ಮನಸ್ಸಿಗೆ ದುಃಖವಾದಾಗ ಅಥವಾ ಖುಷಿಯಾದಾಗ ದೇವರ ಸನ್ನಿಧಿಗೆ ಒಮ್ಮೆ ಹೋಗಬೇಕು ಅನಿಸುತ್ತದೆ. ದೇವರ ಸಮ್ಮುಖದಲ್ಲಿ ನಮ್ಮ ಅಳಲನ್ನು ಹೇಳಿಕೊಂಡರೆ ಮನಸ್ಸಿಗೆ ಅದೇನೋ ಒಂದು ಬಗೆಯ ನಿರಾಳ ಭಾವ. ಮನಸ್ಸಿನ ಒತ್ತಡಗಳು ಹೆಚ್ಚಾದಾಗ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಆಗ ಆಗುವ ಸಮಾಧನವೇ ಬೇರೆ. ಕಷ್ಟಗಳನ್ನು ಪರಿಹರಿಸಿ ಸುಖ ನೀಡುವ ಪುಣ್ಯ ಕ್ಷೇತ್ರಗಳಲ್ಲಿ ಕೋಲಾರದ ಚಿಕ್ಕ ತಿರುಪತಿ ದೇಗುಲವೂ ಒಂದು.
ಬೆಂಗಳೂರಿನಿಂದ 36.8 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರಕ್ಕೆ 1.30 ತಾಸುಗಳ ಕಾಲ ಪ್ರಯಾಣ ಮಾಡಬೇಕು. ವಾರದ ರಜೆಯಲ್ಲಿ ಪ್ರವಾಸ ಬೆಳೆಸಲು ಸೂಕ್ತ ಸ್ಥಳ. ಕೋಲಾರ, ಮಾಲೂರು ಹಾಗೂ ಬೆಂಗಳೂರಿನಿಂದ ಹೋಗಲು ನೇರ ಬಸ್ ಸೌಲಭ್ಯಗಳಿವೆ.
ಕೋಲಾರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
PC: wikipedia.org
ಗುಡಿಯ ಹಿನ್ನೆಲೆ
ನಾಲ್ಕು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲವನ್ನು ಅಗ್ನಿ ದೇವನು ಪ್ರತಿಷ್ಠಾಪಿಸಿದ ಎನ್ನಲಾಗುತ್ತದೆ. ಪುರಾಣಗಳ ಇತಿಹಾಸ ಹೊಂದಿದೆ. ಚೋಳರ ಕಾಲದಲ್ಲಿ ಈ ದೇಗುಲದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಯಿತು ಎನ್ನಲಾಗುತ್ತದೆ.
ದೇಗುಲದ ವಿಶೇಷ
ದಕ್ಷಿಣ ಭಾರತದಲ್ಲಿರುವ ಏಳು ತಿರುಪತಿ ದೇವಸ್ಥಾನಗಳಲ್ಲಿ ಇದೂ ಒಂದು. ಇಲ್ಲಿ ಮೂರು ವರೆ ಅಡಿ ಎತ್ತರದ ಕೃಷ್ಣ ಶಿಲೆಯ ವಿಗ್ರಹ ಮನಮೋಹಕವಾಗಿದೆ. ಶ್ರೀದೇವಿ ಹಾಗೂ ಭೂದೇವಿ ಸಹಿತನಾಗಿರುವ ಶ್ರೀನಿವಾಸ ಅಭಯ ಮುದ್ರೆಯಲ್ಲಿರುವುದು ವಿಶೇಷ. ತಿರುಪತಿ ತಿಮ್ಮಪ್ಪನಿಗೆ ನಡೆಯುವಂತೆಯೇ ರಥೋತ್ಸವ, ಬ್ರಹ್ಮೋತ್ಸವ, ಕಲ್ಯಾಣೋತ್ಸವಗಳು ನಡೆಯುತ್ತವೆ. ದೇಗುಲದ ಮುಂಭಾಗದಲ್ಲಿ ಧ್ವಜ ಸ್ತಂಭ, ಗರುಡ ಮಂಟಪ, ಗರ್ಭಗುಡಿ ಹಾಗೂ ಸುಂದರವಾದ ವಾಸ್ತು ಶಿಲ್ಪವನ್ನು ಹೊಂದಿದೆ.
PC: wikipedia.org
ಹತ್ತಿರದ ಆಕರ್ಷಣೆ
ಈ ಕ್ಷೇತ್ರಕ್ಕೆ ಹತ್ತಿರವಾಗಿ ಮುಳುಬಾಗಿಲು, ಕೋಟಿ ಲಿಂಗೇಶ್ವರ, ಬಂಗಾರ ತಿರುಪತಿ, ಮಾರ್ಕಂಡೇಶ್ವರ ಸ್ವಾಮಿ ಬೆಟ್ಟ, ಆವನಿ ಬೆಟ್ಟ, ಕುರುಡುಮಲೆ ಹಾಗೂ ಅಂತರಗಂಗೆ ಕ್ಷೇತ್ರವಿದೆ.