ಇದು ಒಂದು ರೀತಿಯ ವಿಶೇಷ ದೇವಾಲಯವೆಂದೆ ಹೇಳಬಹುದು. ಸಾಮಾನ್ಯವಾಗಿ ಹಿಂದುಗಳು ನಂಬುವಂತೆ ತೀರ್ಥಯಾತ್ರೆಗಳಿಂದ ಸಕಲ ಪುಣ್ಯಗಳು ಪ್ರಾಪ್ತವಾಗುತ್ತವೆ. ಹಾಗೆ ಗಳಿಸಿದ ಪುಣ್ಯಗಳೆ ಮುಂದೆ ಮನುಷ್ಯನ ಮೋಕ್ಷಕ್ಕೆ ದಾರಿ ಮಾಡಿಕೊಡಲು ಸಹಾಯ ಮಾಡುತ್ತವೆ ಅನ್ನಲಾಗುತ್ತದೆ. ಆದರೆ ಇಲ್ಲಿನ ಈ ದೇವಾಲಯ ಅದಕ್ಕೆ ಕೊಂಚ ವಿಭಿನ್ನವಾಗಿದೆ.
ಇದು ವಿಷ್ಣುವಿನ ದೇವಾಲಯವಾಗಿದ್ದರೂ ಸುದರ್ಶನ ಚಕ್ಕ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇಲ್ಲಿದೆ ಹಾಗಾಗಿ ಇಲ್ಲಿ ವಿಷ್ಣುವಿನನ್ನು ಚಕ್ರಪಾಣಿ ಅಥವಾ ಚಕ್ರರಾಜ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಇದರ ಇನ್ನೊಂದು ವಿಶೇಷತೆ ಎಂದರೆ ಭಕ್ತಾದಿಗಳು ಗಳಿಸಿರುವ ಪುಣ್ಯಾದಿಗಳನ್ನು ಈ ದೇವಾಲಯದಲ್ಲಿ ಅಡ ಇಡಬೇಕು. ಅಂದರೆ ವಿಷ್ಣುವಿಗೆ ಒಪ್ಪಿಸಬೇಕು.
ಚಿತ್ರಕೃಪೆ: Rsmn
ತದ ನಂತರ ಕಾಲಕ್ಕೆ ತಕ್ಕಂತೆ ಆ ಚಕ್ರಪಾಣಿಯು ಭಕ್ತರು ಒಪ್ಪಿಸಿರುವ ಪುಣ್ಯದ ಗಂಟನ್ನು ಲೆಕ್ಕ ಹಾಕಿ ಅದಕ್ಕೆ ತನ್ನ ವರದಾನದ ಬಡ್ಡಿಯನ್ನು ಸೇರಿಸಿ ಅವರ ಜೀವನವನ್ನು ಉದ್ಧಾರ ಮಾಡುತ್ತಾನಂತೆ! ಈ ರೀತಿಯಾದ ಪ್ರಬಲ ನಂಬಿಕೆಯು ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅಪಾರ ಪ್ರಮಾಣದಲ್ಲಿ ಭೇಟಿ ನೀಡುವ ಭಕ್ತರಲ್ಲಿ ತಳವೂರಿದೆ.
ಒಂದೊಮ್ಮೆ ಜಲಂಧರಾಸುರನೆಂಬ ರಾಕ್ಷಸನು ಪಾತಾಳವಾಸಿಯಾಗಿದ್ದನು ಹಾಗೂ ತನ್ನ ಕ್ರೂರತನದಿಂದ ಸರ್ವ ಲೋಕಗಳಲ್ಲಿಯೂ ಹಾಹಾಕಾರ ಉಂಟುಮಾಡಿದ್ದನು. ಯಾರಿಂದಲೂ ಇವನನ್ನು ಸೋಲಿಸಲು ಸಾಧ್ಯವೆ ಇರಲಿಲ್ಲ. ಎಲ್ಲ ದೇವತೆಗಳು, ಋಷಿಗಳು, ಸಿದ್ಧರು, ರಾಜರುಗಳು ಎಷ್ಟೆ ಪ್ರಯತ್ನಿಸಿದರೂ ಇವನ ಒಂದು ರೋಮವನ್ನೂ ಸಹ ಅವರಿಂದ ಕೀಳಲಾಗಲಿಲ್ಲ.
ಚಿತ್ರಕೃಪೆ: பா.ஜம்புலிங்கம்
ಕೊನೆಗೆ ವಿಷ್ಣುವಿನ ಮೊರೆ ಹೋದಾಗ, ವಿಷ್ಣು ತನ್ನ ದಿವ್ಯ ಹಾಗೂ ಅತ್ಯಂತ ಶಕ್ತಿಶಾಲಿಯಾದ ಸುದರ್ಶನ ಚಕ್ರಕ್ಕೆ ರಕ್ಕಸನ ಸಂಹಾರದ ಜವಾಬ್ದಾರಿಯನ್ನು ವಹಿಸುತ್ತಾನೆ. ಅದರಂತೆ ಸುದರ್ಶನ ಚಕ್ರವು ನೇರವಾಗಿ ಜಲಂಧರಾಸುರನ ಬಳಿ ತೆರಳಿದಾಗ ಆ ರಾಕ್ಷಸನು ಇದನ್ನು ನಾಶಪಡಿಸಲು ಸಾಧ್ಯವಾಗದೆ ತನ್ನ ಪ್ರಾಣವೆ ಹೋಗುತ್ತದೆಂಬ ಭಯದಿಂದ ಪಾತಾಳದಲ್ಲಿ ಹೊಕ್ಕಿ ಅಡಗಿ ಕುಳಿತುಕೊಳ್ಳುತ್ತಾನೆ
ಆದರೆ ಸುದರ್ಶನವು ಅವನ ಇರುವಿಕೆಯನ್ನು ಕಂಡುಹಿಡಿದು ಪಾತಾಳವನ್ನು ಸುಲಭವಾಗಿ ಬೇಧಿಸಿ ಅವನನ್ನು ಸಂಹರಿಸಿ ಕೊನೆಗೆ ಕಾವೇರಿ ನದಿಯ ನೀರಿನ ಮೂಲಕ ಹೊರಬರುತ್ತದೆ. ಆ ಸಮಯದಲ್ಲಿ ಕಾವೇರಿ ನದಿ ತಟದಲ್ಲಿ ತಪಗೈಯುತ್ತಿದ್ದ ಬ್ರಹ್ಮ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಅವನ ಕೈಯಲ್ಲೆ ಸುದರ್ಶನ ಚಕ್ರ ಪ್ರತ್ಯಕ್ಷವಾಗುತ್ತದೆ. ಇದರಿಂದ ಸಂತಸಗೊಂಡ ಬ್ರಹ್ಮ ಅದನ್ನು ಅಲ್ಲಿಯೆ ಪ್ರತಿಷ್ಠಾಪಿಸುತ್ತಾನೆ.
ಚಿತ್ರಕೃಪೆ: பா.ஜம்புலிங்கம்
ಹಾಗಾಗಿ ಆ ಸ್ಥಳವನ್ನು ಚಕ್ರತೀರ್ಥ ಎಂದು ಕರೆಯುತ್ತಾರೆ. ಹೀಗೆ ಪ್ರತಿಷ್ಠಾಪಿತಗೊಂಡ ಚಕ್ರವು ಅತ್ಯಂತ ತೇಜಸ್ಸು ಹಾಗೂ ಬಲು ಪ್ರಕಾಶತೆಯಿಂದ ಹೊಳೆಯಲಾರಂಭಿಸುತ್ತದೆ. ಇದರ ಹೊಳಪನ್ನು ನೋಡಿದ ಸೂರ್ಯ ದೇವ ಅಸೂಯೆ ಪಡುತ್ತಾನೆ ಹಾಗೂ ಅಹಂಕಾರದಿಂದ ತಾನೆ ಎಲ್ಲರಿಗಿಂತ ಪ್ರಖರ ಎಂದು ಸಾಧಿಸಲು ತನ್ನ ಪ್ರಖರತೆಯನ್ನು ಇನ್ನಷ್ಟು ವೃದ್ಧಿಸಿಕೊಳ್ಳುತ್ತಾನೆ.
ಹೀಗೆ ಮತ್ತಷ್ಟು ಪ್ರಖ್ರವಾದ ಸೂರ್ಯನ ಸಕಲ ತೇಜಸ್ಸನ್ನು ಈ ಸುದರ್ಶನ ಚಕ್ರ ಹೀರಿಕೊಂಡು ಸೂರ್ಯ ಕಪ್ಪಾಗುವಂತೆ ಮಾಡುತ್ತದೆ. ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವ ಹಾಗೆ ಅಹಂ ನುಚ್ಚು ನೂರಾದ ನಂತರ ಸೂರ್ಯನಿಗೆ ತನ್ನ ತಪ್ಪಿನ ಅರಿವಾಗಿ, ಶರಣಾಗತನಾಗಿ ಸುದರ್ಶನ ಚಕ್ರವನ್ನು ಭಕ್ತಿಯಿಂದ ಪೂಜಿಸಿ ಅದಕ್ಕೆ ದೇವಾಲಯ ನಿರ್ಮಿಸುತ್ತಾನೆ. ತದನಂತರ ಆ ಚಕ್ರವು ಸೂರ್ಯನ ಸಕಲ ತೇಜಸನ್ನು ಆತನಿಗೆ ಮರಳಿ ನೀಡುತ್ತದೆ.
ಚಿತ್ರಕೃಪೆ: பா.ஜம்புலிங்கம்
ಈ ಒಂದು ಕಾರಣದಿಂದಾಗಿಯೂ ಸಹ ಈ ದೇವಾಲಯ ಮಹತ್ವ ಪಡೆದಿದೆ. ಯಾರು ತಮ್ಮ ಜಾತಕದಲ್ಲಿ ಗ್ರಹಗಳ ಏರುಪೇರಿನ ಉಪಸ್ಥಿತಿಯಿಂದ ಕಷ್ಟ ಅನುಭವಿಸುತ್ತಿರುವರೊ, ಸಾಡೇ ಸಾತಿಯಂತಹ ಕಷ್ಟಗಳಿಂದ ಜೀವನ ನಡೆಸುತ್ತಿರುವರೋ ಅಂಥವರಿಗೆ ಸಾಮಾನ್ಯವಾಗಿ ಈ ದೇವಾಲಯಕ್ಕೆ ಭೇಟಿ ನೀಡಲು ಸೂಚಿಸಲಾಗುತ್ತದೆ. ಹೀಗೆ ಅವರು ಚಕ್ರರಾಜನ್ನ ಮುಂದೆ ಶರಣಾದರೆ ಅವರ ಎಲ್ಲ ಕಷ್ಟಗಳು ಕೊನೆಗಾಣುತ್ತವೆ ಎನ್ನಲಾಗುತ್ತದೆ.
ಅಲ್ಲದೆ ಯಾರು ಈ ದೇವಾಲಯದಲ್ಲಿ ಸುದರ್ಶನ ಹೋಮವನ್ನು ಮಾಡುವವರೊ ಅವರ ಎಲ್ಲ ಪುಣ್ಯಗಳು ಭಗವಂತನ ಬಳಿ ಸುರಕ್ಷಿತವಾಗಿ ಸಂರಕ್ಷಿಸಲ್ಪಡುತ್ತವೆ ಎಂಬ ನಂಬಿಕೆಯಿದೆ. ಇಲ್ಲಿ ಚಕ್ರರಾಜನು ಮೂರು ಕಣ್ಣುಗಳನ್ನು ಹೊಂದಿರುವ ವಿಶೇಷ ವಿಷ್ಣುವಿನ ಅವತಾರದಲ್ಲಿ ಆಕರ್ಷಿಸುತ್ತಾನೆ. ಆದ ಕಾರಣ ಈ ಭಗವಂತನನ್ನು ಹೂವುಗಳು, ಕುಂಕುಮ ಹಾಗೂ ತುಳಸಿದಳ ಈ ಮೂರು ದ್ರವ್ಯಗಳಿಂದ ಮಾತ್ರ ಆರಾಧಿಸಲಾಗುತ್ತದೆ.
ಸಾರಂಗಪಾಣಿ : ವಿಷ್ಣುವಿನ ಅತಿ ದೊಡ್ಡ ದೇವಾಲಯ!
ಅಷ್ಟಕ್ಕೂ ಈ ದೇವಾಲಯ ಇರುವುದು ಎಲ್ಲಿ? ಈ ದೇವಾಲಯವು ತಮಿಳುನಾಡಿನ ಕುಂಭಕೋಣಂನಲ್ಲಿದೆ. ತಂಜವ್ವೂರು ಜಿಲ್ಲೆಯಲ್ಲಿರುವ ಕುಂಭಕೋಣಂ ಅನ್ನು ಸುಅಲ್ಭವಾಗಿ ತಲುಪಬಹುದಾಗಿದ್ದು ತಂಜವೂರು ದಕ್ಷಿಣ ಭಾರತದ ಹಲವು ಪ್ರಮುಖ ನಗರಗಳಿಂದ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಕುಂಭಕೊಣಂ ರೈಲು ನಿಲ್ದಾಣದಿಂದ ಎರಡು ಕಿ.ಮೀ ಗಳಷ್ಟು ದೂರದಲ್ಲಿ ಚಕ್ರಪಾಣಿ ದೇವಾಲಯವಿದೆ.
ಗರುಡ ಪಕ್ಷಿಗಳು ಈ ದೇವಾಲಯದ ಮೇಲೆ ಹಾರುವುದೇ ಇಲ್ಲ!