ದಕ್ಷಿಣ ಭಾರತದ ರಾಜ್ಯವಾದ ಆಂಧ್ರ ಪ್ರದೇಶದ ಒಂದು ಜಿಲ್ಲೆ ವಾರಂಗಲ್. ಇದು ಕ್ರಿ.ಶ 12 ರಿಂದ 14 ರ ವರೆಗೆ ಆಳ್ವಿಕೆ ನಡೆಸಿದ ಕಾಕತೀಯ ರಾಜವಂಶದ ರಾಜಧಾನಿಯಾಗಿತ್ತು. ಇದು ರಾಜ್ಯದ ಐದನೆಯ ಅತಿ ದೊಡ್ಡ ನಗರವಾಗಿದೆ. ಇದನ್ನು ಹಿಂದೆ ಇಲ್ಲಿರುವ ಒಂದೇ ಕಲ್ಲಿನಿಂದಾದ ದೊಡ್ಡ ದಿಬ್ಬಗಳ ಸಾಲಿನಿಂದಾಗಿ ಒರಗುಗಲ್ಲು ಅಥವಾ ಒಮ್ಟಿಕೊಂಡ ಎಂದೂ ಕರೆಯಲಾಗುತ್ತಿತ್ತು. ವಾರಂಗಲ್ ನಗರವು ವಾರಂಗಲ್ ಜಿಲ್ಲೆಯಲ್ಲಿದೆ. ಇದು ಹನಮಕೊಂಡ ಮತ್ತು ಕಾಜಿಪೇಟ್ ಅನ್ನೂ ಒಳಗೊಂಡಿದೆ.
ಇಲ್ಲಿನ ವಾರಂಗಲ್ ಕೋಟೆಯಂತಹ ಹಲವಾರು ವಾಸ್ತುಶಿಲ್ಪದ ಆಕರ್ಷಣೆಗಳು ಹಾಗು ಪ್ರವಾಸಿ ತಾಣಗಳು ಇಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಮಾಡಿದೆ. ಕಾಕತೀಯ ರಾಜವಂಶದ ಪ್ರೋಲ ರಾಜ ಈ ಚಿತ್ರಸದೃಶ ನಗರವನ್ನು ಕಟ್ಟಲು ಮೂಲ ಕಾರಣ ಎಂದು ನಂಬಲಾಗಿದೆ. ಪ್ರಸಿದ್ಧ ಪ್ರವಾಸಿ ಮಾರ್ಕೊ ಪೋಲೋ ತನ್ನ ಪ್ರವಾಸಿ ಬರಹದಲ್ಲಿ ಈ ನಗರದ ಬಗ್ಗೆ ಹಾಗೂ ಇಲ್ಲಿ ಸೌಂದರ್ಯದ ಬಗ್ಗೆ ಮಾತನಾಡುತ್ತಾನೆ. ಹಾಗೂ ಈತನ ಈ ದಾಖಲೆಯಲ್ಲಿ ಕಾಕತೀಯ ಆಳ್ವಿಕೆಯ ಕಾಲದಲ್ಲಿದ್ದ ಆಳ್ವಿಕೆ ಮತ್ತು ವಾಸ್ತುಶಿಲ್ಪಕ್ಕೆ ಅವರು ನೀಡುತ್ತಿದ್ದ ಪ್ರಾಮುಖ್ಯತೆ ಮತ್ತು ಕೊಡುಗೆಗಳ ಬಗ್ಗೆ ತಿಳಿಯಬಹುದಾಗಿದೆ.
ವಾರಂಗಲ್ ನಗರದ ಆರ್ಥಿಕತೆಯ ಬೆನ್ನೆಲುಬು ಕೃಷಿಯಾಗಿದೆ. ಇಲ್ಲಿ ಮೆಣಸು, ತಂಬಾಕು, ಹತ್ತಿ ಮತ್ತು ಅಕ್ಕಿಯನ್ನು ಬೆಳೆಸುತ್ತಾರೆ. ವಾರಂಗಲ್ ನಗರದ ಒಟ್ಟು ಜನಸಂಖ್ಯೆ 1 ಮಿಲಿಯನ್ ಒಳಗೆ ಇದೆ.
ವಾರಂಗಲ್ ಕಾಲಯಾನ
ಮೊದಲೇ ಹೇಳಿದ ಹಾಗೆ ವಾರಂಗಲ್ ನಗರವನ್ನು 12 ರಿಂದ 14 ನೇ ಶತಮಾನದ ತನಕ ಕಾಕತೀಯ ರಾಜವಂಶದವರು ಆಳ್ವಿಕೆ ನಡೆಸಿದರು. ಪ್ರತಾಪ ರುದ್ರ ಅರಸನ ಸೋಲಿನೊಂದಿಗೆ 50 ವರ್ಷಗಳ ಕಾಲದ ಆಳ್ವಿಕೆ ಕೊನೆಗೊಂಡು ಮುಸುನ್ರಿ ನಾಯಕರ ಆಳ್ವಿಕೆ ಆರಂಭಗೊಂಡಿತು. ಆದರೆ ಆಂತರಿಕ ಕಲಹ ಮತ್ತು ನಾಯಕ ನಾಯಕರ ನಡುವಿನ ಮನಸ್ತಾಪದ ಕಾರಣ ಹೆಚ್ಚು ಕಾಲ ಆಳ್ವಿಕೆ ನಡೆಸಲು ಸಾಧ್ಯವಾಗಲಿಲ್ಲ. ಮುಂದೆ ಇಲ್ಲಿ ಬಹಮನಿಗಳು ಆಳ್ವಿಕೆ ಮುಂದುವರೆಸಿದರು.
ಮೊಘಲ್ ಚಕ್ರವರ್ತಿ ಔರಂಗಜೇಬ್ ಗೋಲ್ಕೊಂಡಾ (ವಾರಂಗಲ್ ಇದರ ಒಂದು ಭಾಗವಾಗಿತ್ತು) ವನ್ನು 1687 ವನ್ನು ವಶಪಡಿಸಿಕೊಂಡನು ಹಾಗೂ 1724 ರ ತನಕ ಇದು ಅವರ ಆಳ್ವಿಕೆಯಲ್ಲಿ ಮುಂದುವರೆಯಿತು. 1724 ರಲ್ಲಿ ಹೈದರಾಬಾದ್ ರಾಜ್ಯ ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳನ್ನೊಳಗೊಂಡು ಅಸ್ತಿತ್ವಕ್ಕೆ ಬಂದಿತು. ವಾರಂಗಲ್ ಇದರ ಒಂದು ಭಾಗವಾಗಿತ್ತು. 1948 ರಲ್ಲಿ ಹೈದರಾಬಾದ್ ಭಾರತದ ಒಂದು ರಾಜ್ಯವಾಯಿತು ಹಾಗೂ 1956 ರಲ್ಲಿ ಭಾಷಾವಾರು ರಾಜ್ಯ ವಿಂಗಡನೆ ಅವಧಿಯಲ್ಲಿ ತೆಲುಗು ಮಾತನಾಡುವ ಪ್ರದೇಶಗಳು ಆಂಧ್ರ ಪ್ರದೇಶ ರಾಜ್ಯದಲ್ಲಿ ವಿಲೀನಗೊಂಡವು.
ಶಾಸನಗಳಿಂದ ಸಂಗ್ರಹಿಸಿದ ಮಾಹಿತಿಗಳು 12 ನೆಯ ಶತಮಾನದ ಮೊದಲು ವಾರಂಗಲ್ ನಗರಕ್ಕೆ ಕಾಕತೀಪುತ್ರ (ಕಾಕತೀಯ ರಾಜವಂಶದಿಂದಾಗಿ ತನ್ನ ಹೆಸರನ್ನು ಪಡೆದುಕೊಂಡಿತು) ಎಂಬ ಹೆಸರು ಇದ್ದಿರಬಹುದು ಎಂದು ಸೂಚಿಸುತ್ತವೆ.
ವಾರಂಗಲ್ ಸುತ್ತಮುತ್ತಲಿನ ಸ್ಥಳಗಳು
ವಾರಂಗಲ್ ತನ್ನಲ್ಲಿರುವ ಐತಿಹಾಸಿಕ ಮಹತ್ವದ ಸ್ಥಳಗಳು, ಅತ್ಯದ್ಭುತವಾದ ವಿಗ್ರಹಗಳು, ವನ್ಯಜೀವಿ ತಾಣಗಳು ಮತ್ತು ಸುಂದರವಾದ ದೇವಾಲಯಗಳಿಂದ ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಪಖಾಲ್ ಸರೋವರ, ವಾರಂಗಲ್ ಕೊಟೆ, ಸಾವಿರ ಕಂಬದ ದೇವಾಲಯ, ಮತ್ತು ಬಂಡೆಯ ಉದ್ಯಾನವನ ವಾರಂಗಲ್ ನಗರದಲ್ಲಿರುವ ಕೆಲವು ಪ್ರಮುಖ ಆಕರ್ಷಣೆಗಳು. ಪದ್ಮಾಕ್ಷಿ ದೇವಾಲಯ ಮತ್ತು ಭದ್ರಕಾಳಿ ದೇವಾಲಯ ಇಲ್ಲಿರುವ ಇತರೆ ಎರಡು ದೇವಾಲಯಗಳಾಗಿದ್ದು ದೇಶದಾದ್ಯಂತ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ವಾರಂಗಲ್ ತಾರಾಲಯ / ಖಗೋಲ ವೀಕ್ಷಣಾಲಯ ಇಲ್ಲಿರುವ ಇತರ ಸರೋವರಗಳಂತೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಸಮಕ್ಕ –ಸಾರಕ್ಕ ಜಾತ್ರೆ (ಸಮಕ್ಕ ಸರಲಮ್ಮ ಜಾತ್ರೆ ಎಂದೂ ಕರೆಯುತ್ತಾರೆ) ಯನ್ನು ಎರಡು ವರ್ಷಗಳಿಗೊಮ್ಮೆ ವಾರಂಗಲ್ ಆಯೋಜಿಸುತ್ತಿದ್ದು ಲಕ್ಷಾಂತರ ಮಂದಿ ಇಲ್ಲಿ ಸೇರುತ್ತಾರೆ. ಕಾಕತೀಯ ರಾಜವಂಶದ ನ್ಯಾಯಯುತವಲ್ಲದ ಒಂದು ಕಾನೂನನ್ನು ವಿರೋಧಿಸಿದ ಈ ಭಾಗದ ಧೀರ ತಾಯಿ ಮಗಳ ಸ್ಮರಣೆಯಲ್ಲಿ ಈ ಜಾತ್ರೆ/ಉತ್ಸವವನ್ನು ಆಚರಿಸುತ್ತಾರೆ. ಇದು ಕುಂಭ ಮೇಳವನ್ನು ಹೊರತುಪಡಿಸಿದರೆ ಇಡಿ ಏಷ್ಯಾದಲ್ಲೆ ಅತೀ ಹೆಚ್ಚು ಜನರು ಸೇರುವ ಒಂದು ಉತ್ಸವವಾಗಿದೆ.
ಬಥುಕಮ್ಮ ಉತ್ಸವ ಇಲ್ಲಿನ ಇನ್ನೊಂದು ಪ್ರಮುಖ ಉತ್ಸವವಾಗಿದ್ದು ಈ ಸಮಯದಲ್ಲಿ ಮಹಿಳೆಯರು ದೇವಿಯನ್ನು ಹಲವಾರು ಬಗೆಯ ಹೂವುಗಳಿಂದ ಪೂಜಿಸುತ್ತಾರೆ.
ಪ್ರಯಾಣ ಮತ್ತು ವಸತಿ
ಈ ಭಾಗದ ಎಲ್ಲಾ ಸ್ಥಳಗಳನ್ನು ನೋಡಲು ರಾಜ್ಯ ಸರಕಾರ ನಡೆಸುವ ರಾಜ್ಯ ಸರ್ಕಾರಿ ಬಸ್ಸುಗಳೇ ಅತೀ ಕಡಿಮೆ ವೆಚ್ಚದ ಸಾಧನಗಳಾಗಿವೆ ಹಾಗೂ ಇವು ಸಾಧಾರಣವಾಗಿ ಎಲ್ಲಾ ಸ್ಥಳಗಳನ್ನೂ ತಲುಪುತ್ತವೆ. ಆಟೋ ರಿಕ್ಷಾಗಳೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದು ಸಾರಿಗೆ ಒಂದು ಸಮಸ್ಯೆಯಾಗಿ ಎಂದೂ ನಿಮ್ಮನ್ನು ಬಾಧಿಸದು. ಇಲ್ಲಿನ ಆಟೋ ರಿಕ್ಷಾಗಳು ಮೀಟರ್ ಆಧಾರದಲ್ಲಿ ನಡೆಯದ ಕಾರಣ ಪ್ರಯಾಣ ಆರಂಭಿಸುವ ಮೊದಲೇ ದರವನ್ನು ನಿಗದಿಗೊಳಿಸಿ ಪ್ರಯಾಣವನ್ನು ಆರಂಭಿಸಿವುದು ಸೂಕ್ತವಾಗಿದೆ.
ವಾರಂಗಲ್ ನ ಪ್ರಖ್ಯಾತಿಯ ಕಾರಣ ಸಾಕಷ್ಟು ಜನರು ಇಲ್ಲಿ ಭೇಟಿ ನಿಡುವುದರಿಂದ ನೀವು ಮೊದಲೇ ವಸತಿ ವ್ಯವಸ್ಥೆಯ ಬಗ್ಗೆ ಗಮನ ಹರಿಸದಿದ್ದಲ್ಲಿ ನಂತರ ವಸತಿಯ ವ್ಯವಸ್ಥೆ ಸಮರ್ಪಕವಾಗಿ ಆಗದೇ ಇರುವ ಸಾಧ್ಯತೆಗಳಿವೆ. ಸಾಮಾನ್ಯ ದರ್ಜೆಯ ಹೋಟೇಲುಗಳು ರೂ 750 ರ ದರದಲ್ಲಿ ವರ್ಷದಾದ್ಯಂತ ಲಭ್ಯವಿದೆ. ಆದರೆ ವಾರಂಗಲ್ ನ ಸುಡುವ ಬೇಸಿಗೆಯ ಕಾರಣದಿಂದ ಬೇಸಗೆಯಲ್ಲಿ ಈ ವಾಸ ವ್ಯವಸ್ಥೆಯನ್ನು ಆಯ್ಕೆ ಮಾಡದಿರುವುದು ಒಳಿತು. ಏರ್ ಕಂಡೀಷನ್ ಸೌಲಭ್ಯವಿರುವ ಡಿಲಕ್ಸ್ ರೂಮುಗಳು ಸುಮಾರು 1250 ದರದಲ್ಲಿ ಲಭ್ಯವಿವೆ. ಮತ್ತು ಇಂತಹ ಹಲವು ಹೋಟೆಲುಗಳನ್ನು ವಾರಂಗಲ್ ಕೋಟೆಯ ಆಸುಪಾಸಿನಲ್ಲಿ ಲಭ್ಯವಿವೆ. ದಿನವೊಂದಕ್ಕೆ ಸುಮಾರು 3000 – 4000 ದ ವರೆಗೆ ಖರ್ಚು ಮಾಡಲಿ ತಯಾರಿರುವವರಿಗಾಗಿ ರೆಸಾರ್ಟ್ ಗಳು ಇನ್ನೊಂದು ಆಯ್ಕೆಯಾಗಿದೆ. ಅಂತರ್ಜಾಲ ಸಂಪರ್ಕವಿರುವ ರೂಮುಗಳು ಹೋಟೆಲಿನ ಓಳಗಡೆ ಸ್ವಿಮ್ಮಿಂಗ್ ಪೂಲ್ ಎಲ್ಲಾ ತರಹದ ಆಹಾರ ಇಂತಹ ಹೋಟೆಲುಗಳ ಪ್ರಮುಖ ಆಕರ್ಷಣೆಯಾಗಿದೆ.