Search
  • Follow NativePlanet
Share
» »ಕುತೂಹಲಕರ ಹಿನ್ನೆಲೆಯ ಕವಲೇದುರ್ಗ!

ಕುತೂಹಲಕರ ಹಿನ್ನೆಲೆಯ ಕವಲೇದುರ್ಗ!

By Vijay

ಹಿಂದೆ ರಾಜರುಗಳ ಸಮಯದಲ್ಲಿ ನಿರ್ಮಿಸಲಾಗುತ್ತಿದ್ದ, ರಕ್ಷಣಾತ್ಮಕ ರಚನೆಗಳಾದಂತಹ ಕೋಟೆ-ದುರ್ಗಗಳು ಸಾಕಷ್ಟು ಕುತೂಹಲಕರ ಅಂಶಗಳನ್ನು ಒಳಗೊಂಡಿರುತ್ತಿದ್ದವು. ಹಿಂದು ರಾಜರುಗಳು ನಿರ್ಮಿಸಿರುವ ಅನೇಕ ಕೋಟೆಗಳಲ್ಲಿ, ಶಸ್ತ್ರಾಗಾರ, ಕೊಳಗಳು, ದೇವಾಲಯಗಳು ಹೀಗೆ ಅನೇಕ ರಚನೆಗಳನ್ನು ಕಾಣಬಹುದಾಗಿದೆ.

ಇಂದಿಗೂ ಭಾರತದಲ್ಲಿ ಅದರಲ್ಲೂ ಹಲವಾರು ರಾಜ್ಯಗಳಲ್ಲಿ ಕೆಲವು ಆಕರ್ಷಕ ಹಾಗೂ ಕುತೂಹಲ ಕೆರಳಿಸುವ ಅನೇಕ ದುರ್ಗ-ಕೋಟೆಗಳನ್ನು ಕಾಣಬಹುದಾಗಿದೆ. ಇನ್ನೊಂದು ವಿಶೇಷವೆಂದರೆ, ಎಷ್ಟೊ ಶತಮಾನಗಳ ಹಿಂದೆ, ಇಂದು ಲಭ್ಯವಿರುವಂತಹ ಆಧುನಿಕ ವೈಜ್ಞಾನಿಕ ತಾಂತ್ರಿಕ ಕೌಶಲ್ಯಗಳಿರದ ಆ ಸಮಯದಲ್ಲಿ ರಚಿತವಾದ ಕೋಟೆಗಳು ಇಂದಿಗೂ ನೆಲೆಯೂರಿ ನಿಂತಿರುವುದು.

ಈ ದುರ್ಗಗಳು ಇಂದು ಪ್ರವಾಸಿ ಆಕರ್ಷಣೆಗಳಾಗಿ ಸಾಕಷ್ಟು ಗಮನಸೆಳೆಯುತ್ತವೆ. ತಮ್ಮ ಹಿಂದಿನ ವೈಭವವನ್ನು, ಕಥೆಗಳನ್ನು ಇಂದಿಗೂ ಪ್ರವಾಸಿಗರಿಗೆ ಉತ್ಸುಕತೆಯಿಂದ ಹೇಳಲು ಸಜ್ಜಾಗಿರುವಂತೆ ಗೋಚರಿಸುತ್ತವೆ. ಹೀಗಾಗಿ ಸಾಕಷ್ಟು ಜನ ಯುವ ಪ್ರವಾಸಿಗರಲ್ಲಿ ಈ ಕೋಟೆಗಳು ಅದ್ಭುತ ಪ್ರವಾಸಿ ಆಕರ್ಷಣೆಗಳಾಗಿ ಹೆಸರುವಾಸಿಯಾಗಿವೆ.

ನಗರ ಜೀವನದಲ್ಲಿ ಪ್ರತಿದಿನ ಬಸವಳಿಯುವ ಜನರಿಗೆ ರಜೆಯ ಸಮಯದಲ್ಲಿ ಒಂದಿಷ್ಟು ರೋಮಾಂಚನ, ಹಾಯಾಗಿ ಸಮಯ ಕಳೆಯುವಿಕೆಗೆ ಅನುವು ಮಾಡಿಕೊಡುತ್ತವೆ ಈ ಅದ್ಭುತ ದುರ್ಗಗಳು. ಅಲ್ಲದೆ ಹಿಂದೆ ಇತಿಹಾಸದಲ್ಲಿ ನಡೆದುಹೋಗಿರಬಹುದಾದ ಅನೇಕ ಕುತೂಹಲಕಾರಿ ಪ್ರಸಂಗಗಳನ್ನು ಕಲ್ಪನೆಯ ಮೂಲಕ ಕಟ್ಟಿಕೊಳ್ಳುವಂತೆ ಮಾಡುತ್ತವೆ ಈ ಕೋಟೆಗಳು ಅಥವಾ ದುರ್ಗಗಳು. ಪ್ರಸ್ತುತ ಲೇಖನದಲ್ಲಿ ಅಂಥದ್ದೆ ಒಂದು ಕುತೂಹಲಕರ ದುರ್ಗದ ಕುರಿತು ತಿಳಿಸಲಾಗಿದೆ. ಅದೆ ಕವಲೇದುರ್ಗ.

ಸದಾ ಆಕರ್ಷಕ

ಸದಾ ಆಕರ್ಷಕ

ಪಶ್ಚಿಮ ಘಟ್ಟಗಳ ನಯನ ಮನೋಹರ ಹಾಗೂ ದಟ್ಟವಾದ ಹಸಿರಿನ ಮಧ್ಯೆ ಅದೆಷ್ಟೊ ಆಕರ್ಷಕ ಐತಿಹಾಸಿಕ ತಾಣಗಳು ನೆಲೆಸಿದ್ದು ಇಂದಿಗೂ ತಮ್ಮ ಸುತ್ತಮುತ್ತಲಿರುವ ಮನಮೋಹಕ ವಾತಾವರಣದಿಂದಾಗಿ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತವೆ.

ಚಿತ್ರಕೃಪೆ: Yashhegde

ಕುತೂಹಲಕರ

ಕುತೂಹಲಕರ

ಅಂತಹ ಸ್ಥಳಗಳ ಪೈಕಿ ಕವಲೇದುರ್ಗವೂ ಸಹ ಒಂದು. ಇದು ಮೂಲತಃ ಬೆಟ್ಟದ ಮೇಲಿರುವ ದುರ್ಗ ಅಥವಾ ಕೋಟೆ ಪ್ರದೇಶವಾಗಿದ್ದು ತನ್ನ ಸುತ್ತಲಿರುವ ಆಕರ್ಷಕ ಪರಿಸರ ಹಾಗೂ ತನ್ನಲ್ಲಿರುವ ಐತಿಹಾಸಿಕ ಕುತೂಹಲಕರ ರಚನೆಗಳಿಂದಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ

ತೀರ್ಥಹಳ್ಳಿ

ಚಾರಣದಂತಹ ಚಟುವಟಿಕೆಗಳಿಗೆ ಸಾಕಷ್ಟು ಹೆಸರುವಾಸಿಯಾಗಿರುವ ಕವಲೇದುರ್ಗವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಿಂದ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲಿ ಕವಲೇದುರ್ಗ ನೆಲೆಸಿದೆ.

ಚಿತ್ರಕೃಪೆ: Manjeshpv

ಶಿವಮೊಗ್ಗದಿಂದ

ಶಿವಮೊಗ್ಗದಿಂದ

ಕವಲೇದುರ್ಗಕ್ಕೆ ಹೋಗಬಯಸುವವರು ಮೊದಲು ತೀರ್ಥಹಳ್ಳಿಗೆ ತಲುಪಿ ಅಲ್ಲಿಂದ ಎಡೂರು ಮಾರ್ಗದ ಮೂಲಕ ಸಾಗುತ್ತ ಕವಲೇದುರ್ಗ ಗ್ರಾಮವನ್ನು ತಲುಪಬಹುದು. ಅಲ್ಲಿಂದ ಗ್ರಾಮದ ಜನರ ಮಾರ್ಗದರ್ಶನದ ಮೂಲಕ ಕವಲೇದುರ್ಗ ಕೋಟೆಯ ತಾಣಕ್ಕೆ ತಲುಪಬಹುದು. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Subramanya shastri

ರಚನೆಗಳು

ರಚನೆಗಳು

ಕವಲೇದುರ್ಗ ಕೋಟೆಯು ಚಾರಣಯೋಗ್ಯ ತಾಣವಾಗಿದ್ದು ನಡೆಯುತ್ತಲೆ ತಲುಪಬೇಕಾಗುತ್ತದೆ. ಒಂದೊಮ್ಮೆ ಈ ಕೋಟೆಯ ಪ್ರದೇಶಕ್ಕೆ ತಲುಪಿದರೆ ಸಾಕು ಅಲ್ಲಿಂದ ಅನೇಕ ಐತಿಹಾಸಿಕ ಕುತೂಹಲಕರ ತಾಣಗಳಿಗೆ ಭೇಟಿ ನೀಡುತ್ತ ಸಾಗಬಹುದು.

ಚಿತ್ರಕೃಪೆ: Subramanya shastri

600 ಕ್ಕೂ ಅಧಿಕ ವರ್ಷಗಳ ಇತಿಹಾಸ

600 ಕ್ಕೂ ಅಧಿಕ ವರ್ಷಗಳ ಇತಿಹಾಸ

ಕವಲೇದುರ್ಗವು ಸುಮಾರು 600 ಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದೆ. ವಿಶೇಷವಾಗಿ ಇಲ್ಲಿ ಹಿಂದಿನ ಸಮಯದಲ್ಲೆ ಮಳೆ ನೀರು ಕೊಯ್ಲು ಆಧಾರಿತ ತಾಂತ್ರಿಕ ಕೌಶಲ್ಯಗಳನ್ನು ಬಳಸಿರುವುದು ಕಂಡಾಗ ಹೆಮ್ಮೆ ಹಾಗೂ ಅಚ್ಚರಿಯಾಗದೆ ಇರಲಾರದು.

ಚಿತ್ರಕೃಪೆ: Manjeshpv

ಗುರುತರವಾದ ಪುರಾವೆಗಳು

ಗುರುತರವಾದ ಪುರಾವೆಗಳು

ಇಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಉತ್ಖನನಗಳನ್ನು ನಡೆಸಲಾಗಿದ್ದು ಸಾಕಷ್ಟು ಗುರುತರವಾದ ಐತಿಹಾಸಿಕ ಸಾಕ್ಷಿಗಳು, ರಚನೆಗಳು ದೊರೆತಿವೆ. ಮೊದ ಮೊದಲಿಗೆ ಕೋಟೆಯ ಗೋಡೆಗಳ ವಿಸ್ತೃತ ಹರಡುವಿಕೆ ಕಂಡುಬಂದರೆ.....

ಚಿತ್ರಕೃಪೆ: Manjeshpv

ದರ್ಬಾರ್ ಪ್ರಾಂಗಣ

ದರ್ಬಾರ್ ಪ್ರಾಂಗಣ

ಇತ್ತಿಚಿನ ಉತ್ಖನನದ ಸಮಯದಲ್ಲಿ ಪ್ರಶಸ್ತವಾದ ದರ್ಬಾರ್ ಅಂಗಣ, ದೇಗುಲ ಮುಂತಾದ ಅನೇಕ ರಚನೆಗಳನ್ನು ಮಣ್ಣಿನಿಂದ ಮುಚ್ಚಿಹೋಗಿದ್ದನ್ನು ಅಗೆದು ಹೊರತೆಗೆಯಲಾಗಿದೆ.

ಚಿತ್ರಕೃಪೆ: Manjeshpv

ಕೋಟೆಗೋಡೆಗಳು

ಕೋಟೆಗೋಡೆಗಳು

ಸಮುದ್ರ ಮಟ್ಟದಿಂದ 1541 ಮೀ. ಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಅದ್ಭುತ ಕೋಟೆಯು ಎರಡು ರೀತಿಯ ಕೋಟೆಗೋಡೆಗಳಿಂದ ಭದ್ರವಾಗಿ ನಿರ್ಮಿಸಲ್ಪಟ್ಟಿರುವುದನ್ನು ಗಮನಿಸಬಹುದು. ಇಂದು ಕೋಟೆಯನ್ನು ಆವರಿಸಿರುವ ಗೋಡೆಗಳು ಎಲ್ಲೆಡೆ ಇಲ್ಲದೆ ನಶಿಸಿ ಹೋಗಿದ್ದು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರವೆ ಅವುಗಳ ಉಪಸ್ಥಿತಿಯನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Brunda Nagaraj

ನೀರು ಮಾರ್ಗಗಳು

ನೀರು ಮಾರ್ಗಗಳು

ಕೋಟೆಗೋಡೆಯ ಒಟ್ಟಾರೆ ಸುತ್ತಳತೆಯು ಎಂಟು ಕಿ.ಮೀ ಗಳಷ್ಟಿದ್ದು ಒಳಗೆ ಹಲವಾರು ವಿಶೇಷವಾದ ನೀರು ಮಾರ್ಗಗಳನ್ನು ನಿರ್ಮಿಸಿರುವುದನ್ನು ಕಾಣಬಹುದಾಗಿದೆ. ವಿಶೇಷತೆ ಎಂದರೆ ಮಳೆ ನೀರು ಬಿದ್ದಾಗ ಮೇಲಿನಿಂದ ಸಂಗ್ರಹವಾಗುವ ನೀರು ಈ ಮಾರ್ಗಗಳ ಮೂಲಕ ಸಾಗುತ್ತ ಇಲ್ಲಿ ನಿರ್ಮಿಸಲಾದ ಕೊಳಗಳಲ್ಲಿ ಶೇಖರಣೆಯಾಗುತ್ತಿತ್ತು.

ಚಿತ್ರಕೃಪೆ: Brunda Nagaraj

ಒಟ್ಟು ಏಳು

ಒಟ್ಟು ಏಳು

ಈ ಕೋಟೆಯಲ್ಲಿ ಒಟ್ಟಾರೆ ಏಳು ಕೊಳಗಳಿದ್ದು ಅದರಲ್ಲಿ ಸದಾ ನೀರಿರುವುದು ವಿಶೇಷ. ಬೇಸಿಗೆಯ ಸಮಯದಲ್ಲೂ ಸಹ ಇಲ್ಲಿ ನೀರು ಸದಾ ಉಪಸ್ಥಿತವಿರುತ್ತದೆ. ಅಲ್ಲದೆ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಭೂತಳದಿಂದಲೆ ನೀರು ವರ್ಗಾವಣೆಯಾಗುವಂತೆ ಮಾಡಲಾಗಿತ್ತೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Krishna Kulkarni

ಹಿನ್ನೆಲೆಗಳು

ಹಿನ್ನೆಲೆಗಳು

ಇತಿಹಾಸದ ಕೆಲವು ತಜ್ಞರ ಪ್ರಕಾರ ಒಂಭತ್ತನೇಯ ಶತಮಾನದಲ್ಲೆ ಕವಲೇದುರ್ಗದಲ್ಲಿ ಅದ್ಭುತವಾದ ಕೆತ್ತನೆಯುಳ್ಳ ದುರ್ಗ ನಿರ್ಮಿಸಲಾಗಿತ್ತೆಂದು ಹೇಳಲಾಗುತ್ತದೆ. ಈ ಕೋಟೆಗೆ ಸಂಬಂಧಿಸಿದಂತೆ ಸಾಕಷ್ಟು ಕುತೂಹಲಕಾರಿ ಹಿನ್ನೆಲೆಗಳು ಸ್ಥಳೀಯವಾಗಿ ಚಾಲ್ತಿಯಲ್ಲಿವೆ.

ಚಿತ್ರಕೃಪೆ: Brunda Nagaraj

ಭುವನಗಿರಿ

ಭುವನಗಿರಿ

ಹಿಂದು ಪೌರಾಣಿಕ ಕಥೆಗಳ ಪ್ರಕಾರ ಇದನ್ನು ಭುವನಗಿರಿ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಅಲ್ಲದೆ ಕೃತ ಯುಗದಲ್ಲಿ ಇದೊಂದು ಪರಶುರಾಮ ಕ್ಷೇತ್ರವಾಗಿತ್ತೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Manjeshpv

ತ್ರೇತಾಯುಗ

ತ್ರೇತಾಯುಗ

ಅದೆ ತ್ರೇತಾ ಯುಗದಲ್ಲಿ ಆಗಸ್ತ್ಯ ಹಾಗೂ ವಾಲ್ಮಿಕಿ ಋಷಿಗಳು ಈ ಭುವನಗಿರಿಗೆ ಭೇಟಿ ನೀಡಿ ಕೆಲ ಕಾಲ ತಪಸ್ಸು ಮಾಡಲು ತಂಗಿದ್ದರೆಂದು ಸ್ಥಳ ಪುರಾಣದ ಮೂಲಕ ತಿಳಿದುಬರುತ್ತದೆ.

ಚಿತ್ರಕೃಪೆ: Yashhegde

ಕಾವ್ಯವನ

ಕಾವ್ಯವನ

ಅಲ್ಲದೆ ದ್ವಾಪರಯುಗದಲ್ಲೂ ಸಹ ಪಾಂಡವರು ವನವಾಸ ಅಲೆಯುತ್ತಿದ್ದಾಗ ಕವಲೇದುರ್ಗಕ್ಕೆ ಭೇಟಿ ನೀಡಿ ಅಲ್ಪ ಕಾಲ ತಂಗಿದ್ದರೆಂಬ ಪ್ರತೀತಿಯಿದೆ. ಸ್ಕಂದ ಪುರಾಣದಲ್ಲೂ ಸಹ ಕವಲೇದುರ್ಗವನ್ನು ಕಾವ್ಯವನ ಹಾಗೂ ಕಪಿಲವನ ಎಂಬ ಹೆಸರುಗಳಿಂದ ಉಲ್ಲೇಖಿಸಲಾಗಿದೆ.

ಚಿತ್ರಕೃಪೆ: Manjeshpv

ಆಕರ್ಷಣೆಯ ಸ್ಮಾರಕ

ಆಕರ್ಷಣೆಯ ಸ್ಮಾರಕ

ಸಾಕಷ್ಟು ಶ್ರೀಮಂತ ಇತಿಹಾಸ ಹೊಂದಿರುವ ಕವಲೇದುರ್ಗ ಇಂದು ಬಹು ಮಟ್ಟಿಗೆ ನಾಶಗೊಂಡಿದ್ದು ಕೇವಲ ಅಳಿದುಳಿದ ಪ್ರವಾಸಿ ಆಕರ್ಷಣೆಯ ಸ್ಮಾರಕವಾಗಿದ್ದನ್ನು ಕಂಡಾಗ ಯಾರಿಗಾದರೂ ಸರಿ ಸ್ವಲ್ಪ ಬೇಸರವಾಗದೆ ಇರಲಾರದು.

ಚಿತ್ರಕೃಪೆ: Manjeshpv

ಕೇವಲ ಮೂರು

ಕೇವಲ ಮೂರು

ಈ ಕೋಟೆಯ ಆವರಣದಲ್ಲಿ ಒಟ್ಟಾರೆಯಾಗಿ ಹದಿನೈದು ದೇವಾಲಯಗಳಿದ್ದವು. ಆದರೆ ಅವುಗಳಲ್ಲಿ ಇಂದು ಕಾಣಬಹುದಾದ ದೇವಾಲಯಗಳು ಕೇವಲ ಮೂರೆ ಮೂರು ಮಾತ್ರ. ಅವುಗಳೆಂದರೆ ಶ್ರೀಲಕ್ಷ್ಮಿನಾರಾಯಣ, ಕಾಶಿ ವಿಶ್ವನಾಥ ಹಾಗು ಶಿಖರೇಶ್ವರ ದೇಗುಲ.

ಚಿತ್ರಕೃಪೆ: Subramanya shastri

ಘಳಿಗೆ ಬಟ್ಟಲು

ಘಳಿಗೆ ಬಟ್ಟಲು

ಅಲ್ಲದೆ ಉತ್ಖನನದಿಂದ ಹೊರ ತೆಗೆಯಲಾದ ಇನ್ನೂ ಅನೇಕ ರಚನೆಗಳಾದ, ಆನೆ-ಕುದುರೆ ಇರುವ ಕೊಟ್ಟಿಗೆ ಕೋಣೆಗಳು, ಶಸ್ತ್ರಾಗಾರಗಳು, ಈಜು ಕೋಳಗಳು ಹಾಗೂ ಘಳಿಗೆಬಟ್ಟಲು (ಸಮಯ ತಿಳಿಯಲು ಉಪಯೋಗಿಸಲಾಗುತ್ತಿದ್ದ ತಾಮ್ರದ ಒಂದು ರೀತಿಯ ಬಟ್ಟಲು) ಗಳನ್ನು ಕಾಣಬಹುದು.

ಚಿತ್ರಕೃಪೆ: Brunda Nagaraj

ಇಸ್ಲಾಮಿಕ್ ಪ್ರಭಾವ

ಇಸ್ಲಾಮಿಕ್ ಪ್ರಭಾವ

ಮುಂದೆ ಸಾಗಿದಂತೆ ಇನ್ನೂ ಅನೇಕ ಕೆತ್ತನೆಗಳನ್ನು ವೀಕ್ಷಿಸಬಹುದು. ಇನ್ನೊಂದು ವಿಷಯವೆಂದರೆ ಮುಂದೆ ಹೈದರ್ ಅಲಿ ಈ ಪ್ರದೇಶದಲ್ಲಿ ಕಾರ್ಯಾಭಾರ ನಡೆಸಿದ್ದಾಗ ಮೂಲ ರಚನೆಗಳಲ್ಲಿ ಕೆಲ ಬದಲಾವಣೆಗಳಾಗಿರಬಹುದೆಂದು ಊಹಿಸಲಾಗಿದೆ. ಉದಾ. ಕಾಶಿ ವಿಶ್ವನಾಥನ ದೇವಾಲಯದ ದ್ವಾರವು ಇಸ್ಲಾಮಿಕ್ ಶೈಲಿಯ ದ್ವಾರದಂತೆ ಕಂಡುಬರುವುದನ್ನು ಗಮನಿಸಬಹುದು.

ಚಿತ್ರಕೃಪೆ: Manjeshpv

ಬೆಳಗುತ್ತಿಯ ರಾಜ

ಬೆಳಗುತ್ತಿಯ ರಾಜ

ಈ ಮೊದಲೆ ವಿವರಿಸಿದ ಹಾಗೆ ಈ ಕೋಟೆಯು ಒಂಭತ್ತನೇಯ ಶತಮಾದಲ್ಲಿ ನಿರ್ಮಿಸಲ್ಪಟ್ಟಿದೆಯಾದರೂ ಇದು ವಿಶಾಲ ಹಾಗೂ ವಿಸ್ತೃತವಾದದ್ದು ಹದಿನಾಲ್ಕನೇಯ ಶತಮಾನದಲ್ಲಿ. ಬೆಳಗುತ್ತಿಯ ರಾಜ ಚೆಲುವರಂಗಪ್ಪ ಇದನ್ನು ಮತ್ತಷ್ಟು ನವಿಕರಣಗೊಳಿಸಿದನು.

ಚಿತ್ರಕೃಪೆ: Manjeshpv

ಹೈದರ್ ಅಲಿ

ಹೈದರ್ ಅಲಿ

ನಂತರ ಕೆಳದಿಯ ನಾಯಕ ಹಾಗೂ ಮುಂದೆ ಹೈದರ್ ಅಲಿ ಈ ಕೋಟೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದನೆಂದು ಇತಿಹಾಸದ ಮೂಲಕ ತಿಳಿದುಬರುತ್ತದೆ. ದಂತಕಥೆಯಂತೆ ಹೈದರ್ ಅಲಿ ಈ ಕೋಟೆಯನ್ನು ಪಡೆದ ನಂತರ ಅದರ ಕಾವಲು ಹಾಗೂ ನಿರ್ವಹಣೆಗಾಗಿ ಕೆಲವು ಯೋಧರನ್ನು ಇಲ್ಲಿ ಬಿಟ್ಟು ತೆರಳಿದ್ದನು.

ಚಿತ್ರಕೃಪೆ: Subramanya shastri

ಕವಲೇದುರ್ಗ

ಕವಲೇದುರ್ಗ

ಸ್ಥಳೀಯವಾಗಿ ಈ ಯೋಧರನ್ನು ದುರ್ಗದ ಕಾವಲೌಗಾರರು ಎಂದು ಕರೆಯುತ್ತಿದ್ದರು. ಈ ಪದವೆ ಮುಂದೆ ತನ್ನದೆ ವಿಶಿಷ್ಟ ರೂಪ ಪಡೆದು ಇಂದು ಗುರುತಿಸಿಕೊಳ್ಳುವ ಕವಲೇದುರ್ಗ ಆಯಿತೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Manjeshpv

ಕಾಣಬಹುದು

ಕಾಣಬಹುದು

ನೀವೊಬ್ಬ ಉತ್ತಮ ಅನ್ವೇಷಕರಾಗಿದ್ದರೆ ಈ ಕೋಟೆಯನ್ನು ಸುತ್ತಾಡುವಾಗ ಹಲವಾರು ಆಸಕ್ತಿಕರ ರಚನೆಗಳನ್ನು ಕಾಣಬಹುದು. ಉದಾಹರಣೆಗೆ ಒಂದು ಗುಹೆಯಾಕಾರದ ರಚನೆಯಲ್ಲಿ ನೀರಿನ ಮೂಲವೊಂದನ್ನು ಕಾಣಬಹುದಾಗಿದ್ದು ಅದನ್ನು ಗದಾ ತೀರ್ಥ ಎಂದು ಕರೆಯುತ್ತಾರೆ. ಪ್ರತೀತಿಯಂತೆ ಭೀಮನು ತನ್ನ ಗದೆಯಿಂದ ಈ ಹೊಂಡವನ್ನು ತೋಡಿದ್ದನಂತೆ!

ಚಿತ್ರಕೃಪೆ: Manjeshpv

ಸಜ್ಜಾಗಿ!

ಸಜ್ಜಾಗಿ!

ಅದರಂತೆ ಇನ್ನೂ ಅನೇಕ ರಚನೆಗಳನ್ನು ಇಲ್ಲಿ ಕಾಣಬಹುದು. ತುಪಾಕಿ ಬುರುಜು, ಆದಿಶೇಷದ ರಚನೆ ಹೀಗೆ ಕೆಲವು ಆಸಕ್ತಿಕರ ರಚನೆಗಳು ನೀವೊಬ್ಬ ಉತ್ತಮ ಅನ್ವೇಷಿಕನಾಗಿದ್ದಲ್ಲಿ ಸುಲಲಿತವಾಗಿ ಕಣ್ಣಿಗೆ ಕಾಣುತ್ತವೆ. ಹಾಗಾದರೆ ತಡವೇಕೆ? ಒಂದೊಮ್ಮೆ ಕವಲೇದುರ್ಗಕ್ಕೆ ಭೇಟಿ ನೀಡಿ.

ಚಿತ್ರಕೃಪೆ: Manjeshpv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X