ಆನೆಗೊಂದಿಯ ಐತಿಹಾಸಿಕ ಹಾಗೂ ಪುರಾಣ ಹಿನ್ನೆಲೆಯು ನಮ್ಮನ್ನು ರಾಮಾಯಣದ ಕಾಲಕ್ಕೆ ಕರೆದೊಯ್ಯುತ್ತದೆ. ಈ ಸುಂದರ ತಾಣವು ಹಸಿರು ಸಿರಿ, ಗಿರಿಧಾಮಗಳು ಹಾಗೂ ತುಂಗಭದ್ರಾ ನದಿಯಿಂದ ಸುತ್ತುವರಿದಿದೆ. ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿದೆ. ಈ ತಾಣವು ರಾಮಾಯಣದ ಕಾಲದಲ್ಲಿ ವಾಲಿಯ ರಾಜಧಾನಿಯಾಗಿತ್ತು ಎನ್ನಲಾಗುತ್ತದೆ.
ಆನೆಗಳನ್ನು ಸ್ನಾನ ಮಾಡಿಸುವ ಹೊಂಡ/ಸ್ಥಳ ಇದಾಗಿತ್ತು, ಆದ್ದರಿಂದಲೇ ಈ ಪ್ರದೇಶಕ್ಕೆ ಆನೆಗೊಂದಿ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ. ಇದು ವಿಜಯನಗರ ಅರಸರ ಮೊದಲ ರಾಜಧಾನಿಯಾಗಿತ್ತು. ಹಂಪಿಗಿಂತ ಪುರಾತನವಾದ ಈ ಪ್ರದೇಶ 5000 ವರ್ಷಗಳ ಇತಿಹಾಸವನ್ನು ಒಳಗೊಂಡಿದೆ. ಬೆಂಗಳೂರಿನಿಂದ 358.4 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ 6 ರಿಂದ 7 ತಾಸುಗಳ ಪ್ರಯಾಣ ಮಾಡಬೇಕಾಗುತ್ತದೆ.
ಪುರಾಣ ಕಥೆ
ಕಿಷ್ಕಿಂದೆ ಎಂದು ಪ್ರಸಿದ್ಥವಾದ ಈ ತಾಣ ವಾಲಿಯ ವಶದಲ್ಲಿತ್ತು. ಶ್ರೀರಾಮನು ವಾಲಿಯನ್ನು ಸೋಲಿಸಿ ಸುಗ್ರೀವನಿಗೆ ಈ ಪ್ರದೇಶವನ್ನು ನೀಡಿದನು. ಇದಕ್ಕೆ ಉಪಕಾರವಾಗಿ ವಾಲಿಯು ಹನುಮಂತನ ಸಾರಥ್ಯದಲ್ಲಿ ರಾವಣನನ್ನು ಸಂಹರಿಸಿದನು. ಸೀತೆಯನ್ನು ಬಂಧನದಿಂದ ಬಿಡಿಸಿ, ರಾಮನಿಗೆ ಒಪ್ಪಿಸಿದರು ಎನ್ನುವ ಪುರಾಣ ಕಥೆಯನ್ನು ಒಳಗೊಂಡಿದೆ.
PC: wikipedia.org
ಇತಿಹಾಸ
ಎರಡನೇ ದೇವರಾಯನ ಕಾಲದಲ್ಲಿ ವಿದ್ಯಾನಗರವು ಆನೆಗೊಂದಿಯೊಂದಿಗೆ ಸೇರಿಕೊಂಡಿತ್ತು. ಇದು ಜಗತ್ತಿನಲ್ಲೇ ಅತ್ಯಂತ ವಿಸ್ತಾರವುಳ್ಳ ಶ್ರೀಮಂತ ರಾಜಧಾನಿ ಎನ್ನುವ ಖ್ಯಾತಿಯನ್ನು ಪಡೆದಿತ್ತು. ತುಳು ವಂಶದ ಕೃಷ್ಣದೇವರಾಯನ ಕಾಲದಲ್ಲಿ ಇದರ ವೈಭವವನ್ನು ಎಲ್ಲಡೆಯೂ ಕೊಂಡಾಡುತ್ತಿದ್ದರು.
PC: wikipedia.org
ಬರಹದಲ್ಲಿ
ತುಂಗಭದ್ರಾ ನದಿಯ ದಂಡೆಯ ಮೇಲೆ ಸೆನಗೊಂದ್ಯಂ (ಆನೆಗೊಂದಿ) ಎಂಬ ಪಟ್ಟಣವಿತ್ತು. ಅದು ಪೂರ್ವ ಕಾಲದಲ್ಲಿ ರಾಜಧಾನಿಯಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಈಗಲೂ ಇಲ್ಲಿ ಕೋಟೆ ಇರುವುದನ್ನು ಕಾಣಬಹುದು ಎಂದು ಪೇಸ್ ಎಂಬ ಪೋರ್ಚುಗೀಸ್ ಪ್ರಯಾಣಿಕ 1530ರಲ್ಲಿ ಬರೆದಿದ್ದ ಎನ್ನಲಾಗುತ್ತದೆ.
PC: wikipedia.org
ಸುಧಾರಣಾ ನೀತಿ
ಆನೆಗೊಂದಿಯ ಭೂ ಸುಧಾರಣಾ ನೀತಿ ಉಲ್ಲೇಖಾರ್ಹವಾಗಿದೆ. ಕೃಷ್ಣ ದೇವರಾಯ ತನ್ನ ಮಂತ್ರಿಯಾದ ಅಪ್ಪಾಜಿಯ ಸಹಕಾರದಿಂದ ಭೂಮಿಯನ್ನು ರಾಯರೇಖಾದಿಂದ ಅಳತೆ ಮಾಡಿದನು. ಈ ಪದ್ಧತಿಯನ್ನೇ ಅನೇಕ ರಾಜರು ತಮ್ಮ ರಾಜ್ಯದಲ್ಲಿ ಜಾರಿಗೆ ತಂದುಕೊಂಡರು.
PC: wikipedia.org
ಸುತ್ತ ಮುತ್ತ
ಈ ಸ್ಥಳವು ಐತಿಹಾಸಿಕ ಕಾಲದ ಕೆಲವು ಅವಶೇಷಗಳು, ಗಿರಿಧಾಮಗಳು, ಕೋಟೆ, ಅರಮನೆ ಹಾಗೂ ಸುಂದರ ಹಸಿರು ಸಿರಿಯಿಂದ ಕೂಡಿದೆ. ಇಲ್ಲಿ ಹರಿಯುವ ಭದ್ರಾವತಿ ನದಿಯು ಇದರ ಸೌಂದರ್ಯದ ಮೆರಗನ್ನು ಹೆಚ್ಚಿಸುತ್ತದೆ. ವಾರದ ರಜೆಯಲ್ಲಿ ಭೇಟಿ ನೀಡಲು ಇದೊಂದು ಸೂಕ್ತ ಜಾಗ.
PC: flickr.com
ಗಗನ್ ಅರಮನೆ
16ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಅರಮನೆ ಇಸ್ಲಾಮಿಕ್ ಶೈಲಿಯಲ್ಲಿದೆ. ಗಗನ್ ಅರಮನೆಯನ್ನು ಗಗನ್ ಮಹಲ್ ಎಂತಲೂ ಕರೆಯುತ್ತಾರೆ. ವಿಜಯನಗರ ಅರಸರಿಂದ ಈ ಅರಮನೆಯ ನಿರ್ಮಾಣವಾಯಿತು. ಇನ್ನೂ ಭದ್ರವಾಗಿ ನಿಂತುಕೊಂಡ ಅರಮನೆ ವಿಜಯ ನಗರ ಅರಸರ ಆಡಳಿತ ಹಾಗೂ ವಾಸ್ತುಶಿಲ್ಪದ ಹಿರಿಮೆಯನ್ನು ಸಾರುತ್ತದೆ.
PC: flickr.com
ಆನೆಗೊಂದಿ ಕೋಟೆ
ಈ ಕೋಟೆಯು ಆ ಕಾಲದ ಪರಿಪೂರ್ಣ ಸಾಂಪ್ರದಾಯಿಕ ಹಿನ್ನೆಲೆಗೆ ಉದಾಹರಣೆಯಾಗಿದೆ. ಈ ಕೋಟೆಯ ಒಳಗೆ ದುರ್ಗಾ ದೇವಸ್ಥಾನ ಹಾಗೂ ಗಣೇಶನಿಗೆ ಮೀಸಲಾದ ಗುಹಾಲಯವಿದೆ. ವಿಜಯ ನಗರ ಅರಸರು ಯುದ್ಧ ಮಾಡುವ ಮೊದಲು ಈ ದುರ್ಗಾದೇವಿಯ ಪೂಜೆ ಮಾಡುತ್ತಿದ್ದರು ಎನ್ನಲಾಗುತ್ತದೆ.