ಪ್ರವಾಸಿ ತಾಣವಾಗಿಯೂ, ಧಾರ್ಮಿಕ ತಾಣವಾಗಿಯೂ ಹಾಗೂ ಗುಣಮಟ್ಟದ ಶೈಕ್ಷಣಿಕ ತಾಣವಾಗಿಯೂ ಕರ್ನಾಟಕದ ಉಡುಪಿ ಜಿಲ್ಲೆ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿಯನ್ನು, ಕುಂದಾಪುರ, ಉಡುಪಿ ಹಾಗೂ ಕಾರ್ಕಳ ಎಂಬ ಮೂರು ತಾಲೂಕುಗಳಲ್ಲಿ ವಿಂಗಡಿಸಿ ಪ್ರತ್ಯೇಕವಾಗಿ ಉಡುಪಿ ಜಿಲ್ಲೆಯನ್ನು ಅಗಸ್ಟ್ 1997 ರಲ್ಲಿ ರಚಿಸಲಾಯಿತು.
ಪ್ರಸ್ತುತ ಉಡುಪಿ ಜಿಲ್ಲೆಯು ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಸುತ್ತುವರೆದಿದೆ. ಉಡುಪಿಯ ಪಶ್ಚಿಮಕ್ಕೆ ಅರಬ್ಬಿ ಸಮುದ್ರವಿದ್ದು ಪ್ರವಾಸಿ ಕಡಲ ತೀರಗಳನ್ನು ಇಲ್ಲಿ ನೋಡಬಹುದಾಗಿದೆ. ಉಡುಪಿಯು ಪ್ರಮುಖವಾಗಿ ತನ್ನಲ್ಲಿರುವ ಕೃಷ್ಣ ದೇವಾಲಯ, ಅಷ್ಟ ಮಠ ಹಾಗೂ ಉಡುಪಿಯ ವಿಶಿಷ್ಟ ಖಾದ್ಯಕ್ಕೆ ಹೆಸರುವಾಸಿಯಾಗಿದೆ.
ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಿಂದ ಉಡುಪಿಗೆ ತೆರಳಲು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳೆರಡೂ ಲಭ್ಯವಿದೆ. ಅಲ್ಲದೆ ಕೊಂಕಣ ರೈಲಿನ ಮಾರ್ಗವೂ ಈ ಜಿಲ್ಲೆಯ ಸಂಪರ್ಕ ಹೊಂದಿದ್ದು ಮಹಾರಾಷ್ಟ್ರ ಹಾಗೂ ಗೋವಾಗಳೊಂದಿಗೆ ಈ ಜಿಲ್ಲೆಯನ್ನು ಬೆಸೆಯುತ್ತದೆ.
ವಿಶೇಷ ಲೇಖನ : ಕೋಕಣ ರೈಲಿನಲ್ಲೊಂದು ಪ್ರವಾಸ
ಪ್ರಸ್ತುತ ಲೇಖನವು ಉಡುಪಿ ಸೇರಿದಂತೆ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳ ಕುರಿತು ಚೊಕ್ಕವಾಗಿ ತಿಳಿಸುತ್ತದೆ.
ಉಡುಪಿ ಆಕರ್ಷಣೆಗಳು:
ಸೇಂಟ್ ಮೇರಿಯ ದ್ವೀಪ: ಉಡುಪಿಯ ಮಲ್ಪೆ ಕಡಲ ತೀರ ಪ್ರದೇಶದಲ್ಲೆ ಕಂಡುಬರುವ ಸೇಂಟ್ ಮೇರಿಯ ದ್ವೀಪ ಸಮೂಹವು ಉಡೂಪಿಯ ಪ್ರೇಕ್ಷಣೀಯ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ಕಂಡುಬರುವ ಬಸಾಲ್ಟ್ ಶಿಲಾ ರಚನೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳಾಗಿವೆ. ಈ ರಚನೆಗಳು ಮಡಗಾಸ್ಕರ್ ದೇಶವು ಭಾರತ ಉಪಖಂಡದೊಂದಿಗೆ ಹೊಂದಿಕೊಂಡಿದ್ದಾಗ ಉಂಟಾದವುಗಳು ಎಂದಿ ತಜ್ಞರು ವಿಶ್ಲೇಷಿಸುತ್ತಾರೆ. ಮಲ್ಪೆ ಕಡಲ ತೀರದಿಂದ ಆರು ಕಿ.ಮೀ ದೂರವಿರುವ ಈ ದ್ವೀಪ ಸಮೂಹಕ್ಕೆ ದೋಣಿಯಿಂದ ಮಾತ್ರವೆ ಹೋಗಲು ಸಾಧ್ಯ. ಇದನ್ನು ಕೋಕೋನಟ್ ದ್ವೀಪ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Arun Prabhu
ಉಡುಪಿ ಆಕರ್ಷಣೆಗಳು:
ಮಲ್ಪೆ ಕಡಲ ತೀರ: ಉಡುಪಿಯಿಂದ ಪಶ್ಚಿಮಕ್ಕೆ ಆರು ಕಿ.ಮೀ ದೂರದಲ್ಲಿದೆ ಮಲ್ಪೆ ಕಡಲ ತೀರ. ಮಲ್ಪೆ ಎಂಬುದು ಒಂದು ಬಂದರು ಪ್ರದೇಶದ ಹೆಸರಾಗಿದ್ದು ಇಲ್ಲಿ ಸಾಕಷ್ಟು ಇತರೆ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಉಡುಪಿ ನಗರದಿಂದ ಮಲ್ಪೆಗೆ ತೆರಳಲು ಬಸ್ಸುಗಳು ಹಾಗೂ ರಿಕ್ಷಾಗಳು ನಿರಾಯಾಸವಾಗಿ ದೊರೆಯುತ್ತವೆ.
ಚಿತ್ರಕೃಪೆ: Balaji.B
ಉಡುಪಿ ಆಕರ್ಷಣೆಗಳು:
ಉಡುಪಿ ಕೃಷ್ಣ ಮಠ: ಪ್ರಾಯಶಃ ಉಡುಪಿಯ ಪ್ರಪ್ರಥಮ ಧಾರ್ಮಿಕ ಆಕರ್ಷಣೆಯಾಗಿ ಈ ಮಠವು ಜನರನ್ನು ಎಲ್ಲೆಡೆಯಿಂದ ಸೆಳೆಯುತ್ತದೆ. ಈ ಮಠದ ಸುತ್ತ ಮುತ್ತಲು ಇತರೆ ದೇವಾಲಯಗಳಿವೆ. ಈ ಮಠವನ್ನು ವೈಷ್ಣವ ಪಂಥದ ಶ್ರೀ ಮಾಧ್ವಾಚಾರ್ಯರು ಸ್ಥಾಪಿಸಿದರು ಎಂಬ ಪ್ರತೀತಿಯಿದೆ. ವೈಷ್ಣವ ಸಮುದಾಯದವರು ನಡೆದುಕೊಳ್ಳುವ ಈ ಮಠಕ್ಕೆ ಸಾಕಷ್ಟು ಜನ ಭಕ್ತಾದಿಗಳು ಪ್ರತಿ ನಿತ್ಯವು ಆಗಮಿಸುತ್ತಾರೆ.
ಚಿತ್ರಕೃಪೆ: Ashok Prabhakaran
ಉಡುಪಿ ಆಕರ್ಷಣೆಗಳು:
ವಿಶಿಷ್ಟ ಉಡುಪಿ ವ್ಯಂಜನ: ನೀವು ಉಡುಪಿಯಲ್ಲಿದ್ದಾಗ ಸ್ಥಳೀಯವಾಗಿ ದೊರೆಯುವ ವಿಶಿಷ್ಟ ಉಡುಪಿ ಖಾದ್ಯದ ರುಚಿ ಸವಿಯಲು ಮರೆಯದಿರಿ. ಕರ್ನಾಟಕದ ಪ್ರಮುಖ ಆಹಾರ ಶೈಲಿಗಳಲ್ಲಿ ಇದೂ ಒಂದು. ಇದೊಂದು ಪರಿಶುದ್ಧ ಸಸ್ಯಾಹಾರವಾಗಿದ್ದು, ಇರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನೂ ಸಹ ಹೊಂದಿರುವುದಿಲ್ಲ. ಧಾರ್ಮಿಕವಾಗಿ ಇರುಳ್ಳಿ ಹಾಗೂ ಬೆಳ್ಳುಳ್ಳಿಗಳು ತಾಮಸಿಕ ಗುಣವುಳ್ಳದ್ದಾಗಿದ್ದು ಉಡುಪಿ ಊಟವು ಸಾತ್ವಿಕ ಗುಣ ಹೊಂದಿರುವ ಆಹಾರವಾಗಿದೆ. ರುಚಿಯಲ್ಲಿ ವಿಶಿಷ್ಟವಾಗಿದ್ದು ನಿಮ್ಮ ಆಹಾರದಲ್ಲಿ ಒಂದು ರೀತಿಯ ಬದಲಾವಣೆ ಇದು ಕೊಡುತ್ತದೆ. ಸಾಂದರ್ಭಿಕ ಚಿತ್ರ.
ಉಡುಪಿ ಆಕರ್ಷಣೆಗಳು:
ಉಡುಪಿಯಿಂದ ದಕ್ಷಿಣ 13 ಕಿ.ಮೀ ದೂರದಲ್ಲಿ ಕಾಪು ಕರಾವಳಿ ಹಳ್ಳಿಯನ್ನು ಕಾಣಬಹುದು. ಇದು ತನ್ನಲ್ಲಿರುವ ಕಾಪು ಹೆಸರಿನ ಕಡಲ ತೀರದಿಂದಾಗಿ ಪ್ರೇಕ್ಷಣೀಯ ಸ್ಥಳವಾಗಿದೆ.
ಚಿತ್ರಕೃಪೆ: vivek raj
ಉಡುಪಿ ಆಕರ್ಷಣೆಗಳು:
ಮರವಂತೆ: ಉಡುಪಿಯಿಂದ 40 ಕಿ.ಮೀ ದೂರದಲ್ಲಿರುವ ಮರವಂತೆ ಎಂಬ ಕರಾವಳಿ ಗ್ರಾಮವು ತನ್ನಲ್ಲಿರುವ ಶಾಂತಮಯ ಹಾಗೂ ಅಷ್ಟೆ ಮನಮೋಹಕ ಕಡಲ ತೀರದಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಕಡಲ ತೀರವನ್ನು ಕರ್ನಾಟಕದಲ್ಲಿ ಕಂಡುಬರುವ ಸುಂದರ ಕಡಲ ತೀರಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. [ಸುಂದರ ಕಡಲ ತೀರದ ಮರವಂತೆ]
ಚಿತ್ರಕೃಪೆ: Ashwin Kumar
ಉಡುಪಿ ಆಕರ್ಷಣೆಗಳು:
ಪಾಜಕ: ಉಡುಪಿ ತಾಲೂಕಿನಲ್ಲಿರುವ ಪಾಜಕ ಒಂದು ಪುಟ್ಟ ಗ್ರಾಮವಾಗಿದ್ದು ವಿಶೇಷವಾಗಿ ವೈಷ್ಣವ ಭಕ್ತಾದಿಗಳನ್ನು ಸೆಳೆಯುತ್ತದೆ. ಏಕೆಂದರೆ ದ್ವೈತ ಪಂಥದ ಪ್ರತಿಪಾದಕರಾಗಿದ್ದ ಶ್ರೀ ಮಧ್ವಾಚಾರ್ಯರು ಹುಟ್ಟಿದ್ದು ಈ ಗ್ರಾಮದಲ್ಲಿಯೆ. ಆದ್ದರಿಂದ ಧಾರ್ಮಿಕ ಭಾವನಾತ್ಮಕ ಸಂಬಂಧದಿಂದಾಗಿ ಈ ಹಳ್ಳಿಯು ವಿಶೇಷ ಮಹತ್ವವನ್ನು ಪಡೆದಿದೆ. ಮಧ್ವಾಚಾರ್ಯರ ಮಂದಿರ. ಇಲ್ಲಿ ಮಧ್ವರ ಪಾದ ಚಿಹ್ನೆಯಿದೆ.
ಚಿತ್ರಕೃಪೆ: Bgadicha
ಉಡುಪಿ ಆಕರ್ಷಣೆಗಳು:
ಕೊಲ್ಲೂರು ಮೂಕಾಂಬಿಕೆ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರು ಕ್ಷೇತ್ರವು ಮೂಕಾಂಬಿಕೆಯ ದೇವಸ್ಥಾನದಿಂದಾಗಿ ಪ್ರಖ್ಯಾತಿ ಗಳಿಸಿದೆ. ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಪಕ್ಕದ ತಮಿಳುನಾಡು ಹಾಗೂ ಕೇರಳಗಳಿಂದಲೂ ಸಹ ಸಾಕಷ್ಟು ಜನರು ಈ ಪುಣ್ಯ ಕ್ಷೇತ್ರಕ್ಕೆ ಬರುತ್ತಾರೆ. ಕೊಲ್ಲೂರು ಕುಂದಾಪುರದಿಂದ 38 ಕಿ.ಮೀ ದೂರದಲ್ಲಿ ನೆಲೆಸಿದೆ.
ಚಿತ್ರಕೃಪೆ: Ashok Prabhakaran
ಉಡುಪಿ ಆಕರ್ಷಣೆಗಳು:
ಕಾರ್ಕಳ: ಉಡುಪಿ ಪಟ್ಟಣದಿಂದ 37 ಕಿ.ಮೀ ದೂರದಲ್ಲಿರುವ ಕಾರ್ಕಳವು ಪುರಾತನ ಜೈನ ಬಸದಿಗಳು ಹಾಗೂ ಬಾಹುಬಲಿ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. [ಕರ್ನಾಟಕದಲ್ಲಿರುವ ಬಾಹುಬಲಿ ವಿಗ್ರಹಗಳು]
ಚಿತ್ರಕೃಪೆ: Anoopratnaker
ಉಡುಪಿ ಆಕರ್ಷಣೆಗಳು:
ಆನೆಗುಡ್ಡೆ: ಉಡುಪಿಯಿಂದ 30 ಕಿ.ಮೀ ದೂರದಲ್ಲಿರುವ ಆನೆಗುಡ್ಡೆ ತನ್ನಲ್ಲಿರುವ ಗಣೇಶನ ದೇವಸ್ಥಾನದಿಂದಾಗಿ ಹೆಸರುವಾಸಿಯಾಗಿದೆ. ಅಲ್ಲದೆ ಆನೆಗುಡ್ಡೆಯು ಪರಶುರಾಮರ ಏಳು ಮುಕ್ತಿ ಸ್ಥಳಗಳ ಪೈಕಿ ಒಂದಾಗಿದೆ.[ದೇಶದಲ್ಲಿರುವ ಗಣೇಶನ ವಿಶೇಷ ದೇವಸ್ಥಾನಗಳು]
ಚಿತ್ರಕೃಪೆ: Raghavendra Nayak Muddur
ಉಡುಪಿ ಆಕರ್ಷಣೆಗಳು:
ಅಟ್ಟೂರು ಚರ್ಚ್: ಉಡುಪಿ ಜಿಲ್ಲೆಯ ಕಾರ್ಕಳ ಪಟ್ಟಣದ ಹೊರವಲಯದಲ್ಲಿ ನೆಲೆಸಿರುವ ಸಂತ ಲಾವ್ರೆನ್ಸ್ ಅವರ ಈ ದೇವಾಲಯ ಒಂದು ರೋಮನ್ ಕ್ಯಾಥೋಲಿಕ್ ದೇವಾಲಯವಾಗಿದೆ. ಶ್ರೀಮಂತ ಇತಿಹಾಸವನ್ನು ಹೊಂದಿರುವ, ಹಸಿರಿನ ಮಡಿಲಿನಲ್ಲಿ ನೆಲೆಸಿರುವ ಈ ಚರ್ಚ್ ತನ್ನ ವಾರ್ಷಿಕವಾಗಿ ಆಚರಿಸುವ ಉತ್ಸವಕ್ಕೆ ಹೆಸರುವಾಸಿಯಾಗಿದೆ. ಈ ಉತ್ಸವವನ್ನು ಅಟ್ಟುರು ಜಾತ್ರೆ ಎಂದೆ ಕರೆಯಲಾಗುತ್ತದೆ.
ಚಿತ್ರಕೃಪೆ: Kensplanet
ಉಡುಪಿ ಆಕರ್ಷಣೆಗಳು:
ಬರ್ಕೂರು: ಶ್ರೀಮಂತ ತುಳುನಾಡು ಸಂಸ್ಕೃತಿಯ ಪ್ರತೀಕವಾಗಿರುವ ಬರ್ಕೂರು ಹಿಂದೆ ಬರಕನೂರು ಎಂದು ಕರೆಯಲ್ಪಡುತ್ತಿತ್ತು ಹಾಗೂ ತುಳು ದೊರೆಗಳ ರಾಜಧಾನಿಯಾಗಿ ಇದು ಕಂಗೊಳಿಸುತ್ತಿತ್ತು. ಪ್ರಸ್ತುತ ಉಡುಪಿಅ ಜಿಲ್ಲೆಯಲ್ಲಿರುವ ಇದು ಮೂರು ಹಳ್ಳಿಗಳಾದ ಹೊಸಲ, ಹನೆಹಳ್ಳಿ ಹಾಗೂ ಕಚೂರುಗಳ ಸಮುಚ್ಛಯವಾಗಿದೆ. ಕೆಲವು ಐತಿಹಾಸಿಕ ರಚನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿಗೆ ಉಡುಪಿಯಿಂದ ಬಸ್ಸಿನಲ್ಲಿ ತೆರಳಬಹುದಾಗಿದ್ದು ಬರ್ಕೂರು ತನ್ನದೆ ಆದ ರೈಲು ನಿಲ್ದಾಣವನ್ನೂ ಸಹ ಹೊಂದಿದೆ. ಕೊಂಕಣ ರೈಲಿನ ಮಾರ್ಗವು ಇದಕ್ಕೆ ಸಂಪರ್ಕ ಹೊಂದಿದೆ.
ಚಿತ್ರಕೃಪೆ: Abhijith sadanand
ಉಡುಪಿ ಆಕರ್ಷಣೆಗಳು:
ಪೆರ್ಣಂಕಿಲ: ಉಡುಪಿ ತಾಲೂಕಿನಲ್ಲಿರುವ ಪೆರ್ಣಂಕಿಲ ಒಂದು ಪುಟ್ಟ ಗ್ರಾಮವಾಗಿದೆ. ದೇವರು ಹರಿಸಿರುವ ಕ್ಷೇತ್ರ ಎಂಬ ಖ್ಯಾತಿಗೆ ಇದು ಪಾತ್ರವಾಗಿದ್ದು ದೈವಿಕ ಶಕ್ತಿ ನೆಲೆಸಿರುವ ಗ್ರಾಮ ಇದಾಗಿದೆ ಎಂದು ನಂಬಲಾಗುತ್ತದೆ. ಪೆರ್ಣಂಕಿಲ ಮಹಾಲಿಂಗೇಶ್ವರ ಹಾಗೂ ಮಹಾಗಣಪತಿಗಳ ದೇವಸ್ಥಾನಗಳನ್ನು ಇಲ್ಲಿ ಕಾಣಬಹುದಾಗಿದೆ. ಇದು ಉಡುಪಿಯ ನೈರುತ್ಯಕ್ಕೆ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Rajaramraok
ಉಡುಪಿ ಆಕರ್ಷಣೆಗಳು:
ಕುಂದಾಪುರ: ಕುಂದಾಪುರ ಉಡುಪಿ ಜಿಲ್ಲೆಯ ಒಂದು ತಾಲೂಕು ಪ್ರದೇಶವಾಗಿದೆ. ಪಟ್ಟಣದಲ್ಲಿರುವ ಕುಂದೇಶ್ವರ ದೇವಾಲಯದಿಂದಾಗಿ ಇದಕ್ಕೆ ಕುಂದಾಪುರ ಎಂಬ ಹೆಸರು ಬಂದಿತು ಎಂಬ ಅಂಶವು ಇತಿಹಾಸದಿಂದ ತಿಳಿದು ಬರುತ್ತದೆ. ಉತ್ತಮ ರಸ್ತೆ ಸಂಪರ್ಕ ಹೊಂದಿರುವ ಕುಂದಾಪುರ ತಾಲೂಕಿನಲ್ಲೂ ಸಹ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಕುಂದೇಶ್ವರ ದೇವಾಲಯ ಆವರಣದಲ್ಲಿರುವ ಪುಷ್ಕರಿಣಿ.
ಚಿತ್ರಕೃಪೆ: Neinsun
ಉಡುಪಿ ಆಕರ್ಷಣೆಗಳು:
ಸೋಮೇಶ್ವರ ಅಭಯಾರಣ್ಯ: ಉಡುಪಿಯಿಂದ 40 ಕಿ.ಮೀ ದೂರವಿರುವ ಸೋಮೇಶ್ವರ ಅಭಯಾರಣ್ಯವು ಪಶ್ಚಿಮ ಘಟ್ಟಗಳ ಮೈಸಿರಿಯನ್ನು ಅನಾವರಣಗೊಳಿಸುವ, ನಿತ್ಯ ಹರಿದ್ವರ್ಣಗಳ ಕಾಡಿನಿಂದ ಕೂಡಿದೆ. ಇಲ್ಲಿ ವಿಶೇಷವಾದ ಔಷಧೀಯ ಗುಣ್ಣವುಳ್ಳ ಸಸ್ಯ ಸಂಪತ್ತು ಹಾಗೂ ವೈವಿಧ್ಯಮಯ ಪ್ರಾಣಿ ಸಂಪತ್ತನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Karunakar Rayker
ಉಡುಪಿ ಆಕರ್ಷಣೆಗಳು:
ಬರ್ಕಣ ಜಲಪಾತ: ಪಶ್ಚಿಮ ಘಟ್ಟದ ಆಗುಂಬೆ ಬಳಿಯಲ್ಲೆ ಮತ್ತೊಂದು ನಯನ ಮನೋಹರವಾದ ಜಲಪಾತವನ್ನು ಕಾಣಬಹುದಾಗಿದೆ. ಅದೆ ಬರ್ಕಣ ಜಲಪಾತ. ಸುಮಾರು 850 ಅಡಿಗಳಷ್ಟು ಎತ್ತರವನ್ನು ಈ ಜಲಪಾತ ಹೊಂದಿದೆ. ದೂರದಿಂದಲೂ ಕೂಡ ಭವ್ಯವಾದ ನೋಟವನ್ನು ನೋಡುಗರಿಗೆ ಕರುಣಿಸುತ್ತದೆ. ಇದು ಉಡುಪಿಯಿಂದ 54 ಕಿ.ಮೀ ದೂರವಿದ್ದು ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಸೇರುವ ಗಡಿಗಳಲ್ಲಿದೆ.
ಚಿತ್ರಕೃಪೆ: Lakshmipathi23
ಉಡುಪಿ ಆಕರ್ಷಣೆಗಳು:
ಕೂಡ್ಲು ತೀರ್ಥ: ಕೂಡ್ಲು ತೀರ್ಥ ಜಲಪಾತವು ಉಡುಪಿ ಜಿಲ್ಲೆಯ ಹೆಬ್ರಿಯಿ೦ದ 20 ಕಿ.ಮೀ. ದೂರದಲ್ಲಿದೆ. ಆಗುಂಬೆಯ ದಟ್ಟ ಕಾಡಿನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ. ರಸ್ತೆ ಸ೦ಪರ್ಕದಿ೦ದ 4 ಕಿ.ಮೀ. ದೂರದಲ್ಲಿದ್ದು, ಚಾರಣದ ಈ ಜಲಪಾತ ತಾಣಕ್ಕೆ ತಲುಪಬಹುದು.
ಚಿತ್ರಕೃಪೆ: Balajirakonda
ಉಡುಪಿ ಆಕರ್ಷಣೆಗಳು:
ಕೋಸಳ್ಳಿ: ಕೋಸಳ್ಳಿ ಜಲಪಾತವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಬೈಂದೂರಿನಿಂದ ಶಿರೂರು ಮಾರ್ಗವಾಗಿ ಚಲಿಸುತ್ತ ಸುಮಾರು 8 ಕಿ.ಮೀ ಗಳಷ್ಟು ದೂರವಿರುವ ತೂದಳ್ಳಿಗೆ ಬಂದು ಅಲ್ಲಿಂದ ಸುಮಾರು 3 ಕಿ.ಮೀ ಕಾಡುಮಾರ್ಗದಲ್ಲಿ ನಡೆದರೆ ಕೋಸಳ್ಳಿ ಜಲಪಾತ ಕಾಣಸಿಗುತ್ತದೆ. ಕೋಸಳ್ಳಿ ಜಲಪಾತವು 3 ರಿಂದ 5 ಹಂತಗಳಲ್ಲಿ ಧುಮುಕುತ್ತದೆ.
ಚಿತ್ರಕೃಪೆ: Vishuachar