ಅದಮ್ಯ ಭಕ್ತಿ, ಶೃದ್ಧೆಗಳಿಂದ ಹುಡುಕಿದರೆ ದೇವರೂ ಸಹ ಸಿಗಬಲ್ಲ ಎಂದು ಹೇಳುತ್ತದೆ ನಮ್ಮ ಪುರಾಣ, ಪುಣ್ಯ ಗ್ರಂಥಗಳ ತಿರುಳು. ಅದಕ್ಕೆ ಪೂರಕವೆಂಬಂತೆ ನಮ್ಮ ದೇಶದಲ್ಲಿ ಕೆಲವು ಪವಿತ್ರ ಸ್ಥಳಗಳು ಭೂತಾಯಿಯ ಒಡಲಿನಲ್ಲಿ ಯಾವ ರೀತಿ ನೆಲೆಸಿವೆಯೆಂದರೆ ಅವುಗಳಿಗೆ ತೆರಳುವುದೆಂದರೆ ಒಂದು ದೊಡ್ಡ ಸವಾಲಾಗಿದ್ದು ಅಕ್ಷರಶಃ ಭಕ್ತಾದಿಗಳ ಅಥವಾ ಪ್ರವಾಸಿಗರ ಸಹನೆ, ದೇಹ ಸಾಮರ್ಥ್ಯ, ಮನೋಬಲ ಮುಂತಾದವುಗಳನ್ನು ಪರೀಕ್ಷಿಸುತ್ತದೆ. ಇನ್ನೂ ಧಾರ್ಮಿಕವಾಗಿ ಹೇಳಬೇಕೆಂದರೆ ಭೇಟಿ ನೀಡುವ ಭಕ್ತರ ಭಕ್ತಿಯನ್ನೂ ಸಹ ಪರೀಕ್ಷಿಸುತ್ತದೆ ಎಂದು ಹೇಳಬಹುದು.
ವಿಶೇಷ ಲೇಖನ : ವಿವಿಧ ಆಕಾರ ಗಾತ್ರಗಳ ಶಿವಲಿಂಗಗಳು
ಅಮರನಾಥ ಹಿಮದ ಶಿವಲಿಂಗ
ಚಿತ್ರಕೃಪೆ: Gktambe
ಈ ನಿಟ್ಟಿನಲ್ಲಿ ಪ್ರಸ್ತುತ ಲೇಖನವು ಅಮರನಾಥ ತೀರ್ಥ ಯಾತ್ರೆಯ ಕುರಿತು ಸಂಕ್ಷೀಪ್ತವಾಗಿ ತಿಳಿಸುತ್ತದೆ. ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದು ವಿಶೇಷ. ಹಿಂದೂ ನಂಬಿಕೆಯ ಪ್ರಕಾರ, ಅಮರನಾಥ ಅತಿ ಮಹತ್ವದ ಪುಣ್ಯ ಕ್ಷೇತ್ರಗಳ ಪೈಕಿ ಒಂದಾಗಿದೆ. ಈ ಗುಹಾ ದೇವಾಲಯವು ಸುತ್ತಲೂ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದ್ದು, ಸಮುದ್ರ ಮಟ್ಟದಿಂದ 3,888 ಮೀ (12,756 ಅಡಿಗಳು) ಗಳಷ್ಟು ಎತ್ತರದಲ್ಲಿ ಸ್ಥಿತವಿದೆ.
ವಿಶೇಷ ಲೇಖನ : ಶಿವನ ಅನನ್ಯ ದೇವಸ್ಥಾನಗಳು
ಅಮರನಾಥ ಗುಹೆ
ಚಿತ್ರಕೃಪೆ: Gktambe
ಅಮರನಾಥ ಗುಹಾ ರಚನೆಯು 40 ಮೀ ಗಳಷ್ಟು ಎತ್ತರವಾಗಿದ್ದು ಹಿಮದಿಂದ ಆವರಿಸಲ್ಪಟ್ಟಿದೆ. ವರ್ಷದ ನಿರ್ದಿಷ್ಟ ಸಮಯದಲ್ಲಿ ಅಂದರೆ ಸಾಮಾನ್ಯವಾಗಿ ಬೇಸಿಗೆಯ ಸಂದರ್ಭದಲ್ಲಿ ಹಿಮ ಕರಗುತ್ತ ಅದರ ನೀರು ಕಲ್ಲು ಬಂಡೆಗಳ ಸಂದುಗಳಲ್ಲಿ ಸ್ರವಿಸುತ್ತ ಸ್ಟಾಲಗ್ಮೈಟ್ ರಚನೆಗಳಾಗಿ ರೂಪಗೊಳ್ಳುತ್ತವೆ. ಹೀಗೆಯೆ ಅಮರನಾಥದ ಶಿವಲಿಂಗವು ವೈಜ್ಞಾನಿಕ ದೃಷ್ಟಿಕೋನದಲ್ಲಿ ಹನಿ ಹನಿಯಾಗಿ ಹಿಮ ಕರಗಿ ಬಿಳುತ್ತ ಒಂದು ಲಿಂಗ ರೂಪದ ಸ್ಟಾಲಗ್ಮೈಟ್ ರಚನೆಯಾಗಿ ರೂಪಗೊಳ್ಳುತ್ತದೆ. ವೈಜ್ಞಾನಿಕ ತಳಹದಿ ಏನೇ ಇರಲಿ....ಆದರೆ ಇದು ಶಿವನ ಶಕ್ತಿಯ ಪ್ರಭಾವವಿರುವ ಪವಿತ್ರ ತಾಣವಾಗಿದೆ ಎಂದು ನಂಬಲಾಗುತ್ತದೆ.
ಅಮರನಾಥದೆಡೆ ಯಾತ್ರಿಗಳ ಚಾರಣ
ಚಿತ್ರಕೃಪೆ: Nittin sain
ಇನ್ನೂ ಪೌರಾಣಿಕ ಕಥೆಗಳನ್ನು ಕೇಳಿದಾಗ ಈ ಸ್ಥಳದ ಕುರಿತು ರೋಚಕವಾದ ಹಿನ್ನಿಲೆಯಿರುವುದನ್ನು ಗಮನಿಸಬಹುದು. ಪುರಾಣಗಳ ಪ್ರಕಾರ, ಈ ಒಂದು ಸ್ಥಳದಲ್ಲಿ ಶಿವನು ತನ್ನ ಪತ್ನಿಯಾದ ಪಾರ್ವತಿ ದೇವಿಗೆ ಜೀವನದ ರಹಸ್ಯ ಹಾಗೂ ಶಾಶ್ವತೆಯ ಕುರಿತು ಸವಿಸ್ತಾರವಾಗಿ ತಿಳಿಸಿದ್ದನಂತೆ. ಧಾರ್ಮಿಕ ನಂಬಿಕೆಯಂತೆ ಅಮರನಾಥ ಶಿವಲಿಂಗವು ಚಂದ್ರನ ಏರೀಳಿತಕ್ಕನುಸಾರವಾಗಿ ಹಿಗ್ಗು, ಕುಗ್ಗು ಗಳನ್ನು ಅನುಭವಸುತ್ತದೆನ್ನಲಾಗುತ್ತದೆ. ಆದರೆ ಇದಕ್ಕೆ ಪೂರಕವಾದ ಯಾವುದೆ ವೈಜ್ಞಾನಿಕ ಆಧಾರಗಳು ಲಭ್ಯವಿಲ್ಲ.
ಚಿತ್ರಕೃಪೆ: Hardik Buddhabhatti
ಅಮರನಾಥ ಗುಹೆಯು ಅತಿ ಪುರಾತನದಿಂದಲೂ ಪೂಜಾ ಸ್ಥಳವಾಗಿ ಹೊರಹೊಮ್ಮಿದೆ. ಕ್ರಿ.ಪೂ 300 ರಲ್ಲಿ ಕಾಶ್ಮೀರ ದೊರೆ ಆರ್ಯರಾಜ ಎಂಬಾತನು ಹಿಮದಿಂದ ರೂಪಗೊಂಡ ಶಿವಲಿಂಗವನ್ನು ಪೂಜಿಸುತ್ತಿದ್ದನೆಂದು ತಿಳಿದು ಬರುತ್ತದೆ. ಅಲ್ಲದೆ 12 ನೆ ಶತಮಾನದ ಕಾಶ್ಮೀರಿ ಪಂಡಿತ ಅಥವಾ ಬ್ರಾಹ್ಮಣನಾಗಿದ್ದ ಕಲ್ಹನ ಎಂಬಾತನು ರಚಿಸಿದ ರಜತರಂಗಿಣಿ ಎಂಬ ಪುಸ್ತಕದಲ್ಲಿ ಅಮರೇಶ್ವರ ಅಥವಾ ಅಮರನಾಥದ ಕುರಿತು ಉಲ್ಲೇಖಿಸಿರುವುದನ್ನು ಕಾಣಬಹುದಾಗಿದೆ. 11 ನೆ ಶತಮಾನದಲ್ಲಿ ರಾಣಿ ಸೂರ್ಯಮತಿಯು ಈ ದೇವಸ್ಥಾನಕ್ಕೆ ತ್ರಿಶೂಲ, ಬಾಣಲಿಂಗ ಮುಂತಾದ ಪವಿತ್ರ ವಸ್ತುಗಳನ್ನು ನೀಡಿದ್ದಳೆಂದು ನಂಬಲಾಗಿದೆ.
ತಾತ್ಕಾಲಿಕ ಪೆಂಡಾಲುಗಳಲ್ಲಿ ಊಟೋಪಚಾರ
ಚಿತ್ರಕೃಪೆ: Hardik Buddhabhatti
ವಾರ್ಷಿಕವಾಗಿ ಅಮರನಾಥ ಯಾತ್ರೆಯು ಪ್ರಥಮ ಪೂಜನ ದಿಂದ ಆರಂಭಗೊಳ್ಳುತ್ತದೆ. ಈ ಯಾತ್ರೆಯು ಸಾಮಾನ್ಯವಾಗಿ ಬೇಸಿಗೆ ಅಂದರೆ ಜೂನ್ ದಿಂದ ಅಗಸ್ಟ್ ಸಮಯದ ಮಧ್ಯದಲ್ಲಿ ಅಮರನಾಥ ದೇವಾಲಯ ಮಂಡಳಿ ಹಾಗೂ ಸರ್ಕಾರದ ವತಿಯಿಂದ ಜಂಟಿಯಾಗಿ ಆಯೋಜಿಸಲ್ಪಡುತ್ತದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸ್ಥಿತವಿರುವ ಅಮರನಾಥವು ರಾಜಧಾನಿ ಶ್ರೀನಗರದಿಂದ ಸುಮಾರು 141 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಕ್ಷೇತ್ರವನ್ನು ಪಹಲ್ಗಾಮ್ ಪಟ್ಟಣದ ಮೂಲಕ ಚಾರಣ ಮಾಡುತ್ತ ತಲುಪಬಹುದಾಗಿದೆ.
ಈ ಪ್ರವಾಸ ಮಾಡಲು ಮೊದಲಿಗೆ ಪಹಲ್ಗಾಮ್ ಪಟ್ಟಣವನ್ನು ತಲುಪಬೇಕು. ಜಮ್ಮು ಹಾಗೂ ಶ್ರೀನಗರಗಳಿಂದ ಪಹಲ್ಗಾಮ್ ಪಟ್ಟಣವನ್ನು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು. ಜಮ್ಮುವಿನಿಂದ ಬೆಳಿಗೆ ಸಮಯದಲ್ಲಿ ಮಾತ್ರ ಪಹಲ್ಗಾಮ್ ತೆರಳಲು ಬಸ್ಸು ದೊರೆಯುತ್ತದೆ. ಪಹಲ್ಗಾಮ್ ಜಮ್ಮುವಿನಿಂದ 315 ಕಿ.ಮೀ ದೂರದಲ್ಲಿದೆ. ಇನ್ನೂ ಶ್ರೀನಗರದಿಂದ ಪಹಲ್ಗಾಮ್ 96 ಕಿ.ಮೀ ಗಳಷ್ಟು ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ. ಪಹಲ್ಗಾಮ್ ನಿಂದ ಯಾತ್ರೆ ಆರಂಭಗೊಳ್ಳುತ್ತದೆ.
ಚಾರಣದ ಸಮಯದಲ್ಲಿ ತಾತ್ಕಾಲಿಕ ಟೆಂಟುಗಳು
ಚಿತ್ರಕೃಪೆ: Hardik Buddhabhatti
ಮೊದಲಿಗೆ ಪಹಲ್ಗಾಮ್ ನಿಂದ ಚಂದನ್ವಾರಿಗೆ ತೆರಳಬೇಕು. ಇದು 16 ಕಿ.ಮೀ ಗಳಷ್ಟು ದೂರವಿದೆ. ಮಿನಿ ಬಸ್ಸುಗಳು ದೊರೆಯುತ್ತವೆ. ಇಲ್ಲಿ ಸರ್ಕಾರೇತರ ಸಂಸ್ಥೆಗಳಿಂದ ಸೇವೆಯ ರೂಪದಲ್ಲಿ ಉಚಿತವಾಗಿ ಫಲಾಹಾರಗಳು ದೊರೆಯುತ್ತವೆ. ವಾತಾವರಣದಲ್ಲಿ ವಿಪರೀತವಾಗಿ ಚಳಿ ಹಾಗೂ ಮುಂದೆ ಸಾಗುತ್ತ ಆಮ್ಲಜನಕದ ಕೊಂಚ ಅಭಾವವಿರುವುದರಿಂದ ಸಾಕಷ್ಟು ಜಾಗರೂಕತೆ ವಹಿಸಬೇಕು. ಚಂದನ್ವಾರಿಯಿಂದ ಮೇಲೆ ಸಾಗುತ್ತ ಪಿಸ್ಸು ಟಾಪ್ ತಲುಪಬೇಕು. ಪಿಸ್ಸು ಟಾಪ್ ಹಿಂದೆ ದೇವತೆಗಳಿಂದ ವಧಿಸಲ್ಪಟ್ಟ ದಾನವರ ದೇಹಗಳ ರಾಶಿ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Akshey25
ಪ್ರವಾಸವನ್ನು ಹೀಗೆಯೆ ಮುಂದುವರೆಸುತ್ತ ಶೇಷ್ನಾಗ್ ಹಾಗೂ ಪಜತರ್ಣಿಯ ಮುಖಾಂತರ ಅಮರನಾಥ ಗುಹೆಗೆ ತಲುಪಬಹುದು. ಅಮರನಾಥ ಗುಹೆಗಿಂತ ಸ್ವಲ್ಪ ಮುಂಚೆಯೆ ಇನ್ನೆರಡು ಹಿಮಲಿಂಗಗಳನ್ನು ಕಾಣಬಹುದಾಗಿದ್ದು ಅವುಗಳು ಪಾರ್ವತಿ ದೇವಿ ಹಾಗೂ ಗಣೇಶನನ್ನು ಪ್ರತಿನಿಧಿಸುತ್ತವೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪ್ರಕೃತಿಯ ಕ್ಲಿಷ್ಟಕರವಾದ ವಾತಾವರಣವನ್ನು ಅನುಭವಿಸಬೇಕಾಗುತ್ತದೆ. ಸಾಕಷ್ಟು ವುಲನ್ ಬಟ್ಟೆಗಳು, ಒಣ ದ್ರಾಕ್ಷಿ ಹಣ್ಣುಗಳು, ನೀರು, ನಿಂಬೆ ಮುಂತಾದ ಪ್ರಥಮ ಸಾಮೋಪಾಯದ ವಸ್ತುಗಳು ಇರಬೇಕಾಗಿರುವುದು ಅವಶ್ಯಕ.