ಉಜ್ಜಯಿನಿಯ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಚಿಂತಾಮನ್ ಗಣೇಶ ದೇವಾಲಯವೂ ಒಂಡು. ಗಣೇಶನ ಆಶೀರ್ವಾದ ಪಡೆಯುವ ಸಲುವಾಗಿ ಪ್ರತಿದಿನ ಹಲವಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಚಿಂತಾಮನ್ ಎಂದರೆ ಚಿಂತೆಯಿಂದ ದೂರವಿರು ಎಂಬುದಾಗಿ ಅರ್ಥ. ಚಿಂತೆಯಲ್ಲಿ ಬಳಲುತ್ತಿರುವ ಯಾವುದೆ ವ್ಯಕ್ತಿ ಇಲ್ಲಿಗೆ ಭೇಟಿ ನೀಡಿ ಗಣಪನ ದರ್ಶಿಸಿದರೆ ಅವರನ್ನು ಭಗವಂತ ಗಣಪನು ಹರಸಿ, ಚಿಂತೆಯಿಂದ ಮುಕ್ತಿ ಕೊಡುತ್ತಾನೆ ಎಂಬ ಗಾಢವಾದ ನಂಬಿಕೆ ಇಲ್ಲಿಯ ಜನರದ್ದು. ದೇಗುಲವಿರುವ ತಾಣದಲ್ಲಿ ಶಿಪ್ರಾ ನದಿಯು ಹರಿದಿದ್ದು ಪಕ್ಕದಲ್ಲೆ ಫತೇಹ್ಪುರ್ ರೈಲು ಮಾರ್ಗವನ್ನು ಕಾಣಬಹುದು. ಈ ದೇವಾಲಯಕ್ಕೆ ಪ್ರವಾಸಿಗರು ಅಥವಾ ಭಕ್ತರು ರಿಕ್ಷಾ, ಬಸ್ಸುಗಳ ಹೊರತಾಗಿ ರೈಲಿನಿಂದಲೂ ಸುಲಭವಾಗಿ ತಲುಪಬಹುದಾಗಿದೆ. ಉಜ್ಜಯಿನಿ ರೈಲು ನಿಲ್ದಾಣದಿಂದ ಈ ದೇವಾಲಯವು ಕೇವಲ ಐದು ಕಿ.ಮೀ ದೂರದಲ್ಲಿದೆ. ಇಲ್ಲಿನ ಜನರ ಮತ್ತೊಂದು ನಂಬಿಕೆಯೆಂದರೆ ಈ ದೇವಾಲಯದ ಗಣಪನ ವಿಗ್ರಹ ಸ್ವಯಂಭು ಎಂದು. ಈ ಗಣಪನ ವಿಗ್ರಹದ ಎರಡೂ ಬದಿಯಲ್ಲಿ ಅವನ ಪತ್ನಿಯರಾದ ರಿದ್ಧಿ ಹಾಗು ಸಿದ್ಧಿಯರ ವಿಗ್ರಹಗಳೂ ಇವೆ.