ಪವಿತ್ರ ಯಮುನಾ ನದಿಯ ಉಗಮಸ್ಥಾನವಾದ ಯಮುನೋತ್ರಿ ಇರುವುದು ಬಂದಾರ್ ಪೂಂಚ್ ಪರ್ವತದ ಮೇಲೆ. ಸಮುದ್ರ ಮಟ್ಟದಿಂದ ಸರಿ ಸುಮಾರು 3293 ಮೀಟರ್ ಎತ್ತರದಲ್ಲಿ!. ಭೌಗೋಳಿಕವಾಗಿ, ಯಮುನೆಯು ಸಮುದ್ರ ಮಟ್ಟದಿಂದ 4421 ಮೀಟರ್ ಎತ್ತರದಲ್ಲಿರುವ ಚಾಂಪಸರ್ ಹಿಮನದಿಯಲ್ಲಿ ಹುಟ್ಟುತ್ತಾಳೆ. ವಾಸ್ತವವಾಗಿ ಈ ಹಿಮನದಿಯು ಪವಿತ್ರ ಯಮುನೋತ್ರಿಯಿಂದ ಕೇವಲ 1 ಕಿಮೀ ದೂರದಲ್ಲಿದೆ. ಆದರೂ ಇದನ್ನು ತಲುಪಬೇಕಾದರೆ ಸಾಕಷ್ಟು ಪ್ರಯಾಸ ಪಡಬೇಕಾಗುವುದು. ಇಂಡೋ ಚೀನಾ ಗಡಿಯ ಸಮೀಪದಲ್ಲಿರುವ ಈ ತಾಣವನ್ನು ಕಾಲ್ನಡಿಗೆಯಿಂದ ತಲುಪಬೇಕಾದರೆ ಒಂದಿಡೀ ದಿನವೇ ಬೇಕಾಗುವುದು. ಅದರಲ್ಲೂ ದಟ್ಟಾರಣ್ಯದೊಳಗೆ, ತಗ್ಗು-ದಿಣ್ಣೆಗಳನ್ನು ದಾಟುತ್ತಾ ಹೋಗುವ ಅನಿವಾರ್ಯತೆ ಇದೆ. ಸೌಭಾಗ್ಯ ವಶಾತ್ ಭಕ್ತರಿಗೆ ದೇವಾಲಯ ತಲಪುವುದಕ್ಕೆ ಕುದುರೆ ಮತ್ತು ಹೇಸರಗತ್ತೆಗಳುಳ್ಳ ಸಾರಿಗೆಗಳು ಲಭ್ಯವಿವೆ.
ಪ್ರಸ್ತುತ ಪ್ರದೇಶವು ಉತ್ತರಾಖಂಡ್ ರಾಜ್ಯದ ಗಡ್ವಾಲ್ ಆಡಳಿತಾತ್ಮಕ ವಿಭಾಗದ ಸುಪರ್ದಿಗೆ ಒಳಪಟ್ಟಿದೆ. ಯಮುನೋತ್ರಿಯು ಹಿಂದೂಗಳ ನಾಲ್ಕು ಪ್ರಮುಖ ಯಾತ್ರಾಸ್ಥಳಗಳಲ್ಲೊಂದಾಗಿದ್ದು(ನಾಲ್ಕೂ ಯಾತ್ರಾಸ್ಥಳಗಳನ್ನು ಚಾರ್ ಧಾಮ್ ಎಂದು ಕರೆಯಲಾಗುತ್ತದೆ), ಹಿಂದೂಗಳ ಪವಿತ್ರ ನದಿ ದೇವಿಯಾದ ಯಮುನೋತ್ರಿಯ ದೇವಾಲಯವೇ ಇಲ್ಲಿನ ಪ್ರಧಾನ ಆಕರ್ಷಣೆ. ಜಂಕಿ ಚಟ್ಟಿಯಲ್ಲಿರುವ ಬಿಸಿ ನೀರಿನ ಬುಗ್ಗೆಗಳೂ ಸಹ ಇಲ್ಲಿನ ಇನ್ನೋಂದು ಮುಖ್ಯ ಆಕರ್ಷಣೆಯಾಗಿದೆ. ಇಲ್ಲಿನ ಸೂರ್ಯ ಕುಂಡವನ್ನು ಕೂಡ ಮಹತ್ವದ ಬಿಸಿ ನೀರಿನ ಬುಗ್ಗೆಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಅಕ್ಕಿ ಮತ್ತು ಆಲೂಗಡ್ಡೆಗಳನ್ನು ಒಂದು ಮಕಮಲ್ಲಿನ ಬಟ್ಟೆಯಲ್ಲಿ ಹಾಕಿ ಆ ಬಟ್ಟೆಯನ್ನು ಕುದಿಯುತ್ತಿರುವ ಬಿಸಿನೀರಿನ ಬುಗ್ಗೆಯಲ್ಲಿ ಅದ್ದಿ 'ಪ್ರಸಾದ್'ಅನ್ನು ತಯಾರಿಸಲಾಗುತ್ತದೆ.
ಯಮುನೋತ್ರಿಯ ಸನಿಹದಲ್ಲಿರುವ ಒಂದು ಚಿಕ್ಕ ಹಳ್ಳಿ ಖರ್ಸಲಿ. ಹಳ್ಳಿ ಚಿಕ್ಕದಾದರೂ ಹಲವಾರು ಜಲಪಾತಗಳನ್ನು, ನೈಸರ್ಗಿಕ ಬುಗ್ಗೆಗಳನ್ನು ಮತ್ತು ಶಿವನ ಪ್ರಾಚೀನ ದೇವಾಲಯವನ್ನೂ ಒಳಗೊಂಡಿದ್ದು, ಬೃಹತ್ ಹಿರಿಮೆಯಿಂದ ಮೆರೆಯುತ್ತಿದೆ. ಯಮುನೋತ್ರಿ ದೇವಸ್ಥಾನದ ಹತ್ತಿರ 'ದಿವ್ಯ ಶೀಲಾ' (ಸಾಹಿತ್ಯಿಕ ಅರ್ಥವು ದೈವಿಕ ಪ್ರಭೆಯ ಚಪ್ಪರ) ಎಂಬ ಕಲ್ಲಿದ್ದು, ಭಕ್ತರು ಯಮುನೋತ್ರಿ ದೇವಾಲಯಕ್ಕೆ ಭೇಟಿನೀಡುವ ಮೊದಲು ಇದನ್ನು ಪೂಜಿಸುವ ವಾಡಿಕೆಯಿದೆ.
ಪವಿತ್ರ ಯಮುನೋತ್ರಿ ದೇವಾಲಯಕ್ಕೆ ಹೋಗುವಾಗ, ಅನೇಕ ಪ್ರವಾಸಿಗರು ಧರಸುನಿಂದ 40 ಕಿಮೀ ದೂರದಲ್ಲಿರುವ ಬಾಡ್ಕೋಟ್ ಪಟ್ಟಣದಲ್ಲಿ ತಮ್ಮ ಪ್ರಯಾಣದ ಪ್ರಯಾಸವನ್ನು ನೀಗಿಸಿಕೊಳ್ಳುತಾರೆ. ಈ ಪ್ರದೇಶವು ಸುಂದರ ಸೇಬು ತೋಟಗಳು ಮತ್ತು ಪ್ರಾಚೀನ ದೇವಾಲಯಗಳಿಗೆ ಜನಪ್ರಿಯವಾಗಿದೆ. ಅಲ್ಲದೆ, ಹನುಮಾನ್ ಚಟ್ಟಿ ಎಂಬ ಇನ್ನೊಂದು ಪ್ರವಾಸಿ ತಾಣವೂ ಇಲ್ಲೆ ಯಮುನೋತ್ರಿಯ ಸನಿಹದಲ್ಲಿದ್ದು ಇದು ಚಾರಣಿಗರ ತಾಣವೆಂದೆ ಜನಪ್ರಿಯವಾಗಿದೆ.
ವಿಮಾನಯಾನದಲ್ಲಿ ಯಮುನೋತ್ರಿ ತಲುಪಬೇಕೆಂದಲ್ಲಿ, ಪ್ರಯಾಣಿಕರು ಹತ್ತಿರದ ವಾಯುನೆಲೆಯಾದ ಡೆಹ್ರಾಡೂನ್ ನ ಜಾಲಿ ಗ್ರಾಂಟ್ ವಿಮಾನನಿಲ್ದಾಣದಲ್ಲಿ ತಮ್ಮ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಇನ್ನು ಯಮುನೋತ್ರಿಯ ಹತ್ತಿರದ ರೈಲ್ವೇ ನಿಲ್ದಾಣಗಳು ರಿಷಿಕೇಶ್ ಮತ್ತು ಡೆಹ್ರಾಡೂನ್ ನಿಲ್ದಾಣಗಳಾಗಿವೆ. ಸಮೀಪದ ನಗರಗಳಿಂದ ಯಮುನೋತ್ರಿಗೆ ಬಸ್ ಸೌಲಭ್ಯವೂ ಇದೆ. ಪ್ರವಾಸಿಗರು ಟ್ಯಾಕ್ಸಿ ಮತ್ತು ಕ್ಯಾಬ್ ಗಳನ್ನು ಬಾಡಿಗೆಗೆ ಪಡೆದು ಹನುಮಾನ್ ಚಟ್ಟಿಗೆ ಹೋಗಿ ಅಲ್ಲಿಂದ ಚಾರಣ ಕೈಗೊಳ್ಳಲೂ ಬಹುದು.
ಬೇಸಿಗೆಯು ಏಪ್ರಿಲ್ ಮತ್ತು ಜುಲೈ ತಿಂಗಳ ನಡುವೆ ವಿಸ್ತರಿಸುತ್ತಿದ್ದು, ಮಳೆಗಾಲದ ಸಮಯದಲ್ಲಿ ಯಮುನೋತ್ರಿಯು ಅತಿ ಕಡಿಮೆ ಮಳೆಯನ್ನು ಪಡೆಯುತ್ತದೆ. ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿರುತ್ತದೆ ಮತ್ತು ತಾಪಮಾನ ಶೂನ್ಯ ಮಟ್ಟಕ್ಕಿಂತ ಕೆಳಗೆ ಇಳಿಯುತ್ತದೆ. ಮೇ-ಜೂನ್ ಮತ್ತು ಸೆಪ್ಟೆಂಬರ್-ನವೆಂಬರ್ ತಿಂಗಳುಗಳು ಯಮುನೋತ್ರಿಯ ಭೇಟಿಗೆ ಸೂಕ್ತ ಕಾಲವೆಂದು ಪರಿಗಣಿಸಲಾಗುತ್ತದೆ.