ಹಿಂದು ಪೌರಾಣಿಕ ಕಥೆಗಳಲ್ಲಿ ಅನೇಕ ರೋಚಕ ವಿಷಯಗಳಿವೆ, ಅಂಶಗಳಿವೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಅಂತಹ ಒಂದು ಪ್ರಸಂಗದ ಅನ್ವಯ ಶಿವನ ಮಡದಿಯಾದ ಪಾರ್ವತಿ ದೇವಿಯು ವಿಷ್ಣುವಿನ ಸಹೋದರಿಯಾಗುವ ಪ್ರಸಂಗವಿದೆ. ಪಾರ್ವತಿಯ ಆ ಅವತಾರವನ್ನು ತ್ರಿಪುರ ಸುಂದರಿಯಾಗಿ ಆರಾಧಿಸಲಾಗುತ್ತದೆ.
ಈಶಾನ್ಯ ಭಾರತದ ರಾಜ್ಯಗಳಲ್ಲೊಂದಾದ ತ್ರಿಪುರಾ ರಾಜ್ಯಕ್ಕೆ ಹೆಸರುವ ಈ ತ್ರಿಪುರ ಸುಂದರಿ ದೇವಿಯಿಂದಲೆ ಬಂದಿದೆ ಎನ್ನಲಾಗಿದೆ. ಈ ನಾಡಿನ ಮೂರು ಮುಖ್ಯ ನಗರಗಳ ಅತಿ ಸುಂದರಿ ದೇವಿಯಾಗಿ ತ್ರಿಪುರ ಸುಂದರಿಯ ಜನ್ಮವಾಯಿತೆಂದು ನಂಬಲಾಗುತ್ತದೆ. ಹಾಗಾಗಿ ತ್ರಿಪುರಾದಲ್ಲಿ ಬಲು ಪ್ರಸಿದ್ಧವಾದ ತ್ರಿಪುರ ಸುಂದರಿಯ ದೇವಾಲಯವನ್ನು ಕಾಣಬಹುದು.
ಚಿತ್ರಕೃಪೆ: Arjunkrishna90
ಪ್ರತಿ ದೀಪಾವಳಿಯ ಸಂದರ್ಭದಲ್ಲಿ ಇಲ್ಲಿರುವ ತ್ರಿಪುರ ಸುಂದರಿ ದೇವಾಲಯದಲ್ಲಿ ಅದ್ದೂರಿಯಾದ ಉತ್ಸವ ನಡೆಯುತ್ತದೆ. ಈ ಉತ್ಸವಕ್ಕೆ ತ್ರಿಪುರಾ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಿಯನ್ನು ಮಾತಾಬರಿ ದೇವಿ ಎಂದೆ ಜನಪ್ರೀಯವಾಗಿ ಕರೆಯಲಾಗುತ್ತದೆ.
ದಂತಕಥೆಯ ಪ್ರಕಾರ, ಇದು 51 ಶಕ್ತಿಪೀಠಗಲಲ್ಲಿ ಒಂದಾಗಿದೆ. ಅಂದರೆ ಸತಿಯ ಮೃತ ಶರಿರವನ್ನು ಕೈಯಲ್ಲಿ ಹಿಡಿದುಕೊಂಡು ಶಿವನು ಕೋಪ, ಹತಾಶೆ ಹಾಗೂ ದುಖದಿಂದ ನರ್ತಿಸುತ್ತಿದ್ದಾಗ ವಿಷ್ಣು ಬಿಟ್ಟ ಸುದರ್ಶನ ಚಕ್ರವು ಸತಿಯ ದೇಹದ ವಿವಿಧ ಭಾಗಗಳನ್ನು ಕತ್ತರಿಸುತ್ತದೆ. ಹೀಗೆ ಕತ್ತರಿಸಲ್ಪಟ್ಟ ದೇಹದ ಭಾಗಗಳು ಎಲ್ಲೆಲ್ಲಿ ಬಿದ್ದವೊ ಅವು ಶಕ್ತಿಪೀಠಗಳಾಗಿವೆ. ಅದರಂತೆ ಇಲ್ಲಿ ಸತಿಯ ಬಲಗಾಲು ಬಿದ್ದಿತ್ತೆನ್ನಲಾಗಿದೆ.
ಚಿತ್ರಕೃಪೆ: Bodhisattwa
ಕ್ರಿ.ಶ.1501 ರಲ್ಲಿ ತ್ರಿಪುರಾ ಪ್ರಾಂತವಾಳುತ್ತಿದ್ದ ಧನ್ಯ ಮಾಣಿಕ್ಯ ದೇವ ಮಹಾರಾಜನಿಂದ ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ತ್ರಿಪುರ ಸುಂದರಿಯ ದೇವಾಲಯ ನಿರ್ಮಾಣವಾಗಿದೆ. ಇದರ ನಿರ್ಮಾಣದ ಹಿಂದೆಯು ಒಂದು ಕಥೆಯಿದೆ. ಮೂಲತಃ ಈ ದೇವಾಲಯವಿದ್ದ ಸ್ಥಳವು ವಿಷ್ಣುವಿನ ಮಂದಿರವಾಗಿತ್ತು. ಆದರೆ ಒಂದೊಮ್ಮೆ ರಾಜನ ಕನಸಿನಲಿ ಬಂದ ಶಕ್ತಿ ದೇವಿಯು ಈ ದೇವಾಲಯದ ನಿರ್ಮಾಣದ ಆದೇಶ ನೀಡಿದಳು.
ಮರುದಿನ ಎದ್ದ ರಾಜ, ಹೇಗೆ ವಿಷ್ಣುವಿನ ಜೊತೆ ಶಿವನ ಮಡದಿಯನ್ನು ಪ್ರತಿಷ್ಠಾಪಿಸುವುದು ಎಂಬ ಗೊಂದಲಕ್ಕಿಡಾದನು. ಆದರೆ ಆ ದಿನ ಮತ್ತೆ ರಾತ್ರಿ ಮತ್ತೆ ಅವನ ಕನಸಿನಲ್ಲಿ ದೇವಿಯು ವಿಗ್ರಹ ಪ್ರತಿಷ್ಠಾಪನೆಯ ಕುರಿತು ಒತ್ತಡ ಹೇರಿದಳು. ಇನ್ನೂ ಇದು ದೈವ ಸಂಯೋಗವೆ ಆಗಿರಬೇಕೆಂದು ತಿಳಿದು ರಾಜನು ತ್ರಿಪುರಸುಂದರಿಯನ್ನು ಇಲ್ಲಿ ಪ್ರತಿಷ್ಠಾಪಿಸಿದನು.
ಚಿತ್ರಕೃಪೆ: Bodhisattwa
ಶಿವನು ತನ್ನ ಸತಿಯನ್ನು ಕಳೆದುಕೊಂಡ ನಂತರ ಧ್ಯಾನದಲ್ಲಿ ಮುಳುಗಿದನು. ಶಿವನು ಮತ್ತೆ ಮೊದಲಿನಂತಾಗಿ ಪಾರ್ವತಿಯನ್ನು ವರಿಸಿ ಮಗನನ್ನು ಪಡೆದು ಆ ಪುತ್ರನಿಂದ ತಾರಕಾಸುರನ ವಧೆಯಾಗಬೇಕಿದ್ದುದದ್ರಿಂದ ಮನ್ಮಥನು ಕಾಮ ಬಾಣದಿಂದ ಶಿವನ ಧ್ಯಾನ ಕೆಡಿಸಿದನು. ಇದರಿಂದ ಕುಪಿತನಾದ ಶಿವ ಮನ್ಮಥನನ್ನು ಮೂರನೇಯ ಕಣ್ಣು ತೆರೆದು ಭಸ್ಮವನ್ನಾಗಿಸಿದನು.
ನಂತರ ರತಿಯು ಶಿವನನ್ನು ಕುರಿತು ಪರಿ ಪರಿಯಾಗಿ ಪ್ರಾರ್ಥಿಸಿದಾಗ ಶಿವನು ಆ ಭಸ್ಮವನ್ನೊಮ್ಮೆ ನೋಡಿದ ಅಷ್ಟೆ, ಅಲ್ಲಿಗೆ ಭಂಡಾಸುರನೆಂಬ ಅಸುರನು ಹುಟ್ಟಿ ಸರ್ವ ಲೋಕವನ್ನೆ ನಪುಂಸಕತ್ವಗೊಳಿಸಿದನು ಹಾಗೂ ದೇವತೆಗಳನ್ನು ಪೀಡಿಸಲಾರಂಭಿಸಿದನು. ದೇವತೆಗಳು ಇದರಿಂದ ಬೇಸತ್ತು ತ್ರಿಮೂರ್ತಿಗಳ ಹಗೂ ನಾರದನ ಮೊರೆ ಹೋದರು.
ದೇವಾಲಯ ಆವರಣದ ಕಲ್ಯಾಣ ಸಾಗರ ಕಲ್ಯಾಣಿ, ಚಿತ್ರಕೃಪೆ: Scorpian ad
ಅದಕ್ಕನುಸಾರವಾಗಿ ನಿರಾಕಾರವಾದ ಸತ್ ಚಿತ್ ಆನಂದವನ್ನು ಪ್ರಾರ್ಥಿಸಿದರು. ಆ ಮೂರು ಅಂಶಗಳನೊಳಗೊಂಡ ಲಲಿತ ತ್ರಿಪುರಸುಂದರಿಯ ಅವತಾರವಾಗಿ, ಇತ್ತ ಶಿವ ಕಾಮೇಶ್ವರನಾಗಿ ಲೋಕವನ್ನು ರಕ್ಷಿಸುವ ಕಾರ್ಯ ಕೈಗೊಡರು. ಅದಕ್ಕೆಂದು ದೊಡ್ಡ ಯಜ್ಞ ಮಾಡಲಾಗಿ ಅದರಲ್ಲಿ ದೇವತೆಗಳು ಹಾಗೂ ತ್ರಿಮೂರ್ತಿಗಳನ್ನು ಹಿಡಿದು ಸರ್ವ ಲೋಕವನ್ನೆ ಯಜ್ಞಕ್ಕೆ ಆಹುತಿಯನ್ನಾಗಿ ನೀಡಲಾಯಿತು.
ಇದರಿಂದ ಲಲಿತ ತ್ರಿಪುರಸುಂದರಿ ಹಾಗೂ ಕಾಮೇಶ್ವರ ಶಿವನು ಪರಮ ದೇವರುಗಳಾಗಿ ತೇಜಸ್ಸು ಪಡೆದು ಮತ್ತೆ ಆಹುತಿಯಾದ ಲೋಕವನ್ನು ಮರುಸೃಷ್ಟಿಸಿದರು. ಈ ಸಂದರ್ಭದಲ್ಲಿ ತ್ರಿಮೂರ್ತಿಗಳು ಹಾಗೂ ಲಕ್ಷ್ಮಿ, ಪಾರ್ವತಿ ಹಾಗೂ ಸರಸ್ವತಿಯರ ಜನ್ಮವೂ ಆಯಿತು. ಇದರ ಫಲವಾಗಿ ಪಾರ್ವತಿಯು ವಿಷ್ಣುವಿನ ಸಹೋದರಿಯಾಗಿಯೂ ಅವತರಿಸಿದಳು.
ಶಂಕರರು ನಮೂದಿಸಿದ 18 ಶಕ್ತಿ ಪೀಠಗಳು
ಹೀಗೆ ಲಲಿತ ತ್ರಿಪುರಸುಂದರಿಯು ಜಗನ್ಮಾತೆಯಾಗಿ ಎಲ್ಲರನ್ನೂ ಮಕ್ಕಳಂತೆ ಸಲಹುವ ದೇವಿಯಾಗಿ ಆರಾಧಿಸಲ್ಪಡುತ್ತಾಳೆ. ಈ ತ್ರಿಪುರ ಸುಂದರಿ ದೇವಿಯ ದೇವಾಲಯವು ತ್ರಿಪುರಾ ರಾಜ್ಯದಲ್ಲಿರುವ ಉದಯಪುರ ಎಂಬ ಪುರಾತನ ಪಟ್ಟಣದಲ್ಲಿದೆ. ಉದಯಪುರವು ರಾಜಧಾನಿ ನಗರ ಅಗರ್ತಲಾದಿಂದ 55 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಇದನ್ನು ಕೂರ್ಮಪೀಠ ಎಂತಲೂ ಕರೆಯುತ್ತಾರೆ.
ವರ್ಷಕ್ಕೊಮ್ಮೆ ದೇವಿಯ ಋತುಸ್ರಾವ ಆಚರಿಸುವ ದೇವಾಲಯ