ಕೌಶಿಕ ಮಹಾರಾಜನಾಗಿ ತನ್ನ ಅಹಂಕಾರದಿಂದ ಎಲ್ಲೆ ಗೆಲ್ಲಬಲ್ಲೆ ಎಂದು ವಸಿಷ್ಠ ಮುನಿಗಳೊಂದಿಗೆ ಯುದ್ಧ ಮಾಡಿ ಅವರಿಂದ ಸೋಲಲ್ಪಟ್ಟು ಕೊನೆಗೆ ತಾನೂ ಸಹ ವಸಿಷ್ಠರ ಹಾಗೆ ಸಿದ್ಧಿಯನ್ನು ಪಡೆಯಬೇಕೆಂದು ಇಚ್ಛಿಸಿ ಕಠಿಣ ತಪಸ್ಸು ಮಾಡಿ ಲೋಕವೆ ಬೆರಗಾಗುವಂತೆ ಪರಿವರ್ತನೆ ಹೊಂದಿದ ಋಷಿ ವಿಶ್ವಾಮಿತ್ರ.
ವಿಶ್ವಕ್ಕೆ ಮಿತ್ರನೆಂಬ ಹೆಗ್ಗಳಿಕೆ ಹೊಂದಿರುವ ವಿಶ್ವಾಮಿತ್ರರು ಲೋಕದಲ್ಲೆ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥವನ್ನು ತಿಳಿದಿರುವ ಕೇವಲ 24 ಋಷಿಗಳಲ್ಲಿ ಮೊದಲಿಗರು. ಅಲ್ಲದೆ ಇವರು ಮುಂದೆ ಬ್ರಹ್ಮರ್ಷಿಯ ಪದವಿಯನ್ನು ಪಡೆದವರು. ಹೀಗೆ ಅವರು ಬ್ರಹ್ಮರ್ಷಿ ಪದವಿ ಪಡೆದ ಸ್ಥಳವು ಇಂದಿಗೂ ಸಾಕಷ್ಟು ಧಾರ್ಮಿಕ ಮಹತ್ವ ಪಡೆದುಕೊಂಡಿದೆ.
ಚಿತ್ರಕೃಪೆ: Ssriram mt
ಮೂಲತಃ ಈ ಸ್ಥಳದಲ್ಲಿ ಎರಡು ಗುಡ್ಡಗಳಿದ್ದು ಲಕ್ಷ್ಮಿ ನರಸಿಂಹರ ಪ್ರಸಿದ್ಧ ದೇವಾಲಯವನ್ನು ಅಲ್ಲಿ ಕಾಣಬಹುದು. ಈ ಕ್ಷೇತ್ರದಲ್ಲಿ ನರಸಿಂಹ, ಭಕ್ತವತ್ಸಲ ಪೆರುಮಾಳ ಹಾಗೂ ಆಂಜನೇಯ ಸ್ವಾಮಿಗೆ ಮುಡಿಪಾದ ಪ್ರತ್ಯೇಕ ದೇವಾಲಯಗಳಿವೆ. ಎಲ್ಲವೂ ಸಾಕಷ್ಟು ಮಹತ್ವ ಹೊಂದಿದ್ದು ಎರಡು ಗುಡ್ಡಗಳ ಮೇಲೂ ಒಂದು ಗುಡ್ಡದ ಕೆಳಗೂ ಸ್ಥಿತವಿದೆ.
ತಮಿಳು ಸಂತರು ಪಟ್ಟಿ ಮಾಡಿರುವ ವಿಷ್ಣುವಿಗೆ ಮುಡಿಪಾದ 108 ಅತಿ ಪವಿತ್ರ ದೇವಾಲಯಗಳನ್ನು ದಿವ್ಯ ದೇಸಂ ಎಂದು ಕರೆಯುತ್ತಾರೆ. ಆ ದಿವ್ಯ ದೇಸಂ ಪಟ್ಟಿಯಲ್ಲಿ ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿರುವ ಲಕ್ಷ್ಮಿ ನರಸಿಂಹ ದೇವಾಲಯವೂ ಸಹ ಒಂದಾಗಿದೆ. ಹಾಗಾಗಿ ಧಾರ್ಮಿಕವಾಗಿ ಹಿಂದುಗಳಲ್ಲಿ ಅದರಲ್ಲೂ ವಿಶೇಷವಾಗಿ ವೈಷ್ಣವರಲ್ಲಿ ಸಾಕಷ್ಟು ಮಹತ್ವ ಪಡೆದಿದೆ ಈ ದೇವಾಲಯ.
ಚಿತ್ರಕೃಪೆ: Ssriram mt
ದೊಡ್ಡ ಗುಡ್ಡದ ತುದಿಯಲ್ಲಿ ನೆಲೆಸಿರುವ ಲಕ್ಷ್ಮಿ ನರಸಿಂಹನ ದೇವಾಲಯವು ಗ್ರಾನೈಟ್ ಕಲ್ಲಿನ ಗೋಡೆಯಿಂದ ಸುತ್ತುವರೆದಿದೆ. ದೇವಾಲಯವು ಕಲ್ಯಾಣಿಯನ್ನು ಹೊಂದಿದ್ದು ಐದು ಸುತ್ತುಗಳ ರಾಜಗೋಪುರವನ್ನು ಹೊಂದಿದೆ. ದೇವಾಲಯವು ತೆಂಕಲೈ ಅಂದರೆ ವೈಷ್ಣವ ಸಂಪ್ರದಾಯದ ಆಚರಣೆಯನ್ನು ಹೊಂದಿದೆ.
ಪ್ರತಿನಿತ್ಯವು ಸ್ವಾಮಿಯನ್ನು ಆರು ಬಾರಿ ವಿವಿಧ ಸಮಯದಲ್ಲಿ ವಿವಿಧ ಆಚರಣೆಗಳಿಂದ ಪೂಜಿಸಲಾಗುತ್ತದೆ. ಮಿಕ್ಕಂತೆ ಹಲವಾರು ವಾರ್ಷಿಕ ಉತ್ಸವಗಳು ವಿಶೇಷವಾಗಿ ಬ್ರಹ್ಮೋತ್ಸವ, ಕಾರ್ತಿಕ ಉತ್ಸವ ಹಾಗೂ ನರಸಿಂಹ ಜಯಂತಿಗಳನ್ನು ಬಲು ಅದ್ದೂರಿಯಾಗಿ ಈ ದೇವಾಲಯದಲ್ಲಿ ಆಚರಿಸಲಾಗುತ್ತದೆ.
ಚಿತ್ರಕೃಪೆ: Ssriram mt
ಪ್ರಸ್ತುತ ದೇವಾಲಯದ ಪೂಜಾ ವಿಧಿ ವಿಧಾನಗಳನ್ನು ದೊಡ್ಡಾಚಾರ್ಯ ಎಂಬ ವೈಷ್ಣವ ಸಂತರ ವಂಶಸ್ಥರು ಮುಂದುಅರೆಸಿಕೊಂಡು ಬಂದಿದ್ದಾರೆ. ದೊಡ್ಡಾಚಾರ್ಯರು ರಾಮಾನುಜಾಚಾರ್ಯರ ವಿಶಿಷ್ಟಾವ್ದ್ವೈತ ಮತವನ್ನು ಪರಿಪಾಲಿಸುತ್ತಿದ್ದರು ಹಾಗೂ ದಿವ್ಯ ದೇಸಂ ದೇವಾಲಯಗಳ ನಿರ್ವಹಣೆ ಮಾಡುತ್ತಿದ್ದರೆನ್ನಲಾಗಿದೆ.
ಅಷ್ಟೆ ಅಲ್ಲ ಅವರು ಸಾಕಷ್ಟು ಪವಾಡಗಳನ್ನೂ ಸಹ ತಮ್ಮ ಸಮಯದಲ್ಲಿ ಮಾಡಿದ್ದರು. ಅವರು ಯಾವ ರೀತಿಯಾಗಿ ದೇವಾಲಯಗಳನ್ನು ನಿರ್ವಹಿಸುತ್ತಿದ್ದರೊ ಅದನ್ನು ಕಂಡು ಪ್ರಸನ್ನರಾಗಿ ವಿಜಯನಗರದ ಕೃಷ್ಣದೇವರಾಯನ ಸಂಬಂಧಿಯಾದ ಅಚ್ಯುತ ರಾಯರು ಅವರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಾಕಷ್ಟು ಧನ ಕನಕ ಕಾಣಿಕೆಗಳನ್ನು ಸಮರ್ಪಿಸಿದ್ದರು.
ಚಿತ್ರಕೃಪೆ: Ssriram mt
ಇಂದಿಗೂ ಇಲ್ಲಿ ನಡೆಯುವ ಬ್ರಹ್ಮೋತ್ಸವದಲ್ಲಿ ದೊಡ್ಡಾಚಾರ್ಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಅಲ್ಲದೆ ತಮಿಳು ತಿಂಗಳು ಮಾಸಿ (ಫೆಬ್ರುವರಿ-ಮಾರ್ಚ್) ಯಲ್ಲಿ ದೊಡ್ಡಾಚಾರ್ಯ ಉತ್ಸವವನ್ನೂ ಸಹ ಇಲ್ಲಿ ಆಚರಿಸಲಾಗುತ್ತದೆ. ಸಾಕಷ್ಟು ಜನ ಭಕ್ತಾದಿಗಳು ವರ್ಷದ ಎಲ್ಲ ಸಮಯದಲ್ಲೂ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಆಂಧ್ರದ ಪ್ರಮುಖ ಲಕ್ಷ್ಮಿ ನರಸಿಂಹ ದೇವಾಲಯಗಳು
ಈ ದೇವಾಲಯವು ತಿರುಕ್ಕಡಿಗೈ ಅಥವಾ ಸಾಮಾನ್ಯವಾಗಿ ಕರೆಯಲಾಗುವ ಸೋಲಿಂಗೂರು ಎಂಬ ಹಳ್ಳಿಯಲ್ಲಿದೆ. ಸೋಲಿಂಗೂರು ತಮಿಳುನಾಡಿನ ವೇಲೂರು ಜಿಲ್ಲೆಯಲ್ಲಿದ್ದು ವೇಲೂರಿನಿಂದ 55 ಕಿ.ಮೀ ಗಳಷ್ಟು ದೂರದಲ್ಲಿದೆ. ವೇಲೂರಿನಿಂದ ಬಾಡಿಗೆ ಕಾರು ಹಾಗೂ ಬಸ್ಸುಗಳ ಮೂಲಕ ಸೋಲಿಂಗೂರಿಗೆ ತಲುಪಬಹುದಾಗಿದೆ.