ತಮಿಳುನಾಡಿನ ಕೊರಮಂಡಲ್ ತೀರದಲ್ಲಿ ನೆಲೆಗೊಂಡಿರುವ ವೇಲಾಂಕಣ್ಣಿಯು ಧರ್ಮ ಬೇಧವಿಲ್ಲದೆ ಎಲ್ಲಾ ತರಹದ ಜನರು ಭೇಟಿಕೊಡುವ ಒಂದು ಧಾರ್ಮಿಕ ಸ್ಥಳವಾಗಿದೆ. ನಾಗಪಟ್ಟಿನಂ ಜಿಲ್ಲೆಯಲ್ಲಿ ನೆಲೆಗೊಂಡಿರುವ ಈ ಸ್ಥಳವು ಕನ್ಯೆ ಮೇರಿಯ ಆವಾಸಸ್ಥಾನವೆಂದು ಕರೆಯಲ್ಪಡುವ ಚರ್ಚಿನಿಂದಾಗಿ ಖ್ಯಾತಿ ಪಡೆದಿದೆ. ಈ ಚರ್ಚನ್ನು ವೇಲಾಂಕಣ್ಣಿಯ ಮಡೋನ್ನಾಳಿಗಾಗಿ ಸಮರ್ಪಿಸಲಾಗಿದೆ. ಈ ಚರ್ಚನ್ನು " ಅವರ್ ಲೇಡಿ ಆಫ್ ಹೆಲ್ತ್" ಎಂದು ಪರಿಗಣಿಸಲಾಗಿದೆ. ಚೆನ್ನೈನಿಂದ 350 ಕಿ.ಮೀ ದೂರದಲ್ಲಿರುವ ವೇಲಾಂಕಣ್ಣಿಗೆ ಸುಲಭವಾಗಿ ತಲುಪಬಹುದು.
ಪವಾಡಗಳ ನಾಡು
ವೇಲಾಂಕಣ್ಣಿಯ ಇತಿಹಾಸವು ನಮ್ಮನ್ನು 1560 ರಷ್ಟರ ಹಿಂದಕ್ಕೆ ಕೊಂಡೊಯ್ಯುತ್ತದೆ. ಇಲ್ಲಿನ ನಂಬಿಕೆಗಳ ಪ್ರಕಾರ, ಈ ಸಮಯದಲ್ಲಿಯೇ ಇಲ್ಲಿ ಕನ್ಯಾ ಮೇರಿಯು ಕಾಣಿಸಿಕೊಂಡಿದ್ದು. ಪ್ರಸಿದ್ಧ ನಂಬಿಕೆಯ ಪ್ರಕಾರ, ಇದೇ ಸ್ಥಳದಲ್ಲಿ ಮೇರಿಯು ತನ್ನ ಮಗು ಏಸು ಕ್ರಿಸ್ತನ ಬಾಯಾರಿಕೆಯನ್ನು ತಣಿಸುವ ಸಲುವಾಗಿ ಒಬ್ಬ ಕುರುಬನ ಬಳಿ ಹಾಲು ಕೇಳಿದಳಂತೆ. ಈ ಘಟನೆಯ ನೆನಪಿಗಾಗಿ ಇಲ್ಲಿ ಒಂದು ಚಾಪೆಲ್ ಅನ್ನು ನಿರ್ಮಿಸಲಾಯಿತು.
ವೇಲಾಂಕಣ್ಣಿಯನ್ನು "ಪವಾಡಗಳ ನಾಡು" ಎಂದು ಕರೆಯಲಾಗುತ್ತದೆ. ಕಾರಣ ಈ ಪಟ್ಟಣಕ್ಕೆ ಸಂಬಂಧಿಸಿದಂತೆ ಹಲವಾರು ಪವಾಡ ಕಥೆಗಳು ತಳಕು ಹಾಕಿಕೊಂಡಿವೆ. ಅದರಲ್ಲಿ ಒಂದು ಹೀಗಿದೆ: 17ನೇ ಶತಮಾನದಲ್ಲಿ ಒಂದು ಪೋರ್ಚುಗೀಸರ ನೌಕೆಯು ಬಂಗಾಳ ಕೊಲ್ಲಿಯ ಪ್ರಕ್ಷುಬ್ದ ಚಂಡಮಾರುತಕ್ಕೆ ಸಿಲುಕಿತು. ಆಗ ಅದರಲ್ಲಿರುವ ನಾವಿಕರು ತಮ್ಮ ನೌಕೆಯು ಯಾವ ಸ್ಥಳದಲ್ಲಿ ಸುರಕ್ಷಿತವಾಗಿ ದಡಸೇರುತ್ತದೆಯೊ ಅಲ್ಲಿ ಒಂದು ಚಾಪೆಲ್(ಸಣ್ಣ ಗುಡಿ) ನಿರ್ಮಿಸುತ್ತೇವೆ ಎಂದು ಹರಕೆ ಹೊತ್ತರಂತೆ. ಇದರ ಪರಿಣಾಮವಾಗಿ ಚಂಡಮಾರುತ ಶಾಂತವಾಗಿ ನೌಕೆಯು ಸುರಕ್ಷಿತವಾಗಿ ವೇಲಾಂಕಣ್ಣಿಯ ದಡಕ್ಕೆ ಬಂದು ಸೇರಿತಂತೆ. ಅಂದು ಸೆಪ್ಟೆಂಬರ್ 8 ಮೇರಿ ಮಾತೆಯ ಜನ್ಮದಿನವಾಗಿತ್ತು.
ಆಗ ಇಲ್ಲಿ ಇದ್ದ ಚಾಪೆಲನ್ನು ತಮ್ಮ ಹರಕೆಯನ್ನು ತೀರಿಸುವ ದೃಷ್ಟಿಯಿಂದ ಆ ನಾವಿಕರು ಮರು ಅಲಂಕಾರ ಮಾಡಿದರಂತೆ. ಇದು ಕಳೆದು ಐದು ಶತಮಾನಗಳಾಗಿವೆ. ಇದರ ನಡುವೆ ಈ ಪವಾಡವನ್ನು ನೋಡಿ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಮಂದಿ ಇಲ್ಲಿಗೆ ಭೇಟಿಕೊಟ್ಟಿದ್ದಾರೆ. ಈ ಅವಧಿಯಲ್ಲಿ ವೇಲಾಂಕಣ್ಣಿಯ ಚರ್ಚ್ ದೇಶದ ಪ್ರಮುಖ ಯಾತ್ರಾ ಸ್ಥಳಗಳ ಪೈಕಿ ಒಂದಾಗಿ ಸೇರ್ಪಡೆಗೊಂಡಿದೆ.
ಇನ್ನಿತರೆ ಪವಾಡಗಳಲ್ಲಿ ಈ ಎರಡು ಪವಾಡಗಳು ಪ್ರಮುಖವಾಗಿ ಕೇಳಲ್ಪಡುತ್ತವೆ. ಇದರಿಂದ ಮೇರಿಯು ಪರೋಕ್ಷವಾಗಿ ದರ್ಶನ ನೀಡಿರುವುದನ್ನು ನಾವು ಕಂಡುಕೊಳ್ಳಬಹುದು ಎನ್ನಲಾಗುತ್ತದೆ. ಮೊದಲನೆಯದು ಹೀಗಿದೆ: ಒಮ್ಮೆ ಒಬ್ಬ ಹಿಂದೂ ಬಾಲಕನು ಮಡಕೆಯಲ್ಲಿದ್ದ ಹಾಲಿನ ಸ್ವಲ್ಪ ಪಾಲನ್ನು ಮೇರಿಗೆ ಅರ್ಪಿಸಿ ಗ್ರಾಹಕನಿಗೆ ಕೊಟ್ಟಾಗ, ಹಾಲು ಸ್ವಲ್ಪವೂ ಖರ್ಚಾಗದೆ ಹಾಗೆಯೆ ತುಂಬಿತ್ತಂತೆ. ಮತ್ತೊಂದು ಸನ್ನಿವೇಶದಲ್ಲಿ ಮೇರಿ ಮಾತೆಯು ಒಬ್ಬ ದುರ್ಬಲ ಬಾಲಕನು ನೀಡಿದ ಮಜ್ಜಿಗೆಯನ್ನು ಸ್ವೀಕರಿಸಿ ಅವನನ್ನು ಗುಣಪಡಿಸಿದಳಂತೆ.
ದುಃಖ ಮತ್ತು ಭರವಸೆಯ ಕಥೆ: ಸುನಾಮಿಯ ವಿನಾಶಕಾರಿ ಸಂಗತಿಗಳು ಮತ್ತು ಅದರ ನಂತರದ ಕಥೆ.
2004 ರ 26 ನೇ ಡಿಸೆಂಬರ್ ನಲ್ಲಿ ಹಿಂದೂ ಮಹಾಸಾಗರದಲ್ಲಿ ಉಂಟಾದ ಸುನಾಮಿಯು, ಈ ಸುಂದರವಾದ ಪಟ್ಟಣವನ್ನು ವಿನಾಶಮಾಡಿತು. ಇದರಿಂದ ಹಲವಾರು ಪ್ರಾಣ ಹಾನಿಯಾಯಿತು. ಅಲ್ಲದೆ ಇದು ಭಾರತದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿಬಿಟ್ಟಿತು. ಹೀಗೆ ಆದರೂ ವೇಲಾಂಕಣ್ಣಿಯ ಜನರು ಎದೆಗುಂದದೆ ತತ್ ಕ್ಷಣದಿಂದಲೆ ಕಾರ್ಯಪ್ರವೃತ್ತರಾಗಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಆದ ಆಸ್ತಿ ಪಾಸ್ತಿಯನ್ನು ಸರಿಪಡಿಸುವ ಮತ್ತು ಸಹಜ ಸ್ಥಿತಿಗೆ ತರುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇಂದು ಈ ವಿನಾಶದ ಕುರುಹುಗಳನ್ನು ನೀವು ಈ ಊರಿನ ಸಿಡಿ ಅಂಗಡಿಗಳಲ್ಲಿ ಮಾರುವ ವೀಡಿಯೋಗಳಲ್ಲಿ ಮಾತ್ರ ನೋಡಬಹುದು. ಅಷ್ಟರ ಮಟ್ಟಿಗೆ ವೇಲಾಂಕಣ್ಣಿಯನ್ನು ಮರು ನಿರ್ಮಾಣ ಮಾಡಲಾಗಿದೆ.
ವೇಲಾಂಕಣ್ಣಿಯಲ್ಲಿ ನೋಡಲು ಹಲವಾರು ಸ್ಥಳಗಳಿವೆ; ಅವುಗಳಲ್ಲಿ ವೇಲಾಂಕಣ್ಣಿ ಬೆಸಿಲಿಕಾ, ಕಾಣಿಕೆಗಳ ವಸ್ತು ಸಂಗ್ರಹಾಲಯ, ಚರ್ಚಿನ ಡಿಪೋ ಮತ್ತು ವೇಲಾಂಕಣ್ಣಿ ಬೀಚ್ಗಳು ಸೇರಿವೆ. ದಿವ್ಯ ದರ್ಶನದ ನೀರಿನ ಚಿಲುಮೆ, ಪವಿತ್ರ ಪಥ ಮತ್ತು ಲೇಡಿ’ಸ್ ಟ್ಯಾಂಕ್ ಚರ್ಚ್ ಸಹ ಪ್ರವಾಸಿಗರ ಆಕರ್ಷಣೆಗಳಲ್ಲಿ ಸೇರಿವೆ. ಈ ಪಟ್ಟಣದಲ್ಲಿ ಎಟಿಎಂ, ಹೋಟೆಲ್, ಹೋಮ್ - ಸ್ಟೇಗಳು ಮತ್ತು ರೈಲು ನಿಲ್ದಾಣಗಳಂತಹ ಎಲ್ಲಾ ಆಧುನಿಕ ಸೌಲಭ್ಯಗಳು ದೊರೆಯುತ್ತವೆ. ಚರ್ಚಿನ ಡಿಪೋದಲ್ಲಿ ನಿಮಗೆ ಬೇಕಾದ ಧಾರ್ಮಿಕ ಸಾಮಾಗ್ರಿ ಮತ್ತು ಕರ ಕುಶಲ ವಸ್ತುಗಳನ್ನು ಕೊಂಡುಕೊಳ್ಳಬಹುದು. ಇದಕ್ಕಾಗಿ ಇಲ್ಲಿ ಒಂದು ಮಾಹಿತಿ ಕೌಂಟರ್ ಸಹ ಇದ್ದು, ನೀವು ಅದರ ಪ್ರಯೋಜನವನ್ನು ಪಡೆಯಬಹುದು. ಇಲ್ಲಿ ನಿಮಗೆ ವೇಲಾಂಕಣ್ಣಿಯ ಜನಪದ ಮತ್ತು ಸಾಮಾನ್ಯ ಮಾಹಿತಿಗಳು ಎಲ್ಲವು ಲಭ್ಯವಾಗುತ್ತವೆ.