ಶಕ್ತಿ ದೇವಿ, ಲೋಕಮಾತೆ, ದುಷ್ಟ ಶಕ್ತಿ ವಿನಾಶಿಣಿ ಎಂತೆಲ್ಲ ಆರಾಧಿಸಲಾಗುತ್ತದೆ ದುರ್ಗಾ ದೇವಿಯನ್ನು. ದುರ್ಗೆ ಎಂದಾಕ್ಷಣವೆ ಭಯಂಕರ ರೂಪ, ಶಕ್ತಿ, ಧೈರ್ಯಗಳು ಎಲ್ಲೆಡೆ ಪ್ರವಹಿಸುತ್ತವೆ. ಆ ಭಯಂಕರ ರೂಪ ಸಾಕಷ್ಟು ಭಕ್ತಾದಿಗಳಲ್ಲಿ ಭಯ ಭಕ್ತಿಯನ್ನು ಮೂಡಿಸುತ್ತವೆ.
ಅಂತೆಯೆ ದುರ್ಗಾ ದೇವಿಯನ್ನು ಭಯಂಕರ ರೂಪದ, ಅಸುರರನ್ನು ಕ್ಷಣ ಮಾತ್ರದಲ್ಲೆ ಸಂಹರಿಸಬಲ್ಲ ಶಕ್ತಿ ದೇವಿಯನ್ನಾಗಿ ಆರಾಧಿಸಲಾಗುತ್ತದೆ. ಆದರೆ ನಿಮಗೆ ಗೊತ್ತೆ ಸಾಕಷ್ಟು ಜನ ಕೊಂಕಣಿ ಭಾಷಿಕರು ಅದರಲ್ಲೂ ವಿಶೇಷವಾಗಿ ಗೋವಾ ಹಾಗೂ ಕರ್ನಾಟಕದ ಉತ್ತರ ಕನ್ನಡದಲ್ಲಿ ನೆಲೆಸಿರುವವರು ಶಾಂತ ರೂಪದ ದುರ್ಗೆಯನ್ನು ಆರಾಧಿಸುತ್ತಾರೆಂದು.
ತಾಯಿ ಕರೆದಾಗ ಮಾತ್ರ ಹೋಗಲು ಸಾಧ್ಯ, ಏಕೆಂದರೆ ಇದು ವೈಷ್ಣೊದೇವಿ!
ಹೌದು, ಈ ಶಾಂತ ರೂಪದ ದುರ್ಗೆಯು ಬಹಳಷ್ಟು ಕೊಂಕಣಿ ಭಾಷಿಕರ ಕುಲದೇವಿಯಾಗಿಯೂ ಆರಾಧಿಸಲ್ಪಡುತ್ತಾಳೆ. ಅವಳೆ ಶಾಂತಾದುರ್ಗಾ ದೇವಿ. ಈ ಶಾಂತಾದುರ್ಗಾ ದೇವಿಗೆ ಮುಡಿಪಾದ ಸಾಕಷ್ಟು ದೇವಾಲಯಗಳನ್ನು ಗೋವಾದಲ್ಲಿ ಕಾಣಬಹುದಾಗಿದೆ. ಆದಾಗ್ಯೂ ಉತ್ತರ ಕನ್ನಡ ಜಿಲ್ಲೆಯಲ್ಲೂ ಶಾಂತಾದುರ್ಗಾ ದೇವಾಲಯಗಳಿವೆ.
ಶಾಂತಾದುರ್ಗಾ
ಬ್ರಾಹ್ಮಿಣಿಕ ರೂಪದಲ್ಲಿ ಶಾಂತಾದುರ್ಗಾ ದೇವಿಯನ್ನು ಗೋವಾದ ಬಹುತೇಕ ಹಳ್ಳಿಗಳಲ್ಲಿ ಆರಾಧಿಸಲಾಗುತ್ತದೆ. ವಿಶೇಷವಾಗಿ ಹುತ್ತದ ರೂಪದಲ್ಲಿ ಇವಳು ನೆಲೆಸಿದ್ದಾಳೆಂದು ನಂಬಲಾಗಿದ್ದು ಕೆಲವು ಶಾಂತಾ ದುರ್ಗಾ ದೇವಲಯಗಳಲ್ಲಿ ಹುತ್ತಗಳಿರುವುದನ್ನು ಕಾಣಬಹುದು.
ಚಿತ್ರಕೃಪೆ: Agawas
ಬಹುತೇಕ ಎಲ್ಲ ಹಳ್ಳಿಗಳಲ್ಲಿ
ಗೋವಾ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಶಾಂತಾದುರ್ಗಾ ದೇವಿಯ ದೇವಾಲಯಗಳಿದ್ದು ಸ್ಥಳೀಯರಿಂದ ಈ ದೇವಿಯು ಪ್ರಮುಖವಾಗಿ ಆಚರಿಸಲ್ಪಡುತ್ತಾಳೆ. ಅಲ್ಲದೆ ಈಕೆಯು ಶಿವನ ಮಡದಿಯೂ ಆಗಿರುವುದರಿಂದ ಶಿವನನ್ನು ಈಕೆಯ ದೇವಾಲಯದಲ್ಲಿ ಕಾಣಬಹುದಾಗಿದೆ.
ಚಿತ್ರಕೃಪೆ: Magiceye
ಅಷ್ಟೊಂದಾಗಿ ಉಲ್ಲೇಖವಿಲ್ಲ
ಪುರಾಣ, ಪುಣ್ಯಕಥೆಗಳನ್ನು ಅಧ್ಯನಿಸಿದಾಗ ಈ ದೇವಿಯ ಕುರಿತು ಅಷ್ಟೊಂದಾಗಿ ಎಲ್ಲೂ ಸಹ ಉಲ್ಲೇಖಗೊಂಡಿರುವುದು ಕಂಡುಬರುವುದಿಲ್ಲ. ಹಾಗಾಗಿ ಕೆಲವು ವಿದ್ವಾಂಸರ ಪ್ರಕಾರ, ಹಿಂದೆ ಬುಡಕಟ್ಟಿನ ಜನಾಂಗದವರು ಹುತ್ತಗಳನ್ನು ಆರಾಧಿಸುತ್ತಿದ್ದುದು ಕೊನೆಗೆ ಸಂಸ್ಕೃತದ ಪ್ರಭಾವ ಹೆಚ್ಚಾಗಿ ಹುತ್ತದ ರೂಪದಲ್ಲಿರುವ ಶಾಂತಾದುರ್ಗಾ ದೇವಿಯು ಕಥೆಗಳ ಮೂಲಕವಾಗಿ ಗುರುತಿಸಕೊಂಡಿರಬಹುದೆಂದು ಹೇಳುತ್ತಾರೆ.
ಚಿತ್ರಕೃಪೆ: Aruna
ಸಹ್ಯಾದ್ರಿಖಂಡ
ಆದಾಗ್ಯೂ, ಸ್ಕಂದ ಪುರಾಣದ ಸಹ್ಯಾದ್ರಿಖಂಡದ ನಗವ್ಯ ಮಹಾತ್ಮ್ಯ ಅಧ್ಯಾಯದಲ್ಲಿ ಒಂದು ಕಡೆ ಶಾಂತಾದುರ್ಗಾ ದೇವಿಯ ಹೆಸರು ಉಲ್ಲೇಖಗೊಂಡಿರುವುದನ್ನು ಗಮನಿಸಬಹುದಾಗಿದೆ. ಅದರ ಪ್ರಕಾರವಾಗಿ ನಗವ್ಯ ಪ್ರಾಂತದಲ್ಲಿ (ಅಂದರೆ ಇಂದಿನ ಗೋವಾದಲ್ಲಿರುವ ನಗೋವಾ ಹಳ್ಳಿ) ಶಾಂತಮುನಿಗಳು ಎಂಬ ಋಷಿಗಳಿದ್ದರು.
ಚಿತ್ರಕೃಪೆ: Anupamg
ಶಾಂತಮುನಿ
ದುರ್ಗಾ ದೇವಿಯ ಪರಮ ಭಕ್ತರಾಗಿದ್ದ ಅವರು ಪ್ರತಿನಿತ್ಯ ಚಾಚೂ ತಪ್ಪದಂತೆ ದುರ್ಗೆಯನ್ನು ಕುರಿತು ತಪಸ್ಸು ಮಾಡುತ್ತಿದ್ದರು. ಹೀಗೆ ಇವರ ತಪಸ್ಸಿನಿಂದ ಪ್ರಸನ್ನಳಾದ ದುರ್ಗೆಯು ಅವರಿಗೊಮ್ಮೆ ತನ್ನ ದರ್ಶಾನ ನೀಡಿ ಅವರನ್ನು ಆಶೀರ್ವದಿಸಿದ್ದಳು. ಹೀಗೆ ಶಾಂತಮುನಿಗಳಿಗೆ ದರ್ಶನವಿತ್ತ ದುರ್ಗೆಯು ಆ ನಂತರ ಶಾಂತಾದುರ್ಗಾ ಆಗಿ ಪ್ರಸಿದ್ಧಳಾದಳು ಎನ್ನುತ್ತದೆ ಇನ್ನೊಂದು ಮೂಲ.
ಚಿತ್ರಕೃಪೆ: Anupamg
ಕಲಹ
ಮತ್ತೊಂದು ರೋಚಕ ಕಥೆಯ ಪ್ರಕಾರ (ಈ ನಂಬಿಕೆಯನ್ನೆ ಬಹುತೇಕರು ಹೊಂದಿದ್ದಾರೆ), ಒಂದೊಮ್ಮೆ ತ್ರಿಮೂರ್ತಿಗಳಲ್ಲಿ ಇಬ್ಬರಾದ ಶಿವ ಹಾಗೂ ವಿಷ್ಣುವಿನ ಮಧ್ಯೆ ಯಾವುದೊ ಕಾರಣಕ್ಕಾಗಿ ಜಗಳವೊಂದು ಏರ್ಪಡುತ್ತದೆ. ಇಬ್ಬರೂ ಘಟಾನುಘಟಿಗೆಳೆ.
ಚಿತ್ರಕೃಪೆ: Anupamg
ಬ್ರಹ್ಮನಿಗೆ ಮೊರೆ
ಹಾಗಾಗಿ ಇವರಿಬ್ಬರ ಜಗಳ ತಾರಕಕ್ಕೇರಿ ಲೋಕಕ್ಕೆ ಲೋಕವೆ ಸಂಪೂರ್ಣವಾಗಿ ವಿನಾಶವಾಗಿ ಹೋಗುವಂತಹ ಸಂದರ್ಭ ಸೃಷ್ಟಿಯಾಗುತ್ತದೆ. ಇದನ್ನು ಗಮನಿಸಿದ ಸಕಲ ದೇವಾಧಿದೇವತೆಗಳು ಬ್ರಹ್ಮನ ಬಳಿ ತೆರಳಿ ಜಗಳ ನಿಲ್ಲಿಸುವಂತೆ ಅಂಗಲಾಚುತ್ತಾರೆ. ಬ್ರಹ್ಮನೂ ಸಹ ಅಸಹಾಯಕನಾಗಿ ಕೊನೆಗೆ ಜಗನ್ಮಾತೆ ದುರ್ಗೆಯ ಬಳಿ ಬಂದು ಪ್ರಾರ್ಥಿಸುತ್ತಾನೆ.
ಚಿತ್ರಕೃಪೆ: Agawas
ದುರ್ಗಾ ತಾಳಿದ ರೂಪ
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ದುರ್ಗಾ ದೇವಿ ತನ್ನ ಬಲಿಷ್ಠ ಹಾಗೂ ವಿಶಾಲವಾದ ರೂಪ ತಾಳಿ ಒಂದು ಕೈಯಿಂದ ಶಿವನನ್ನು, ಇನ್ನೊಂದು ಕೈಯಿಂದ ವಿಷ್ಣುವನ್ನು ಎತ್ತಿ ಹಿಡಿದು ಸಂಧಾನ ಕಾರ್ಯಕ್ಕೆ ಚಾಲನೆ ನೀಡುತ್ತಾಳೆ.
ಚಿತ್ರಕೃಪೆ: Arun Prabhu
ಸೌಮ್ಯಳಾದ ಪ್ರಸಂಗ
ಈ ಸಂದರ್ಭದಲ್ಲಿ, ಸದಾ ಭಯಂಕರ ರೂಪದಲ್ಲಿರುವ ದುರ್ಗೆಯು ಅತ್ಯಂತ ಸಮಾಧಾನ ಹಾಗೂ ಶಾಂತಚಿತ್ತಳಾಗಿ ಶಿವ ಹಾಗೂ ವಿಷ್ಣುಗಳಿಬ್ಬರ ಅಹವಾಲುಗಳನ್ನು ಕೇಳಿಸಿಕೊಂಡು ಅವರನ್ನು ಅತ್ಯಂತ ಪ್ರೀತಿಯಿಂದ ಸಂತೈಸಿ ಅವರಿಬ್ಬರ ಮಧ್ಯದ ಕಲಹವನ್ನು ದೂರ ಮಾಡುತ್ತಾಳೆ. ಹಾಗಾಗಿಯೆ ಅಂದಿನಿಂದ ಈ ದುರ್ಗೆಯು ಶಾಂತಾದುರ್ಗಾ ಆಗಿ ಪ್ರಸಿದ್ಧಳಾಗುತ್ತಾಳೆ.
ಚಿತ್ರಕೃಪೆ: Jon Hurd
ಬಹಳ ಹೆಸರುವಾಸಿ
ಸ್ಥಳೀಯವಾಗಿ ಶಾಂತಾದುರ್ಗಾ ದೇವಿಯನ್ನು ಶಾಂತೇರಿ ಮಾತೆ ಎಂತಲೂ ಸಹ ಕರೆಯುತ್ತಾರೆ. ಗೋವಾದ ಬಹುತೇಕ ಹಳ್ಳಿ-ಪಟ್ಟಣಗಳಲ್ಲಿ ಶಾಂತಾದುರ್ಗಾ ದೇವಾಲಯವನ್ನು ಕಾಣಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಪೋಂಡಾದಲ್ಲಿರುವ ಶಾಂತಾದುರ್ಗಾ ಮಂದಿರವು ಸಾಕಷ್ಟು ಪ್ರಸಿದ್ಧಿಗಳಿಸಿದ ದೇವಾಲಯವಾಗಿದೆ.
ಚಿತ್ರಕೃಪೆ: Elroy Serrao
ಡಿಸೆಂಬರ್ 4, 2016 ರಂದು
ಇದೆ ಡಿಸೆಂಬರ್ 4, 2016 ರಂದು ಈ ದೇವಾಲಯವು 450 ವರ್ಷಗಳನ್ನು ಪೂರೈಸಲಿದೆ. ಹಾಗಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಾಂತಾದುರ್ಗಾ ದೇವಾಲಯವು ಉತ್ತರ ಗೋವಾದ ಪೋಂಡಾ ತಾಲೂಕಿನ ಕವಳೆ ಗ್ರಾಮದಲ್ಲಿದೆ. ಪಣಜಿಯಿಂದ 33 ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯ ಸ್ಥಿತವಿದೆ.
ಚಿತ್ರಕೃಪೆ: Elroy Serrao
ಕರ್ನಾಟಕ
ಕರ್ನಾಟಕದ ಕಾರವಾರ ಸೇರಿದಂತೆ ಮಹಾರಾಷ್ಟ್ರ ಹಾಗೂ ಗೋವಾದಲ್ಲಿರುವ ಬಹುತೇಕ ಗೌಡ ಸಾರಸ್ವತ ಬ್ರಾಹ್ಮಣರ ಕುಲದೇವಿಯಾಗಿ ಶಾಂತಾದುರ್ಗಾ ಆರಾಧಿಸಲ್ಪಡುತ್ತಾಳೆ. ಇಲ್ಲಿ ದೇವಿಯ ಲೋಹದ ವಿಗ್ರಹವಿದ್ದು ನಾಲ್ಕು ಕೈಗಳನ್ನು ಹೊಂದಿರುವ ದೇವಿಯಾಗಿ ಆರಾಧಿಸಲಾಗುತ್ತದೆ.
ಚಿತ್ರಕೃಪೆ: Agawas
ಶಿವ ಹಾಗೂ ವಿಷ್ಣು
ವಿಶೇಷವೆಂದರೆ ದೇವಿಯು ತನ್ನ ಕೆಳಗಿನ ಎರಡು ಕೈಗಳ ಪೈಕಿ ಒಂದು ಕೈಯಲ್ಲಿ ಶಿವನನ್ನು ಇನ್ನೊಂದು ಕೈಯಲ್ಲಿ ವಿಷ್ಣುವನ್ನು ಹಿಡಿದಿರುವುದನ್ನು ಗಮನಿಸಬಹುದು. ಬಹುತೇಕ ಶಾಂತಾದುರ್ಗಾಳ ಪ್ರತಿಮೆಯು ಇದೆ ರೀತಿಯಲ್ಲಿ ಕಂಡುಬರುತ್ತದೆ.
ಚಿತ್ರಕೃಪೆ: Anupamg
ಕೆಲೋಶಿ
ಮೂಲತಃ ಈ ದೇವಾಲಯವು ಗೋವಾದ ಸಲ್ಸೆಟೆಯ ಕೆಲ್ಲೋಸಿಮ್ (ಕೆಲೋಶಿ) ಎಂಬಲ್ಲಿತ್ತು. ಪೊರ್ಚುಗೀಸರು ಭಾರತಕ್ಕೆ ಲಗ್ಗೆ ಇಟ್ಟಾಗ ಇಲ್ಲಿನ ದೇವಾಲಯಗಳನ್ನು ನಾಶ ಮಾಡಹತ್ತಿದರು. ಅದರ ಪರಿಣಾಮವಾಗಿ ಈ ದೇವಿಯನು ಪ್ರಸ್ತುತ ಕವಳೆ ಗ್ರಾಮಕ್ಕೆ ಸ್ಥಳಾಂತರಿಸಿ ಪೂಜಿಸಲು ಪ್ರಾರಂಭಿಸಲಾಯಿತು. ಶಾಂತಾದುರ್ಗಾ ಮಂದಿರದಲ್ಲಿರುವ ಶ್ರೀ ಕಾಳಭೈರವನ ಸನ್ನಿಧಿ.
ಚಿತ್ರಕೃಪೆ: Amol.Gaitonde
ಶಾಂತಾದುರ್ಗಾ ಸಂಸ್ಥಾನ
ಹಿಂದೆ ದೇವಿಯು ನೆಲೆಸಿದ್ದ ಕೆಲೋಶಿಯಲ್ಲಿರುವ ಮೂಲ ಸ್ಥಳವನ್ನು ಇಂದಿಗೂ ನೋಡಬಹುದಾಗಿದ್ದು ಅದು ಪ್ರಸ್ತುತ ಶ್ರೀ ಶಾಂತಾದುರ್ಗಾ ಸಂಸ್ಥಾನ ಸಮೀತಿಯ ಒಡೆತನದಲ್ಲಿದೆ. ಕವಳೆಯಲ್ಲಿರುವ ಈ ಶಾಂತಾದುರ್ಗಾ ಮಂದಿರವು ಬೆಟ್ಟದ ಮೇಲಿದ್ದು ಸುತ್ತಲೂ ದಟ್ಟ ಹಸಿರಿನಿಂದ ಆವೃತವಾಗಿದೆ. ನೋಡಲು ಆಕರ್ಷಕವಾಗಿ ಕಂಡುಬರುತ್ತದೆ.
ಚಿತ್ರಕೃಪೆ: Nkodikal