ಚಿಂತಪುರಣಿ ದೇವಾಲಯವು ಅತ್ಯಂತ ಪವಿತ್ರ ಧಾರ್ಮಿಕ ಕೇಂದ್ರವಾಗಿದ್ದು, ಸಮುದ್ರ ಮಟ್ಟದಿಂದ 940 ಮೀಟರ್ ಎತ್ತರದಲ್ಲಿ ನೆಲೆಸಿದೆ. ಈ ದೇವಾಲಯವು ಪ್ರಮುಖ ಶಕ್ತಿಪೀಠವಾಗಿ ಹೆಸರು ಗಳಿಸಿದೆ. ಹಿಂದು ದೇವತೆ ಶಕ್ತಿಯ ಆಲಯವಾಗಿರುವ ಈ ದೇಗುಲ ಶ್ರದ್ಧಾಭಕ್ತಿಯ ಕೇಂದ್ರವಾಗಿ ಜನಪ್ರಿಯವಾಗಿದೆ. ಭರ್ವೈನ್ ನಿಂದ ಮೂರು ಕಿ.ಮೀ. ದೂರದಲ್ಲಿ ಈ ದೇಗುಲ ಇದೆ. ಇದು ಚಿಂತಪುರಣಿ ದೇವಿಗೆ ಮುಡಿಪಾಗಿರುವ ದೇಗುಲ.
ಈ ದೇವಾಲಯವನ್ನು ಸ್ಥಾಪಿಸಿದವರು ಸಾರಸ್ವತ ಬ್ರಾಹ್ಮಣರಾದ ಪಂಡಿತ್ ಮಾಯಿ ದಾಸ್ ಎನ್ನುವವರು. ಈ ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ದೇವಿಯ ಮೂಲವಿಗ್ರಹ ಹೊಂದಿರುವ ಗರ್ಭಗುಡಿ. ಉತ್ತರಕ್ಕೆ ಮುಖ್ಯ ಪ್ರವೇಶದ್ವಾರ ಇರುವ ಕಲ್ಲಿನ ಈ ದೇವಾಲಯದ ಪ್ರವೇಶದಲ್ಲಿಯೇ ಹಿಂದು ದೇವರುಗಳಾದ ಗಣೇಶ ಹಾಗೂ ಹನುಮಾನ್ ವಿಗ್ರಹಗಳೂ ಕೂಡ ಇವೆ.
ದೇವಾಲಯದಲ್ಲಿರುವ ಮೂರ್ತಿ ಕಲ್ಲಿನಿಂದ ಕೆತ್ತಿದ ವಿಗ್ರಹ ವಾಗಿದೆ. ಇದನ್ನು ಪಿಂಡಿ ಎಂದು ಕೂಡ ಕರೆಯಲಾಗುತ್ತದೆ. ಈ ಮೂರ್ತಿಯನ್ನು ಬಿಳಿ ಮಾರ್ಬಲ್ ಶಿಲೆಯಿಂದ ಕೆತ್ತಲಾಗಿದೆ. ದೇವಾಲಯದ ಪೂರ್ವ ದ್ವಾರದ ಬಳಿ ಒಂದು ಪ್ರತ್ಯೇಕ ಛಾವಣಿ ಇದ್ದು, ಅಲ್ಲಿ ಹಿಂದೂ ದೇವರಾದ ಭೈರೋನ್ ಹಾಗೂ ಹನುಮಂತನ ಮೂರ್ತಿಗಳಿವೆ. ದೇಗುಲದ ಆವರಣದಲ್ಲಿಯೇ ಅರಳಿಮರ ಕೂಡ ಇದೆ. ಇದರ ಕಟ್ಟೆಯಮೇಲೆಯೇ ಮಕ್ಕಳಿಗೆ ಮೊದಲ ಬಾರಿಗೆ ತಲೆಗೂದಲು ಕತ್ತರಿಸುವ 'ಮುಂಡನ' ಕಾರ್ಯ ನಡೆಯುತ್ತದೆ.
ಚಿಂತಪುರಣಿ ಜಾತ್ರೆ ಅದ್ದೂರಿಯಾಗಿ ನಡೆಯುವ ಉತ್ಸವಗಳಲ್ಲಿ ಒಂದು. ಇದನ್ನು 'ಮಾತಾ ದಾ ಮೇಲಾ' ಎಂದು ಕರೆಯಲಾಗುತ್ತದೆ. ಚಿಂತಪುರಣಿ ಊರಲ್ಲಿ ಪ್ರತಿ ವರ್ಷ ನಡೆಯುವ ಈ ಉತ್ಸವ ಅಥವಾ ಜಾತ್ರೆ ನಡೆಯುವುದು ಹಿಂದೂ ಪಂಚಾಂಗದ ಪ್ರಕಾರವೇ ಆಗಿದ್ದು, ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಜರುಗುತ್ತದೆ. ಇದಲ್ಲದೇ ಸಾವನ್ ಉತ್ಸವ ಜುಲೈ-ಆಗಸ್ಟ್ನಲ್ಲಿ ಮತ್ತು ಅಸಂಜ್ ಹಬ್ಬ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಯುತ್ತದೆ. ಈ ಎಲ್ಲಾ ಉತ್ಸವವು ಇಲ್ಲಿಯೇ ಸಮೀಪದಲ್ಲಿರುವ ದೇವಿ ಭಗವತಿ ಚಿನ್ಮಸ್ತಕ ದೇಗುಲ ಆವರಣದಲ್ಲಿ ನಡೆಯುತ್ತದೆ. ನಂಬಿಕೆಗಳ ಪ್ರಕಾರ, ಹಿಂದಿನ ಕಾಲದಲ್ಲಿ ಈ ದೇವತೆ ಆಧ್ಯಾತ್ಮ ಶಕ್ತಿಯಾಗಿ ಅಪಾರ ಮನ್ನಣೆ ಪಡೆದಿದ್ದಳು. ಈ ದೇವಿಯನ್ನು ಆರಾಧಿಸಲು ಹಮ್ಮಿಕೊಳ್ಳುವ ಜಾತ್ರೆ 9 ದಿನ ನಡೆಯುತ್ತದೆ. ಇದಲ್ಲದೇ ಸಾವನ್ ಹಬ್ಬ ನವರಾತ್ರಿ ಸಂದರ್ಭದಲ್ಲಿ ನಡೆಯುತ್ತದೆ. ಇದು 10 ದಿನಗಳ ಕಾಲ ಆಚರಣೆ ಆಗುತ್ತದೆ.