ಇದು ತಮಿಳುನಾಡಿನ ಈರೋಡ್ ನಲ್ಲಿರುವ ಮುರುಗನಿಗೆ ಮುಡಿಪಾದ ಸುಂದರ ಹಾಗೂ ಅದ್ಭುತ ದೇವಾಲಯ. ಇವನನ್ನು ಜನಪ್ರೀಯವಾಗಿ ತಿಂಡಾಲ್ ಮುರುಗನೆಂದೆ ಕರೆಯುತ್ತಾರೆ. ಈ ಮುರುಗಸ್ವಾಮಿಯ ಶಕ್ತಿಯು ಅಪಾರವೆಂದೂ, ಬೇಡಿಕೊಂಡು ಬರುವ ಭಕ್ತರ ಕಷ್ಟಗಳನ್ನು ಬೇಗನೆ ಅರಿತು ಅದಕ್ಕೆ ಸಮಾಧಾನವನ್ನು ನೀಡುತ್ತಾನೆಂದು ಜನರು ನಂಬುತ್ತಾರೆ.
ವಾರದಲ್ಲಿ ಮಂಗಳವಾರ ಈ ದೇವಾಲಯದಲ್ಲಿ ವಿಶೇಷವಾಗಿದ್ದು ಆ ಸಮಯದಲ್ಲಿ ಜನಸಾಗರವೆ ಸುತ್ತಮುತ್ತಲಿನ ಪ್ರದೇಶಗಳಿಂದ ಈ ದೇವಾಲಯಕ್ಕೆ ಹರಿದುಬರುತ್ತದೆ. ಈ ವಾರದಂದು ಇಲ್ಲಿ ವಿಶೇಷವಾಗಿ "ತಿರಿಸದಿ ಅರ್ಚನೆ" ಇಲ್ಲಿ ನೆರವೇರುತ್ತದೆ. ಈ ಅರ್ಚನೆಯು ವಿಶಿಷ್ಟವಾದ ಅರ್ಚನೆಯಾಗಿದ್ದು ಈ ಸಂದರ್ಭದಲ್ಲಿ ಜನರು ತಮ್ಮ ತೊಂದರೆಗಳನ್ನು ಮುರುಗನ ಮುಂದಿಡುತ್ತಾರೆ.
ಚಿತ್ರಕೃಪೆ: thindalmurugan.tnhrce.in
ವಿಶೇಷವಾಗಿ ಕೆಲಸಗಳಲ್ಲಿ ತೊಂದರೆ ಅಥವಾ ಕಷ್ಟ ಅನುಭವಿಸುತ್ತಿರುವವರು, ಮಕ್ಕಳಾಗದವರು ಹಾಗೂ ಕಂಕಣ ಭಾಗ್ಯ ಬಯಸುತ್ತಿರುವವರು ಇಲ್ಲಿಗೆ ಭೇಟಿ ನೀಡಿ ವಿಶೇಷವಾದ ಅರ್ಚನೆಯನ್ನು ಮಾಡುತ್ತಾರೆ. ಇಲ್ಲಿಗೆ ಬಂದು ಮುರುಗನನ್ನು ಬೆಡಿಕೊಂಡು ತಮ್ಮ ಇಚ್ಛೆಗಳು ಈಡೇರಿಸಿಕೊಂಡವರ ಸಂಖ್ಯೆಯನ್ನು ಗಮನಿಸಿದಾಗ ಈ ಮುರುಗನ ಪ್ರಭಾವ ತಿಳಿಯುತ್ತದೆ.
ಚಿತ್ರಕೃಪೆ: thindalmurugan.tnhrce.in
ಈರೋಡ್ ನಿಂದ ಪೆರುಂದುರೈಗೆ ಹೋಗುವ ರಸ್ತೆಯ ಮೇಲೆ ಈರೋಡ್ ನಿಂದ ಸುಮಾರು ಎಂಟು ಕಿ.ಮೀ ಗಳಷ್ಟು ದೂರದಲ್ಲಿರುವ ತಿಂಡಾಲ್ ನಲ್ಲಿ ಈ ಮುರುಗನ ದೇವಾಲಯವಿದೆ. ಈರೋಡ್ ನಿಂದ ಈ ದೇವಾಲಯಕ್ಕೆ ತಲುಪಲು ಸಾಕಷ್ಟು ಅನುಕೂಲತೆಗಳಿದ್ದು ಬಾಡಿಗೆ ರಿಕ್ಷಾಗಳಿಂದಲೂ ಸಹ ಸರಳವಾಗಿ ತಲುಪಬಹುದಾಗಿದೆ.
ಚಿತ್ರಕೃಪೆ: Ssriram mt
ಈರೋಡ್ ನಗರಕ್ಕೆ ಮುಖ ಮಾಡಿ ನಿಂತಿರುವ ತಿಂಡಾಲ್ ಮುರುಗನ ದೇವಾಲಯವು ಈರೋಡ್ ನಗರವಾಸಿಗಳಿಗೆ ಸಾಕಷ್ಟು ಪವಿತ್ರಮಯವಾಗಿದೆ. ಈ ದೇವಾಲಯದ ಪ್ರವೇಶ ದ್ವಾರವು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿದ್ದು ಸುಲಭವಾಗಿ ಕಂಡುಬರುತ್ತದೆ.
ತಮಿಳುನಾಡಿನಲ್ಲಿರುವ ಮುರುಗನ ದೇವಾಲಯಗಳು
ದೇವಾಲಯದ ಮುಖ್ಯ ದೇವತೆಯಾಗಿ ಮುರುಗನು ನೆಲೆಸಿದ್ದರೆ ಇತರೆ ದೇವತೆಗಳ ಸನ್ನಿಧಿಗಳೂ ಸಹ ಇಲ್ಲಿ ಕಂಡುಬರುತ್ತವೆ. ಅರಸಮರತು ವಿನಾಯಗರ್ ಅಂದರೆ ಗಣೇಶನಿಗೆ ಮುಡಿಪಾದ ಸನ್ನಿಧಿಯು ಇಲ್ಲಿದ್ದು ಸಾಕಷ್ಟು ವಿಶೇಷಮಯವಾಗಿದೆ.