ತುಳಜಾಪುರ ಎಂಬುದು ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಯಮುನಾಚಲ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಶಾಂತವಾದ ನಗರವಾಗಿದೆ. ಇದು ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿದ್ದು, ಸಮುದ್ರ ಮಟ್ಟದಿಂದ 650 ಅಡಿಯಷ್ಟು ಎತ್ತರದಲ್ಲಿ ನೆಲೆಗೊಂಡಿದೆ. ಇದು ಸೋಲಾಪುರ್ ಔರಂಗಬಾದ್ ಹೆದ್ದಾರಿಯ ನಡುವೆ ಕಾಣ ಸಿಗುತ್ತದೆ.
ತುಳಜಾಪುರವನ್ನು ಮೊದಲಿಗೆ ಚಿಂಚುಪುರ್ ಎಂದು ಕರೆಯುತ್ತಿದ್ದರು. ಈ ಊರು ಹುಣಸೆ ಮರಗಳ ನೆಲೆಬೀಡಾಗಿತ್ತು. ಈ ಪ್ರಾಂತ್ಯದ ಇತಿಹಾಸವು ಸುಮಾರು 12ನೇ ಶತಮಾನದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ತುಳಜಾಪುರವು ಒಂದು ಅದ್ಭುತವಾದ ಯಾತ್ರಾ ಸ್ಥಳವಾಗಿದ್ದು, ಪ್ರತಿವರ್ಷವು ಹಿಂದಿಗಿಂತ ಹೆಚ್ಚಾಗಿ ಭಕ್ತ ಜನರ ಆಕರ್ಷಣೆಯನ್ನು ಗಳಿಸಿ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತದೆ.
ಚಿತ್ರಕೃಪೆ: weekimedia
ತುಳಜಾಪುರದ ತುಳಜಾ ಭವಾನಿ ದೇವಾಲಯವು ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ದೇವಿಯ ದರ್ಶನ ಪಡೆಯಲು ಆಗಮಿಸುವ ಭಕ್ತರಿಂದಾಗಿಯೆ ತುಳಜಾಪುರವು ಯಾತ್ರಾರ್ಥಿಗಳಿಂದ ತುಂಬಿ ತುಳುಕುವುದು. ಇಲ್ಲಿ ತುಳಜಾ ಭವಾನಿ ದೇವಿಯ ದೇವಾಲಯವನ್ನು ಸ್ಥಾಪಿಸಿದ ತರುವಾಯ ಈ ಊರು ತನ್ನ ಹಳೆಯ ಹೆಸರಾದ ಚಿಂಚುಪುರ್ ಎಂಬುದನ್ನು ಕಳೆದುಕೊಂಡು ತುಳಜಾಪುರ್ ಎಂಬ ಹೊಸ ಹೆಸರನ್ನು ಪಡೆಯಿತು.
ಇಲ್ಲಿನ ತುಳಜಾ ಭವಾನಿ ದೇವಾಲಯವು ಭಾರತದ 51 ಪವಿತ್ರ ಶಕ್ತಿ ಪೀಠಗಳಲ್ಲಿ ಒಂದು ಎಂದು ಪ್ರಾಮುಖ್ಯತೆಯನ್ನು ಗಳಿಸಿದೆ. ವಿಷ್ಣುವಿನ ಪರಮ ಭಕ್ತನಾದ ಸಂತ ಗರೀಬ್ ನ ಮಠವು ಇಲ್ಲಿನ ಮತ್ತೊಂದು ಆಕರ್ಷಣೆಯಾಗಿದೆ. ಈಗ ಈ ಮಠವು ಅನೇಕ ಧ್ಯಾನ ಮತ್ತು ಯೋಗ ಕುರಿತಾದ ಸೌಲಭ್ಯಗಳನ್ನು ಒದಗಿಸುತ್ತಿದೆ.
ಚಿತ್ರಕೃಪೆ: Anjali Sajan
ತುಳಜಾಪುರದ ಹೊರಭಾಗದಲ್ಲಿ ಧಕ್ತೆ ತುಳಜಾಪುರ್ ಎಂಬ ಉಪನಗರವು ಇದೆ. ಇದರರ್ಥ 'ಯೌವನದ' ತುಳಜಾಪುರ್ ಎಂದು ಹೇಳಬಹುದು. ಇಲ್ಲಿ ಅದೇ ತುಳಜಾ ಭವಾನಿ ದೇವಿಯ ಸಣ್ಣ ಗಾತ್ರದ ಮೂರ್ತಿಯನ್ನು ಕಾಣಬಹುದು. ನಂಬಿಕೆಗಳ ಪ್ರಕಾರ ಮುಖ್ಯದೇವಾಲಯಕ್ಕೆ ಭೇಟಿ ಕೊಡುವವರು ಮೊದಲು ಇಲ್ಲಿಗೆ ಭೇಟಿಕೊಡುವುದು ಕಡ್ಡಾಯ.
ಆದಿಗುರು ಶಂಕರರು ಪಟ್ಟಿ ಮಾಡಿದ 18 ಶಕ್ತಿಪೀಠಗಳು
ಕಲ್ಲೋಳ ತೀರ್ಥ,ವಿಷ್ಣು ತೀರ್ಥ, ಗೋಮುಖ ತೀರ್ಥ ಮತ್ತು ಪಾಪನಾಶಿ ತೀರ್ಥಗಳೆಂಬ ಕಲ್ಯಾಣಿಗಳು ಇಲ್ಲಿ ಕಾಣಸಿಗುತ್ತವೆ. ಈ ಕಲ್ಯಾಣಿಗಳಲ್ಲಿ ಮಿಂದರೆ ಭಕ್ತಾಧಿಗಳು ತಮ್ಮ ಸಕಲ ಪಾಪ ಕರ್ಮಗಳಿಂದ ಮುಕ್ತಿ ಹೊಂದುವರೆಂದು ನಂಬಲಾಗಿದೆ. ಅಸಂಖ್ಯಾತ ಯಾತ್ರಾರ್ಥಿಗಳು ಈ ತೀರ್ಥಗಳಲ್ಲಿ ಮಿಂದು ತಮ್ಮ ತಮ್ಮ ಸಂಕಷ್ಟ ಮತ್ತು ಶಾಪಗಳಿಂದ ಮುಕ್ತಿ ಪಡೆಯಲು ಹಾತೊರೆಯುವುದನ್ನು ನಾವು ಇಲ್ಲಿ ಕಾಣಬಹುದು.