ಆನೆಗುಡ್ಡೆ ಎಂದರೆ ಆನೆಗಳ ಗುಡ್ಡ ಎಂದರ್ಥ. ಇದನ್ನು ವಿನಾಯಕ ದೇವರ ಭೂಮಿ ಎಂದು ಪರಿಗಣಿಸಲ್ಪಟ್ಟಿದೆ. ಪರಶುರಾಮ ಸೃಷ್ಟಿಯ ಏಳು ಕ್ಷೇತ್ರಗಳಲ್ಲಿ ಇದು ಒಂದು ಎಂಬುದರಿಂದಾಗಿ ಈ ಕ್ಷೇತ್ರವು ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ. ಪರಶುರಾಮರಿಂದಲೇ ಈ ಕ್ಷೇತ್ರವು ನಿರ್ಮಾಣಗೊಂಡಿದೆ ಎಂದು ನಂಬಲಾಗಿದೆ.ಶ್ರೀ ವಿನಾಯಕ ದೇವರ ಮೂರ್ತಿಯು ಮಧ್ಯದಲ್ಲಿದ್ದು, ಬೆಳ್ಳಿಯಿಂದ ಸಿಂಗಾರಗೊಂಡಿದೆ. ಈ ಮೂರ್ತಿಯು ನಿಂತಿರುವ ಸ್ಥಿತಿಯಲ್ಲಿದೆ. ತುಲಾಭಾರವು ಇಲ್ಲಿನ ಪ್ರಮುಖ ಸಂಗತಿಯಾಗಿದ್ದು, ಒಬ್ಬ ವ್ಯಕ್ತಿಯ ತೂಕಕ್ಕೆ ಸಮನಾದ ಸಾಮಗ್ರಿಗಳನ್ನು ಹರಕೆ ಮಾಡಿಕೊಳ್ಳುವ ಸಂಪ್ರದಾಯ ಇಲ್ಲಿದೆ. ದೇವಸ್ಥಾನದ ಸುತ್ತಲೂ ಭಾರ್ಗವ ಪುರಾಣದ ಉಕ್ತಿಗಳನ್ನು ಕೆತ್ತಲಾಗಿದೆ.ಕುಂದಾಪುರದಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಕುಂಭಾಶಿಯಲ್ಲಿ ಈ ದೇವಸ್ಥಾನವಿದೆ ಮತ್ತು ಮಂಗಳೂರಿನಿಂದ ಸುಮಾರು 100 ಕಿ.ಮೀ ದೂರವಿದೆ. ಕ್ಷೇತ್ರವು ಎನ್ಎಚ್ 17ರಲ್ಲೇ ಇದೆ. ಮಂಗಳೂರು, ಉಡುಪಿ, ಮತ್ತು ಕುಂದಾಪುರದಿಂದ ನಿರಂತರ ಬಸ್ ಸೇವೆ ಲಭ್ಯವಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು.