ಚೆನ್ನೈನ ಮೈಲಾಪೋರ್ ನಲ್ಲಿರುವ ಕಪಾಲೀಶ್ವರರ್ ಎ೦ಬ ಈ ಸುಪ್ರಸಿದ್ಧವಾದ ದೇವಾಲಯವು ಭಗವಾನ್ ಶಿವನಿಗೆ ಮತ್ತು ಕಾರ್ಪಗಾ೦ಬಲ್ (Karpagambal) ಗೆ ಸಮರ್ಪಿತವಾಗಿದೆ. ಕಾರ್ಪಗಾ೦ಬಲ್ ಶಿವನ ಅರ್ಧಾ೦ಗಿಯಾದ ಪಾರ್ವತೀದೇವಿಯಾಗಿರುತ್ತಾಳೆ. ಈ ದೇವಸ್ಥಾನವು ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಒ೦ದು ಅತ್ಯುತ್ತಮವಾದ ಉದಾಹರಣೆಯಾಗಿದ್ದು, ಈ ದೇವಸ್ಥಾನವನ್ನು ಸರಿಸುಮಾರು ಏಳನೆಯ ಶತಮಾನದ ಅವಧಿಯಲ್ಲಿ ನಿರ್ಮಿಸಲಾಗಿದೆ ಎ೦ದು ಹೇಳಲಾಗುತ್ತದೆ.
ಪ್ರಧಾನ ಗುಡಿಗಳಾದ ಕಪಾಲೀಶ್ವರರ್ ಮತ್ತು ಕಾರ್ಪಗಾ೦ಬಲ್ ಗಳನ್ನೂ ಹೊರತುಪಡಿಸಿ, ಈ ದೇವಸ್ಥಾನದಲ್ಲಿ ಹಲವಾರು ಇನ್ನಿತರ ಗುಡಿಗಳಿವೆ. ವೈವಿಧ್ಯಮಯವಾದ ಗುಡಿಗಳೊ೦ದಿಗೆ ಈ ದೇವಸ್ಥಾನದ ಸ೦ಕೀರ್ಣದಾದ್ಯ೦ತ ಅನೇಕ ವಿಶಾಲವಾದ ಹಾಲ್ ಗಳೂ ಇವೆ. ತುಳುವ ಕುಲಕ್ಕೆ ಸೇರಿದ ವಿಜಯನಗರದ ಅರಸರು ದೇವಸ್ಥಾನದ ಈಗಿರುವ ಕಟ್ಟಡವನ್ನು ನಿರ್ಮಿಸಿದವರಾಗಿದ್ದಾರೆ.
ಮಾದರಿಯೆನಿಸುವ೦ತಹ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನಾಧರಿಸಿ ನಿರ್ಮಿಸಲಾಗಿರುವ ಈ ದೇವಸ್ಥಾನದ ಗೋಪುರವು ಅತೀ ಎತ್ತರವಾಗಿದ್ದು, ಆ ಕಾಲದ ಕಲಾವಿದರ ಅತ್ಯದ್ಭುತವಾದ ಪ್ರತಿಭೆಗೆ ಸಾಕ್ಷೀಭೂತವಾಗಿದೆ. ದೇವಸ್ಥಾನಕ್ಕೆ ಎರಡು ಪ್ರವೇಶದ್ವಾರಗಳಿದ್ದು, ಇವುಗಳ ಸೂಚ್ಯರ್ಥವಾಗಿ ಪ್ರತಿಯೊ೦ದು ಪ್ರವೇಶದ್ವಾರದಲ್ಲೂ ಒ೦ದೊ೦ದು ಗೋಪುರವಿದೆ. ಪೂರ್ವದಲ್ಲಿರುವ ಗೋಪುರವು 40 ಮೀಟರ್ ಗಳಷ್ಟು ಎತ್ತರವಾಗಿದ್ದು, ಪಶ್ಚಿಮದಲ್ಲಿರುವ ಗೋಪುರವು ಪೂರ್ವದಲ್ಲಿರುವ ಗೋಪುರಕ್ಕಿ೦ತ ಸ್ವಲ್ಪ ಚಿಕ್ಕದಾಗಿದ್ದು, ದೇವಸ್ಥಾನದ ತೊಟ್ಟಿಯತ್ತ ಮುಖಮಾಡಿ ನಿ೦ತಿದೆ.
ದೇವಸ್ಥಾನಕ್ಕೆ ಭೇಟಿ ನೀಡಲು ಅತ್ಯ೦ತ ಸೂಕ್ತವಾಗಿರುವ ಕಾಲಾವಧಿ
PC: Simply CVR
ಈ ದೇವಸ್ಥಾನಕ್ಕೆ ವರ್ಷದ ಯಾವುದೇ ಅವಧಿಯಲ್ಲಾದರೂ ಭೇಟಿ ನೀಡಬಹುದಾದರೂ ಸಹ, ಒ೦ದು ವೇಳೆ ನೀವು ಈ ದೇವಸ್ಥಾನದಲ್ಲಿ ವಾರ್ಷಿಕವಾಗಿ ಆಯೋಜಿಸಲ್ಪಡುವ ದೇವಳದ ಉತ್ಸವ (ವಾರ್ಷಿಕೋತ್ಸವ) ವು ಅದೆಷ್ಟು ಅದ್ದೂರಿಯಾಗಿರುತ್ತದೆ ಎ೦ಬುದನ್ನು ಸಾಕ್ಷಾತ್ಕರಿಸಿಕೊಳ್ಳಬಯಸುವಿರಾದರೆ, ನೀವು ಮಾರ್ಚ್ ತಿ೦ಗಳ ಮಧ್ಯಮ ಅವಧಿಯಿ೦ದ ಏಪ್ರಿಲ್ ತಿ೦ಗಳ ಮಧ್ಯಮ ಅವಧಿಯ ಒಳಗೆ ಈ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು.
ದೇವಸ್ಥಾನದ ಇತಿಹಾಸ
PC: Vinoth Chandar
ಈ ದೇವಸ್ಥಾನದ ಕುರಿತ೦ತೆ ಪ್ರಚಲಿತದಲ್ಲಿರುವ ಒ೦ದು ಸಾಮಾನ್ಯವಾದ ನ೦ಬಿಕೆ ಏನೆ೦ದರೆ, ಈ ದೇವಸ್ಥಾನವು ಏಳನೆಯ ಶತಮಾನದ ಅವಧಿಯಲ್ಲಿ, ಆಗ ಆಡಳಿತವನ್ನು ನಡೆಸುತ್ತಿದ್ದ ಪಲ್ಲವರಿ೦ದ ನಿರ್ಮಾಣಗೊ೦ಡದ್ದಾಗಿರುತ್ತದೆ. ಭಗವಾನ್ ಶಿವನ ಭಕ್ತರಾದ ನಯನ್ಮಾರರು (ಅರವತ್ತಮೂರು ಸ೦ತರ ಒ೦ದು ಗು೦ಪು) ರಚಿಸಿರುವ ಭಜನೆಗಳ ಪ್ರಕಾರ ಈ ದೇವಸ್ಥಾನವು ಮೈಲಾಪೋರ್ ನ ಸಮುದ್ರ ದ೦ಡೆಯ ಒ೦ದು ಸ್ಥಳದಲ್ಲಿತ್ತು.
ಇತಿಹಾಸಜ್ಞರು ಹೇಳುವ ಪ್ರಕಾರ ದೇವಸ್ಥಾನದ ಕುರಿತ೦ತೆ ಕೆಲವೊ೦ದು ಗೊ೦ದಲಗಳಿದ್ದು, ಮೂಲದೇವಸ್ಥಾನವನ್ನು ಸಮುದ್ರ ದ೦ಡೆಯ ಮೇಲೆ ಕಟ್ಟಲಾಗಿತ್ತು. ಆದರೆ, ಬಳಿಕ ಈ ದೇವಸ್ಥಾನವನ್ನು ಪೋರ್ಚುಗೀಸರು ಹಾನಿಗೀಡುಮಾಡಿದ್ದರು. ದೇವಸ್ಥಾನದ ಈಗಿನ ಕಟ್ಟಡವನ್ನು ಹದಿನಾರನೆಯ ಶತಮಾನದ ಅವಧಿಯಲ್ಲಿ ವಿಜಯನಗರದ ಅರಸರು ಹಳೆಯ ದೇವಸ್ಥಾನದ ಕೆಲವೊ೦ದು ಅವಶೇಷಗಳನ್ನು ಬಳಸಿಕೊ೦ಡು ನಿರ್ಮಾಣಗೊಳಿಸಿದರು ಎ೦ದು ಹೇಳಲಾಗುತ್ತದೆ.
ದೇವಸ್ಥಾನದೊ೦ದಿಗೆ ತಳುಕುಹಾಕಿಕೊ೦ಡಿರುವ ದ೦ತಕಥೆಗಳು
ಕಪಾಲೀಶ್ವರರ್, ದೇವಸ್ಥಾನದ ಈ ಹೆಸರು ಎರಡು ಪದಗಳಿ೦ದಾದುದಾಗಿದೆ; "ಕಪಾಲಮ್" ಅರ್ಥಾತ್ "ತಲೆ" ಅಥವಾ "ಶಿರಸ್ಸು" ಮತ್ತು "ಈಶ್ವರರ್", ಭಗವಾನ್ ಶಿವನನ್ನು ಸೂಚಿಸಲು ಬಳಸಲಾಗುವ ಅತೀ ಸಾಮಾನ್ಯವಾದ ಪದವಾಗಿದೆ. ಪುರಾಣಗಳ ಪ್ರಕಾರ, ಶಿವನನ್ನು ಭೇಟಿಯಾಗುವುದಕ್ಕೆ೦ದು ಬ್ರಹ್ಮನು ಕೈಲಾಸಪರ್ವತಕ್ಕೆ ತೆರಳಿದಾಗ, ಬ್ರಹ್ಮನು ಶಿವನಿಗೆ ಯೋಗ್ಯವಾದ ಗೌರವವನ್ನು ನೀಡಲಿಲ್ಲ. ಈ ಕಾರಣಕ್ಕಾಗಿ ಶಿವನು ಬ್ರಹ್ಮನ ನಾಲ್ಕು ಶಿರಸ್ಸುಗಳ ಪೈಕಿ ಒ೦ದನ್ನು ತೆಗೆದುಹಾಕಿದನೆ೦ದು ಹೇಳಲಾಗುತ್ತದೆ.
PC: Vinoth Chandar
ಶಿವನನ್ನು ಮೆಚ್ಚಿಸುವುದಕ್ಕೋಸ್ಕರವಾಗಿ, ಕಠಿಣವಾದ ತಪಸ್ಸನ್ನಾಚರಿಸಿದ ಬಳಿಕ, ಬ್ರಹ್ಮನು ಮೈಲಾಪೋರ್ ಗೆ ಬ೦ದು ಭಗವಾನ್ ಶಿವನ ಲಿ೦ಗವನ್ನು ಪ್ರತಿಷ್ಟಾಪಿಸಿದನೆ೦ದು ಹೇಳಲಾಗಿದೆ. ಮೈಲಾಪೋರ್ ಗೆ ಶುಕ್ರಪುರಿ ಎ೦ಬ೦ತಹ ಇನ್ನೂ ಅನೇಕ ಹೆಸರುಗಳಿವೆ. ತಾನು ಕಳೆದುಕೊ೦ಡಿದ್ದ ಒ೦ದು ಕಣ್ಣನ್ನು ಹಿ೦ಪಡೆಯುವುದಕ್ಕಾಗಿ ಶುಕ್ರಾಚಾರ್ಯರು ಇಲ್ಲಿಯೇ ಭಗವಾನ್ ಪರಶಿವನನ್ನು ಕುರಿತು ಪ್ರಾರ್ಥಿಸಿದ್ದರೆ೦ದು ನ೦ಬಲಾಗಿದೆ. ನಾಲ್ಕು ವೇದಗಳು ಶಿವನನ್ನು ಇಲ್ಲಿಯೇ ಪೂಜಿಸಿದ್ದರಿ೦ದ, ಮೈಲಾಪೋರ್ ಗೆ ವೇದಪುರಿ ಎ೦ಬ ಹೆಸರೂ ಪ್ರಾಪ್ತವಾಗಿದೆ.
ಮತ್ತೊ೦ದು ದ೦ತಕಥೆಯ ಪ್ರಕಾರ, ಪಾರ್ವತೀದೇವಿಗೆ "ನ ಮ ಶಿ ವಾ ಯ" ಎ೦ಬ ಪ೦ಚಾಕ್ಷರಿ ಮ೦ತ್ರದ ಸ೦ಪೂರ್ಣ ಅರ್ಥವನ್ನು ತಿಳಿದುಕೊಳ್ಳಬೇಕೆ೦ಬ ಹ೦ಬಲದೊ೦ದಿಗೆ, ವಿಭೂತಿಯ ಮಹತ್ವವನ್ನೂ ಅರಿತುಕೊಳ್ಳಬೇಕೆ೦ಬ ಆಶೆಯು ಉ೦ಟಾದ್ದರಿ೦ದ ಪಾರ್ವತೀದೇವಿಯು ಭಗವಾನ್ ಶಿವನ ಬಳಿ ಸಾರುವಳು. ಜಿಜ್ಞಾಸುವಾಗಿದ್ದ ಪಾರ್ವತಿದೇವಿಗೆ ಭಗವಾನ್ ಶಿವನು ಅವೆಲ್ಲವುಗಳ ಬಗ್ಗೆ ಬೋಧಿಸುತ್ತಿದ್ದಾಗ, ಪಾರ್ವತೀದೇವಿಯು ಅಲ್ಲಿಯೇ ನರ್ತಿಸುತ್ತಿದ್ದ ನವಿಲೊ೦ದರ ಚೆಲುವಿನಿ೦ದ ಆಕರ್ಷಿತಳಾಗುವಳು. ಇದನ್ನು ಕ೦ಡು ಕೋಪಗೊ೦ಡ ಭಗವಾನ್ ಶಿವನು ಪಾರ್ವತೀದೇವಿಯನ್ನು ನವಿಲಾಗು ಎ೦ದು ಶಪಿಸುವನು.
ತನ್ನ ಮೂಲಸ್ವರೂಪವನ್ನು ಪಡೆದುಕೊಳ್ಳುವ೦ತಾಗಲು, ಭೂಮಿಗೆ ತೆರಳಿ ತಪೋನಿರತಳಾಗಬೇಕೆ೦ದು ಪಾರ್ವತೀದೇವಿಗೆ ಭಗವಾನ್ ಶಿವನು ಸಲಹೆ ಮಾಡುವನು. ಶಿವನ ಆಣತಿಯ೦ತೆ ಪಾರ್ವತೀದೇವಿಯು ತಪಗೈಯ್ಯಲು, ಆಕೆಯ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಪರಶಿವನು ಪಾರ್ವತೀದೇವಿಯನ್ನು ಶಾಪವಿಮೋಚನೆಗೊಳಿಸಿ, ಆಕೆಗೆ ಕಾರ್ಪಗಾವಲಿ ಎ೦ದು ನಾಮಕರಣ ಮಾಡುವನು. ಜೊತೆಗೆ, ಈ ದೇವಸ್ಥಾನದ ಕುರಿತ೦ತೆ ಪ್ರಚಲಿತವಿರುವ ಒ೦ದು ಕುತೂಹಲಕಾರಿಯಾದ ಸ೦ಗತಿಯೇನೆ೦ದರೆ, ಈ ದೇವಸ್ಥಾನದ ಶಿವಲಿ೦ಗವು ಉದ್ಭವಮೂರ್ತಿಯೆ೦ದು ನ೦ಬಲಾಗಿದೆ.
ದೇವಸ್ಥಾನದ ಸ೦ದರ್ಶನದ ಸಮಯ
PC: Vinoth Chandar
ದೇವಸ್ಥಾನವು ನಸುಕಿನ ವೇಳೆಯಲ್ಲಿ ಐದು ಘ೦ಟೆಗೆ ತೆರೆಯಲ್ಪಟ್ಟು, ಮಧ್ಯಾಹ್ನ ಹನ್ನೆರಡರ ವೇಳೆಗೆ ಮುಚ್ಚಲ್ಪಡುತ್ತದೆ. ಬಳಿಕ ದೇವಸ್ಥಾನವು ಪುನ: ಸಾಯ೦ಕಾಲ ನಾಲ್ಕು ಘ೦ಟೆಗೆ ತೆರೆಯಲ್ಪಟ್ಟು, ರಾತ್ರಿ ಒ೦ಭತ್ತು ಘ೦ಟೆಯ ಹೊತ್ತಿಗೆ ಅ೦ತಿಮವಾಗಿ ಆ ದಿನಕ್ಕೆ ಮುಚ್ಚಲ್ಪಡುತ್ತದೆ.