Search
  • Follow NativePlanet
Share
» »ಹೀಗಿದೆ ನೋಡಿ ಅಲೆಪ್ಪಿ! ಹೋಗುವಿರಾ?

ಹೀಗಿದೆ ನೋಡಿ ಅಲೆಪ್ಪಿ! ಹೋಗುವಿರಾ?

ಕೇರಳದ ಹಿನ್ನೀರು ಪ್ರವಾಸೋದ್ಯಮದ ಬಲು ಮುಖ್ಯ ಕೇಂದ್ರವಾದ ಅಲೆಪ್ಪಿಯು ಅದ್ಭುತ ಪ್ರವಾಸಿ ತಾಣವಾಗಿದ್ದು ದೇಶದೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ

By vijay

ಮೊನ್ನೆ ಮೊನ್ನೆ ಅಂದರೆ ಜನವರಿ 20, 2017 ರಂದು ನಮ್ಮ ಪ್ರವಾಸಿ ಓದುಗರೊಬ್ಬರು ಕೇರಳದ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದಾದ ಅಲೆಪ್ಪಿಗೆ ಭೇಟಿ ನೀಡಿ ಬಂದಿದ್ದು ಅವರು ತೆಗೆದ ಕೆಲ ಚಿತ್ರಪಟಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೂ ಅಲೆಪ್ಪಿಗೆ ಭೇಟಿ ನೀಡಲು ಒಳ್ಳೆಯ ಸಮಯವಾಗಿದ್ದು ಸುಂದರ ಅನುಭೂತಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಜನಪ್ರೀಯವಾಗಿ ಎಲ್ಲರ ಬಾಯಲ್ಲಿ ಜನಜನಿತವಾದ ಅಲೆಪ್ಪಿ ತಾಣವು ಮೂಲತಃ ಮಲಯಾಳಂನಲ್ಲಿ ಅಲಪುಳ ಎಂದು ಕರೆಯಲ್ಪಡುತ್ತದೆ. ಇದು ಹಿನ್ನೀರು ಪ್ರವಾಸೋದ್ಯಮಕ್ಕೆ ಬಲು ಹೆಸರುವಾಸಿಯಾದ ತಾಣವಾಗಿದ್ದು ದೇಶದ ಮೂಲೆ ಮೂಲೆಗಳಿಂದಷ್ಟೆ ಅಲ್ಲದೆ ಹೊರ ದೇಶಗಳಿಂದಲೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಸಾಮಾನ್ಯವಾಗಿ ಗಮನಿಸಿದಾಗ ವಿಶ್ವದಲ್ಲೆ ವೆನಿಸ್ ಎಂಬ ರಾಷ್ಟ್ರವು ತನ್ನ ವ್ಯಾಪ್ತಿಯಲ್ಲಿ ಸಂಚರಿಸಲೆಂದು ಹ್ಲವಾರು ಜಲಮಾರ್ಗಗಳನ್ನು ಹೊಂದಿದ್ದು ಜನರು ಸರ್ವೆ ಸಾಮಾನ್ಯವಾಗಿ ಸಂಚರಿಸಲು ಈ ಜಲಮಾರ್ಗಗಳ ಮೂಲಕವಾಗಿಯೆ ಸಂಚರಿಸುತ್ತಾರೆ. ಇದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇದೆ ರೀತಿಯಾಗಿ ಕೇರಳದ ಅಲೆಪ್ಪಿಯೂ ಸಹ ಅನೇಕ ಹಿನ್ನೀರಿನ ಮಾರ್ಗಗಳನ್ನು ಹೊಂದಿದ್ದು ಹಿನ್ನೀರ ಪ್ರವಾಸಕ್ಕೆ ಹೆಸರುವಾಸಿಯಾಗಿದೆ.

ಅಂತೆಯೆ ಅಲೆಪ್ಪಿಯನ್ನು "ಪೂರ್ವದ ವೆನಿಸ್ ನಗರ" ಎಂದೂ ಸಹ ಕರೆಯಲಾಗಿದೆ. ನಿಮಗೇನಾದರೂ ಒಂದೆರಡು ದಿನಗಳ ಕಾಲ ಅಲೆಪ್ಪಿಗೆ ಹೋಗಿ ಬರುವ ಬಯಕೆಯಿದ್ದಲ್ಲಿ ಒಂದೆ ಯೋಜಿಸಿ ಹೊರಟುಬಿಡಿ. ಅಲೆಪ್ಪಿಗೆ ತೆರಳಲು ಬೆಂಗಳೂರಿನಿಂದ ನೇರವಾದ ರೈಲು ಸೌಲಭ್ಯವಿದೆ. ಆದಾಗ್ಯೂ ದುಬಾರಿ ಎನಿಸಿದರೂ ಪರ್ವಾಗಿಲ್ಲ ಎನ್ನುವಂತಾದರೆ ಬಾಡಿಗೆ ಕಾರಿನ ಮುಲಕವೂ ತೆರಳಬಹುದು.

ಲೇಖನದಲ್ಲಿ ಬಳಸಲಾದ ಚಿತ್ರಗಳಿಗೆ ಕೃಪೆ: Manoj V.H

ಅನನ್ಯ ನೋಟವಲ್ಲವೆ?

ಅನನ್ಯ ನೋಟವಲ್ಲವೆ?

ಅಲೆಪ್ಪಿ ಆಕರ್ಷಕವಾದ ಕಾಲುವೆಗಳು, ಹಿನ್ನೀರು ಪ್ರದೇಶಗಳು, ಸಮುದ್ರ, ಮತ್ತು ಆವೃತ ಜಲಭಾಗಗಳಿಂದ ಸಂಪದ್ಭರಿತವಾಗಿದ್ದು ರಜಾ ಸಮಯವನ್ನು ಅದ್ಭುತವಾಗಿ ಕಳೆಯಬಹುದಾದ ತಾಣವಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: RajeshUnuppally

ಹಿನ್ನೀರಿಗೆ ಪ್ರಸಿದ್ಧ

ಹಿನ್ನೀರಿಗೆ ಪ್ರಸಿದ್ಧ

ಹಿಂದೆ ವನಿಸ್ ನಗರದ ಪ್ರಸಿದ್ಧ ವ್ಯಾಪಾರಿಯಾಗಿದ್ದ ಮಾರ್ಕೋ ಪೋಲೋ (1292) ಅವರು ಅಲೆಪ್ಪಿಗೆ ಭೇಟಿ ನೀಡಿದ್ದಾಗ ಇದರ ಮನಮೋಹಕತೆಯಿಂದ ಪ್ರಭಾವಿತರಾಗಿದ್ದು ಅಲ್ಲದೆ ಇದನ್ನು ಪೂರ್ವದ ವೆನಿಸ್ ಎಂದೂ ವರ್ಣಿಸಿದ್ದಾರೆ.

ಆಕರ್ಷಕ ತಾಣ

ಆಕರ್ಷಕ ತಾಣ

ಪ್ರಸ್ತುತ ಅಲಪುಳ ಜಿಲ್ಲೆಯ ಆಡಳಿತಾತ್ಮಕ ಪಟ್ಟಣವಾಗಿ ಅಲೆಪ್ಪಿ ಸೇವೆ ಸಲ್ಲಿಸುತ್ತದೆ. ಕೊನೆಯಿಲ್ಲದಂತೆ ಹರಡಿರುವ ಭತ್ತದ ಗದ್ದೆಗಳು, ಸದಾ ಹಸಿರಾದ ತೆಂಗಿನಮರಗಳೊಂದಿಗೆ ಚಿಕ್ಕ ತೊರೆಗಳು ಮತ್ತು ಕಾಲುವೆಗಳಿಂದ ತುಂಬಿರುವ ಅಲೆಪ್ಪಿ ಕೇರಳದ ಪ್ರಖ್ಯಾತ ಸ್ಥಳಗಳಲ್ಲೊಂದಾಗಿದೆ.

ಒಂದೆಡೆ ಸಮುದ್ರ!

ಒಂದೆಡೆ ಸಮುದ್ರ!

ಅಲಪುಳವು ಪೂರ್ವದಲ್ಲಿ ಪತನಂತಿಟ್ಟ ಮತ್ತು ಕೊಟ್ಟಾಯಂ ಜಿಲ್ಲೆಗಳು, ದಕ್ಷಿಣದಲ್ಲಿ ಕೊಲ್ಲಂ ಜಿಲ್ಲೆ, ಉತ್ತರದಲ್ಲಿ ಎರ್ನಾಕುಲಂ ಜಿಲ್ಲೆ ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಸುತ್ತುವರಿದಿದೆ. ಅಲೆಪ್ಪಿ ಕಡಲ ತೀರದ ಬಯಲುಗಳು ಚತುಷ್ಕ ನಿಕ್ಷೇಪಗಳಿಂದ ರೂಪಿತವಾಗಿರುವುದು ವಿಶೇಷ.

ಹಿನ್ನೀರು ಪ್ರವಾಸ

ಹಿನ್ನೀರು ಪ್ರವಾಸ

ಅಲೆಪ್ಪಿಯು ಪ್ರಸ್ತುತ ಕೇರಳದಲ್ಲಿ ಹಿನ್ನೀರು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ದೊರೆಯುವ ದೋಣಿ ಮನೆಗಳು ವಿಶಿಷ್ಟವಾಗಿದ್ದು ಗಂಟೆಗಟ್ಟಲೆ ನೀರಿನಲ್ಲೆ ಶಾಂತವಾಗಿ ವಿಹರಿಸುತ್ತ ಮನೆಯ ಸಕಲ ಸೌಲಭ್ಯಗಳನ್ನು ಒದಗಿಸುವ ಅದ್ಭುತ ರಚನೆಗಳಾಗಿವೆ.

ಕೆಟ್ಟುವಲ್ಲಂ

ಕೆಟ್ಟುವಲ್ಲಂ

ಸ್ಥಳೀಯವಾಗಿ ಇವುಗಳನ್ನು "ಕೆಟ್ಟುವಲ್ಲಮ್" ಎಂದು ಕರೆಯಲಾಗುತ್ತದೆ. ವಿವಿಧ ರೀತಿಯ ದೋಣಿ ಮನೆಗಳು ಬಾಡಿಗೆಗೆ ಲಭ್ಯವಿದ್ದು ಪ್ರವಾಸಿಗರು ತಮ್ಮ ಸಾಮರ್ಥಕ್ಕಾನುಸಾರವಾಗಿ ಇವುಗಳ ಸೇವೆಯನ್ನು ಪಡೆಯಬಹುದು. ಇವು ಪ್ರವಾಸಿಗರನ್ನು ಹಳೆಯ ಜಲಮಾರ್ಗಗಳಲ್ಲಿ ಕೊಂಡೊಯ್ಯಲು ದಿನನಿತ್ಯದ ಆಧಾರದಲ್ಲಿ ಅಥವಾ ದೀರ್ಘಾವಧಿಯಲ್ಲೂ ಸಹ ಬಾಡಿಗೆಗೆ ಲಭ್ಯವಿರುತ್ತವೆ.

ಮನೆಯ ರೀತಿಯೆ

ಮನೆಯ ರೀತಿಯೆ

ಈ ದೋಣಿ ಮನೆಗಳು ಸಾಮಾನ್ಯವಾಗಿ ಶಯನಗೃಹಗಳೊಂದಿಗೆ ಹೊಂದಿಕೊಂಡಂತೆ ಶೌಚಾಲಯಗಳನ್ನೂ ಸಹ ಹೊಂದಿರುತ್ತದೆ. ಕೆಲವು ದೋಣಿಗಳು ಹವಾನಿಯಂತ್ರಕ ಸೌಲಭ್ಯವಿರುವ ಶಯನಗೃಹಗಳನ್ನು ಹೊಂದಿರುತ್ತವೆ.

ನಿಮಗನುಕೂಲಕ್ಕೆ ತಕ್ಕಂತೆ

ನಿಮಗನುಕೂಲಕ್ಕೆ ತಕ್ಕಂತೆ

ದಿನದಿಂದ ಹಿಡಿದು ಹಲವು ದಿನಗಳವರೆಗೂ ನಿಗದಿತ ಶುಲ್ಕಗಳಿಗೆ ಈ ದೋಣಿಮನೆಗಳು ಲಭ್ಯವಿದ್ದು ಪ್ರವಾಸಿಗರು ತಮಗಿಷ್ಟವಾಗುವ ಪ್ಯಾಕೆಜುಗಳನ್ನು ಆಯ್ದುಕೊಳ್ಳಬಹುದು. ಈ ಪ್ರವಾಸವು ಸಾಂಪ್ರದಾಯಿಕ ಕುಟ್ಟನಾಡು ಶೈಲಿಯಲ್ಲಿ ದೋಣಿಯಲ್ಲೇ ತಯಾರಿಸಿದ ಆಹಾರವನ್ನು ಒಳಗೊಂಡಿರುತ್ತದೆ. ಅಲಪುಳವು ಕೇರಳದಲ್ಲಿ ಅರಣ್ಯವನ್ನೇ ಹೊಂದಿರದ ಜಿಲ್ಲೆಯಾಗಿ ಅನನ್ಯತೆಯನ್ನು ಪಡೆದಿದೆ.

ಕುಟ್ಟನ್

ಕುಟ್ಟನ್

ಅಲೆಪ್ಪಿಯಲ್ಲಿ ನೋಡಬಹುದಾದ ಒಂದು ಪುರಾತನ ಆಕರ್ಷಕ ಪುಟ್ಟ ದೇಗುಲವಿದು. ಹದಿನೈದು ಕಿ.ಮೀ ಗಳಷ್ಟು ಅಂತರದಲ್ಲಿದೆ. ಇದರ ರಚನೆ ನೋಡಿದರೆ ಇದು ಹಿಂದು ದೇವಾಲಯವೆಂದು ಅನಿಸುವುದೆ ಇಲ್ಲ. ಹೌದು ಇದೊಂದು ಪುಟ್ಟ ಬೌದ್ಧ ದೇವಾಲಯ.

ಕುಟ್ಟನ್

ಕುಟ್ಟನ್

ಇದನ್ನು ಕರುಮಾಡಿಕುಟ್ಟನ್ ಎಂದು ಕರೆಯುತ್ತಾರೆ. ಕರುಮಾಡಿ ಎನ್ನುವುದು ಒಂದು ಸ್ಥಳದ ಹೆಸರಾಗಿದ್ದು ಕುಟ್ಟನ್ ಎಂದರೆ ಹುಡುಗ ಎಂಬರ್ಥವಿದೆ ಮಲಯಾಳಂನಲ್ಲಿ. ಅಂದರೆ ಈ ದೇಗುಲವು ಕರುಮಾಡಿ ಹುಡುಗನ ಆಲಯ ಎಂದು ಅರ್ಥರೂಪದಲ್ಲಿ ವಿವರಿಸುವಂತಿದೆ.

ದಲಾಯಿ ಲಾಮಾ

ದಲಾಯಿ ಲಾಮಾ

ಇನ್ನೊಂದು ವಿಶೇಷವೆಂದರೆ ಇಲ್ಲಿರುವ ಬುದ್ಧನ ಮೂರ್ತಿಯು ಕೇವಲ ಅರ್ಧ ಭಾಗವನ್ನು ಮಾತ್ರ ಹೊಂದಿದೆ. ಇನ್ನುಳಿದ ಅರ್ಧ ಭಾಗವು ಆನೆಯೊಂದರಿಂದ ಭಗ್ನಗೊಂಡಿದೆ ಎಂದು ಹೇಳಲಾಗುತ್ತದೆ. ಬೌದ್ಧ ಧರ್ಮಿಯ ಪ್ರವಾಸಿಗರಿಗೆ ಇದೊಂದು ಭಕ್ತಿ ದೇಗುಲವಾಗಿರುವುದಲ್ಲದೆ ಇತರೆ ಪ್ರವಾಸಿಗರನ್ನೂ ಸಹ ಆಕರ್ಷಿಸುತ್ತದೆ. ದಲಾಯಿ ಲಾಮಾರವರು ಹಿಂದೊಮ್ಮೆ ಇದಕ್ಕೆ ಭೇಟಿ ನೀಡಿದ್ದರು.

ನಕಾರಾತ್ಮಕತೆ ದೂರ!

ನಕಾರಾತ್ಮಕತೆ ದೂರ!

ಇದಕ್ಕೆ ಸಂಬಂಧಿಸಿದಂತೆ ವಿಶೇಷವಾದ ನಂಬಿಕೆಯೊಂದಿದೆ. ಆ ಪ್ರಕಾರ, ಎಡ ಎನ್ನುವುದು ತಾಮಸಿಕ ಅಥವಾ ನಕಾರಾತ್ಮಕತೆಯನ್ನು ಸೂಚಿಸುತ್ತದೆ. ಬುದ್ಧನ ಎಡ ಭಾಗವು ಸಂಪೂರ್ಣವಾಗಿ ಇಲ್ಲದೆ ಇರುವುದರಿಂದ ಇಲ್ಲಿ ಬೇಡಿಕೊಂಡವರ ಮನದ ನಕಾರಾತ್ಮಕತೆ ದೂರವಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಒಳ್ಳೆಯ ಆರೋಗ್ಯ ಲಭಿಸುತ್ತದಂತೆ!

ಚಿತ್ರಕೃಪೆ: Challiyan

ಕೃಷ್ಣ ದೇವಾಲಯ

ಕೃಷ್ಣ ದೇವಾಲಯ

ಅಲೆಪ್ಪಿಯಿಂದ 16 ರಿಂದ 18 ಕಿ.ಮೀ ದೂರದಲ್ಲಿರುವ ಅಂಬಲಪುಳವು ಕೃಷ್ಣನ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ. ಇದನ್ನು ಅಂಬಲಪುಳ ಪಾರ್ಥಸಾರಥಿ ದೇವಾಲಯ ಎಂತಲೂ ಸಹ ಕರೆಯುತ್ತಾರೆ. ಸಾಕಷ್ಟು ಪ್ರಸಿದ್ಧಿಪಡೆದ ದೇವಾಲಯ ಇದಾಗಿದೆ. ಆ ದೇವಾಲಯಕ್ಕೆ ಪ್ರವೇಶ ಹಾದಿ.

ಮುಳಕ್ಕಲ್ ರಸ್ತೆ

ಮುಳಕ್ಕಲ್ ರಸ್ತೆ

ಅಂಬಲಪುಳದಲ್ಲಿರುವ ಮುಳಕ್ಕಲ್ ರಸ್ತೆಯಲ್ಲಿ ಸಾಗುವಾಗ ಕಂಡು ಬರುವ ಪುಟ್ಟ ಸೆಲ್ವಿ ಗಣೇಶನಿವನು. ವೃಕ್ಷವೊಂದರ ಬುಡದಲ್ಲಿ ಪ್ರತಿಷ್ಠಾಪಿತನಾಗಿರುವ ಈ ಗಣೇಶ ಹಾದಿಯಲ್ಲಿ ಸಾಗುವವರನ್ನು ಆಕರ್ಷಿಸದೆ ಇರಲಾರ.

ಸುಂದರ ಸೂರ್ಯಾಸ್ತ

ಸುಂದರ ಸೂರ್ಯಾಸ್ತ

ನೀವು ಅಲೆಪ್ಪಿಯ ಯಾವುದಾದರೂ ಹೋಟೆಲ್ ನಲ್ಲಿ ತಂಗಿದ್ದರೆ ಸ್ಥಳೀಯವಾಗಿ ಆಟೋ ಸ್ಟ್ಯಾಂಡಿಗೆ ತೆರಳಿ ಅಲ್ಲಿ ಒಂದು ಬಾಡಿಗೆ ದರ ನಿಗದಿಪಡಿಸಿಕೊಂಡು ಅಂಬಲಪುಳ ಹಾಗೂ ಕರುಮಾಡಿಕುಟ್ಟನ್ ದೇಗುಲಗಳಿಗೆ ಭೇಟಿ ನೀಡಿ ಮತ್ತೆ ಹಿಂತಿರುಗಿ ಬರಬಹುದು. ಅಷ್ಟರಲ್ಲಾಗಲೆ ಸಂಜೆಯಾಗಿರುತ್ತದೆ. ಆಗ ಮತ್ತೆ ಅಲೆಪ್ಪಿ ಕಡಲ ತೀರದ ಬಳಿ ತೆರಳಿ ಅದ್ಭುತ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X