ಒಡಿಶಾದಲ್ಲಿನ ಬೌದ್ಧ ಸಂಕೀರ್ಣವು ಲಲಿತಗಿರಿ, ರತ್ನಗಿರಿ, ಉದಯಗಿರಿ ಮತ್ತು ಧೌಲಿಗಿರಿಗಳಲ್ಲಿದೆ. ಇವುಗಳಲ್ಲಿ ಉದಯಗಿರಿಯಿಂದ 14 ಕಿಮೀ ದೂರದಲ್ಲಿರುವ ಧೌಲಿಗಿರಿಯು ಮುಖ್ಯವಾದುದು. ಈ ಪ್ರದೇಶದಲ್ಲೇ ಪ್ರಸಿದ್ಧವಾದ ಕಳಿಂಗ ಯುದ್ಧ ನಡೆದದ್ದು ಮತ್ತು ಇಲ್ಲೇ ಸಾಮ್ರಾಟ ಅಶೋಕನು ಬದುಕಿನ ಸತ್ಯದ ಹುಡುಕಾಟಕ್ಕಾಗಿ ಬೌದ್ಧಧರ್ಮವನ್ನು ಸ್ವೀಕರಿಸಿದನು.
ಹಲವು ಶಾಸನಗಳು, ಕಲ್ಲು ಕೆತ್ತನೆಗಳು, ಸ್ತೂಪಗಳು ಮತ್ತು ಬುದ್ಧನ ವಿಗ್ರಹಗಳು ಇಲ್ಲಿವೆ. ಇವು ಅಶೋಕನಿಗಿದ್ದ ಬೌದ್ಧಧರ್ಮದ ಕಡೆಗಿದ್ದ ತೀವ್ರ ಒಲವನ್ನು ಸೂಚಿಸುತ್ತದೆ. ಇಲ್ಲಿ ಹಲವು ಚೈತ್ಯಗಳು ಮತ್ತು ಕಂಭಗಳನ್ನು ಸಹ ಕಾಣಬಹುದು. ಇಲ್ಲಿರುವ ‘ಶಾಂತಿ ಸ್ತೂಪ’ವನ್ನು 1970ರಲ್ಲಿ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಇಂದು ಇಲ್ಲಿಗೆ ಪ್ರತಿವರ್ಷ ಹಲವು ಬೌದ್ಧ ಯಾತ್ರಿಗಳು ಭೇಟಿ ನೀಡುತ್ತಾರೆ. ಸ್ತೂಪದೊಳಗೆ ಹಲವು ಬುದ್ಧ ಪ್ರತಿಮೆಗಳನ್ನು ಮಾಡಿಡಲಾಗಿದೆ. ಬೆಟ್ಟದ ಮೇಲೆ ಒಂದು ಶಿವನ ದೇವಾಲಯ ಸಹ ಇದ್ದು ಇಲ್ಲಿ ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.