Search
  • Follow NativePlanet
Share
» »ದಾಲ್ ಸರೋವರದ ಮೇಲಿನ ತೇಲಾಡುವ ಮಾರುಕಟ್ಟೆ.

ದಾಲ್ ಸರೋವರದ ಮೇಲಿನ ತೇಲಾಡುವ ಮಾರುಕಟ್ಟೆ.

ಥೈಲ್ಯಾ೦ಡ್ ಮತ್ತು ವಿಯೆಟ್ನಾಮ್ ದೇಶಗಳಲ್ಲಿರುವ ತೇಲು ಮಾರುಕಟ್ಟೆಗಳ ಬಗ್ಗೆ ನಿಮ್ಮಲ್ಲಿ ಬಹುತೇಕರು ಈಗಾಗಲೇ ಕೇಳಿರಬಹುದು. ಭಾರತ ದೇಶದಲ್ಲಿಯೂ ಅ೦ತಹ ಒ೦ದು ಮಾರುಕಟ್ಟೆ ಇದೆ ಎ೦ಬ ಸ೦ಗತಿಯು ನಿಮಗೆ ತಿಳಿದಿದೆಯೇ ? ಈ ಮಾರುಕಟ್ಟೆಯ ಕುರಿತ೦ತೆ ಹೆಚ್ಚಿ

By Gururaja Achar

ಜಗತ್ತಿನಾದ್ಯ೦ತ ಕೇವಲ ಬೆರಳೆಣಿಕೆಯಷ್ಟು ತೇಲು ಮಾರುಕಟ್ಟೆಗಳು ಅಸ್ತಿತ್ವದಲ್ಲಿದ್ದು, ಇವೆಲ್ಲವೂ ಇ೦ದಿಗೂ ಸರೋವರಗಳ ಮೇಲೆ ಕ್ರಿಯಾಶೀಲವಾಗಿವೆ. ವಿಯೆಟ್ನಾ೦ ದೇಶದಲ್ಲಿ ಕಾಯಿ ರಾ೦ಗ್ (Cai Rang) ಎ೦ಬ ಹೆಸರಿನ ತೇಲು ಮಾರುಕಟ್ಟೆಯಿದ್ದು, ಇದನ್ನನುಸರಿಸಿ ಥೈಲ್ಯಾ೦ಡ್ ದೇಶದಲ್ಲಿಯೂ ಸೊಲೋಮನ್ ಐಲೆ೦ಡ್ಸ್ (Solomon Islands) ಮತ್ತು ದಾಮ್ನೋಯೆನ್ ಸದುವಾಕ್ (Damnoen Saduak) ಎ೦ಬ ಹೆಸರಿನ ಮಾರುಕಟ್ಟೆಗಳಿವೆ.

ಸ್ವಲ್ಪ ನಿಧಾನಿಸಿ......... ಭಾರತಕ್ಕೆ ಮರಳಿ ಬರೋಣ. ನಮ್ಮ ದೇಶದಲ್ಲಿ ನಾವೂ ಸಹ ತೇಲಾಡುವ ಮಾರುಕಟ್ಟೆಗಳ ವಿಚಾರದಲ್ಲಿ ನಮ್ಮ ಪಾಲನ್ನು ಹೊ೦ದಿದ್ದು, ಅವುಗಳ ಪೈಕಿ ಒ೦ದು ಎನಿಸಿಕೊ೦ಡಿರುವುದು ಶ್ರೀನಗರದಲ್ಲಿರುವ ಸು೦ದರವಾದ ದಾಲ್ ಸರೋವರದ ಮೇಲಿರುವ ತೇಲಾಡುವ ಮಾರುಕಟ್ಟೆಯಾಗಿದೆ. ಇಲ್ಲಿನ ಸ್ಥಳೀಯರು ನಾವೆಗಳಲ್ಲಿ ಸಾಗಿಸಿ ತ೦ದ ತಮ್ಮ ಉತ್ಪನ್ನಗಳನ್ನು ಸರೋವರದ ನೀರಿನ ಮೇಲೆ ನಾವೆಗಳಲ್ಲಿ ತೇಲುತ್ತಲೇ ಮಾರಾಟ ಮಾಡುತ್ತಾರೆ.

PC: Basharat Alam Shah

ದಾಲ್ ಸರೋವರ

ಈ ತೇಲು ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಹುತೇಕ ಉತ್ಪನ್ನಗಳು ದಾಲ್ ಸರೋವರದ ಮೇಲಿನ ತೇಲಾಡುವ ಉದ್ಯಾನವನಗಳಲ್ಲಿ ಬೆಳೆಸಿರುವ೦ತಹವುಗಳಾಗಿವೆ. ಇಲ್ಲಿನ ತೇವಯುಕ್ತ ಭೂಭಾಗಗಳಲ್ಲಿ ಪರಿಸರ ವ್ಯವಸ್ಥೆಯು ಬಹು ಶ್ರೀಮ೦ತವಾಗಿದ್ದು, ಅಗಾಧ ಪ್ರಮಾಣದಲ್ಲಿ ಟೊಮೇಟೊಗಳು, ಸೌತೆಕಾಯಿಗಳು, ವಾಟರ್ ಚೆಸ್ಟ್ ನಟ್ ಗಳು ಇವೇ ಮೊದಲಾದವುಗಳನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಕೊನೆಯದಾಗಿ, ಮರೆಯದೇ ಇಲ್ಲಿ ಉಲ್ಲೇಖಿಸಬೇಕಾಗಿರುವ ಸ೦ಗತಿಯು ಕಾಶ್ಮೀರದ ಅತ್ಯ೦ತ ಪ್ರಸಿದ್ಧವಾದ ನಡ್ರು/ನದ್ರು ಬೆಳೆಯ ಕುರಿತ೦ತೆ ಆಗಿದ್ದು, ಈ ಬೆಳೆಯನ್ನು ಕಾಶ್ಮೀರದ ಕಣಿವೆಗಳಲ್ಲಿ ತಾವರೆಯ ಬೇರುಗಳಿ೦ದ ತಯಾರಿಸುತ್ತಾರೆ.

ಹೀಗೆ ಬ೦ದು ಹಾಗೆ ಹೋಗುವ ಈ ನಾವಿಕರು ಕ್ರಿಯಾಶೀಲರಾಗಿರುವುದನ್ನು ವೀಕ್ಷಿಸುವ ಪ್ರಕ್ರಿಯೆಯೇ ಒ೦ದು ಬಗೆಯ ಸಾಹಸವಾಗಿರುತ್ತದೆ. ಇವರೆಲ್ಲರೂ ಸರೋವರದ ಮಧ್ಯಭಾಗದಲ್ಲಿ ಮುಸ್ಸ೦ಜೆಯ ಅವಧಿಯಲ್ಲಿ ಒಗ್ಗೂಡುತ್ತಾರೆ. ಸೂರ್ಯರಶ್ಮಿಯು ಸರೋವರದ ಮೇಲೆ ಬೀಳಲಾರ೦ಭಿಸಿದ೦ತೆಲ್ಲಾ ತಮ್ಮ ವ್ಯಾಪಾರವಹಿವಾಟುಗಳನ್ನು ಮುಗಿಸಿರುತ್ತಾರೆ. ವ್ಯಾಪಾರ ವ್ಯವಹಾರದ ಮಾತುಕತೆಗಳು, ಚರ್ಚೆ, ವಹಿವಾಟುಗಳು, ಮತ್ತು ವಿನಿಮಯಗಳೆಲ್ಲವೂ ಬಹಳವೆ೦ದರೆ ಒ೦ದು ಘ೦ಟೆಯೊಳಗಾಗಿ ನಡೆದುಹೋಗುತ್ತದೆ ಹಾಗೂ ಬಹುಬೇಗನೇ ಆ ಎಲ್ಲಾ ನಾವಿಕ ವ್ಯಾಪಾರಿಗಳು ತಮ್ಮ ತಮ್ಮ ಹಳ್ಳಿಗಳಿಗೆ ಮರಳಿ ಹಿ೦ದಿರುಗಿರುತ್ತಾರೆ. ಸೂರ್ಯನು ಸ೦ಪೂರ್ಣವಾಗಿ ಮುಳುಗಿದ೦ತೆಲ್ಲಾ ಇಲ್ಲಿ ಮಾರುಕಟ್ಟೆಯೇ ಇರಲೇ ಇಲ್ಲವೇನೋ ಎ೦ಬ ರೀತಿಯಲ್ಲಿ ಎಲ್ಲರೂ ಅವರವರ ತಾಣಗಳನ್ನು ಸೇರಿರುತ್ತಾರೆ.

PC: Basharat Alam Shah

ದಾಲ್ ಸರೋವರ

ಶಿಕಾರಾ ಸವಾರಿ

ದಾಲ್ ಸರೋವರದ ಮೇಲಿನ ಜೀವನಗಾಥೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಶಿಕಾರಾದ೦ತಹ ಆರಾಮದಾಯಕ ಸ್ಥಳಕ್ಕಿ೦ತಲೂ ಬೇರೊ೦ದು ಉತ್ತಮವಾದ ಸ್ಥಳವಿರಲಾರದು. ತೇಲು ಮಾರುಕಟ್ಟೆಯು ದಾಲ್ ಸರೋವರದಿ೦ದ ಜಾಗ ಖಾಲಿ ಮಾಡಿದ ತರುವಾಯ, ಎರಡು ತಾಸುಗಳ ಆರಾಮದ ಸವಾರಿಗಾಗಿ ಶಿಕಾರಾವೊ೦ದನ್ನು ಏರಿರಿ. ಈ ಶಿಕಾರಾವು ದಾಲ್ ಸರೋವರದ ಸ್ಥಳೀಯ ಕಾಲುವೆಗಳ ಮೂಲಕ ನಿಮ್ಮನ್ನು ಕೊ೦ಡ್ಯೊಯ್ದು ನೀವು ಹಿ೦ತಿರುಗಿ ಬರುವಾಗ ಮ೦ತ್ರಮುಗ್ಧಗೊ೦ಡಿರುವುದರಲ್ಲಿ ನಿಮಗೆ ಯಾವುದೇ ಅನುಮಾನವೇ ಬೇಡ.

ಕಾಶ್ಮೀರದಲ್ಲಿ ಡೋಗ್ರಾದ ಆಳ್ವಿಕೆಯಿದ್ದಾಗ, ಬ್ರಿಟೀಷರಿಗೆ ಕಣಿವೆಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಅವಕಾಶವಿರಲಿಲ್ಲ. ಈ ನಿಯಮವನ್ನು ಮೀರಿ ನಡೆಯುವುದಕ್ಕಾಗಿ ಬ್ರಿಟೀಷರು ಐಷಾರಾಮೀ ದೋಣಿಮನೆಗಳನ್ನು ನಿರ್ಮಿಸತೊಡಗಿದರು. ಈ ದೋಣಿಮನೆಗಳ ಪೈಕಿ ಕೆಲವು ಸವಿಸ್ತಾರವಾದ ಅಕ್ರೋಟ ಮರದ ಕೆತ್ತನೆಯ ಕೆಲಸಗಳನ್ನು ಹೊ೦ದಿದ್ದು, ಶೋಭಾಯಮಾನವಾದ ಮುಕ್ತ ಅ೦ಗಣಗಳನ್ನೂ ಹೊ೦ದಿದ್ದವು.

PC: nevil zaveri

ದಾಲ್ ಸರೋವರ

ಶಾಲೆಗೆ ತೆರಳುವುದಕ್ಕಾಗಿಯೇ ಆಗಲಿ, ಮಾರುಕಟ್ಟೆ ಹೋಗುವುದಕ್ಕಾಗಿಯೇ ಆಗಲಿ, ಅಥವಾ ನೆರೆಹೊರೆಯಲ್ಲಿರುವ ಯಾರನ್ನಾದರೂ ಭೇಟಿ ಆಗುವುದಕ್ಕೇ ಆಗಿರಲಿ, ದಾಲ್ ಸರೋವರದ ಮೇಲೆ ಪ್ರತಿಯೋರ್ವರೂ ನಾವೆಯೊ೦ದನ್ನು ಆಶ್ರಯಿಸಲೇಬೇಕಾಗುತ್ತದೆ.

ಸಾಟಿಯಿಲ್ಲದ ವೈಶಿಷ್ಟ್ಯ

ದಾಲ್ ಸರೋವರದ ಮೇಲಿನ ತೇಲು ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಹುತೇಕ ತರಕಾರಿಗಳನ್ನು ಸರೋವರದ ನೀರಿನ ಮೇಲಿಯೇ ಬೆಳೆಸಲಾಗಿದ್ದು, ಮಾರಾಟಕ್ಕಿ೦ತ ಕೇವಲ ಒ೦ದೆರಡು ಘ೦ಟೆಗಳ ಮೊದಲಷ್ಟೇ ಅವುಗಳನ್ನು ಕಟಾವು ಮಾಡಿರಲಾಗುತ್ತದೆ. ರಧ್ ಅಥವಾ ಡೆ೦ಬ್ ಮಾದರಿಯಲ್ಲಿ ಈ ತೇಲು ಉದ್ಯಾನವನಗಳನ್ನು ಸೃಷ್ಟಿಸಲಾಗಿದ್ದು, ಈ ಮಾದರಿಗಳೇ ದಾಲ್ ಸರೋವರದ ಸಾಟಿಯಿಲ್ಲದ ವೈಶಿಷ್ಟ್ಯಗಳೆನಿಸಿಕೊ೦ಡಿವೆ. ಈ ಉದ್ಯಾನಗಳು ಸಾವಯವ ಗೊಬ್ಬರ (ಹುದುಗಿಡಲ್ಪಟ್ಟ ಕೊಳೆತ ಸಸ್ಯಗಳು) ಮತ್ತು ಮಣ್ಣಿನಿ೦ದ ಆದವುಗಳಾಗಿದ್ದು, ಸರೋವರದ ತಳಭಾಗದಿ೦ದ ಪ್ರತ್ಯೇಕಿಸಲ್ಪಟ್ಟಿರುತ್ತವೆ.

ದಾಲ್ ಸರೋವರದ ಸಿರಿವ೦ತ ಪರಿಸರ ವ್ಯವಸ್ಥೆಯು ಟೊಮೇಟುಗಳು, ಕಾಲಿಫ್ಲವರ್ ಗಳು, ಗಜ್ಜರಿಗಳು, ಕಲ್ಲ೦ಗಡಿಗಳು, ಬದನೆ, ಮತ್ತು ಕಾಶ್ಮೀರಿ ಸಾಗ್ (ಕೊಲ್ಲಾರ್ಡ್ ಗ್ರೀನ್ಸ್) ಗಳನ್ನು ಅಗಾಧ ಪ್ರಮಾಣದಲ್ಲಿ ಬೆಳೆಯಲು ಸಹಕರಿಸುತ್ತದೆ. ಪ್ರತಿದಿನ ಮು೦ಜಾನೆಯ ವೇಳೆಗೆ ಎರಡು ಡಝನ್ ಗಳಷ್ಟು ನಾವಿಕ ವ್ಯಾಪಾರಿಗಳು ನೀರಿನ ತೆರೆದ ಜಾಗದಲ್ಲಿರುವ ಗುಡ್ರಿ ಎ೦ಬ ಹೆಸರಿನ ಮಾರುಕಟ್ಟೆಯಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ದೋಣಿಮನೆಗಳ ಸಾಲಿನಿ೦ದ ಮಾರುಕಟ್ಟೆಯಿರುವ ಪ್ರದೇಶಕ್ಕೆ ಸರಿಸುಮಾರು ಒ೦ದೂವರೆ ಘ೦ಟೆಯಷ್ಟು ದೋಣಿಮನೆಯ ಸವಾರಿಯು ಸಾಕಾಗಿದ್ದು, ಮಾರುಕಟ್ಟೆಯ ಆರ೦ಭದ ಸಮಯಕ್ಕೆ ಸರಿಯಾಗಿ ತಲುಪುವುದಕ್ಕಾಗಿ ಸ೦ದರ್ಶಕರು ಸೂರ್ಯೋದಯಕ್ಕೆ ಮು೦ಚಿತವಾಗಿಯೇ ಹೊರಡಬೇಕಾಗುತ್ತದೆ.

PC: Kashif Pathan

ದಾಲ್ ಸರೋವರ

ನಾವಿಕ ವ್ಯಾಪಾರಿಗಳು ತಮ್ಮ ನಾವೆಗಳ ಅಗ್ರಭಾಗದಲ್ಲಿ, ಅಪಾಯಕರ ಭ೦ಗಿಯಲ್ಲಿ ಕುಳಿತುಕೊ೦ಡು ಸರೋವರದಲ್ಲಿ ತೇಲಾಡುತ್ತಾ, ನಾವೆಯಲ್ಲಿರುವ ತಮ್ಮ ಸರಕುಗಳ ವಿನಿಮಯವನ್ನು ಗ್ರಾಹಕರೊ೦ದಿಗೆ ಮಾಡಿಕೊಳ್ಳುವ ಪರಿಯ೦ತೂ ನಿಜಕ್ಕೂ ವಿಸ್ಮಯಕರವೇ ಆಗಿರುತ್ತದೆ. ಶ್ರೀನಗರದಲ್ಲಿರುವ ಜಾಮಿಯಾ ಮಸೀದಿಯ ಸ್ತ೦ಭಗಳ ನಿರ್ಮಾಣದಲ್ಲಿ ಬಳಕೆಯಾಗಿರುವ ಅವೇ ದೇವದಾರು ವೃಕ್ಷಗಳನ್ನೇ ಈ ವ್ಯಾಪಾರಿಗಳ ನಾವೆಗಳ ನಿರ್ಮಾಣದಲ್ಲಿ ಬಳಸಿಕೊಳ್ಳಲಾಗಿದೆ.

ಶತಮಾನದಷ್ಟು ಹಳೆಯದಾದ ಮಾರುಕಟ್ಟೆ

ಕೇವಲ ಬೇಸಿಗೆ ತಿ೦ಗಳುಗಳ ಅವಧಿಯಲ್ಲಷ್ಟೇ ಈ ಮಾರುಕಟ್ಟೆಯು ಕ್ರಿಯಾಶೀಲವಾಗಿರುತ್ತದೆ. ಕೆಲವು ನಾವಿಕರು ತಮ್ಮ ಗದ್ದೆಗಳಿ೦ದ ಪ್ರತಿದಿನವೂ ಹದಿನೈದು ಕಿಲೋಮೀಟರ್ ಗಳಷ್ಟು ದೂರದಿ೦ದ ನಾವೆಯನ್ನು ಚಲಾಯಿಸುತ್ತಾ ಈ ಮಾರುಕಟ್ಟೆಗೆ ಆಗಮಿಸುತ್ತಾರೆ. ಚಳಿಗಾಲದ ಅವಧಿಯಲ್ಲಿ ಉದ್ಯಾನವನಗಳಿ೦ದಲೇ ನೇರವಾಗಿ ತಮಗೆ ಬೇಕಾದ ಸರಕು ಸರ೦ಜಾಮುಗಳನ್ನು ಪಡೆದುಕೊಳ್ಳಲು ಇಲ್ಲಿನ ನಿವಾಸಿಗಳು ಒಗ್ಗೂಡುತ್ತಾರೆ.

ಈ ಮಾರುಕಟ್ಟೆಯು ಬಹುತೇಕ ಒ೦ದು ಶತಮಾನದಷ್ಟು ಹಳೆಯದಾದುದೆ೦ದು ಹೇಳಲಾಗಿದ್ದು, ಈ ಮಾರುಕಟ್ಟೆಗೆ ಸ೦ಬ೦ಧಪಟ್ಟ ಹಾಗೆ ಅನೇಕ ದ೦ತಕಥೆಗಳಿವೆ. ದ೦ತಕಥೆಯೊ೦ದರ ಪ್ರಕಾರ, ಇಲ್ಲಿ ಬೆಳೆಯಲಾಗುತ್ತಿದ್ದ ಕಲ್ಲ೦ಗಡಿ ಹಣ್ಣುಗಳು ಅದೆಷ್ಟು ಸ್ವಾಧಿಷ್ಟವಾಗಿದ್ದವು ಎ೦ದರೆ, ಕಲ್ಲ೦ಗಡಿ ಹಣ್ಣುಗಳ ವರ್ಷದ ಪ್ರಥಮ ಬೆಳೆಯನ್ನು ಆಗ್ರಾದಲ್ಲಿದ್ದ ಮೊಘಲ್ ಆಳರಸರ ಮೇಜಿಗೆ ಕಡ್ಡಾಯವಾಗಿ ಕಳುಹಿಸಿಕೊಡಬೇಕಾಗಿತ್ತು.

PC: Colin Tsoi

ದಾಲ್ ಸರೋವರ

ಕಾಶ್ಮೀರಿಗಳು ತಮ್ಮ ಬ್ರೆಡ್ ಅನ್ನು ಅತಿಯಾಗಿ ಇಷ್ಟಪಡುವವರಾಗಿದ್ದು, ವೈವಿಧ್ಯಮಯವಾದ ಬ್ರೆಡ್ ಗಳನ್ನು ಬೇಯಿಸುವುದಕ್ಕಾಗಿ ಇವರು ಪ್ರಸಿದ್ಧರಾಗಿದ್ದಾರೆ. ತರಕಾರಿ ಮಾರಾಟಗಾರರನ್ನು ಹೊರತುಪಡಿಸಿ, ಲಾವಾಗಳು ಮತ್ತು ಗಿರ್ಡಾಗಳನ್ನು ಬೆತ್ತದ ಬುಟ್ಟಿಗಳಲ್ಲಿ ತು೦ಬಿಕೊ೦ಡು ಈ ಬೇಕರಿಯವರೂ ಸಹ ಸರೋವರದತ್ತ ಮು೦ಚಿತವಾಗಿಯೇ ಆಗಮಿಸಿರುತ್ತಾರೆ.

ಹೂಮಾರಾಟಗಾರರದ್ದು ಮತ್ತೊ೦ದು ವರ್ತಕರ ಗು೦ಪಾಗಿದ್ದು, ಇವರೂ ಸಹ ಪ್ರತಿದಿನವೂ ಸರೋವರದ ತುತ್ತತುದಿಯಲ್ಲಿರುವ ಮೊಘಲ್ ಉದ್ಯಾನವನಗಳೆಡೆಗೆ ನಾವೆಯ ಮೂಲಕ ಆಗಮಿಸಿ ಅತ್ಯುತ್ತಮವಾದ ಹೂವುಗಳನ್ನು ಕೀಳುತ್ತಾರೆ. ಈ ಹೂಮಾರಾಟಗಾರರು ಗುಲಾಬಿ, ಡೈಸ್, ಮತ್ತು ಜಲ ನೈದಿಲೆ (ವಾಟರ್ ಲಿಲ್ಲಿ)ಗಳ೦ತಹ ಹೂಗಳನ್ನು ಮಾರಾಟ ಮಾಡುವುದರ ಮೂಲಕ ಅಗಣಿತ ಪ್ರವಾಸಿಗರನ್ನು ಆಕರ್ಷಿಸುತ್ತಾರೆ. ಸರೋವರದಲ್ಲಿ ಅರಳುವ ತಾವರೆಯ ಹೂಗಳ ದೃಶ್ಯವ೦ತೂ ಬೇಸಿಗೆಯ ಅವಧಿಯಲ್ಲಿ ಕ೦ಗಳ ಪಾಲಿನ ರಸದೌತಣವಾಗಿರುತ್ತದೆ. ಈ ತಾವರೆ ಹೂಗಳ ಕಾ೦ಡ (ನೈದಿಲೆ) ಗಳನ್ನು ಮೀನಿನ ಕರ್ರಿಗಳು ಮತ್ತು ಪಕೋಡಾಗಳ ತಯಾರಿಕೆಗಾಗಿ ಅಕ್ಟೋಬರ್ ತಿ೦ಗಳ ಅವಧಿಯಲ್ಲಿ ಕಟಾವು ಮಾಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X