ಕರ್ನಾಟಕದ ಸಕ್ಕರೆ ನಾಡು ಎಂದೆ ಖ್ಯಾತಿಗಳಿಸಿರುವ ಮಂಡ್ಯ ಜಿಲ್ಲೆಯು ಧಾರ್ಮಿಕವಾಗಿಯೂ ಸಾಕಷ್ಟು ಶ್ರೀಮಂತಿಕೆಯನ್ನು ಹೊಂದಿರುವ ನಾಡಾಗಿದೆ. ಈ ಜಿಲ್ಲೆಯಾದ್ಯಂತ ಒಂದು ಸುತ್ತು ಸಂಚರಿಸಿದರೆ ಸಾಕು, ನೀವು ಭೇಟಿ ನೀಡಬಹುದಾದ ದೇವಾಲಯಗಳ, ಧಾರ್ಮಿಕ ಸ್ಥಳಗಳ ಸಂಖ್ಯೆ ನಿಮಗೆ ಮರೆತು ಹೋಗುತ್ತದೆ.
ಮಂಡ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಧಾರ್ಮಿಕ ಹಿನ್ನೆಲೆ ಇರುವ ಅನೇಕ ಸ್ಥಳಗಳಿವೆ. ವೈಷ್ಣವ ಸಂಪ್ರದಾಯಕ್ಕೆ ಸಾಕ್ಷಿಯಾಗಿರುವ ದೇವಾಲಯಗಳಿವೆ. ರಾಮಾನುಜರು ಸ್ಥಾಪಿಸಿದ ಪಂಚನಾರಾಯಣ ಕ್ಷೇತ್ರಗಳ ಪೈಕಿ ಮಂಡ್ಯ ಜಿಲ್ಲೆಯೊಂದರಲ್ಲೆ ಎರಡು ನಾರಾಯಣ ಕ್ಷೇತ್ರಗಳಿರುವುದು ವಿಶೇಷ.
ಕಂಡೂ ಕಾಣದಂತಿರುವ ಪಾಂಡವಪುರ ವಿಶೇಷ
ಒಂದು ಮೇಲುಕೋಟೆಯ ತಿರುನಾರಾಯಣನಾದರೆ, ಇನ್ನೊಂದು ತೊಂಡನೂರಿನ ನಂಬಿ ನಾರಾಯಣ ಕ್ಷೇತ್ರ. ಪ್ರಸ್ತುತ ಲೇಖನದಲ್ಲಿ ತೊಂಡನೂರು ಕ್ಷೇತ್ರ ಹಾಗೂ ಇಲ್ಲಿನ ಪವಿತ್ರ ಕೆರೆಯ ಕುರಿತು ತಿಳಿಸಲಾಗಿದೆ. ಮಂಡ್ಯದ ಮೇಲುಕೋಟೆ ಹಾಗೂ ಪಾಂಡವಪುರದಿಂದ ತೊಂಡನೂರಿಗೆ ಹೋಗುವುದು ಸುಲಭವಾಗಿದೆ. ಸಾಕಷ್ಟು ಬಸ್ಸುಗಳು ದೊರೆಯುತ್ತವೆ, ಅಲ್ಲದೆ ಬಾಡಿಗೆ ಕಾರುಗಳೂ ಸಹ ಲಭ್ಯ.
ವಿಶಿಷ್ಟಾದ್ವೈತ ಸ್ಥಾಪಕರು
ದ್ವೈತ, ಅದ್ವೈತ ಪಂಥಗಳನ್ನು ಹೊರತುಪಡಿಸಿ ವಿಶಿಷ್ಟಾಸ್ವೈತ ಪಂಥವನ್ನು ಸ್ಥಾಪಿಸಿದ ಶ್ರೀ ರಾಮಾನುಜಾಚಾರ್ಯರು ಈ ಕ್ಷೇತ್ರದೊಂದಿಗೆ ಸಾಕಷ್ಟು ನಂಟನ್ನು ಹೊಂದಿದ್ದಾರೆ ಎಂದು ತಿಳಿದುಬರುತ್ತದೆ. ಆ ಕಾರಣವಾಗಿ ತೊಂಡನೂರು ಧಾರ್ಮಿಕ ಆಕರ್ಷಣೆ ಇರುವ ಕೆಂದ್ರವಾಗಿಯೂ ಜನರ ಗಮನಸೆಳೆಯುತ್ತದೆ.
ಚಿತ್ರಕೃಪೆ: Debanjon
ರೋಸಿಹೋಗಿದ್ದರು
ತಮಿಳುನಾಡಿನ ಪ್ರಾಂತ್ಯವೊಂದರಲ್ಲಿ ಜನಿಸಿದ್ದ ರಾಮಾನುಜಾಚಾರ್ಯರು ಒಂದೊಮ್ಮೆ ತಮಿಳು ರಾಜ್ಯದ ಕ್ರಿಮಿಕಾಂತ ಎಂಬ ದುಷ್ಟ ರಾಜನ ಆಳ್ವಿಕೆಯಿಂದ ಬೇಸತ್ತು ಒಬ್ಬರ ಮಾರ್ಗದರ್ಶನದ ಮೆರೆಗೆ ತಮಿಳುನಾಡಿನ ಶ್ರೀರಂಗಂ ತೊರೆದು ತೊಂಡನೂರು ಪ್ರಾಂತ್ಯಕ್ಕೆ ಬಂದರೆಂದು ಇಲ್ಲಿನ ಸ್ಥಳಪುರಾಣ ಹೇಳುತ್ತದೆ. ಶ್ರೀರಂಗಂ ಕ್ಷೇತ್ರ.
ಚಿತ್ರಕೃಪೆ: Ajay Goyal
ಈ ಕೆರೆ
ಇಲ್ಲಿ ಬಂದು ನೆಲೆಸಿದ ನಂತರ ಅವರ ಶಿಷ್ಯನಾದ ನಂಬಿ ಎಂಬುವವರು ಇಲ್ಲಿನೆ ಕೆರೆಯ ನಿರ್ಮಾಣ ಮಾಡಿದರೆನ್ನಲಾಗಿದೆ. ಈ ಕೆರೆ ಹಾಗೂ ಸುತ್ತಮುತ್ತಲಿನ ಕ್ಷೇತ್ರವು ಸಾಕಷ್ಟು ಧನಾತ್ಮಕವಾಗಿದ್ದುದರಿಂದ ರಾಮಾನುಜರು ಕೆಲ ಕಾಲ ಇಲ್ಲಿಯೆ ನೆಲೆಸಿದ್ದರೆಂಬ ಪ್ರತೀತಿಯಿದೆ.
ಚಿತ್ರಕೃಪೆ: sai sreekanth mulagaleti
ಬಿಟ್ಟದೇವ
ಈ ಕೆರೆಯ ಕ್ಷೇತ್ರದಲ್ಲಿ ನೆಲೆಸಿದ್ದಾಗ ರಾಮಾನುಜರು ಸಾಕಷ್ಟು ಪವಾಡಗಳನ್ನು ಮಾಡಿದ್ದರೆಂಬ ಪ್ರತೀತಿಯಿದೆ. ಪ್ರದೇಶದ ರಾಜನಾದ ಬಿಟ್ಟದೇವನು ಒಂದು ತೊಂದರೆ ಅನುಭವಿಸುತ್ತಿದ್ದನು. ಅದೆನೆಂದರೆ ಆತನ ಒಬ್ಬಳೆ ಒಬ್ಬ ಮಗಳು ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಳು ಹಾಗೂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು.
ಸಫಲವಾಗಿರಲಿಲ್ಲ
ರಾಜ ಎಷ್ಟೆ ವೈದ್ಯಪ್ರಯತ್ನಗಳನ್ನು ಮಾಡಿಸಿದ್ದರೂ ಅವಳು ಗುಣಮುಖಳಾಗಿರಲಿಲ್ಲ. ಹೀಗಿರುವಾಗ ರಾಮಾನುಜರು ಬಂದು ನೆಲೆಸಿರುವ ಸುದ್ದಿ ರಾಜನ ಕಿವಿಗೆ ಬಿದ್ದು, ರಾಜನು ಮಗಳ ಸಮೇತ ಅವರ ದರ್ಶನಕ್ಕೆ ಬಂದು ತನ್ನ ಮನದ ನೋವನ್ನು ವಿವರಿಸಿದನು.
ಯೋಗ ನರಸಿಂಹ
ಅದನ್ನು ಕೇಳಿದ ರಾಮಾನುಜರು ಅವಳಿಗೆ ಕೆರೆಯಲ್ಲಿ ಸ್ನಾನ ಮಾಡಿ, ಶುಚಿರ್ಭೂತಳಾಗಿ ದೈವ ಸನ್ನಿಧಿಯಲ್ಲಿ ಕೂರಲು ಹೇಳಿದರು. ಅವಳು ಅದರಂತೆ ಮಾಡಿ ಕುಳಿತಾಗ ಯೋಗ ನರಸಿಂಹರನ್ನು ನೆನೆಸಿಕೊಂಡು ದಂಡವೊಂದನ್ನು ಆಕೆಯ ಭುಜದ ಮೇಲೆ ನಗುತ್ತ ರಾಮಾನುಜರು ಇಟ್ಟರು ಅಷ್ಟೆ. ಆ ಕ್ಷಣದಲ್ಲೆ ಅವಳಿಗಿದ್ದ ಕಾಯಿಲೆ ಸಂಪೂರ್ಣ ಗುಣಮುಖವಾಗಿ ಅವಳು ಸರಿಯಾಗಿಬಿಟ್ಟಳು.
ವಿಷ್ಣುವರ್ಧನನಾದ
ಇದನ್ನು ಕಂಡ ರಾಜನು ಸಾಕಷ್ಟು ಸಂತಸಪಟ್ಟು ರಾಮಾನುಜರ ಅನುಯಾಯಿ ಆದನಲ್ಲದೆ ತನ್ನನ್ನು ತಾನು ಶ್ರೀವೈಷ್ಣವ ಮತಕ್ಕೆ ಪರಿವರ್ತಿಸಿಕೊಂಡು ವಿಷ್ಣು ವರ್ಧನ ಎಂಬ ಹೊಸ ನಾಮಧೇಯವನ್ನು ಪಡೆದನು.
ಪಂಡಿತರು ಆಗಮಿಸಿದರು
ಇನ್ನೊಮ್ಮೆ ರಾಮಾನುಜರು ತಮ್ಮ ಕೋಣೆಯಲ್ಲಿ ಧ್ಯಾನ ಮಗ್ನರಾದಾಗ ಹೊರಗಿನಿಂದ ಸಾವಿರ ಸಂಖ್ಯೆಯಲ್ಲಿ ಜೈನ ಪಂಡಿತರು ರಾಮಾನುಜರ ಸ್ಥಳಕ್ಕೆ ಬಂದು ಅವರನ್ನು ಅವಮಾಅನಿಸುವ ಉದ್ದೇಶದಿಂದ ಏಕ ಕಾಲಕ್ಕೆ ಎಲ್ಲರೂ ಸಾವಿರ ಪ್ರಶ್ನೆಗಳನ್ನು ಕೇಳಿದರು. ಅವರು, ಇದರಿಂದ ರಾಮಾನುಜರು ಗೊಂದಲಕ್ಕೀಡಾಗಿ ಅವಮಾನಿತರಾಗಬಹುದೆಂದು ಅವರ ಊಹೆಯಾಗಿತ್ತು.
ಸಾವಿರ ಪ್ರಶ್ನೆಗೂ!
ಆದರೆ ಅವರ ಮನೆಯ ಮುಂದೆ ಒಣ ಹಾಕಿದ್ದ ಬಿಳಿ ಪಂಚೆಯೊಂದರ ಹಿಂದಿನಿಂದ ಎಲ್ಲ ಸಾವಿರ ಜನರ ಪ್ರಶ್ನೇಗೂ ಏಕಕಾಲದಲ್ಲಿ ಸಾವಿರ ಸಮರ್ಪಕವಾದ ಉತ್ತರ ದೊರೆಯಿತು. ಇದರಿಂದ ದಿಗ್ಭ್ರಾಂತರಾದ ಅವರು ಪಂಚೆಯನ್ನು ಸರಿಸಿ ನೋಡಿದಾಗ ಆದಿ ಶೇಷ ಸರ್ಪವು ಸಾವಿರ ಹೆಡೆಗಳಲ್ಲಿ ಪ್ರತ್ಯಕ್ಷವಾಗಿ ಸಾವಿರ ಉತ್ತರ ನೀಡಿದ್ದನ್ನು ಕಂಡು ಅವರು ಹೌಹಾರಿದರು.
ಚಿತ್ರಕೃಪೆ: sai sreekanth mulagaleti
ಶ್ರೀವೈಷ್ಣವರಾದರು
ರಾಮಾನುಜರ ಪವಾಡ ಕಂಡು ಬೆರಗಾಗಿ ಅವರ ಭಕ್ತರಾಗಿ ಎಲ್ಲರೂ ಶ್ರೀವೈಷ್ಣವ ಪಂಥ ಅನುಸರಿಸಿದರು. ಹೀಗಾಗಿ ಈ ಕ್ಷೇತ್ರವು ರಾಮಾನುಜರಿಗೆ ಸಂಬಂಧಿಸಿದಂತೆ ಸಾಕಷ್ಟು ಅದ್ಭುತವಾದ ಕಥೆಯನ್ನು ಹೊಂದಿದೆ. ಅಲ್ಲದೆ ಇಲ್ಲಿ ರಾಮಾನುಜರಿಗೆ ಮುಡಿಪಾದ ದೇಗುಅಲವನ್ನೂ ಸಹ ಕಾಣಬಹುದು.
ಚಿತ್ರಕೃಪೆ: sai sreekanth mulagaleti
ಗಮನಿಸಿದಾಗ
ಇನ್ನೂ ಪ್ರವಾಸಿ ತಾಣವಾಗಿ ತೊಂಡನೂರು ಕೆರೆ ಸಾಕಷ್ಟು ಆಕರ್ಷಣೀಯವಾಗಿದೆ. ಇದನ್ನು ತೊಣ್ಣೂರು ಕೆರೆ ಎಂತಲೂ ಸಹ ಕರೆಯುತ್ತಾರೆ. ಸುತ್ತಲಿನ ಪ್ರಕೃತಿಯು ಅದ್ಭುತವಾಗಿದ್ದು ಸಾಕಷ್ಟು ನಯನಮನೋಹರವಾಗಿದೆ.
ವಿತ್ರಕೃಪೆ: sai sreekanth mulagaleti
ಮೋತಿ ತಲಾಬ್
ತೊಂಡನೂರು ಇಂದು ಕೆರೆ ಹಾಗೂ ಸುತ್ತಮುತಲು ಆಕರ್ಷಕವಾಗಿ ಕಾಣುವ ಬೆಟ್ಟಗುಡ್ಡಗಳಿಂದ ಸುತ್ತುವರೆದಿದೆ. ರಾಮಾನುಜಾಚಾರ್ಯರು ಇದನ್ನು ತಿರುಮಲಸಾಗರ ಎಂದು ಕರೆದಿದ್ದಾರೆ. 1746 ನಾಸಿರ್ ಜಂಗ್ ಎಂಬ ದಖ್ಖನದ ದೊರೆ ಇದರ ಸೌಂದರ್ಯಕ್ಕೆ ಮಾರು ಹೋಗಿ ಇದನ್ನು ಮೋತಿ ತಲಾಬ್ ಎಂತಲೂ ಸಹ ಕರೆದಿದ್ದಾನೆ.
ಚಿತ್ರಕೃಪೆ: sai sreekanth mulagaleti
ಎಷ್ಟು ದೂರ?
ತೊಂಡನೂರು ಬೆಂಗಳೂರಿನಿಂದ 155 ಕಿ.ಮೀ ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರದಿಂದ 10 ಕಿ.ಮೀ ಗಳಷ್ಟು ದೂರದಲ್ಲಿದೆ. ಪಾಂಡವಪುರದಿಂದ ತೊಂಡನೂರಿಗೆ ತೆರಳಲು ಸಾಕಷ್ಟು ಬಸ್ಸುಗಳು ಹಾಗೂ ರಿಕ್ಷಾಗಳು ದೊರೆಯುತ್ತವೆ.