ವಾರದ ರಜೆ ಸಮೀಪಿಸುತ್ತಿದ್ದಂತೆ ಮನಸ್ಸು ಚಟಪಡಿಸಲು ಪ್ರಾರಂಭಿಸುತ್ತದೆ. ಅಯ್ಯೋ! ರಜೆಯಲ್ಲಿ ಎಲ್ಲಿಗೆ ಹೋಗುವುದು? ಎನ್ನುವ ಪ್ರಶ್ನೆ ಪದೇ ಪದೇ ಕಾಡುತ್ತದೆ. ಈ ಪ್ರಶ್ನೆಗೆ ಉತ್ತರ ನಾನ್ ಹೇಳ್ತೀನಿ. ಅರೇ! ಅದೆಲ್ಲಿ ಅಂತೀರಾ? ಮೊದಲು ನೀವು ಬ್ಯಾಗ್ ರೆಡಿಮಾಡ್ಕೊಳ್ಳಿ...
ಬೆಂಗಳೂರಿನಿಂದ ಕೇವಲ 243 ಕಿ.ಮೀ. ದೂರದಲ್ಲಿರುವ ಕೂರ್ಗ್ ರಸ್ತೆಮಾರ್ಗದ ಪ್ರವಾಸ ಕೈಗೊಂಡರೆ, ಸುಂದರವಾದ ಸ್ಥಳಗಳನ್ನು ನೋಡುತ್ತಾ ಸಾಗಬಹುದು.
ನಿಮ್ಮ ಮಾರ್ಗ ಸೂಚಿ ಪ್ರವಾಸ ತಾಣಗಳು
ಬೆಂಗಳೂರು-ಮೈಸೂರು-ನಂಜನಗೂಡು-ಮಡಿಕೇರಿ-ವಿರಾಜಪೇಟೆ-ಕುಶಾಲ್ನಗರ-ದುಬಾರೆ-ಬೆಂಗಳೂರು
ಕೂರ್ಗ್ನಲ್ಲಿ ಉತ್ತಮ ವ್ಯವಸ್ಥೆ ಹಾಗೂ ಸುಂದರ ಪರಿಸರದ ಮಧ್ಯದಲ್ಲಿರುವ ಹೋಮ್ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ರೂಮ್ಗಳು ಸಿಗುವುದರಿಂದ ಒಂದು ವಾರ ಮೊದಲೇ ರೂಮ್ ಬುಕ್ ಮಾಡಿಕೊಂಡರೆ ಅನುಕೂಲ. ಕೂರ್ಗ್ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದರಿಂದ ಪೂರ್ವತಯಾರಿ ಹೊಂದಿರಬೇಕು. ಕೂರ್ಗ್ಗೆ ಹೋಗುವ ದಾರಿಯಲ್ಲೇ ಸಿಗುವ ಪ್ರದೇಶಗಳನ್ನು ನೋಡುತ್ತಾ ಸಾಗಿದರೆ ಪ್ರವಾಸದ ಖುಷಿ ಇಮ್ಮಡಿಯಾಗುತ್ತದೆ.
ಮೈಸೂರು ಅರಮನೆ
ಬೆಂಗಳೂರಿನಿಂದ ಕೂರ್ಗ್ ಪ್ರಯಾಣ ಆರಂಭದಲ್ಲಿ ಸಿಗುವುದು ಮೈಸೂರು ಅರಮನೆ. ಮೈಸೂರಿನ ಅರಮನೆಗಳಲ್ಲಿ ಬಹು ಮುಖ್ಯವಾದುದ್ದು ಅಂಬಾ ವಿಲಾಸ್ ಅರಮನೆ. ಇದು ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿತ್ತು. ಮೈಸೂರಿನ ಪ್ರಮುಖ ಆಕರ್ಷಣಾ ಸ್ಥಳ. ಇಂಡೋ-ಸರಾಸೆನಿಕ್ ಶೈಲಿಯ ವಾಸ್ತು ಶಿಲ್ಪವನ್ನು ಒಳಗೊಂಡ ಈ ಅರಮನೆಯನ್ನು ನೋಡುವುದೇ ಒಂದು ಚೆಂದ. ಮೂರು ಮಹಡಿಯನ್ನು ಹೊಂದಿರುವ ಈ ಅರಮನೆಯಲ್ಲಿ ಕೆಂಪು ಅಮೃತಶಿಲೆಯ ಕಂಬಗಳಿವೆ. 145 ಅಡಿ ಎತ್ತರದ ಐದು ಮಹಡಿಯ ಗೋಪುರಗಳಿವೆ. ಸುತ್ತಲೂ ವಿಶಾಲವಾದ ಉದ್ಯಾನವನ ಇರುವುದರಿಂದ ಇದೊಂದು ಬಂಗಾರದ ಗುಡಿಯಂತೆ ಕಾಣುತ್ತದೆ.
PC: wikipedia.org
ಜಗನ್ಮೋಹನ್ ಅರಮನೆ
ಪುರಾತನ ಕಾಲದ ಕಟ್ಟಡಗಳಲ್ಲಿ ಜಗನ್ಮೋಹನ್ ಅರಮನೆಯೂ ಒಂದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಧೀನದಲ್ಲಿತ್ತು. ಈಗ ವಿಶೇಷ ಸಂದರ್ಭಗಳಲ್ಲಿ ಸಂಗೀತ, ನಾಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಇಲ್ಲಿ ಮೈಸೂರು ಅರಸರ ಕಾಲದ ವಿವಿಧ ಕಲಾಕೃತಿ ಹಾಗೂ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ನಂಜುಂಡೇಶ್ವರ ದೇಗುಲ
ಬಹಳ ಪುರಾತನ ಕಾಲದ ಈ ದೇಗುಲ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಬರುತ್ತದೆ. ಕಪಿಲಾ ನದಿಯ ದಡದಲ್ಲಿರುವ ಈ ದೇಗುಲದಲ್ಲಿ ಈಶ್ವರನನ್ನು ಆರಾಧಿಸಲಾಗುತ್ತದೆ. ಬಹಳ ಆಕರ್ಷಕ ಹಾಗೂ ಪವಿತ್ರ ಕ್ಷೇತ್ರವಿದು.
PC: wikipedia.org
ಚೆಲ್ವಾರ ಜಲಪಾತ
ಕೂರ್ಗ್ನಲ್ಲಿರುವ ಸುಂದರ ಜಲಪಾತಗಳಲ್ಲಿ ಚೆಲ್ವಾರ ಜಲಪಾತವೂ ಒಂದು. ಹಸಿರು ಸಿರಿಯ ಮಧ್ಯೆ ಧುಮುಕುವ ಈ ಜಲಪಾತ ಕಾವೇರಿ ನದಿಯಿಂದ ಹುಟ್ಟಿಕೊಂಡಿದೆ. ಜಲಪಾತದ ನೀರು ಬೀಳುವ ಸ್ಥಳವು ಬಹಳ ಆಳವಾಗಿದ್ದುದ್ದರಿಂದ ನೀರಿನಲ್ಲಿ ಇಳಿಯುವ ಸಾಹಸ ತರವಲ್ಲ.
PC: wikimedia.org
ನಿಸರ್ಗಧಾಮ ದ್ವೀಪ
ಕುಶಾಲನಗರದಲ್ಲಿ ಇರುವ ಈ ಧಾಮಕ್ಕೆ 'ಕಾವೇರಿ ನಿಸರ್ಗ ಧಾಮ' ಎಂದು ಕರೆಯುತ್ತಾರೆ. 64 ಎಕರೆ ಪ್ರದೇಶಗಳಿಂದ ಆವೃತ್ತಗೊಂಡಿದ್ದು, ಇದರೊಳಗೆ ಹೊಳೆ ಹಾಗೂ ತೂಗು ಸೇತುವೆ ಇರುವುದನ್ನು ಕಾಣಬಹುದು. ದಟ್ಟವಾದ ಬಿದಿರುಗಳ ಹಿಂಡು, ಶ್ರೀಗಂಧದ ಮರ, ಮೊಲ, ಜಿಂಕೆ, ನವಿಲುಗಳು ವಾಸವಾಗಿರುವುದನ್ನು ಕಾಣಬಹುದು.
PC: wikimedia.org
ಗೋಲ್ಡನ್ ಟೆಂಪಲ್
ಕುಶಾಲನಗರದ ಆವೃತ್ತಿಯಲ್ಲಿ ಬರುವ ಈ ಬೌದ್ಧರ ದೇಗುಲ ಪ್ರವಾಸಿಗರಿಗೊಂದು ಆಕರ್ಷಣಾ ಕೇಂದ್ರ. ಟಿಬೆಟ್ ಶೈಲಿಯ ವಾಸ್ತು ಶಿಲ್ಪದಲ್ಲಿಯೇ ನಿರ್ಮಾಣಗೊಂಡ ಈ ದೇಗುಲದಲ್ಲಿ 40 ಅಡಿ ಎತ್ತರದ ಸುವರ್ಣ ಲೇಪಿತ ಬುದ್ಧನ ವಿಗ್ರಹವನ್ನು ಕಾಣಬಹುದು.
PC: wikipedia.org
ಹಾರಂಗಿ ಅಣೆಕಟ್ಟು
ಕಾವೇರಿ ನದಿಗೆ ಕಟ್ಟಲಾದ ಮೊದಲ ಅಣೆಕಟ್ಟು ಹಾರಂಗಿ ಅಣೆಕಟ್ಟು. ಕುಶಾಲ ನಗರದಿಂದ 9 ಕಿ.ಮೀ. ದೂರದಲ್ಲಿರುವ ಈ ಅಣೆಕಟ್ಟು ಪುಷ್ಪಗಿರಿ ಬೆಟ್ಟಗಳ ಮಡಿಲಲ್ಲಿ ಬರುತ್ತದೆ.
PC: wikipedia.org
ದುಬಾರೆ ಆನೆ ಶಿಬಿರ
ಕುಶಾಲ ನಗರದ ಬಳಿಯಲ್ಲೇ ಬರುವ ದುಬಾರೆ ಆನೆಗಳ ಶಿಬಿರ ಒಂದು ಪ್ರಮುಖ ಪ್ರವಾಸಿ ತಾಣ. ಕಾವೇರಿ ನದಿಯು ಈ ಕಾಡಿನ ಮಾರ್ಗದಲ್ಲೇ ಹರಿಯುವುದರಿಂದ ಇಲ್ಲಿ ಅನೇಕ ಜಲಕ್ರೀಡೆಗಳನ್ನು ಆಡಬಹುದು. ಅಲ್ಲದೆ ಆನೆ ಸವಾರಿಗೂ ಅವಕಾಶವಿದೆ. ಪ್ರತಿ ದಿನ ಮುಂಜಾನೆ 8 ರಿಂದ 5.30ರ ವರೆಗೆ ಸವಾರಿ ಸಮಯ ನಿಗದಿಸಲಾಗಿದೆ.
PC: wikimedia.org