ಸಾಮಾನ್ಯವಾಗಿ ಬೆಂಗಳೂರಿನ ಜನರಿಗೆ ಬಿಡುವೇ ಇರುವುದಿಲ್ಲ ಕೆಲಸದ ಒತ್ತಡಗಳಿಂದ ಯವಾಗಲು ಬ್ಯುಸಿ ವಾರಂತ್ಯದಲ್ಲಾದರೂ ಕುಟುಂಬದವರೊಡನೆ ಒಂದು ದಿನದ ಮಟ್ಟಿಗೆ ಪ್ರವಾಸಕ್ಕೆ ಹೋಗಬೇಕು ಅನಿಸಿದರೆ ತಡಮಾಡದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಕೈವಾರಕ್ಕೆ ತೆರಳಿ. ಕೈವಾರ ಬೆಂಗಳೂರಿನಿಂದ ಕೇವಲ 61ಕಿ.ಮಿ ದೂರದಲ್ಲಿದೆ. ಕೈವಾರ ಒಂದು ಚಿಕ್ಕ ಹಳ್ಳಿ ಈ ಹಳ್ಳಿಯಲ್ಲಿ ಹಲವಾರು ಪ್ರವಾಸಿತಾಣಗಳಿವೆ ಅವೆಲ್ಲಾ ಒಂದೇ ದಿನದಲ್ಲಿ ಕಣ್ಣಾರೆಕಂಡು ಆನಂದಿಸಬಹುದು.
ಕೈವಾರ ಎಂದ ಕೂಡಲೇ ನಮ್ಮಗೆ ತಟ್ಟನೆ ಹೊಳೆಯುವುದು ಕೈವಾರ ತಾತಯ್ಯ. ಹೌದು ಕೈವಾರ ತಾತಯ್ಯ ಇಲ್ಲಿನ ಪ್ರಖ್ಯಾತವಾದ ಕನ್ನಡ ಹಾಗೂ ತೆಲುಗಿನ ದ್ವಿಭಾಷ ಕವಿಯಾಗಿದ್ದರು. ಕೈವಾರ ತಾತಯ್ಯ ಹಲವಾರು ಕೀರ್ತನೆಗಳು, ಅಮರನಾರಾಯಣ ಶತಕಗಳು ಭವಿಷ್ಯಕಾಲವನ್ನು ಸಹಾ ರಚಿಸುತ್ತಿದ್ದವರಾಗಿದ್ದರು. ಇಲ್ಲಿನ ಆಶ್ರಮವಂತೂ ರಮಣೀಯವಾಗಿ ಕಂಗೊಳಿಸುತ್ತಿದ್ದು ಭಕ್ತರಿಗೆ ನಿಶ್ಯಬ್ದವಾದ ವಾತಾವರಣದಿಂದಾಗಿ ಭಕ್ತಿಯು ಮತ್ತಷ್ಟು ಆವರಿಸುವಂತೆ ಮಾಡುತ್ತದೆ. ಹೀಗಾಗಿ ಕೈವಾರ ಪ್ರಮುಖ ತೀರ್ಥಯಾತ್ರೆ ಹಾಗೂ ಪ್ರವಾಸ ತಾಣವಾಗಿ ಮಾರ್ಪಟಾಗಿದೆ.
ಈ ಕೈವಾರಕ್ಕೆ ಒಂದು ಇತಿಹಾಸವಿದೆ. ಈ ಸ್ಥಳವನ್ನು ದ್ವಾಪರಯುಗದಲ್ಲಿ ಏಕಚಕ್ರವುರು ಎಂದು ಕರೆಯಲಾಗುತ್ತಿತ್ತು. ಆಶ್ಚರ್ಯವೆನೆಂದರೆ ಮಹಾಭಾರತದ ಪಾಂಡವರ ವನವಾಸದ ಸಮಯದಲ್ಲಿ ಕೈವಾರದಲ್ಲಿ ಭೀಮಲಿಂಗೇಶ್ವರ ದೇವಾಲಯ ಸ್ಥಾಪಿಸಿದರು ಎಂದು ಪುರಾಣಗಳು ಹೇಳುತ್ತವೆ. ಕೈವಾರದ ಒಂದು ಪರ್ವತ ಶಿಖರದ ಮೇಲೆ ಭೀಮ ಬಕಾಸುರನ ಮಧ್ಯೆ ಯುದ್ದ ನಡೆದು ಇದರಲ್ಲಿ ಭೀಮ ಬಕಾಸುರನನ್ನು ಕೊಲ್ಲುತ್ತಾನೆ ಹಾಗೂ ಬಕಾಸುರನ ರಕ್ತದ ಕಲೆಯು ಇಂದಿಗೂ ಬೆಟ್ಟದ ಮೇಲೆ ಇದೆ ಎಂದು ಸ್ಥಳೀಯರು ನಂಬುತ್ತಾರೆ.
ಕೈವಾರದಲ್ಲಿ ಅಮರನಾರಾಯಣ ಸ್ವಾಮಿ ದೇವಾಲಯವಿದೆ ಈ ದೇವಾಲಯವನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ಸ್ಥಾಪಿಸಿದ ಎನ್ನಲಾಗಿದೆ. ಈ ದೇವಾಲಯದಿಂದ ತಿರುಪತಿ ವೆಂಕಟೆಶ್ವರ ಸ್ವಾಮಿಗೆ ನೇರವಾದ ಸಂಪರ್ಕವಿದೆ ಹಾಗೂ ಈ ದೇವಾಲಯವು ಅತ್ಯಂತ ಮಹಿಮಾತ್ಮಕವಾಗಿದೆ. ಮತ್ತೊಂದು ಪ್ರಮುಖ ತಾಣವೆಂದರೆ ಲಕ್ಷ್ಮಣ ತೀರ್ಥ, ಸೀತಾದೇವಿಗೆ ಒಮ್ಮೆ ಬಾಯಾರಿಕೆಯಾದ ಕಾರಣ ಲಕ್ಷ್ಮಣ ತನ್ನ ಬಿಲ್ಲಿನಿಂದ ಒಂದು ಬಂಡೆಗೆ ರಂಧ್ರಮಾಡಿ ಸೀತೆಯ ದಣಿವಾರಿಸಿದ ಸ್ಥಳ ಎಂಬ ಪೌರಣಿಕವಿದೆ. ಹೀಗೆ ಹಲವಾರು ದೇಗುಲಗಳನ್ನು ಕೈವಾರದಲ್ಲಿ ಕಾಣಬಹುದು. ಮಕ್ಕಳಿಗೆ ಖುಷಿ ನೀಡಲು ನ್ಯಾಷನಲ್ ಪಾರ್ಕ್ ಕೂಡ ಇದೆ. ಇಲ್ಲಿ ಕೆಲವು ಪ್ರಾಣಿ,ಪಕ್ಷಿಗಳನ್ನು ಕಾಣಬಹುದಾಗಿದೆ.
ಕೈವಾರದಲ್ಲಿ ನೋಡಲೆಬೇಕಾದ ಸ್ಥಳಗಳು:
ಅಮರನಾರಾಯಣ ತೀರ್ಥ ಸ್ವಾಮಿ ದೇವಾಲಯ,ಲಕ್ಷ್ಮಣ ತೀರ್ಥ,ವೈಕುಂಠ,ನಾಷ್ಯನಲ್ ಪಾರ್ಕ್, ವಾಸವಿ ದೇಗುಲ,ಅಲ್ಲಮ ಗಿರಿ ವೆಂಕಟೇಶ್ವರ,ಕೈಲಾಸಗಿರಿ ಗುಹೆ,ಭೀಮಲಿಂಗೇಶ್ವರ ದೇವಾಲಯ,ಯೋಗ ನರಸಿಂಹ ಮಠ.ಭೀಮನ ಬೆಟ್ಟ.
ತಲುಪಲು ಮಾರ್ಗಗಳು
ಬೆಂಗಳೂರಿಂದ ಕೇವಲ 61 ಕಿ.ಮಿ ಇರುವುದರಿದ ಸುಲಭವಾಗಿ ಬಸ್,ಕಾರು,ಟ್ಯಾಕ್ಸಿ,ಬೈಕ್ಗಳ ಮೂಲಕವೂ ಹೊರಡಬಹುದಾಗಿದೆ.