ಐಯುಸಿಎನ್ (ಇಂಟರ್ ನ್ಯಾಷನಲ್ ಯುನಿಯನ್ ಫಾರ್ ದಿ ಕನ್ಸರ್ವೇಷನ್ ಆಫ್ ನೇಚರ್) ಒಂದು ಜಾಗತಿಕ ಸಂಸ್ಥೆಯಾಗಿದ್ದು ಪ್ರಪಂಚದ ಜೀವವೈಧ್ಯತೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಕುರಿತು ಅಧ್ಯಯನ ಮಾಡುತ್ತದೆ. ಇದು ಸಾಮಾನ್ಯವಾಗಿ ಆಯಾ ಕಾಲದಲ್ಲಿ ವಿವಿಧ ದೇಶಗಳಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ಅತಿ ಅಪರೂಪದ ಜೀವಿಗಳನ್ನು ಪಟ್ಟಿ ಮಾಡಿ ಬಿಡುಗಡೆ ಮಾಡುತ್ತಿರುತ್ತದೆ.
ಅದರಂತೆ 2011 ರಲ್ಲಿ ಇದು ಬಿಡುಗಡೆ ಮಾಡಿದ ಭಾರತದಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ವಿವಿಧ ಜೀವಿಗಳ ಪೈಕಿ ಕೆಲವು ಆಯ್ದ ಪ್ರಮುಖವಾದವುಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ವಿಶೇಷವೆಂದರೆ ಜೀವ ವಿಜ್ಞಾನ ಇಷ್ಟಪಡುವ ಪ್ರವಾಸಿಗರು, ಸಂಶೋಧಕರಾದಿಯಾಗಿ ಈ ಜೀವಿಗಳನ್ನು ನೋಡಬಯಸಿದರೆ ಇಲ್ಲಿ ತಿಳಿಸಿದ ಸ್ಥಳಗಳ ಪ್ರವಾಸ ಮಾಡಲೇಬೇಕು.
ಪಶ್ಚಿಮಘಟ್ಟದ ವೈವಿಧ್ಯಮಯ ಜೀವಸಂಕುಲ
ಇನ್ನೂ, ಜಗತ್ತಿನಾದ್ಯಂತ ನೋಡಿದರೆ ಸಾಕಷ್ಟು ಸಂಖ್ಯೆಯಲ್ಲಿ ಅನ್ವೇಷಣೆ ಮಾಡಬಯಸುವ ಪ್ರವಾಸಿಗರು ಕಂಡುಬರುತ್ತಾರೆ. ಇವರು ವೃತ್ತಿಪರ ಛಾಯಾಗ್ರಾಹಕರೂ ಆಗಿರಬಹುದು. ಕಾಡು ಮೇಡುಗಳಲ್ಲಿ ಅಲೆಯುತ್ತ, ನಿರ್ದಿಷ್ಟ ಸ್ಥಳಗಳಿಗೆ ತೆರಳುತ್ತ ಅಪರೂಪದ, ಅಳಿವಿನಂಚಿನಲ್ಲಿರುವ ಜೀವಿಗಳ ಛಾಯಾಚಿತ್ರ ಸೆರೆ ಹಿಡಿಯುವುದೆಂದರೆ ಇವರಿಗೆ ಎಲ್ಲಿಲ್ಲದ ಸಂತಸ.
ಅದರಂತೆ ಭಾರತದಲ್ಲೂ ಸಹ ಇಂತಹ ಪ್ರವಾಸಿ ಅನ್ವೇಷಕರಿಗೆ ಕೊರತೆಯೇನಿಲ್ಲ. ನೀವು ಸಹ ಒಬ್ಬ ಛಾಯಾಗ್ರಾಹಕ ಪ್ರವಾಸಿಗರಾಗಿದ್ದು ಅಪರೂಪವಾದ ಜೀವಿಗಳ ಚಿತ್ರಪಟ ಸೆರೆಹಿಡಿಯಬೇಕೆಂಬ ಆಸೆ ಹೊಂದಿದ್ದರೆ ಈ ಲೇಖನ ಓದಿ ಇಲ್ಲಿ ತಿಳಿಸಲಾದ ಸ್ಥಳಗಳಿಗೆ ತೆರಳಿ ಅದ್ಭುತವಾದ ಪಟಗಳನ್ನು ಕ್ಲಿಕ್ಕಿಸಿ.
ಅಪಾಯದಂಚಿನಲ್ಲಿರುವ ಜೀವಿಗಳು:
ಚೈನೀಸ್ ಪ್ಯಾಂಗೋಲಿನ್ : ಇರುವೆ, ಗೊದ್ದ, ಗೆದ್ದಲು ಹುಳು, ಎರೆ ಹುಳು ಮುಂತಾದವುಗಳನ್ನು ತಿಂದು ಬದುಕುವ ಈ ಸಸ್ತನಿ ಪ್ರಾಣಿ ಒಂದು ಅಪರೂಪದ ಪ್ರಾಣಿಯಾಗಿದೆ. ಚೀನಾದಂತಹ ದೇಶದಲ್ಲಿ ಇದರ ಮಾಂಸಕ್ಕೆ ಇನ್ನಿಲ್ಲದ ಬೇಡಿಕೆಯಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಬೇಟೆಯಾಡಲಾಗಿದ್ದು ಇಂದು ಇವುಗಳ ಸಂತತಿ ಅಳಿವಿನಂಚಿನಲ್ಲಿದೆ. ಸಾಮಾನ್ಯವಾಗಿ ನೀವು ಇದನ್ನು ನೋಡಬೇಕೆಂದರೆ,ಅಸ್ಸಾಂ, ಅರುಣಾಚಲಪ್ರದೇಶ, ನಾಗಾಲ್ಯಾಂಡ್, ತ್ರಿಪುರಾ ಸ್ಥಳಗಳ ಕಾಡು ಪ್ರದೇಶಗಳಲ್ಲಿ ಪ್ರವಾಸ ಮಾಡಬೇಕು.
ಚಿತ್ರಕೃಪೆ: wikipedia
ಅಪಾಯದಂಚಿನಲ್ಲಿರುವ ಜೀವಿಗಳು:
ಭಾರತೀಯ ಘೇಂಡಾಮೃಗ : ಭಾರತ ಉಪಖಂಡಕ್ಕೆ ಮಾತ್ರವೆ ಸೀಮಿತವಾಗಿರುವ ಈ ಪ್ರಾಣಿಯು ಹಿಂದೆ ಸಾಕಷ್ಟು ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಬಾಳುವ ತಮ್ಮ ಕೋಡುಳಿಗಾಗಿ ಬೇಟೆಯಾಡಲ್ಪಟ್ಟಿವೆ. ಇಂದು ಇವುಗಳ ಸಂಖ್ಯೆಯಲ್ಲಿ ಅಷ್ಟೊಂದು ಇಳಿಮುಖವಿಲ್ಲದಿದ್ದರೂ ಇವುಗಳ ಸಂತತಿಯನ್ನು ಉಳಿಸಿ ಬೆಳೆಸಬೆಕಾಗಿದೆ. ಇವುಗಳನ್ನು ಪ್ರಮುಖವಾಗಿ ಉತ್ತರ ಭಾರತದ ಅಸ್ಸಾಂ, ಕಾಜೀರಂಗಾ ರಾಷ್ಟ್ರೀಯ ಉದ್ಯಾನ, ಚಿತ್ವಾನ್ ರಾಷ್ಟ್ರೀಯ ಉದ್ಯಾನ ಮುಂತಾದವುಗಳಲ್ಲಿ ಮಾತ್ರವೆ ಕಾಣಬಹುದು.
ಚಿತ್ರಕೃಪೆ: Yathin S Krishnappa
ಅಪಾಯದಂಚಿನಲ್ಲಿರುವ ಜೀವಿಗಳು:
ಹಿಮ ತೋಳ : ಇವೂ ಸಹ ಅಪಾದಂಚಿನಲ್ಲಿರುವ ಭಾರತೀಯ ಉಪಖಂಡದ ವಿಶಿಷ್ಟಮಯ ತೋಳುಗಳಾಗಿವೆ. ಭಾರತಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಹಿಮಚ್ಛಾದಿತ ಭಾಗಗಳು ಹಾಗೂ ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಮಾತ್ರವೆ ಇವುಗಳನ್ನು ಕಾಣಬಹುದು.
ಚಿತ್ರಕೃಪೆ: Madhu Chetri
ಅಪಾಯದಂಚಿನಲ್ಲಿರುವ ಜೀವಿಗಳು:
ನಮ್ದಫಾ ಹಾರುವ ಅಳಿಲು : ಈ ಅಳಿಲು ಸಾಮಾನ್ಯ ಅಳಿಲುಗಳಂತಿರದೆ ಗಿಡದಿಂದ ಗಿಡಕ್ಕೆ ಹಾರುತ್ತ ಸಾಗುತ್ತವೆ. ಸ್ವಲ್ಪ ಸಮಯದವರೆಗೆ ಗಾಳಿಯಲ್ಲಿ ತೇಲಾಡುವಂತೆ ಇದರ ದೇಹವು ರಚನೆಯಾಗಿರುವುದು ವಿಶೇಷ. ಭಾರತದ ಮಟ್ಟಿಗೆ ಹೇಳಬೇಕೆಂದರೆ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ನಲ್ಲಿರುವ ನಮ್ದಫಾ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದರೆ ಇದರ ದರ್ಶನ ನಿಮಗಾಗಬಹುದು. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: vil.sandi
ಅಪಾಯದಂಚಿನಲ್ಲಿರುವ ಜೀವಿಗಳು:
ಏಷಿಯಾಟಿಕ್ ಸಿಂಹ : ಏಷಿಯಾಟಿಕ್ ಸಿಂಹಗಳು ಅತಿ ಅಪರೂಪದ ಭಾರತದ ಗುಜರಾತ್ ರಾಜ್ಯದಲ್ಲಿ ಮಾತ್ರವೆ ಕಂಡುಬರುವ ಅಳಿವಿನಂಚಿನಲ್ಲಿರುವ ಪ್ರಾಣಿ ಸಂತತಿಯಾಗಿದೆ. ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಕಂಡುಬರುವ ಈ ಸಿಂಹಗಳ ಸಂತತಿಯಲ್ಲಿ ಇತ್ತೀಚಿನ ಕೆಲ ವರ್ಷದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ.
ಚಿತ್ರಕೃಪೆ: Bernard Gagnon
ಅಪಾಯದಂಚಿನಲ್ಲಿರುವ ಜೀವಿಗಳು:
ಅಂಬೋಲಿ ಕಪ್ಪೆ : ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ಅಂಬೋಲಿ ಒಂದು ನಯನ ಮನೋಹರ ಗಿರಿಧಾಮ ಪ್ರದೇಶ. ಮಳೆಗಾಲದ ಸಮಯದಲ್ಲಂತೂ ಈ ಸುಂದರ ಗಿರಿಧಾಮವು ತನ್ನಲ್ಲಿರುವ ಅಂಬೋಲಿ ಜಲಪಾತದಿಂದ ಎಲ್ಲರನ್ನೂ ಆಕರ್ಷಿಸುತ್ತದೆ. ಪಶ್ಚಿಮಘಟ್ಟದಲ್ಲಿರುವ ಈ ಗಿರಿಧಾಮದ ಸುತ್ತಮುತ್ತಲು ಮಾತ್ರವೆ ಕಂಡುಬರುವ ವಿಶಿಷ್ಟ ಕಪ್ಪೆ ಇದಾಗಿದೆ. ಇದು ಇಲ್ಲಿ ಮಾತ್ರವೆ ಕಂಡುಬರುವುದರಿಂದ ಅತಿ ಹೆಚ್ಚು ಅಳಿವಿನಂಚಿನಲ್ಲಿರುವ ಜೀವಿಯಾಗಿದೆ.
ಚಿತ್ರಕೃಪೆ: Sumeet Moghe
ಅಪಾಯದಂಚಿನಲ್ಲಿರುವ ಜೀವಿಗಳು:
ಆನಮಲೈ ಹಾರುವ ಕಪ್ಪೆ : ಹೆಸರೆ ಸೂಚಿಸುವ ಹಾಗೆ ಈ ಕಪ್ಪೆಗಳು ತಮಿಳುನಾಡಿನ ಆನಮಲೈ/ಅಣ್ಣಾಮಲೈ ಬೆಟ್ಟ ಶ್ರೇಣಿಗಳಲ್ಲಿ ಮುಖ್ಯವಾಗಿ ಹಾಗೂ ಕೇರಳದ ಕೆಲ ಭಾಗಗಳಲ್ಲಿ ಮಾತ್ರವೆ ಕಂಡುಬರುತ್ತವೆ. ಗಿಡದ ಟೊಂಗೆಗಳಿಂದ ಈ ಕಪ್ಪೆ 45 ಡಿಗ್ರಿಗಳಷ್ಟು ಕೋನದಲ್ಲಿ ಹಾರುವ ರೀತಿಯಲ್ಲಿ ಕೆಳಗಿಳಿಯಬಲ್ಲವಾದ್ದರಿಂದ ಇವುಗಳಿಗೆ ಹಾರುವ ಕಪ್ಪೆ ಎಂದು ಕರೆಯಲಾಗಿದೆ. ಅಣ್ಣಾಮಲೈ ಬೆಟ್ಟಕ್ಕೆ ಚಾರಣಕ್ಕೇನಾದರೂ ಹೋದರೆ ಈ ಕಪ್ಪೆಗಳನ್ನು ನೋಡಲು ಮರೆಯದಿರಿ.
ಚಿತ್ರಕೃಪೆ: Kalyanvarma
ಅಪಾಯದಂಚಿನಲ್ಲಿರುವ ಜೀವಿಗಳು:
ದತ್ತಾತ್ರೇಯ ರಾತ್ರಿ ಕಪ್ಪೆ : ಹೆಸರೆ ವಿಶಿಷ್ಟವಾಗಿದೆ ಈ ಕಪ್ಪೆಗೆ. ಇದು ಪಶ್ಚಿಮಘಟ್ಟಗಳಲ್ಲಿ ಅದರಲ್ಲೂ ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿರುವ ದತ್ತಾತ್ರೇಯ ಪೀಠದ ಸುತ್ತಮುತ್ತ ಹೆಚ್ಚಾಗಿ ಕಂಡುಬರುವುದರಿಂದ ಇದಕ್ಕೆ ದತ್ತಾತ್ರೇಯ ಕಪ್ಪೆ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Karthickbala
ಅಪಾಯದಂಚಿನಲ್ಲಿರುವ ಜೀವಿಗಳು:
ಘರಿಯಾಲ್ : ಒಂದು ವಿಶಿಷ್ಟ ರಿತಿಯ ಮೊಸಳೆ ಪ್ರಬೇಧ ಇದಾಗಿದೆ. ದೇಹ ದೊಡ್ಡದಾಗಿದ್ದರೂ ಚಿಕ್ಕ ಹಾಗೂ ಉದ್ದವಾದ ಬಾಯಿಯನ್ನು ಹೊಂದಿರುವ ಈ ಜೀವಿ ಸಾಮಾನ್ಯವಾಗಿ ಮೊಸಳೆಗಳಂತೆ ಇತರೆ ಪ್ರಾಣಿಗಳನ್ನು ತಿನ್ನಲಾರದೆ ಮೀನುಗಳನ್ನು ತಿಂದು ಬದುಕುತ್ತವೆ. ಉತ್ತರ ಭಾರತದ ಒಡಿಶಾ ರಾಜ್ಯದ ಮಹಾನದಿಯ ತಟದ ಸತ್ಕೋಶಿಯಾ ಅಭಯಾರಣ್ಯ ಹಾಗೂ ರಾಷ್ಟ್ರೀಯ ಚಂಬಲ್ ವನ್ಯಜೀವಿಧಾಮಗಳಲ್ಲಿ ಕಂಡುಬರುತ್ತವೆ.
ಅಪಾಯದಂಚಿನಲ್ಲಿರುವ ಜೀವಿಗಳು:
ಹಾವ್ಕ್ಸ್ ಬಿಲ್ ಸಮುದ್ರದಾಮೆ : ಜಗತ್ತಿನ ಹಲವು ಕಡಲ ತೀರಗಳು ಅದರಲ್ಲೂ ವಿಶೇಷವಾಗಿ ಹವಳದ ದಿಬ್ಬಗಳಿರುವೆಡೆ ಇವು ಕಂಡುಬರುತ್ತಾವಾದರೂ ಭಾರತದ ಮಟ್ಟಿಗೆ ಲಕ್ಷದ್ವೀಪದ ಹವಳದ ದಿಬ್ಬಗಳಿರುವ ಕಡಲ ತೀರಗಳಲ್ಲಿ ಇವು ಕಂಡುಬರುತ್ತವೆ.
ಚಿತ್ರಕೃಪೆ: magicOlf
ಅಪಾಯದಂಚಿನಲ್ಲಿರುವ ಜೀವಿಗಳು:
ಕಾಡುಗೂಬೆ : ಒಂದೊಮ್ಮೆ ಅಳಿದುಹೋದ ಪಖ್ಶಿ ಎಮ್ದು ಇದನ್ನು ಭಾವಿಸಲಾಗಿತ್ತಾದರೂ 1997 ರಲ್ಲಿ ಮತ್ತೆ ಮರುಶೋಧಿಸಲಾಯಿತು. ಪಶ್ಚಿಮ ಅಸ್ಸಾಂ, ಮಧ್ಯಪ್ರದೇಶ ಹಾಗೂ ಉತ್ತರ ಮಹಾರಾಷ್ಟ್ರದ ಕಾಡುಗಳಲ್ಲಿ ಮಾತ್ರವೆ ಸಾಮಾನ್ಯವಾಗಿ ಈ ಗೂಬೆಗಳು ಕಂಡುಬರುತ್ತವೆ.
ಚಿತ್ರಕೃಪೆ: Ashahar alias Krishna Khan
ಅಪಾಯದಂಚಿನಲ್ಲಿರುವ ಜೀವಿಗಳು:
ಬಿಳಿ ಪೃಷ್ಠದ ರಣಹದ್ದು : ಕೇವಲ ಗಂಗಾ ನದಿ ಬಯಲು ಪ್ರದೇಶಗಳಲ್ಲಿ ಮಾತ್ರವೆ ಇಂದು ಇದು ಕಂಡುಬರುತ್ತದೆ. ಹಿಂದೊಮ್ಮೆ ಆಂಧ್ರದ ಗುಂಟೂರು ಹಾಗೂ ಪ್ರಕಾಶಂ ಜಿಲ್ಲೆಗಳಲ್ಲಿ ಕಂಡುಬರುತ್ತಿದ್ದ ಈ ರಣಹದ್ದುಗಳು ಇಂದು ಅಲ್ಲಿ ಕಂಡುಬರುತ್ತಿಲ್ಲ. ಹೀಗಾಗಿ ಇದು ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಬೇಧವಾಗಿದೆ.
ಚಿತ್ರಕೃಪೆ: Goran Ekstrom
ಅಪಾಯದಂಚಿನಲ್ಲಿರುವ ಜೀವಿಗಳು:
ಜೆರ್ಡಾನ್ ಕೊರ್ಸರ್ : ಇದು ಭಾರತಕ್ಕೆ ಮಾತ್ರ ಸೀಮಿತವಾದ ಹಕ್ಕಿ. ಅದರಲ್ಲೂ ವಿಶೇಷವಾಗಿ ಆಂಧ್ರಪ್ರದೇಶದ ಪೂರ್ವಘಟ್ಟಗಳ ಶ್ರೀ ಲಂಕಮಲ್ಲೇಶ್ವರ ವನ್ಯಜೀವಿಧಾಮದಲ್ಲಿ ಮಾತ್ರವೆ ಕಂಡುಬರುತ್ತವೆ. ಥಾಮಸ್ ಜೆರ್ಡಾನ್ ಎಮ್ಬಾತನು 1848 ರಲ್ಲಿ ಮೊದಲಬಾರಿಗೆ ಇದನ್ನು ಶೋಧಿಸಿದ್ದನು. ನಂತರ ಎಂದಿಗೂ ಕಾಣದ ಈ ಹಕ್ಕಿ 1986 ರಲ್ಲಿ ಮರುಶೋಧಿಸಲ್ಪಟ್ಟಿತು.
ಚಿತ್ರಕೃಪೆ: PJeganathan
ಅಪಾಯದಂಚಿನಲ್ಲಿರುವ ಜೀವಿಗಳು:
ಉದ್ದಹಲ್ಲುಗಳ ಗರಗಸ ಮೀನು : ಗರಗಸದ ರೀತಿಯಲ್ಲಿ ಹಲ್ಲುಗಲನ್ನು ಹೊಂದಿರುವ ಈ ಮೀನು ಸಾಮಾನ್ಯವಾಗಿ ಅಂಡಮಾನ್ ನಿಕೋಬಾರ್ ದ್ವೀಪಗಳ ಸಮುದ್ರದಲ್ಲಿ ಹಾಗೂ ಲಕ್ಷದ್ವೀಪದ ಕಡಲಗಳಲ್ಲಿ ಕಂಡುಬರುತ್ತವೆ.
ಚಿತ್ರಕೃಪೆ: J. Patrick Fischer
ಅಪಾಯದಂಚಿನಲ್ಲಿರುವ ಜೀವಿಗಳು:
ಕೆಂಪು ಪಟ್ಟಿಯ ಟಾರ್ಪಿಡೊ ಮೀನು : ಅಲಂಕಾರಿಕ ಮೀನುಗಳಲ್ಲಿ ಹೆಚ್ಚು ಜನಪ್ರೀಯವಾಗಿದೆ ಆದರೂ ಈ ಪ್ರಬೇಧದ ಮೀನುಗಳು ಅಳಿವಿನಂಚಿನಲ್ಲಿವೆ ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಅದರಲ್ಲೂ ವಿಶೇಷವಾಗಿ ಕೇರಳದ ಅಚನ್ಕೋವಿಲ್, ಚಲಿಯಾರ್ ನದಿಗಳಲ್ಲಿ ಈ ಮೀನುಗಳು ಕಂಡುಬರುತ್ತವೆ.
ಚಿತ್ರಕೃಪೆ: Michał Zalewski
ಅಪಾಯದಂಚಿನಲ್ಲಿರುವ ಜೀವಿಗಳು:
ನಾರ್ಕೊಂಡಮ್ ಹಾರ್ನ್ ಬಿಲ್ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸ್ವಮೂಹಗಳಲ್ಲಿರುವ ನಾರ್ಕೊಂಡಮ್ ಜ್ವಾಲಾಮುಖಿ ನಡುಗಡ್ಡೆಯ ಪ್ರದೇಶದಲ್ಲಿ ಮಾತ್ರವೆ ಇದು ಕಂಡುಬರುವುದರಿಂದ ಇದಕ್ಕೆ ನಾರ್ಕೊಂಡಮ್ ಹಾರ್ನ್ ಬಿಲ್ ಎಂದು ಕರೆಯುತ್ತಾರೆ.
ಚಿತ್ರಕೃಪೆ: Kalyan Varma
ಅಪಾಯದಂಚಿನಲ್ಲಿರುವ ಜೀವಿಗಳು:
ಅಸ್ಸಾಂ ಹೆಂಚಿನ ಆಮೆ : ಭಾರತದ ಮಟ್ಟಿಗೆ ಅಸ್ಸಾಂನ ತಾಜಾ ನೀರಿನ ಕೆರೆಗಳಲ್ಲಿ ಮಾತ್ರವೆ ಈ ಆಮೆಗಳು ಕಂಡುಬರುತ್ತವೆ. ಆಮೆಯ ಬೆನ್ನಿನ ಕವಚವು ಮನೆಗಳ ಹೆಂಚಿನ ರೀತಿಯಲ್ಲಿ ಕಂಡುಬರುವುದರಿಂದ ಅಸ್ಸಾಂ ರೂಫ್ಡ್ ಟರ್ಟಲ್ ಎಂದೆ ಇದನ್ನು ಕರೆಯುತ್ತಾರೆ.
ಚಿತ್ರಕೃಪೆ: Nandini Velho
ಅಪಾಯದಂಚಿನಲ್ಲಿರುವ ಜೀವಿಗಳು:
ಮೀನು ಹಿಡಿಯುವ ಬೆಕ್ಕು : ಭಾರತದಲ್ಲಿ ತರಾಯಿ ಭಾಗ ಅಂದರೆ ಹಿಮಾಲಯದ ಕೆಳಭಾಗದಲ್ಲಿ ವಿಶಾಲವಾಗಿ ಹರಡಿರುವ ಬಯಲು ಪ್ರದೇಶದಲ್ಲಿ ಸಾಮಾನ್ಯವಾಗಿ ಇವು ಕಂಡುಬರುತ್ತವೆ. ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಉತ್ತರಾಖಂಡದ ಹಲವು ಭಾಗಗಳಲ್ಲಿ ವಿಶೇಷವಾಗಿ ಕೆರೆಗಳಿರುವ ಕಾಡು ಪ್ರದೇಶಗಳಲ್ಲಿ, ಮ್ಯಾಂಗ್ರೋವ್ ಕಾಡುಗಳಲ್ಲಿ ಇವು ಕಂಡುಬರುತ್ತವೆ. ಪ್ರಧಾನವಾಗಿ ಕೆರೆಯಲ್ಲಿನ ಮೀನುಗಳನ್ನು ಹಿಡಿದು ತಿಂದು ಇವು ಬದುಕುತ್ತವೆ. ಪಶ್ಚಿಮ ಬಂಗಾಳದ ರಾಜ್ಯದ ಪ್ರಾಣಿಯಾಗಿದೆ.
ಚಿತ್ರಕೃಪೆ: Mike R
ಅಪಾಯದಂಚಿನಲ್ಲಿರುವ ಜೀವಿಗಳು:
ಹಿಮಚಿರತೆ : ಭಾರತದ ಭಾಗದಲ್ಲಿರುವ ಹಿಮಾಲಯದ ಭಾಗಗಳಲ್ಲಿ ಈ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಚಿರತೆಗಳು ಕಂಡುಬರುತ್ತವೆ. ಇದರ ಚರ್ಮವು ಸಾಮಾನ್ಯ ಚಿರತೆಗಳಿಂತಿರದೆ ದಪ್ಪವಾಗಿದ್ದು ಹಿಮದ ವಾತಾವರಣಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿರುತ್ತದೆ.
ಚಿತ್ರಕೃಪೆ: Quadell