ಮಹಾರಾಷ್ಟ್ರ ರಾಜ್ಯದ ಯವತ್ಮಾಳ ಜಿಲ್ಲೆಯ ಉತ್ತರ ಭಾಗದಲ್ಲಿರುವ ಪುಟ್ಟ ನಗರ ಯವತ್ಮಾಳ. ಸಮುದ್ರ ಮಟ್ಟಕ್ಕಿಂತಲೂ 1460 ಅಡಿ ಎತ್ತರದಲ್ಲಿರುವ ಈ ಪ್ರದೇಶವು ವಿದರ್ಭ ಶ್ರೇಣಿ ಹಾಗೂ ಚಂದ್ರಾಪುರ, ಪರ್ಭಾನಿ, ಅಕೋಲ ಮತ್ತು ಅಮರಾವತಿ ಜಿಲ್ಲೆಗಳಿಂದ ಸುತ್ತುವರೆದಿದೆ.
ಯವತ್ಮಾಳ ಎಂಬ ಪದವು 'ಯವತ್' ಎಂಬ ಪದದಿಂದ ಬಂದಿದ್ದು ಇದರ ಅರ್ಥ ಕನ್ನಡದಲ್ಲಿ ಬೆಟ್ಟ ವಾಗಿದ್ದು ಹಾಗೂ ಮರಾಠಿಯಲ್ಲಿ 'ಮಾಳ' ಎಂದರೆ ಸಾಲು ಎಂಬುದಾಗಿದೆ. ಅರ್ಥಾತ್ ಇದರ ಸಂಪೂರ್ಣ ಅರ್ಥ ಕನ್ನಡದಲ್ಲಿ 'ಬೆಟ್ಟಗಳ ಸಾಲು' ಎಂದಾಗುತ್ತದೆ.
ಐತಿಹಾಸಿಕ ಸಂಬಂಧ
ಇತಿಹಾಸದ ಪುಟಗಳನ್ನು ತೆರೆದು ನೋಡುವಾಗ ಅನೇಕ ರಾಜ ವಂಶಜರು ಈ ಪ್ರದೇಶವನ್ನು ಆಳಿದ್ದು ಇದರ ಅಭಿವೃದ್ಧಿಗಾಗಿ ಪ್ರತಿಯೊಬ್ಬರ ಕೊಡುಗೆ ಅಪಾರವಾದದ್ದು ಹಾಗೂ ಆಯಾ ರಾಜ ವಂಶಜರಿಂದ ಬಳುವಳಿಯಾಗಿ ಬಂದ ಸಂಸ್ಕೃತಿಯು ವಿಶೇಷವಾದದ್ದು ಎಂದು ತಿಳಿದುಬರುತ್ತದೆ.
ಯವತ್ಮಾಳ ಎಂಬ ಹೆಸರು ಬರುವುದಕ್ಕಿಂತ ಮುಂಚಿತವಾಗಿ ಈ ನಗರವನ್ನು ಯವಟೆಚಾ ಮಹಾಲ್ ಹಾಗೂ ಯಾಟ್-ಲೋಹಾರ್ ಎಂದೂ ಕರೆಯುತ್ತಿದ್ದರು. ಇತಿಹಾಸದ ದಿನಗಳನ್ನು ಗಮನಿಸುವಾಗ ಈ ಪಟ್ಟಣವು ಬಿರಾರಿನ ಡೆಕ್ಕನ್ ಸುಲ್ತಾನರ ಪ್ರಮುಖ ಸ್ಥಳವಾಗಿತ್ತು. ಅಹಮ್ಮದ್ ನಗರ ರಾಜರಿಂದ ಮುಘಲರು ಈ ಪಟ್ಟಣವನ್ನು ವಶಪಡಿಸಿಕೊಂಡರು ಹಾಗೂ ಮುಘಲರ ಕಡೆಯ ಅರಸನ ಮರಣದ ನಂತರ ಮರಾಠರು ಯವತ್ಮಾಳನ್ನು ವಶಪಡಿಸಿಕೊಂಡರು. ಕೊನೆಯದಾಗಿ ಬ್ರಿಟೀಷರು ಇಲ್ಲಿ ಆಡಳಿತ ನಡೆಸಿದ್ದರು. ಆರಂಭದಲ್ಲಿ ಇದನ್ನು ಭಾರತದ ಕೇಂದ್ರ ನಗರ ಎಂದು ಪರಿಗಣಿಸಿದ್ದರಾದರೂ ನಂತರದ ದಿನಗಳಲ್ಲಿ ಇದನ್ನು ಮಹರಾಷ್ಟ್ರ ರಾಜ್ಯದ ಒಂದು ಭಾಗವಾಗಿ ಗುರುತಿಸಲಾಯಿತು.
ಇಲ್ಲಿ ನೋಡುವಂಥಾದ್ದೇನಿದೆ
ಯವತ್ಮಾಳ ಪಟ್ಟಣದಲ್ಲಿರುವ ಪುರಾತನ ದೇವಸ್ಥಾನಗಳು ಹಾಗೂ ಸುಂದರವಾದ ಪಿಕ್ನಿಕ್ ಸ್ಥಳಗಳಿಗೆ ಹೆಸರು ವಾಸಿಯಾಗಿವೆ. ಇಲ್ಲಿರುವ ನರಸಿಂಹ ದೇವಸ್ಥಾನ, ದತ್ತ ಮಂದಿರ, ಕಲಂಬ ಮತ್ತು ಕಾಟೇಶ್ವರ್ ಮಹರಾಜ್ ದೇವಸ್ಥಾನ ಹೀಗೆ ಮುಂತಾದ ಹಲವು ದೇವಸ್ಥಾನಗಳಿಗೆ ದೇಶದ ಮೂಲೆ ಮೂಲೆಯಿಂದ ಭಕ್ತಾಧಿಗಳು ಬರುತ್ತಾರೆ. ಇಲ್ಲಿನ ಜಗತ್ ದೇವಸ್ಥಾನ ಹಾಗೂ ಖೋಜೋಚಿ ಮಸೀದಿ ಕೂಡ ಜನಪ್ರಿಯವಾದವುಗಳೆ.
ಯವತ್ಮಾಳ ಪಟ್ಟಣದ ಸಮೀಪದಲ್ಲೆ ಇರುವ ಕಲಾಂಬ್ ಗ್ರಾಮವು ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಪ್ರದೇಶವಾಗಿದ್ದು ಪುರಾತನ ಗುಹೆಯೊಂದರಲ್ಲಿರುವ ಚಿಂತಾಮಣಿ ಗಣೇಶ ದೇವಸ್ಥಾನವು ಎಲ್ಲರ ಗಮನ ಸೆಳೆಯುತ್ತದೆ. ಇದರ ಸಮೀಪದಲ್ಲೆ ಗಣೇಶ ಕುಂಡವಿದೆ - ಇಲ್ಲಿ ಪವಿತ್ರ ನೀರಿನ ಕೊಳವೊಂದಿರುವುದನ್ನು ಕಾಣಬಹುದಾಗಿದೆ.
ಯವತ್ಮಾಳನಲ್ಲಿರುವ ಪೈನ್ ಗಂಗಾ ವನ್ಯಜೀವಿ ಸಂರಕ್ಷಣಾ ಕೇಂದ್ರ ಹಾಗೂ ತಿಪ್ಪೇಶ್ವರ ವನ್ಯಜೀವಿ ಸಂರಕ್ಷಣಾ ಕೇಂದ್ರಗಳು ಪ್ರಕೃತಿ ಹಾಗೂ ವನ್ಯ ಜೀವಿ ಪ್ರೇಮಿಗಳಿಗೆ ಸೂಕ್ತ ಸ್ಥಳವಾಗಿದೆ.
ಚಳಿಗಾಲವು ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲವಾಗಿದ್ದು ಯವತ್ಮಾಳ ಪಟ್ಟಣವು ವಿಮಾನ, ರೈಲು ಹಾಗೂ ರಸ್ತೆ ಮಾರ್ಗಗಳ ಮೂಲಕ ಸಂಪರ್ಕ ಹೊಂದಿದೆ.