲಾ ಕೂಡ ಮತ್ತೊಂದು ಆಕರ್ಷಣೆ.
ಚಿತ್ರಕೃಪೆ: ellyjonez
ಉತ್ತರಾಖಂಡ ಆಕರ್ಷಣೆಗಳು:
ಲಕ್ಷ್ಮಣ ಝೂಲಾದಂತೆಯೆ ಇರುವ ರಾಮ ಝೂಲಾ. ಆದರೆ ಇದು ಲಕ್ಷ್ಮಣ ಝೂಲಾಗಿಂತ ದೊಡ್ಡದಾಗಿದೆ.
ಚಿತ್ರಕೃಪೆ: Chetan Rama
ಉತ್ತರಾಖಂಡ ಆಕರ್ಷಣೆಗಳು:
ತ್ರಿವೇಣಿ ಸಂಗಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ಪವಿತ್ರ ನದಿಗಳು ಸಂಗಮಗೊಳ್ಳುತ್ತವೆ. ರಿಷಿಕೇಶದ ದೇವಸ್ಥಾನಗಳಿಗೆ ಭೇಟಿ ನೀಡುವ ಮುನ್ನ ಯಾತ್ರಾರ್ಥಿಗಳು ಈ ಘಾಟಿನಲ್ಲಿ ಮುಳುಗಿ ಸ್ನಾನ ಮಾಡಿ ತೆರಳುತ್ತಾರೆ. ನಂಬಿಕೆಯ ಪ್ರಕಾರ, ಈ ನದಿಯಲ್ಲಿ ಮುಳುಗೆದ್ದರೆ ಮಾನವನ ಪಾಪಗಳೆಲ್ಲವೂ ನಾಶವಾಗುತ್ತವೆ ಎನ್ನಲಾಗುತ್ತದೆ. ಸಂಜೆಯ ಸಮಯದಲ್ಲಿ ಇಲ್ಲಿ ಮಹಾರತಿ ಪೂಜೆಗಾಗಿ ಲಕ್ಷಾಂತರ ಭಕ್ತರು ಒಂದೆಡೆ ಸೇರುತ್ತಾರೆ. ಭಕ್ತಿಯ ಸಂಕೇತವಾಗಿ ಹೂವು ತುಂಬಿದ ಎಣ್ಣೆ ದೀಪಗಳ ದೊನ್ನೆಯನ್ನು ನದಿಯಲ್ಲಿ ತೇಲಿಬಿಡುತ್ತಾರೆ. ಸತ್ತವರ ಆತ್ಮಶಾಂತಿಗಾಗಿ ಪಿಂಡ ಶ್ರಾದ್ದ ಆಚರಣೆಯೂ ಇಲ್ಲಿ ಮಾಡಲಾಗುತ್ತದೆ.
ಚಿತ್ರಕೃಪೆ: rajkumar1220
ಉತ್ತರಾಖಂಡ ಆಕರ್ಷಣೆಗಳು:
ಮುನಿ ಕೀ ರೇತಿ ಎಂಬ ಸ್ಥಳವು ರಿಷಿಕೇಶ ಬಳಿಯಿರುವ ಒಂದು ಪ್ರಶಾಂತ ಸ್ಥಳವಾಗಿದೆ. ಇಲ್ಲಿ ಪ್ರಮುಖವಾಗಿ ಯೋಗ ಹಾಗೂ ಧ್ಯಾನ ಕೇಂದ್ರಗಳನ್ನು ಕಾಣಬಹುದು. ಮುಖ್ಯವಾಗಿ ಸ್ವಾಮಿ ಶಿವಾನಂದರು ಸ್ಥಾಪಿಸಿದ ಶಿವಾನಂದ ಆಶ್ರಮವು ಈ ಸ್ಥಳದಲ್ಲೆ ನೆಲೆಸಿದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ರಾಮನ ಸಹೋದರನಾಗಿದ್ದ ಭರತನು ಈ ಸ್ಥಳದಲ್ಲಿಯೆ ತಪಗೈದಿದ್ದನು. ಇಲ್ಲಿ ಹರಿದಿರುವ ಗಂಗಾ ನದಿ ತಟದ ಮರಳನ್ನು ಸಾಧು ಸಂತರು ಉಪಯೋಗಿಸುತ್ತಿದ್ದುದರಿಂದ ಈ ಸ್ಥಳಕ್ಕೆ "ಮುನಿ ಕೀ ರೇತಿ" ಎಂಬ ಹೆಸರು ಬಂದಿದೆ. ಹಿಂದಿ ಭಾಷೆಯಲ್ಲಿರುವ ಈ ವಾಕ್ಯದ ಅರ್ಥ ಕನ್ನಡದಲ್ಲಿ ಮುನಿಗಳ ಮರಳು ಎಂದಾಗುತ್ತದೆ.
ಚಿತ್ರಕೃಪೆ: Ajay Tallam
ಉತ್ತರಾಖಂಡ ಆಕರ್ಷಣೆಗಳು:
ರಿಷಿಕೇಶದಲ್ಲಿರುವ ಪರಮಾರ್ಥ ನಿಕೇತನ ಒಂದು ಧಾರ್ಮಿಕ ಆಶ್ರಮವಾಗಿದ್ದು ಹೆಸರುವಾಸಿಯಾದ ತಾಣವಾಗಿದೆ. ಪರಮಾರ್ಥ ನಿಕೇತನದಲ್ಲಿ ಸುಮಾರು 1000 ಕ್ಕೂ ಹೆಚ್ಚು ರೂಮುಗಳಿವೆ. 1942 ರಲ್ಲಿ ಈ ಆಶ್ರಮವನ್ನು ಪೂಜ್ಯ ಸುಖದೇವಾನಂದಜಿ ಕಟ್ಟಿದರು. ಅಂತರಾಷ್ಟ್ರೀಯ ಯೋಗ ಉತ್ಸವವು ಇಲ್ಲಿ ಜರುಗುತ್ತಿರುತ್ತದೆ.
ಚಿತ್ರಕೃಪೆ: rajkumar1220
ಉತ್ತರಾಖಂಡ ಆಕರ್ಷಣೆಗಳು:
ಬಿಳಿ ನೀರಿನ ರಾಫ್ಟಿಂಗ್, ರಿಷಿಕೇಶದ ಒಂದು ಪ್ರಸಿದ್ದ ಸಾಹಸ ಚಟುವಟಿಕೆಯಾಗಿದ್ದು ನಗರಕ್ಕೆ ಭೇಟಿ ನೀಡುವ ಸಾಹಸಪ್ರಿಯ ಪ್ರವಾಸಿಗರೆಲ್ಲರಿಗೂ ಇದು ಇಷ್ಟ. ಇಲ್ಲಿನ ಗಂಗಾನದಿಯು ಮಧ್ಯಮ ಮತ್ತು ಅಬ್ಬರದ ಅಲೆಗಳೆರಡನ್ನೂ ಹೊಂದಿದ್ದು ತರಬೇತಿ ಹೊಂದಿದ ಹಾಗು ತರಬೇತಿ ಇಲ್ಲದ ಎಲ್ಲರಿಗೂ ರಾಫ್ಟಿಂಗ್ ಉತ್ತಮ ಅನುಭವ ನೀಡುತ್ತದೆ. ವೃತ್ತಿನಿರತ ಅನಿಭವೀ ರಾಫ್ಟರ್ ಗಳು ಧೈರ್ಯಕ್ಕೆ ಜೊತೆಗಿದ್ದೇ ಇರುತ್ತಾರೆ.
ಚಿತ್ರಕೃಪೆ: Ishan Manjrekar
ಉತ್ತರಾಖಂಡ ಆಕರ್ಷಣೆಗಳು:
ಮೂಲಕ ಉತ್ತರಾಖಂಡ ರಾಜ್ಯದಲ್ಲಿರುವ ಭಾರತದ ಅತಿ ಪುಣ್ಯ ಕ್ಷೇತ್ರಗಳ ಪೈಕಿ ಒಂದಾದ ಹರಿದ್ವಾರವು ದೆಹಲಿಯಿಂದ 212 ಕಿ.ಮೀ ಗಳಷ್ಟು ದೂರವಿದ್ದು ದೆಹಲಿಯಿಂದ ಶತಾಬ್ದಿ ರೈಲಿನ ಸೇವೆ ಹರಿದ್ವಾರಕ್ಕೆ ತೆರಳಲು ಲಭ್ಯವಿದೆ. ಹರಿದ್ವಾರವು ಒಂದು ಪ್ರಾಚೀನ ನಗರವಾಗಿದ್ದು ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯಲ್ಲಿದೆ. ಪವಿತ್ರ ಗಂಗಾನದಿಯು ಗಂಗೋತ್ರಿ (ಗೋಮುಖ )ಯಲ್ಲಿ ಉದ್ಭವಗೊಂಡು 253 ಕಿ.ಮೀ ಗಳಷ್ಟು ಕ್ರಮಿಸಿ ಉತ್ತರ ಭಾರತದಲ್ಲಿ ಹರಿದ್ವಾರದ ಮೂಲಕ ಪ್ರಥಮವಾಗಿ ಪ್ರವೇಶಿಸುತ್ತದೆ. ಆದ್ದರಿಂದಲೆ ಈ ನಗರವನ್ನು ಗಂಗಾದ್ವಾರಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಚಿತ್ರಕೃಪೆ: Paul
ಉತ್ತರಾಖಂಡ ಆಕರ್ಷಣೆಗಳು:
ಹರ್ ಕಿ ಪೌರಿ : ಇದೊಂದು ಪವಿತ್ರ ಘಾಟ್ (ಸ್ನಾನ ಮಾಡುವ ಸ್ಥಳ) ಪ್ರದೇಶವಾಗಿದ್ದು ಒಂದನೆಯ ಶತಮಾನದಲ್ಲಿ ವಿಕ್ರಮಾದಿತ್ಯ ರಾಜನಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ. ಈ ಸ್ಥಳದಲ್ಲಿರುವ ಬ್ರಹ್ಮಕುಂಡವು ಹೆಚ್ಚಿನ ಪಾವಿತ್ರ್ಯತೆ ಪಡೆದಿದ್ದು ಶಿವನ ಹೆಜ್ಜೆ ಗುರುತಿನ ಸ್ಥಳ ಇದಾಗಿದೆ. ಸಂಜೆಯ ಸಮಯವು ಗಂಗೆಗೆ ಆರತಿ ಮಾಡಲಾಗುತ್ತದೆ ಹಾಗೂ ಸಾವಿರಾರು ಭಕ್ತರು ತಮ್ಮ ಪೂರ್ವಜರ ಶಾಂತಿಗಾಗಿ ದೀಪಗಳನ್ನು ತೇಲಿ ಬಿಡುತ್ತಾರೆ. ಈ ಒಂದು ಅನುಭವವು ಅತ್ಯಂತ ಸುಂದರಮಯವಾಗಿರುತ್ತದೆ.
ಚಿತ್ರಕೃಪೆ: Livefree2013
ಉತ್ತರಾಖಂಡ ಆಕರ್ಷಣೆಗಳು:
ಚಂಡಿ ದೇವಿ ದೇವಾಲಯ, ಹರಿದ್ವಾರ : ನೀಲ ಪರ್ವತದ ಮೇಲೆ ಆಸೀನಳಾಗಿರುವ ಚಂಡಿ ದೇವಿಗೆ ಮುಡಿಪಾದ ದೇವಾಲಯ ಇದಾಗಿದೆ. ಸ್ಕಂದ ಪುರಾಣದನುಸಾರ ಶುಂಭ ನಿಶುಂಭ ರಕ್ಕಸರಡಿಯಲ್ಲಿ ಸೇನಾಧಿಪತಿಗಳಾಗಿದ್ದ ಚಂಡ ಮುಂಡ ಎಮ್ಬ ಅಸುರರನ್ನು ಇದೆ ಸ್ಥಳದಲ್ಲಿ ದೇವಿಯು ವಧಿಸಿದ್ದಳು. ದೇವಿಯ ವಿಗ್ರಹವನ್ನು 8 ನೆಯ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದಾರೆಂದು ಹೇಳಲಾಗಿದೆ.
ಚಿತ್ರಕೃಪೆ: World8115
ಉತ್ತರಾಖಂಡ ಆಕರ್ಷಣೆಗಳು:
ಮಾನಸಾ ದೇವಿ ದೇವಾಲಯ, ಹರಿದ್ವಾರ : ಇದು ಪವಿತ್ರ ಕ್ಷೇತ್ರ ಹರಿದ್ವರದಲ್ಲಿರುವ ಮತ್ತೊಂದು ಪ್ರಮುಖ ಹಿಂದೂ ದೇವಾಲಯ. ಶಕ್ತಿಯ ಅವತಾರವಾದ ಮಾನಸಾ ದೇವಿಗೆ ಮುಡಿಪಾದ ಈ ದೇವಾಲಯವು ಶಿವಾಲಿಕ್ ಪರ್ವತ ಶ್ರೇಣಿಯ ಬಿಲ್ವ ಪರ್ವತದ ಮೇಲೆ ನಿರ್ಮಿತವಾಗಿದೆ.
ಚಿತ್ರಕೃಪೆ: Ekabhishek
ಉತ್ತರಾಖಂಡ ಆಕರ್ಷಣೆಗಳು:
ಮಾಯಾ ದೇವಿ ದೇವಾಲಯ, ಹರಿದ್ವಾರ : ಹರಿದ್ವಾರದ ಪ್ರಮುಖ ತೀರ್ಥಗಳ ಪೈಕಿ ಇದೂ ಒಂದು. ಕಥೆಯ ಅನುಸಾರ, ಸತಿಯ ಮೃತ ದೇಹವನ್ನು ಶಿವನು ಹಿಡಿದು ಒಯ್ಯುತ್ತಿರುವಾಗ ಅವಳ ಹೃದಯ ಹಾಗೂ ಹೊಕ್ಕಳದ ಭಾಗವು ಬಿದ್ದ ಸ್ಥಳದಲ್ಲೆ ಈ ದೇವಾಲಯವಿದೆ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: World8115
ಉತ್ತರಾಖಂಡ ಆಕರ್ಷಣೆಗಳು:
ಆನಂದಮೊಯಿ ಮಾತಾ ಆಶ್ರಮ : ಹರಿದ್ವಾರದ ಕಂಖಲ್ ನಲ್ಲಿ ಈ ಮಾತೆಯ ಆಶ್ರಮವನ್ನು ಕಾಣಬಹುದಾಗಿದೆ. ಪಶ್ಚಿಮ ಬಂಗಾಳದ ಮೂಲ ಹೊಂದಿರುವ ಈ ಮಾತೆಯು 1896 ರಿಂದ 1982 ರ ವರೆಗ್ಎ ಜೀವಿಸಿದ್ದರು ಹಾಗೂ ಸಾಕಷ್ಟು ಭಕ್ತರು ಇವರನ್ನು ಒಬ್ಬ ಸಂತೆಯಾಗಿ ಪರಿಗಣಿಸುತ್ತಾರೆ.
ಚಿತ್ರಕೃಪೆ: Naresh Balakrishnan
ಉತ್ತರಾಖಂಡ ಆಕರ್ಷಣೆಗಳು:
ಜೋಷಿಮಠ ಅಥವಾ ಜ್ಯೋತಿರ್ಮಠವು ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ. ಜೋಷಿಮಠ ಕ್ಷೇತ್ರವು ಪ್ರಮುಖವಾಗಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮೂಲ ಪೀಠಗಳಲ್ಲಿ ಒಂದೆನಿಸಿದೆ. ಶೃಂಗೇರಿ, ಪುರಿ ಮತ್ತು ದ್ವಾರಕಾ ಉಳಿದ ಮೂರು ಪೀಠಗಳು. ಜೋಷಿಮಠವು ಉತ್ತರಾಮ್ನಾಯ ಪೀಠವೆನಿಸಿದ್ದು ಆದಿ ಗುರು ಶಂಕರಾಚಾರ್ಯರು ಜ್ಯೋತಿರ್ಮಠದ ಪೀಠಕ್ಕೆ ಅಥರ್ವ ವೇದದ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದರೆನ್ನಲಾಗಿದೆ.
ಚಿತ್ರಕೃಪೆ: christian0702
ಉತ್ತರಾಖಂಡ ಆಕರ್ಷಣೆಗಳು:
ಮತ್ತೊಂದು ಪವಿತ್ರ ಯಾತ್ರಾ ಕ್ಷೇತ್ರವಾದ ಬದರಿನಾಥಕ್ಕೆ ಸಮೀಪದಲ್ಲಿರುವ ಜೋಷಿಮಠದಲ್ಲಿ ಪ್ರಸಿದ್ಧ ನರಸಿಂಹ ಸ್ವಾಮಿ ದೇವಾಲಯವಿದೆ. ಉತ್ತರಾಮ್ನಾಯ ಮಠ ಅಥವಾ ಪೀಠವನ್ನು ಸಾಮಾನ್ಯವಾಗಿ ಬದರಿಕಾಶ್ರಮವೆಂದು ಕರೆಯಲಾಗುತ್ತದೆ ಆದರೆ ವಾಸ್ತವವಾಗಿ ಈ ಮಠವು ಜೋಷಿಮಠದಲ್ಲಿದೆ.
ಚಿತ್ರಕೃಪೆ: Raji.srinivas
ಉತ್ತರಾಖಂಡ ಆಕರ್ಷಣೆಗಳು:
ಉತ್ತರಕಾಶಿಯು ಒಂದು ಸುಂದರವಾದ ಜಿಲ್ಲೆಯೆಂಬ ಖ್ಯಾತಿ ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 1158 ಮೀಟರ್ ಎತ್ತರದಲ್ಲಿರುವ ಈ ತಾಣ ಭೂಮಿಯ ಮೇಲಿನ ಸ್ವರ್ಗವೆಂದೆ ಹೇಳಬಹುದು. ಉತ್ತರಖಂಡ ರಾಜ್ಯದ ಒಂದು ಜಿಲ್ಲೆಯ ಸ್ಥಾನಮಾನ ಇದಕ್ಕಿದೆ. 1960 ರ ಫೆ.24 ರಂದು ಉತ್ತರಖಂಡದ ಈ ಜಿಲ್ಲೆಯು ಉದಯಿಸಿದ್ದು, ತನ್ನ ಉತ್ತರದ ದಿಕ್ಕಿನಲ್ಲಿ ಹಿಮಾಚಲ ಪ್ರದೇಶ ಹಾಗೂ ಟಿಬೇಟ್ ನಿಂದ ಸುತ್ತುವರೆದಿದ್ದರೆ ಪೂರ್ವ ದಿಕ್ಕಿನಲ್ಲಿ ಚಮೋಲಿ ಜಿಲ್ಲೆಯಿದೆ.
ಚಿತ್ರಕೃಪೆ: Barry Silver
ಉತ್ತರಾಖಂಡ ಆಕರ್ಷಣೆಗಳು:
ಉತ್ತರಾಖಂಡ ರಾಜ್ಯದ ಉತ್ತರಕಾಶಿ ಎಂಬ ಜಿಲ್ಲೆಯಲ್ಲಿ ನೆಲೆಸಿರುವ ಗಂಗೋತ್ರಿ ಎಂಬ ಕ್ಷೇತ್ರವು ಹಿಂದೂ ಧರ್ಮದವರ ಪಾಲಿಗೆ ಅತಿ ಮಹತ್ವ ಪಡೆದಿರುವ ಸ್ಥಳವಾಗಿದೆ. "ಗಂಗಾ ಸ್ನಾನಂ ತುಂಗಾ ಪಾನಂ" ಎಂದು ಹೇಳುವಂತೆ ಮಿಂದಾಗ ಸರ್ವ ಪಾಪಗಳನ್ನು ನಾಶ ಮಾಡುವ ಗಂಗಾ ಮಹಾನದಿಯ ಉಗಮ ಸ್ಥಳ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ ಗಂಗೋತ್ರಿ. ಗಂಗಾ ದೇವಿಗೆ ಮುಡಿಪಾದ ಅತಿ ಪ್ರಸಿದ್ಧ ದೇವಾಲಯವಿರುವ ಗಂಗೋತ್ರಿ, ಹಿಂದೂಗಳ ಪಾಲಿಗೆ ಪವಿತ್ರವಾಗಿರುವ ಚಿಕ್ಕ ನಾಲ್ಕು ಯಾತ್ರಾ ಧಾಮಗಳ ಪೈಕಿ ಒಂದಾಗಿದೆ. ಸಮುದ್ರ ಮಟ್ಟದಿಂದ 3048 ಮೀ ಗಳಷ್ಟು ಎತ್ತರದಲ್ಲಿರುವ ಈ ಕ್ಷೇತ್ರವು ಭಾಗೀರಥಿ ನದಿಯ ದಂಡೆಯ ಮೇಲೆ ನೆಲೆಸಿದ್ದು ಗಂಗೆಯ ಉಗಮ ಸ್ಥಾನವಾಗಿದೆ.
ಚಿತ್ರಕೃಪೆ: envybalki
ಉತ್ತರಾಖಂಡ ಆಕರ್ಷಣೆಗಳು:
ಪ್ರಸ್ತುತ ಗಂಗೋತ್ರಿಯಲ್ಲಿರುವ ಗಂಗೆಗೆ ಮುಡಿಪಾದ ಗಂಗಾ ದೇವಸ್ಥಾನ. ಗಂಗೆಯ ಈ ಅತಿ ಪ್ರಸಿದ್ಧವಾದ ದೇವಾಲಯವನ್ನು ಮೂಲವಾಗಿ 18 ನೇಯ ಶತಮಾನದಲ್ಲಿ ಗೋರ್ಖಾ ಜನರಲ್ ಆಗಿದ್ದ ಅಮರ ಸಿಂಗ್ ಥಾಪಾ ಎಂಬುವವರು ಕಟ್ಟಿಸಿದ್ದಾರೆ.
ಚಿತ್ರಕೃಪೆ: Atarax42
ಉತ್ತರಾಖಂಡ ಆಕರ್ಷಣೆಗಳು:
ಗಂಗೋತ್ರಿಯಲ್ಲಿ ನೀರಿನಲ್ಲಿ ಮುಳುಗಿದ ಕಲ್ಲಿನ ಶಿವಲಿಂಗವೊಂದನ್ನು ಕಾಣಬಹುದಾಗಿದೆ (ಚಳಿಗಾಲ ಬರುವ ಸಂದರ್ಭದಲ್ಲಿ, ಏಕೆಂದರೆ ಈ ಸಮಯದಲ್ಲಿ ಅಷ್ಟೊಂದಾಗಿ ನೀರು ಇರುವುದಿಲ್ಲ). ದಂತ ಕಥೆಯ ಪ್ರಕಾರ, ಈ ಒಂದು ಸ್ಥಳದಲ್ಲೆ ಗಂಗೆಯು ಸ್ವರ್ಗ ಲೋಕದಿಂದ ಶಿವನ ಜಟೆಯ ಮೂಲಕ ಭೂಲೋಕಕ್ಕೆ ಪ್ರವೇಶಿಸಿದ್ದು. ಚಿತ್ರದಲ್ಲಿರುವುದು ಭಾಗೀರಥಿ ಹಾಗೂ ಅಲಕ್ನಂದಾ ನದಿಗಳ ಸಂಗಮ ದೇವಪ್ರಯಾಗ್ ನಲ್ಲಿ. ಇಲ್ಲಿಂದಲೆ ಮುಂದೆ ಗಂಗೆಯಾಗಿ ಈ ನದಿಯು ಹರಿಯುತ್ತದೆ.
ಚಿತ್ರಕೃಪೆ: Wilson44691
ಉತ್ತರಾಖಂಡ ಆಕರ್ಷಣೆಗಳು:
ಭಾಗೀರಥಿ ನದಿಯ ಉಗಮ ಸ್ಥಾನವಾದ ಗೌಮುಖ ಹಿಮನದಿ (ಗ್ಲೇಸಿಯರ್) ಯು ಗಂಗೋತ್ರಿಯಿಂದ 18 ಕಿ.ಮೀ ದೂರದಲ್ಲಿದೆ. ಗೋವು (ಆಕಳು) ಹಾಗೂ ಮುಖ ಎಂಬ್ ಪದಗಳ ಜೋಡಣೆಯಿಂದ ಇದಕ್ಕೆ ಗೋಮುಖ/ಗೌಮುಖ ಎಂಬ ಹೆಸರು ಬಂದಿದೆ. ಈ ಹಿಮನದಿಯನ್ನು ಅತಿ ಸೂಕ್ಷ್ಮವಾಗಿ ಗಮನಿಸಿದಾಗ ಇದು ಆಕಳು ಮುಖದ ಆಕಾರದಲ್ಲಿರುವುದು ಕಂಡುಬರುತ್ತದೆ. ಅಂತೆಯೆ ಇದಕ್ಕೆ ಈ ಹೆಸರು ಬಂದಿದೆ. ಚಿತ್ರದಲ್ಲಿರುವುದು ಗೋಮುಖ/ಗೌಮುಖ, ಭಾಗೀರಥಿಯ ಉಗಮ ಸ್ಥಾನ.
ಚಿತ್ರಕೃಪೆ: Barry Silver
ಉತ್ತರಾಖಂಡ ಆಕರ್ಷಣೆಗಳು:
"ಭಾರತದ ಸರೋವರ ಜಲ್ಲೆ" ನೈನಿತಾಲ್ ನ ಹೆಸರು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಅಲ್ಲಿನ ಸೌಂದರ್ಯವನ್ನು ಬಣ್ಣೀಸುವುದೇ ಅಸಾಧ್ಯ. ಹಲವಾರು ಪುರಾಣ ಕಥೆಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ಪ್ರದೇಶ ಇಲ್ಲಿಗೆ ಬಂದ ಪ್ರವಾಸಿಗರನ್ನು ಮೈಮರೆಯುವಂತೆ ಮಾಡುತ್ತದೆ. ನೈನಿತಾಲ್ ಅನ್ನು 'ಮೂರು ಸನ್ಯಾಸಿಗಳ ಸರೋವರ' ಅಥವಾ ಮಾನಸ ಖಂಡದಲ್ಲಿ 'ತ್ರಿ-ಋಷಿ ಸರೋವರ', (ಸ್ಕಂದ ಪುರಾಣದಲ್ಲಿ) ಎಂದು ಕರೆಯಲಾಗುತ್ತದೆ. ಮೂರು ಋಷಿಗಳಾದ, ಅತ್ರಿ, ಪುಲಸ್ತ್ಯಾ ಮತ್ತು ಪುಲಹ ಋಷಿಗಳು ತಮ್ಮ ಬಾಯಾರಿಕೆಯನ್ನು ನೈನಿತಾಲ್ ನಲ್ಲಿ ನೀಗಿಸಿಕೊಂಡರು ಎಂದು ಹೇಳಲಾಗುತ್ತದೆ. ಪ್ರಸ್ತುತ ನೈನಿತಾಲ್ ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ. ನೈನಿ ಕೆರೆ.
ಚಿತ್ರಕೃಪೆ: Abhishek gaur70
ಉತ್ತರಾಖಂಡ ಆಕರ್ಷಣೆಗಳು:
ಉತ್ತರಾಖಂಡ ರಾಜ್ಯದಲ್ಲಿರುವ ರುದ್ರಪ್ರಯಾಗ ಶಿವನ ನೆಲೆವೀಡು ಎಂದೇ ಪ್ರಸಿದ್ಧವಾಗಿದೆ. ಇಲ್ಲಿ ಪುರಾಣದಲ್ಲಿ ಪ್ರಸ್ತಾಪವಿರುವ ಹಲವಾರು ಧಾರ್ಮಿಕ ಸ್ಥಳಗಳನ್ನು ಕಾಣಬಹುದು. ವರ್ಷದ ಯಾವುದೇ ಸಮಯದಲ್ಲಾದರೂ ಭೇಟಿ ನೀಡಬಹುದಾದ ಈ ಸ್ಥಳಕ್ಕೆ ಹಿಮಾಲಯದ ಬೃಹತ್ ಮುಚ್ಚಳವಿದೆ ಅರ್ಥಾತ್ ಸುತ್ತಲೂ ಆವರಿಸಿದೆ. ಈ ಅದ್ಭುತ ದೃಶ್ಯವನ್ನು ಈ ಸ್ಥಳಕ್ಕೆ ಭೇಟಿ ನೀಡಿದ ನಂತರವಷ್ಟೇ ಅನುಭವಿಸಬಹುದು. 'ರುದ್ರ', ಎಂಬ ಪದ ಹಿಂದೂ ದೇವತೆ, ಶಿವನ ಅವತಾರ ರುದ್ರ ಎಂಬ ಪದದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಹಿಂದೂ ಪುರಾಣದ ಪ್ರಕಾರ, ನಾರದ ಮುನಿಯು ಈ ಸ್ಥಳದಲ್ಲಿ ರುದ್ರನಿಂದ ಆಶೀರ್ವಾದ ಪಡೆದಿದ್ದನು ಎಂದು ಹೇಳಲಾಗುತ್ತದೆ. ಈ ಪಟ್ಟಣವು ಒಮ್ಮುಖವಾಗಿ ಹರಿಯುವ ಮಂದಾಕಿನಿ ಮತ್ತು ಅಲಕನಂದಾ ನದಿಗಳ ಮೇಲೆ ನೆಲೆಗೊಂಡಿದೆ. ಅವುಗಳ ಸಂಗಮ ಇಲ್ಲಿ ಕಾಣಬಹುದು.
ಚಿತ್ರಕೃಪೆ: Fowler&fowler
ಉತ್ತರಾಖಂಡ ಆಕರ್ಷಣೆಗಳು:
ರುದ್ರನಾಥ ದೇವಾಲಯ ಸಮುದ್ರ ಮಟ್ಟದಿಂದ 2286 ಮೀಟರ್ ಎತ್ತರದಲ್ಲಿದ್ದು ರುದ್ರನಾಥ ಪ್ರದೇಶದಲ್ಲಿದೆ. ರುದ್ರನಾಥ ದೇವಾಲಯದಲ್ಲಿ ನೀಲ ಕಂಠ ಮಹಾದೇವ ಎಂಬ ಹೆಸರಿನಲ್ಲಿ ಹಿಂದೂ ದೇವ ಶಿನನನ್ನು ಇಲ್ಲಿ ಪೂಜಿಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ದೇವಾಲಯವನ್ನು ಭಾರತೀಯ ಮಹಾಕಾವ್ಯ, ಮಹಾಭಾರತದ ಪೌರಾಣಿಕ ಪಾತ್ರಗಳಾದ ಪಾಂಡವರಿಂದ ನಿರ್ಮಿಸಲಾಗಿದೆ.
ಚಿತ್ರಕೃಪೆ: Redtigerxyz
ಉತ್ತರಾಖಂಡ ಆಕರ್ಷಣೆಗಳು:
ತ್ರಿಯುಗಿನಾರಾಯಣ, ರುದ್ರಪ್ರಯಾಗದಲ್ಲಿರುವ, ಭೇಟಿ ನೀಡಬಹುದಾದಂತಹ ಒಂದು ಪವಿತ್ರ ಸ್ಥಳ. ನಂಬಿಕೆಗಳ ಪ್ರಕಾರ, ಇದು ಹಿಂದೂ ದೇವರು ಶಿವನು ಈ ಸ್ಥಳದಲ್ಲಿ ಸತ್ಯಯುಗದಲ್ಲಿ ಪಾರ್ವತಿಯೊಂದಿಗೆ ವಿವಾಹವಾಗಿದ್ದನು ಹಾಗೂ ಈ ಸ್ಥಳವು ಹಿಮಾವತ್ ಪ್ರದೇಶದ ರಾಜಧಾನಿಯಾಗಿತ್ತು. ಇನ್ನೊಂದು ಕುತೂಹಲಕಾರಿಯಾದ ವಿಷಯವೆಂದರೆ ಶಿವ ಪಾರ್ವತಿಯರ ಮದುವೆಯಲ್ಲಿ ಬಳಸಲಾಗಿದ್ದ ಅಗ್ನಿ/ಹವನ ಕುಂಡ ಈಗಲೂ ಇಲ್ಲಿ ಉರಿಯುತ್ತಿದೆ! ಈ ಹವನ ಕುಂಡದ ಭಸ್ಮವನ್ನು ಹಚ್ಚಿಕೊಂಡರೆ ದೇವರೆ ವೈವಾಹಿಕ ಜಿವನಕ್ಕೆ ಹರಸುತ್ತಾರೆ ಎಂದು ಭಕ್ತರು ನಂಬುತ್ತಾರೆ. ಇದು ಕೇದಾರನಾಥ ದೇವಾಲಯವನ್ನು ಹೋಲುವಂತಹ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರು ರುದ್ರಕುಂಡ, ವಿಷ್ಣು ಕುಂಡ ಹಾಗೂ ಬ್ರಹ್ಮ ಕುಂಡವನ್ನು ಭೇಟಿ ಮಾಡಬಹುದು.
ಚಿತ್ರಕೃಪೆ: Shaq774
ಉತ್ತರಾಖಂಡ ಆಕರ್ಷಣೆಗಳು:
ರುದ್ರಪ್ರಯಾಗ ದೇವಾಲಯ, ಅಲಕನಂದಾ ಮತ್ತು ಮಂದಾಕಿನಿ ಎಂಬ ಎರಡು ನದಿಗಳ ಸಂಗಮದ ಸ್ಥಳದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ವಿನಾಶ ನಾಶಕ ದೇವ ಶಿವನನ್ನು ಪೂಜಿಸಲಾಗುವ ಈ ದೇವಸ್ಥಾನಕ್ಕೆ ಅನೇಕ ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಪುರಾಣದ ಪ್ರಕಾರ, ಶಿವ 'ರುದ್ರ' ನ ಅವತಾರವನ್ನು ಹೊಂದಿ, ಸಂಗೀತದಲ್ಲಿ ಪರಿಣಿತಿಯನ್ನು ಪಡೆಯಬೇಕೆನ್ನುವ ಅಭಿಲಾಷೆಯಿಂದ ಇಲ್ಲಿ ತಪಸ್ಸು ಮಾಡಿದ್ದ ಹಾಗು ನಾರದ ಮುನಿಗೆ ಆಶೀರ್ವಾದ ಮಾಡಿದ್ದನು ಎಂದು ಹೇಳಲಾಗುತ್ತದೆ. ಈ ಸ್ಥಳದ ಹತ್ತಿರದಲ್ಲಿ ಜಗದಂಬಾ ದೇವಾಲಯವನ್ನೂ ಕಾಣಬಹುದು.
ಚಿತ್ರಕೃಪೆ: Ekabhishek
ಉತ್ತರಾಖಂಡ ಆಕರ್ಷಣೆಗಳು:
ಪೌಡಿ ಯಿಂದ 19 ಕಿ.ಮೀ ದೂರದಲ್ಲಿರುವ ಖಿರ್ಸು ಇಲ್ಲಿನ ಇನ್ನೊಂದು ಪ್ರಮುಖ ತಾಣ. ಖಿರ್ಸುವಿನಿಂದ ಕಾಣುವ ಕೇಂದ್ರ ಹಿಮಾಲಯದ ಸೊಬಗು ಮತ್ತೆಲ್ಲಿಂದಲೂ ಕಾಣದು. ಸಮುದ್ರ ಮಟ್ಟದಿಂದ 1700 ಮೀ ಎತ್ತರದಲ್ಲಿರುವ ಖಿರ್ಸು ಒಂದು ಶಾಂತವಾದ ತಾಣವಾಗಿದೆ. ಶಾಂತವಾದ ಸುತ್ತಲಿನ ವಾತಾವರಣ, ಹಕ್ಕಿಗಳ ಚಿಲಿಪಿಲಿ-ಕಲರವ ಹಾಗೂ ಓಕ್ ಮತ್ತು ದೇವದಾರುವಿನಿಂದ ಆವೃತವಾಗಿರುವ ಮರಗಳು, ಒಟ್ಟಾರೆಯಾಗಿ ಈ ಸ್ಥಳವನ್ನು ಮತ್ತಷ್ಟು ಸುಂದರವನ್ನಾಗಿಸಿದೆ. ಇಲ್ಲಿರುವ ಹಸಿರು ಸೇಬು ಹಣ್ಣುಗಳ ತೋಟ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ.
ಚಿತ್ರಕೃಪೆ: sporadic
ಉತ್ತರಾಖಂಡ ಆಕರ್ಷಣೆಗಳು:
ಹಿಂದೂ ಧರ್ಮದ ಹಲವು ಪೌರಾಣಿಕ ಕಥೆಗಳಲ್ಲಿ ಉಲ್ಲೇಖಗೊಂಡಿರುವ ಸಾಕಷ್ಟು ಸ್ಥಳಗಳು, ದೇವಸ್ಥಾನಗಳು, ನದಿ, ಕೆರೆ, ತೊರೆಗಳು ಇಲ್ಲಿರುವುದರಿಂದ ಉತ್ತರಾಖಂಡ ರಾಜ್ಯವನ್ನು "ದೇವ ಭೂಮಿ" ಎಂಬ ಹೆಸರಿನಿಂದಲೂ ಸಹ ಸಂಭೋದಿಸಲಾಗುತ್ತದೆ. ಈ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ತುಂಗನಾಥವು ಶಿವನ ದೇವಸ್ಥಾನಕ್ಕೆ ಬಹು ಪ್ರಖ್ಯಾತವಾಗಿದೆ. ಕಲ್ಮಶರಹಿತ ವಾತಾವರಣದ, ತಾಜಾ ಹಸಿರಿನ ಛಾಯೆಗಳ, ರುದ್ರಮಯ ಪರ್ವತ ರಹದಾರಿಗಳ, ಗಡ ಗಡ ನಡುಗಿಸುವಂತಹ ಶಿತವಲಯದ ತುಂಗನಾಥದಲ್ಲಿ ನೆಲೆಸಿರುವ ಶಿವನು ವಿಶ್ವದ ಅತಿ ಎತ್ತರದಲ್ಲಿ ನೆಲೆಸಿರುವ ಶಿವನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಹೌದು, ಭೂಮಟ್ಟದಿಂದ ಇಷ್ಟೊಂದು ಎತ್ತರದಲ್ಲಿರುವ ಶಿವನ ಈ ದೇವಸ್ಥಾನವನ್ನು ಪ್ರಪಂಚದಲ್ಲೆಲ್ಲೂ ಕಾಣಲಾಗದು.
ಚಿತ್ರಕೃಪೆ: Varun Shiv Kapur
ಉತ್ತರಾಖಂಡ ಆಕರ್ಷಣೆಗಳು:
ಉತ್ತರಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ ಕೇದಾರನಾಥ. ದಟ್ಟ ಹಿಮಾಲಯ ಪರ್ವತದ ನಡುವೆ ಈ ತಾಣ ಇದ್ದು, ಸಮುದ್ರ ಮಟ್ಟದಿಂದ 3584 ಮೀಟರ್ ಎತ್ತರದಲ್ಲಿದೆ. ಇಲ್ಲಿನ ಅತ್ಯಂತ ಪ್ರಮುಖ ಹಾಗೂ ಮುಖ್ಯ ಆಕರ್ಷಣೆ, ಹಿಂದೂ ಧರ್ಮಿಯರ ಕೇದಾರನಾಥ ದೇವಾಲಯ. ಇದು ನಾಲ್ಕು ಪವಿತ್ರಧಾಮ(ಚಾರ್ ಧಾಮ್)ಗಳಲ್ಲಿ ಒಂದಾಗಿದೆ. ಈ ಸುಂದರ ದೇವಾಲಯದ ಪಕ್ಕದಲ್ಲಿಯೇ ಪ್ರಸಿದ್ಧ ಮಂದಾಕಿನಿ ನದಿಯು ಹರಿದಿದೆ. ಇಲ್ಲಿನ ದೇವಾಲಯದಲ್ಲಿರುವ ಶಿವನ ಮೂರ್ತಿಗೆ ಪೂಜೆ ಸಲ್ಲಿಸಲು ಬೇಸಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರವಾಸಿಗರು ಕೇದಾರನಾಥಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿರುವ ಆದಿ ಗುರು ಶಂಕರಾಚಾರ್ಯರ ಸಮಾಧಿಗೂ ಭೇಟಿ ನೀಡಿಯೇ ತೆರಳುತ್ತಾರೆ. ಕೇದಾರನಾಥ ದೇವಾಲಯದ ಸನೀಹದಲ್ಲಿಯೇ ಈ ಸಮಾಧಿಯನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Kmishra19
ಉತ್ತರಾಖಂಡ ಆಕರ್ಷಣೆಗಳು:
ಜಾಗೇಶ್ವರ ಎನ್ನುವುದು ಉತ್ತರ್ ಖಂಡ್ ರಾಜ್ಯದಲ್ಲಿರುವ ಅಲ್ಮೋರಾ ಜಿಲ್ಲೆಯಲ್ಲಿರುವ ಒಂದು ಧಾರ್ಮಿಕ ಮಹತ್ವವನ್ನು ಹೊಂದಿರುವ ನಗರವಾಗಿದೆ. ದಟ್ಟವಾಗಿ ಬೆಳೆದಿರುವ ಹಚ್ಚಹಸಿರಿನ ದೇವದಾರು ಮರಗಳಿಂದ ಕೂಡಿರುವ ಈ ಪ್ರಾಂತ್ಯವು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಈ ಸ್ಥಳದಲ್ಲಿ 12 ಜ್ಯೋರ್ತೀಲಿಂಗಗಳ ಪೈಕಿ ಎಂಟನೇಯ ಜ್ಯೋತಿರ್ಲಿಂಗವಾದ ನಾಗೇಶ್ ಜ್ಯೋರ್ತೀಲಿಂಗವನ್ನು ಕಾಣಬಹುದು. ಈ ಸ್ಥಳವು ತೀರ್ಥಕ್ಷೇತ್ರವೆಂದು ಸಹ ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ನಗರದ ಸುತ್ತಲು ಶಿವನಿಗಾಗಿ ನಿರ್ಮಿಸಲಾಗಿರುವ 124 ಸಣ್ಣ ಮತ್ತು ದೊಡ್ಡ ದೇವಾಲಯಗಳು ಇವೆ.
ಚಿತ್ರಕೃಪೆ: Apalaria
ಉತ್ತರಾಖಂಡ ಆಕರ್ಷಣೆಗಳು:
ಉತ್ತರಾಖಂಡ್ನ ಟೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗ್ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು. ಸಂಸ್ಕೃತದಲ್ಲಿ ದೇವಪ್ರಯಾಗ್ ಅಂದರೆ 'ಪವಿತ್ರ ಸಂಗಮ'. ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮವೂ ಹೌದು ಈ ಸ್ಥಳ. ಏಳನೇ ಶತಮಾನದಿಂದೀಚೆಗೆ ಈ ಪ್ರದೇಶ ಹಲವು ಹೆಸರುಗಳಿಂದ ಕರೆಸಿಕೊಂಡಿದೆ. ಮುಖ್ಯವಾಗಿ ಬ್ರಹ್ಮಪುರಿ, ಬ್ರಹ್ಮ ತೀರ್ಥ, ಶ್ರೀಖಂಡ ನಗರ ಮತ್ತು ಉತ್ತರಾಖಂಡದ ಜೆಮ್ ಅಂತಲೂ ಕರೆಯಲ್ಪಡುತ್ತಿತ್ತು. ಹಿಂದೂ ಧರ್ಮದ ಋಷಿ ದೇವ ಶರ್ಮಾ ಇಲ್ಲಿ ವಾಸಿಸುತ್ತಿದ್ದುದರಿಂದ ದೇವಪ್ರಯಾಗವೆಂಬ ಹೊಸ ಹೆಸರು ಬಂದು, ಅದೇ ಶಾಶ್ವತವಾಯಿತು. ಹಿಂದೂಗಳಲ್ಲಿ ಚಾಲ್ತಿಯಲ್ಲಿರುವ ದಂತಕಥೆಗಳ ಪ್ರಕಾರ, ರಾಮ ಮತ್ತು ಆತನ ತಂದೆ ದಶರಥ ಮಹಾರಾಜ ಈ ಪ್ರದೇಶದಲ್ಲಿ ತಪಸ್ಸು ಕೈಗೊಂಡಿದ್ದರು.
ಚಿತ್ರಕೃಪೆ: Vvnataraj
ಉತ್ತರಾಖಂಡ ಆಕರ್ಷಣೆಗಳು:
ಕೌಸಾನಿ, ಉತ್ತರಖಂಡ್ ರಾಜ್ಯದಲ್ಲಿ ನೆಲೆಗೊಂಡಿರುವ ಒಂದು ಚಿತ್ರಸದೃಶ ಬೆಟ್ಟದ ಪಟ್ಟಣ. ಬೃಹತ್ ಹಿಮಾಲಯ ಜೊತೆಗೆ, ನಂದಕೋಟ್, ತ್ರಿಶೂಲ್ ಮತ್ತು ನಾಡ ದೇವಿ ಎಂಬ ಪರ್ವತಗಳು ಇಲ್ಲಿಂದ ಸುಲಭವಾಗಿ ಗೋಚರಿಸುತ್ತವೆ. ಈ ಬೆಟ್ಟದ ಪಟ್ಟಣ ದಟ್ಟವಾದ ಪೈನ್ ಮರಗಳ ನಡುವೆ ನೆಲೆಸಿದೆ ಮತ್ತು ಸೋಮೇಶ್ವರ, ಗರೂರ್ ಮತ್ತು ಬೈಜ್ನಾಥ್ ಕತ್ಯೂರಿ ಮೊದಲಾದ ಸುಂದರ ಕಣಿವೆಗಳನ್ನೂ ಸಹ ಇಲ್ಲಿ ಕಾಣಬಹುದು. ಪಿನ್ನಥ್ ದೇವಾಲಯ, ಶಿವ ದೇವಾಲಯ, ರುದ್ರಹರಿ ಮಹಾದೇವ ದೇವಾಲಯ, ಕೋಟ್ ಭ್ರಮರಿ ದೇವಸ್ಥಾನ ಮತ್ತು ಬೈಜ್ನಾಥ್ ದೇವಾಲಯಗಳು ಕೌಸಾನಿಯ ಜನಪ್ರಿಯ ಧಾರ್ಮಿಕ ತಾಣಗಳಲ್ಲಿ ಕೆಲವು.
ಚಿತ್ರಕೃಪೆ: Yann
ಉತ್ತರಾಖಂಡ ಆಕರ್ಷಣೆಗಳು:
ದೆಹರಾದೂನ್ ಉತ್ತರಾಖಂಡ ರಾಜ್ಯದ ರಾಜಧಾನಿ ನಗರ. ಇದು ಭಾರತದ ರಾಜಧಾನಿ ಹೊಸ ದಿಲ್ಲಿ ಮತ್ತು ದಿಲ್ಲಿ ಮಹಾನಗರ ಕ್ಷೇತ್ರದಿಂದ ಉತ್ತರ ದಿಕ್ಕಿನಲ್ಲಿ 230 ಕಿಲೋಮೀಟರ್ ದೂರವಿರುವ ದೂನ್ ಕಣಿವೆಯಲ್ಲಿದೆ. ದೆಹರಾದೂನ್ ಮೂಲತಃ "ದೆಹರಾದೂನಿ ಬಾಸಮತಿ ಅಕ್ಕಿ" ಮತ್ತು ಲಿಚಿ ಹಣ್ಣುಗಳಿಗಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಅಂತೆಯೇ ಈ ನಗರದ ಹೆಸರು ಚಿರಪರಿಚಿತವಾಗಿದೆ. ಜೊತೆಗೆ, ಭಾರತೀಯ ಸರ್ವೇಕ್ಷಣ ಸಂಸ್ಥೆ, ಅರಣ್ಯ ಸಂಶೋಧನಾ ಸಂಸ್ಥೆ (FRI) ಮತ್ತು ಹೆಸರಾಂತ ಶಿಕ್ಷಣಾ ಸಂಸ್ಥೆಗಳಾದ ರಾಷ್ಟ್ರೀಯ ಭಾರತೀಯ ಸೇನಾ ಕಾಲೇಜ್, ಭಾರತೀಯ ಸೇನಾ ಅಕಾಡೆಮಿ ಮುಂತಾದವುಗಳಿಗೆ ನೆಲೆಯಾಗಿದೆ ದೆಹರಾದೂನ್. ದೂನ್ ಕಣಿವೆ.
ಚಿತ್ರಕೃಪೆ: Dr. Umesh Behari Mathur
ಉತ್ತರಾಖಂಡ ಆಕರ್ಷಣೆಗಳು:
ದೆಹರಾದೂನ್ ಒಂದು ನಗರ ಪ್ರದೇಶವಾಗಿದ್ದು ಭೇಟಿ ನೀಡುವ ಪ್ರವಾಸಿಗರಿಗೆ ಸಾಕಷ್ಟು ಬಗೆಯ ಪ್ರವಾಸಿ ಆಕರ್ಷಣೆಗಳನ್ನು ಸವಿಯಲು ಅನುವು ಮಾಡಿಕೊಡುತ್ತದೆ. ಗುಲರ್ ಘಾಟಿ, ಬುಧ ದೇವಾಲಯ ಮತ್ತು ಪಾರ್ಕ್ ಮತ್ತು ಪಾರ್ಕ್, ಕ್ಲೆಮೆಂಟೌನ್, ಮಾಲ್ ದೇವತಾ, ಮಾಲಸೀ ಜಿಂಕೆ ಉದ್ಯಾನ, ಡತ್ ಕಾಲೀ ಮಾತಾ ಮಂದಿರ್, ಸಹಸ್ರಧಾರಾ, ತಾಪಕೇಶ್ವರ ಶಿವ್ ದೇವಾಲಯ, ಲಕ್ಷ್ಮಣ್ ಸಿದ್ಧ್ ದೇವಾಲಯ, ರಾಬರ್ಸ್ ಕೇವ್ ಹೀಗೆ ಹತ್ತು ಹಲವು ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ನೋಡಬಹುದಾಗಿದೆ.
ಚಿತ್ರಕೃಪೆ: Paul Hamilton