ದಕ್ಷಿಣ ಭಾರತದಲ್ಲಿ ಕಲೆ, ಸಾಹಿತ್ಯ, ಧರ್ಮ ಹಾಗೂ ಐತಿಹಾಸಿಕ ವಿಚಾರದಲ್ಲಿ ವಿಶೇಷ ಹಿರಿಮೆಯನ್ನು ಪಡೆದ ಕ್ಷೇತ್ರವೆಂದರೆ ತಂಜಾವೂರು. ಚೋಳರು, ಪಾಂಡ್ಯರು, ವಿಜಯನಗರ ಅರಸರು ಹಾಗೂ ಮರಾಠರು ಆಳಿದ ಸ್ಥಳವಿದು. ಹಾಗಾಗಿಯೇ ಶ್ರೀಮಂತ ಶಿಲ್ಪಕಲೆಯಿಂದ ಆವೃತಗೊಂಡ ದೇವಾಲಯಗಳು ಇಲ್ಲಿವೆ.
ಹಿಂದೂ ದೇವರ ಚಿತ್ರಕಲೆಯಲ್ಲಿ ತಂಜಾವೂರು ಶೈಲಿಯ ಚಿತ್ರ ಕಲೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇವರ ಈ ಕಲೆಯಲ್ಲಿ ಅಪರೂಪದ ಕಲ್ಲು, ಮುತ್ತು ಹಾಗೂ ಎಲೆಗಳಿರುವುದನ್ನು ಕಾಣಬಹುದು. ತಂಜಾವೂರಿನ ಪ್ರತಿಯೊಂದು ಚಿತ್ರದಲ್ಲೂ ಕಲಾ ಪ್ರೀತಿ ಎದ್ದು ಕಾಣುತ್ತದೆ. ಚೋಳರ ಕಾಲದಲ್ಲಿ ಈ ಕಲೆ ಹುಟ್ಟಿತ್ತಾದರೂ ಜನ ಮೆಚ್ಚುಗೆ ಪಡೆದಿದ್ದು 16-18 ನೇ ಶತಮಾನದಲ್ಲಿ.
ತಂಜಾವೂರಿನ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಬಿಳಿ ಹಾಗೂ ನೀಲಿ ಬಣ್ಣಗಳಿಂದ ಚಿತ್ರ ಬರೆದು, ಅದಕ್ಕೆ ಕಂಬ, ಕಮಾನು, ಚೌಕಟ್ಟುಗಳಿಂದ ಸಿಂಗರಿಸಿರುತ್ತಾರೆ. ಇಲ್ಲಿಯ ಪ್ರವಾಸಕ್ಕೆ ಬಂದಾಗ ಈ ಬಗೆಯ ಫೋಟೊಗಳನ್ನು ಖರೀದಿಸಲು ಮರೆಯದಿರಿ. ಬೆಂಗಳೂರಿನಿಂದ 391.8 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಪ್ರವಾಸ ಕೈಗೊಂಡರೆ ನೋಡಬಹುದಾದಂತಹ ಅನೇಕ ಸ್ಥಳಗಳಿವೆ.
ಬೃಹದೀಶ್ವರ ದೇವಾಲಯ
ಬೆಣಚು ಕಲ್ಲಿನಿಂದ ನಿರ್ಮಾಣಗೊಂಡ ವಿಶ್ವದ ಏಕೈಕ ದೇಗುಲ ಬೃಹದೀಶ್ವರ ದೇಗುಲ. ಚೋಳರ ಕಾಲದಲ್ಲಿ ನಿರ್ಮಾಣಗೊಂಡು, ಸುಂದರ ಶಿಲ್ಪಕಲೆಗೆ ಹೆಸರಾಗಿದೆ. ಈ ದೇಗುಲದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ವಿಶ್ವ ಪರಂಪರೆಯ ತಾಣ ಎಂದು ಕರೆಯಲ್ಪಡುವ ಈ ದೇಗುಲ 16ನೇ ಶತಮಾನದ ಇತಿಹಾಸವನ್ನು ಒಳಗೊಂಡಿದೆ. ಪ್ರವೇಶ ದ್ವಾರದಲ್ಲಿರುವ ನಂದಿ ಮೂರ್ತಿಯನ್ನು ಒಂದೇ ಬಂಡೆಯಲ್ಲಿ ಕೆತ್ತಲಾಗಿದೆ. ಇದು 16 ಅಡಿ ಉದ್ದ, 13 ಅಡಿ ಎತ್ತರವನ್ನು ಹೊಂದಿದೆ. ಬೆಂಗಳೂರಿನಿಂದ 391 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ 3 ರಿಂದ 4 ತಾಸುಗಳ ಪ್ರಯಾಣ ಮಾಡಬೇಕು.
PC: wikipedia.org
ಐರಾವತೇಶ್ವರ ದೇವಸ್ಥಾನ
ದರಾಸುರಮ್ ಊರಿನಲ್ಲಿ ಬರುವ ಈ ದೇಗುಲ 12ನೇ ಶತಮಾನದ ಇತಿಹಾಸವನ್ನು ಒಳಗೊಂಡಿದೆ. ಚೋಳರ ಕಾಲದಲ್ಲಿಯೇ ನಿರ್ಮಿಸಲಾದ ಈ ದೇವಾಲಯಕ್ಕೆ ಅನೇಕ ಕಥೆ ಪುರಾಣಗಳ ನಂಟಿದೆ. ಬೆಂಗಳೂರಿನಿಂದ 409.4 ಕಿ.ಮೀ. ದೂರದಲ್ಲಿರುವ ಈ ದೇಗುಲಕ್ಕೆ 3-4 ತಾಸುಗಳ ಪ್ರಯಾಣ ಬೆಳೆಸಬೇಕು.
PC: wikipedia.org
ರಾಯಲ್ ಅರಮನೆ
ತಂಜಾವೂರಿನ ಒಂದು ಆಕರ್ಷಣೀಯ ಸ್ಥಗಳಲ್ಲಿ ರಾಯಲ್ ಅರಮನೆಯೂ ಒಂದು. ಸುಂದರವಾದ ವಿನ್ಯಾಸದಲ್ಲಿ ರಚನೆಗೊಂಡ ಈ ಅರಮನೆ ನಾಯಕ ರಾಜನ ಅರಮನೆಯಾಗಿತ್ತು ಎನ್ನಲಾಗುತ್ತದೆ. ಇದರಲ್ಲಿರುವ ಸಭಾಂಗಣ, ಸರಸ್ವತಿ ಮಹಲ್ ಗೃಂಥಾಲಯ, ದರ್ಬಾರ್ ಹಾಲ್ಗಳನ್ನು ನೋಡುವ ಹಾಗಿದೆ. ಸುಂದರ ಚಿತ್ರವಿನ್ಯಾಸಗಳಿಂದ ಕೂಡಿರುವ ಅರಮನೆ ಗತಕಾಲದ ವೈಭವಕ್ಕೆ ಕನ್ನಡಿ ಹಿಡಿಯುತ್ತದೆ. ಬೆಂಗಳೂರಿನಿಂದ 392 ಕಿ.ಮೀ. ದೂರದಲ್ಲಿದೆ.
PC: wikipedia.org
ಸರಸ್ವತಿ ಮಹಲ್ ಗ್ರಂಥಾಲಯ
ಏಷ್ಯಾದಲ್ಲಿರುವ ಅತ್ಯಂತ ಪುರಾತನ ಗ್ರಂಥಾಲಯವಿದು. ತಮಿಳು, ಹಿಂದಿ, ತೆಲಗು, ಮರಾಠಿ, ಇಂಗ್ಲಿಷ್ ಸೇರಿದಂತೆ ಭಾರತದಲ್ಲಿರು ಸ್ಥಳೀಯ ಭಾಷೆಗಳ ಪುಸ್ತಕಗಳ ಸಂಗ್ರಹವು ಇಲ್ಲಿದೆ. ಇದೊಂದು ವಸ್ತು ಸಂಗ್ರಹಾಲಯ ಆಗಿರುವುದರಿಂದ ಇತಿಹಾಸಕ್ಕೆ ಸಂಬಂಧಿಸಿದ ಸಂಗತಿಗಳನ್ನು ಇಲ್ಲಿ ಕಾಣಬಹುದು.
PC: wikipedia.org
ತಿರುಮನಂಜೆರಿ ದೇವಸ್ಥಾನ
ಪಾರ್ವತಿ ದೇವಿಯು ಶಿವನನ್ನು ವಿವಾಹವಾಗಲು ತಪಸ್ಸು ಮಾಡಿದ ಸ್ಥಳವೆಂದು ಹೇಳಲಾಗುತ್ತದೆ. ತಪಸ್ಸಿನ ಫಲದಿಂದ ಶಿವನನ್ನು ಇಲ್ಲಿಯೇ ವಿವಾಹವಾದಳು ಎನ್ನುವ ಇತಿಹಾಸವನ್ನು ಈ ದೇಗುಲ ಸಾರುತ್ತದೆ. ಶಿವ ಪಾರ್ವತಿಯ ಕೈಹಿಡಿದು ನಿಂತಿರುವ ಮೂರ್ತಿಯನ್ನೇ ಇಲ್ಲಿ ಪೂಜಿಸಲಾಗುತ್ತದೆ. ಪವಿತ್ರ ವಾಸ್ತು ಶಿಲ್ಪಗಳನ್ನು ದೇವಾಲಯ ಹೊಂದಿದೆ.
ಸುಕ್ಕಿರನ್ ದೇಗುಲ
ಪುಟ್ಟ ಹಳ್ಳಿಯಲ್ಲಿರುವ ಈ ದೇಗುಲದಲ್ಲಿ ನವಗ್ರಹ ಮೂರ್ತಿಗಳನ್ನು ಪೂಜಿಸಲಾಗುತ್ತದೆ. ನಗರ ಪ್ರದೇಶದಿಂದ ಒಳಭಾಗದಲ್ಲಿರುವ ಈ ದೇಗುಲಕ್ಕೆ ಸಾಗುವ ದಾರಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯಬಹುದು.