ನಿಮ್ಮ ಅಮೂಲ್ಯ ವಸ್ತುಗಳೇನಾದರೂ ಕಳೆದಿವೆಯೆ? ಅಥವಾ ನೀವೇನಾದರೂ ಜಮೀನಿಗೆ ಹಾಗೂ ಆಸ್ತಿಗೆ ಸಮ್ಬಂಧಿಸಿದಂತೆ ಸಮಸ್ಯೆಗಲನ್ನು ಎದುರಿಸುತ್ತಿದ್ದೀರಾ? ಹಾಗಿದ್ದಲ್ಲಿ ಯಾಕೊಮ್ಮೆ ಈ ದೇವಿಯ ಸನ್ನಿಧಿಗೆ ತೆರಳಿ ಪ್ರಾರ್ಥಿಸಬಾರದು? ಹೀಗೆ ನಾವು ಹೇಳುತ್ತಿಲ್ಲ. ಬದಲಾಗಿ ಇಲ್ಲಿಗೆ ಭೇಟಿ ನೀಡಿ ಬಹುತೇಕ ಎಲ್ಲರೂ ಒಳಿತು ಕಂಡವರ ನಂಬಿಕೆಯಾಗಿದೆ.
ನಿಮ್ಮ ಅಮೂಲ್ಯವಾದ ವಸ್ತುಗಳೇನಾದರು ಕಳೆದು ಹೋಗಿದ್ದಲ್ಲಿ ಈ ತಾಯಿಯ ಸನ್ನಿಧಿಗೆ ಬಂದು ಮನಸಾರೆ ನಂಬಿಕೆಯಿಂದ ಬೇಡಿಕೊಂಡರೆ ಸಾಕು, ಅದು ಶೀಘ್ರವಾಗಿ ಮತ್ತೆ ನಿಮಗೆ ದೊರೆಯುತ್ತವೆ ಎಂದು ಹೇಳುತ್ತಾರೆ. ಹಾಗಾಗಿ ಈ ದೇವಿಯು ಬಲು ಶಕ್ತಿಶಾಲಿಯಾಗಿದ್ದು ಸದಾ ಜಾಗೃತಾವಸ್ಥೆಯಲ್ಲಿರುತ್ತಾಳೆ ಹಾಗೂ ತನ್ನ ಭಕ್ತರ ರಕ್ಷಣೆಯನ್ನು ತಾನೆ ಖುದ್ದಾಗಿ ಮಾಡುತ್ತಾಳೆ ಎಂಬ ನಂಬಿಕೆಯಿದೆ.
ಚಿತ್ರಕೃಪೆ: Bpdg
ಈಕೆಯೆ ಸಿಗಂದೂರು ಶ್ರೀ ಚೌಡೇಶ್ವರಿ ತಾಯಿ. ಸಿಗಂದೂರು ಕ್ಷೇತ್ರದ ಆರಾಧ್ಯ ದೇವತೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರನ್ನು ಆಕರ್ಷಿಸುವ ಜಗನ್ಮಾತೆ!. ಧಾರ್ಮಿಕ ಪ್ರವಾಸೋದ್ಯಮಕ್ಕೆ ತನ್ನದೆ ಆದ ಕೊಡುಗೆ ನೀಡುವ ಸುಂದರ ಕ್ಷೇತ್ರವಾಗಿ ಸಿಗಂದೂರು ಪ್ರವಾಸಿಗರ ಗಮನಸೆಳೆಯುತ್ತದೆ.
ಸಿಗಂದೂರಿನ ಈ ಚೌಡೇಶ್ವರಿ ವಿಗ್ರಹವು ಸುಮಾರು ಮುನ್ನೂರು ವರ್ಷಗಳ ಇತಿಹಾಸ ಹೊಂದಿದೆ. ಇದೊಂದು ಸ್ವಯಂಭು ವಿಗ್ರಹವಾಗಿದೆ ಎನ್ನಲಾಗುತ್ತದೆ. ಅಂತೆಯೆ ಸಿಗಂದೂರು ಕ್ಷೇತ್ರದ ಇತಿಹಾಸವೂ ಸಹ ಮುನ್ನೂರು ವರ್ಷಗಳಷ್ಟು ಪುರಾತನವಾಗಿದೆ. ಬಲು ಹಿಂದೆ ಇಲ್ಲಿ ಶೇಷಪ್ಪನೆಂಬ ಒಡೆಯನಿದ್ದನು. ಇಲ್ಲಿನ ಕಾಡು ಪ್ರದೇಶದಲ್ಲಿ ಸುತ್ತಾಡುವಾಗ ದಾರಿ ಕಳೆದುಕೊಂಡು ಒಂದು ಮರದ ಕೆಳಗೆ ವಿಶ್ರಮಿಸಲು ಕುಳಿತು ಹಾಗೆ ನಿದ್ದೆಗೆ ಜಾರಿದನು.
ಚಿತ್ರಕೃಪೆ: sigandur.in
ಅವನ ಕನಸಿನಲ್ಲಿ ಬಂದ ದೇವಿಯು ತನಗಾಗಿ ದೇವಾಲಯವೊಂದನ್ನು ನಿರ್ಮಿಸುವ ವಿಚಾರ ತಿಳಿಸಿದಳು ಹಾಗೂ ತನ್ನ ವಿಗ್ರಹದ ಕುರಿತು ಹೇಳಿದಳು. ಅದರಂತೆ ಇಲ್ಲಿನ ನದಿಯಲ್ಲಿ ದೇವಿಯ ವಿಗ್ರಹ ದೊರೆತು, ಕೊನೆಗೆ ಶೇಷಪ್ಪ ತನ್ನ ಊರಿನ ಬರಾಹ್ಮಣ ಪುರೋಹಿತನಾದ ದುಗ್ಗಜ್ಜನೊಂದಿಗೆ ಕೂಡಿಕೊಂಡು ದೇವಿಯನ್ನು ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಿದರು. ಇದು ಇಲ್ಲಿನ ಇತಿಹಾಸ.
ತದ ನಂತರ ಈ ದೇವಿಯು ಸದಾ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸುವಲ್ಲಿ ನಿರತಳಾದಳು. ಇಂದಿಗೂ ಭೂಮಿಯ, ಜಾಗಗಳ ಸಮಸ್ಯೆ ಎದುರಿಸುತ್ತಿರುವವರು ಇಲ್ಲಿಗೆ ಬಂದು ಪ್ರಾರ್ಥಿಸಿ, ಇಲ್ಲಿ ದೊರೆಯುವ "ದೇವಿಯ ರಕ್ಷಣೆಯಿದೆ" ಎಂಬ ವಾಕ್ಯವುಳ್ಳ ನಾಮಫಲಕವನ್ನು ತಮ್ಮ ತಮ್ಮ ಜಮೀನು ಹಾಗೂ ಸೈಟುಗಳಲ್ಲಿ ಹಾಕಿಕೊಳ್ಳುತ್ತಾರೆ. ಇದರಿಂದ ಜನರ ಸಮಸ್ಯೆಗಳು ನ್ಯಾಯಾಲಯದ ಹೊರಗೆ ಬಗೆ ಹರಿದಿವೆಯಂತೆ!
ಚಿತ್ರಕೃಪೆ: Vpsmiles
ಸಿಗಂದೂರು, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಕ್ಷೇತ್ರ. ಇದು ತನ್ನ ಮುರು ಸುತ್ತಲು ಶರಾವತಿ ನದಿಯ ಹಿನ್ನೀರಿನಿಂದ ಆವೃತವಾಗಿದೆ. ಸಾಗರ ಪಟ್ಟಣದಿಂದ ಸುಮಾರು 40 ಕಿ.ಮೀ ಗಳಷ್ಟು ದೂರದಲ್ಲಿರುವ ಸಿಗಂದೂರಿಗೆ ತೆರಳಲು ಸಾಗರದಿಂದ ಬಸ್ಸುಗಳು ದೊರೆಯುತ್ತವೆ.
ನಿಮ್ಮ ಸ್ವಂತ ವಾಹನವಾಗಿದ್ದಲ್ಲಿ ಶರಾವತಿಯ ತಟದಿಂದ ಸಾರಿಗೆ ದೋಣಿಯ ವ್ಯವಸ್ಥೆಯಿದ್ದು ಅದರ ಮೂಲಕ ನಿಮ್ಮ ವಾಹನಗಳನ್ನು ಆ ದೋಣಿಯಲ್ಲಿ ಹಾಕಿಕೊಂಡು ಕಸವಳ್ಳಿ ಎಂಬ ಗ್ರಾಮಕ್ಕೆ ತಲುಪಿ ಅಲ್ಲಿಂದ ಹತ್ತು ಕಿ.ಮೀ ಚಲಿಸಿ ಸಿಗಂದೂರನ್ನು ತಲುಪಬಹುದಾಗಿದೆ. ಈ ದೋಣಿ ಸೇವೆ ಸಂಜೆ ಐದು ಘಂಟೆಯವರೆಗೆ ಮಾತ್ರವೆ ಇರುತ್ತದೆ.
ನಿಮ್ಮೆಲ್ಲ ಸಮಸ್ಯೆಗಳಿಗೆ "ಥಟ್" ಅಂತ ಪರಿಹಾರ ಹೇಳುವ ದೇವಿ!
ಇನ್ನೂ ಸಿಗಂದೂರಿನಲ್ಲಿ ತಂಗಲು ಅಥವಾ ತಿನ್ನಲು ಯಾವುದೆ ರೀತಿಯ ಹೋಟೆಲುಗಳಿಲ್ಲ. ದೇವಾಲಯದಲ್ಲಿ ತಂಗಲು ಅವಕಾಶವಿದೆಯಾದರೂ ಸೀಮಿತ ಸಂಖ್ಯೆಯಲ್ಲಿ ಮಾತ್ರ. ಅಲ್ಲದೆ ದೇವಾಲಯದಿಂದ ಆಹಾರ, ತಿಂಡಿ ಮುಂತಾದವುಗಳು ದೊರೆಯುವುದಿಲ್ಲ. ಕಾರಣ ಭೇಟಿ ನೀಡುವವರು ನಿಮಗೆ ಬೇಕಾದ ಆಹಾರಗಳನ್ನು ಮುಂಚಿತವಗಿಯೆ ಕೊಂಡೊಯ್ಯುವುದು ಉತ್ತಮ.