ಕ್ರಿ.ಶ.1604 ರಲ್ಲಿ ಜೈನ ರಾಜನಾದ ತಿಮ್ಮಣ್ಣ ಅಜಿಲನಿಂದ ಪ್ರತಿಷ್ಠಾಪಿಸಲಾದ ಗೊಮ್ಮಟೇಶ್ವರ ಪ್ರತಿಮೆಯು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರವಾಸಕ್ಕೆಂದು ವೇಣೂರಿಗೆ ಹೋದಾಗ ಭೇಟಿ ನೀಡಲೇ ಬೇಕಾದ ತಾಣವಾಗಿದೆ. ಈ ಏಕಶಿಲಾ ಪ್ರತಿಮೆಯು ಅಮರಶಿಲ್ಪಿ ಜಕಣಾಚಾರಿಯ ಕೈಗಳಿಂದ ರೂಪಗೊಂಡಿದೆ ಎಂದು ನಂಬಲಾಗಿದೆ. ಫಾಲ್ಗುಣಿ ಅಥವಾ ಗುರಪುರ ನದಿಯ ದಂಡೆಯ ಮೇಲೆ ಇದನ್ನು ಕಾಣಬಹುದು.
ಈ ಬಾಹುಬಲಿ ಪ್ರತಿಮೆಯು ಇನ್ನುಳಿದ ಪ್ರತಿಮೆಗಳಿಗಿಂತ (ಕಾರ್ಕಳ, ಧರ್ಮಸ್ಥಳ ಮತ್ತು ಶ್ರವಣಬೆಳಗೊಳ ಪ್ರತಿಮೆಗಳು) ಚಿಕ್ಕದಾಗಿದ್ದು 35 ಅಡಿ ಎತ್ತರ ಹೊಂದಿದೆ. ಈ ಪ್ರತಿಮೆಯು ಎತ್ತರವಾದ ಕಟ್ಟೆಯ ಮೇಲೆ ಯಾವುದೆ ಆಧಾರವಿಲ್ಲದೆ ನಿಂತಿದ್ದು, ಇದರ ವಿಶೇಷವಾಗಿದೆ.