ಮಹಾಭಾರತ ಮಹಾಕಾವ್ಯವು ಭಾರತದ ಎರಡು ಮಹಾಕಾವ್ಯಗಳ ಪೈಕಿ ಒಂದಾಗಿದೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತ ಕಥೆಯು ಮೂಲತಃ ಧರ್ಮದ ಮಾರ್ಗದ ಕುರಿತು ಮನುಷ್ಯ ಜೀವನದಲ್ಲಿ ಹೇಗಿರಬೇಕೆಂದು ಕುತೂಹಲಕರವಾದ ಕಥೆಯ ಮೂಲಕ ತಿಳಿಸುತ್ತದೆ.
ಮಹಾಭಾರತದಲ್ಲಿ ಪಾಂಡವರು ನೈತಿಕ ಮಾರ್ಗದಲ್ಲಿ ಬದುಕು ನಡೆಸುವ ಧರ್ಮ ರಕ್ಷಕರಾಗಿ, ನಾಯಕರಾಗಿ ಸಾಮಾನ್ಯವಾಗಿ ಕಂಡುಬರುತ್ತಾರೆ. ಹಾಗೆ ಮಹಾಭಾರತದ ಅಂತ್ಯದಲ್ಲಿ ಏನಾಗುತ್ತದೆ, ಪಾಂಡವರು ಎಲ್ಲಿಗೆ ಹೊರಡೂತ್ತಾರೆ ಎಂಬುದು ಸಾಕಷ್ಟು ಜನರ ಕುತೂಹಲ ಕೆರಳಿಸುತ್ತದೆ.
ಜೋಪಾನ! ಇವು ಅತ್ಯಂತ ಅಪಾಯಕಾರಿ ರಸ್ತೆಗಳು!
ಈ ವಿವರಗಳನ್ನು ಮಾಹಾಭಾರತದ ಮಹಾಪ್ರಸ್ಥಾನಿಕಾ ಪರ್ವದಲ್ಲಿ ಸುಂದರವಾಗಿ ವಿವರಿಸಲಾಗಿದೆ. ಅದರ ಪ್ರಕಾರವಾಗಿ ಕೊನೆಗೆ ಪಂಚ ಪಾಂಡವರು ತಮ್ಮ ಎಲ್ಲ ಅಸ್ತ್ರ-ಶಸ್ತ್ರಗಳನ್ನು ತ್ಯಜಿಸಿ ಹಲವು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ, ದೇವರ ದರ್ಶನ ಮಾಡಿ ಸ್ವರ್ಗಕ್ಕೆ ಹಿಮಾಲಯದ ಮೂಲಕವಾಗಿ ನಡೆದು ತೆರಳುತ್ತಾರೆ.
ಇಂದಿಗೂ ಈ ದಂತಕಥೆಯನ್ನು ವಿವರಿಸುವ ಅದ್ಭುತವಾದ ಚಾರಣ ಮಾರ್ಗವೊಂದಿದೆ ಅದನ್ನೆ ಸಾತೋಪಂಥ್ ಚಾರಣ ಅಥವಾ ಸಾತೋಪಂಥ್ ಟ್ರೆಕ್ ಎಂದು ಕರೆಯುತ್ತಾರೆ. ಇದು ಉತ್ತರಾಖಂಡದ ಬದರಿನಾಥ ಕ್ಷೇತ್ರದಿಂದ ಕೆಲವು ಕಿ.ಮೀ ಗಳಷ್ಟು ದೂರದಿಂದ ಪ್ರಾರಂಭವಾಗುತ್ತದೆ.
ಸ್ವರ್ಗಾರೋಹಣ
ಈ ಮಾರ್ಗದ ಮೂಲಕವಾಗಿಯೆ ಪಂಚ ಪಾಂಡವರು ತಮ್ಮ ಸ್ವರ್ಗಾರೋಹಣವನ್ನು ಪ್ರಾರಂಭಿಸಿದ್ದರೆನ್ನಲಾಗುತ್ತದೆ. ಹೀಗೆ ಈ ಮಾರ್ಗದ ಮೂಲಕ ಹಲವು ಸ್ಥಳಗಳಿಗೆ ನಾಯಿಯೊಂದರ ಜೊತೆಗೆ ನಡೆದು ಹೋಗುತ್ತ ಮಧ್ಯ ಮಧ್ಯದಲ್ಲಿ ಒಬ್ಬೊಬ್ಬರಾಗಿ ಪಾಂಡವ ಸಹೋದರರು ಪ್ರಾಣ ನೀಡುತ್ತ ಕೊನೆಗೆ ಧರ್ಮರಾಯ ಮಾತ್ರ ಅಂತಿಮ ಸ್ಥಳ ತಲುಪಿದನೆಂಬ ಪ್ರತೀತಿಯಿದೆ.
ಚಿತ್ರಕೃಪೆ: wikipedia
ಸ್ವರ್ಗಕ್ಕೆ ದಾರಿ
ಸಾತೋಪಂಥ್ ಟ್ರೆಕ್ ಅನ್ನು ಸಾಕಷ್ಟು ಧಾರ್ಮಿಕಾಸಕ್ತ ಭಕ್ತಾದಿಗಳು ಮಾಡುತ್ತಾರೆ. ಈ ಚಾರಣ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಬಲವಾದ ನಂಬಿಕೆಯಿದೆ. ಅದಕ್ಕಾಗಿಯೆ ಇದನ್ನು ಸ್ವರ್ಗಾರೋಹಿಣಿ ಎಂತಲೂ ಸಹ ಕರೆಯುತ್ತಾರೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Thisguyhikes
ಅನುಮತಿ ಬೇಕು
ಆದರೆ ಗಮನವಿರಲಿ, ಇದು ಕೇಳಲು ಎಷ್ಟು ಆನಂದ ನೀಡುತ್ತದೆಯೋ ಚಾರಣವು ಅಷ್ಟೆ ಕಠಿಣವಾಗಿದೆ. ಉತ್ತಮ ಆರೋಗ್ಯವಲ್ಲದೆ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವೂ ಸಹ ಈ ಚಾರಣ ಮಾಡಬೇಕಾದಾಗ ಇರುವುದು ಅವಶ್ಯಕವಾಗಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Bharatkaistha
ಆದರೂ ದಿನ್ನಗಳು ಬೇಕು
ಇದೊಂದು ಕಠಿಣ ಚಾರಣ ಮಾರ್ಗವಾಗಿದ್ದು ಬದರಿನಾಥದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿ ಸಾತೋಪಂಥ್ ಸರೋವರವಿದೆ. ಆದರೂ ಎರಡು ದಿನಗಳಷ್ಟು ಟ್ರೆಕ್ ಮಾಡಬೇಕಾಗುತ್ತದೆ. ಈ ಚಾರಣಕ್ಕೆ ಅನುಮತಿ ಪಡೆಯಬೇಕಾಗಿರುವುದು ಕಡ್ಡಾಯ ಹಾಗೂ ಪರಿಣಿತ ಚಾರಣಿಗ ಮಾರ್ಗದರ್ಶಕನಿರಬೇಕಾದುದು ಅವಶ್ಯ. ತಂಗಲು ಯಾವುದೆ ವ್ಯವಸ್ಥೆಗಳಿಲ್ಲದ ಕಾರಣ ಆಹಾರ, ಸ್ಟೋವ್ ಮುಂತಾದ ಅವಶ್ಯಕ ಸಾಮಗ್ರಿಅಗಳನ್ನು ತೆಗೆದುಕೊಂಡು ಹೋಗಲೇಬೇಕು.
ಚಿತ್ರಕೃಪೆ: Soumit ban
ಮಾನಾ
ಬದರಿನಾಥದಿಂದ ಮೂರು ಕಿ.ಮೀ ದೀರದಲ್ಲಿರುವ ಮಾನಾದಿಂದ ಈ ಚಾರಣ ಪ್ರಾರಂಭವಾಗುತ್ತದೆ. ಇಲ್ಲಿಂದ ನದಿಯೊಂದನ್ನು ದಾಟಿ ಹೋಗುತ್ತ ವಸುಧಾರಾ ಜಲಪಾತದೆಡೆ ಚಾರಣ ಪ್ರಾರಂಭಿಸಬೇಕು.
ಚಿತ್ರಕೃಪೆ: Soumit_ban
ಅಲಕನಂದಾ ನದಿ
ಅಲಕನಂದಾ ನದಿಯ ಒಂದು ದಂಡೆಯಿಂದ ವಸುಧಾರಾ ಜಲಪಾತವನ್ನು ನೋಡಬಹುದಾಗಿದ್ದು ಇದನ್ನು ಸುತ್ತಿಕೊಂಡು ದಾಟಿ ವಸುಧಾರಾ ಜಲಪಾತ ತಾಣಕ್ಕೆ ಭೇಟಿ ನೀಡಬೇಕು. ವಸುಧಾರಾ ಜಲಪಾತ.
ಚಿತ್ರಕೃಪೆ:
ಐದು ಕಿ.ಮೀ
ವಸುಧಾರಾದಿಂದ ಮುಂದೆ ಐದು ಕಿ.ಮೀ ದೂರದಲ್ಲಿರುವ ಲಕ್ಷ್ಮಿವನಕ್ಕೆ ತೆರಳೆಬೇಕಾಗುತ್ತದೆ. ಆದರೆ ಇದನ್ನು ಧಾನೊ ಹಿಮನದಿಯ ಮೂಲಕ ದಾಟಬೇಕು. ಇದು ಕೊಂಚ ಅಪಾಯಕಾರಿ ಟ್ರೆಕ್ ಆಗಿದ್ದು ಆದಷ್ಟು ಜಾಗರೂಕತೆಯಿಂದ ಇದನ್ನು ದಾಟಿ ಲಕ್ಷ್ಮಿವನ ತಲುಪಬೇಕು. ಧಾನೊ ಹಿಮನದಿ.
ಚಿತ್ರಕೃಪೆ: Soumit ban
ಪ್ರಾಣ ತ್ಯಜಿಸಿದರು
ಮೊದ ಮೊದಲು ಟ್ರೆಕ್ ಪ್ರಾರಂಭಿಸಿದ್ದಾಗ ಎಲ್ಲೆಡೆ ಒಣ ಬಂಡೆ, ಬಯಲು, ಹಿಮ ಕಾಣಿಸುತ್ತಿದ್ದ ವಾತಾವರಣದಲ್ಲಿ ಅಚ್ಚರಿಪಡಿಸುವಂತಹ ಬದಲಾವಣೆ ಲಕ್ಷ್ಮಿವನ ತಲುಪಿದಾಗ ಕಂಡುಬರುತ್ತದೆ. ಅಂದರೆ ಇಲ್ಲಿ ಹಸಿರು ಹಸಿರಾದ ಗಿಡ ಮರಗಳು ಎಲ್ಲೆಡೆ ಹರಡಿರುವುದನ್ನು ನೋಡಬಹುದು. ಕಥೆಯ ಪ್ರಕಾರ, ಇಲ್ಲಿಯೆ ನಕುಲ ಹಾಗೂ ಸಹದೇವರು ತಮ್ಮ ಪ್ರಾಣ ತ್ಯಜಿಸಿದ್ದರಂತೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Kanthi Kiran
ಅರ್ಜುನ ಪ್ರಾಣ ಬಿಟ್ಟ
ನಂತರ ಲಕ್ಷ್ಮಿವನದಿಂದ ಐದು ಕಿ.ಮೀ ದೂರದಲ್ಲಿರುವ ಚಕ್ರತೀರ್ಥಕ್ಕೆ ತೆರಳಬೇಕು. ದಂತಕಥೆಯಂತೆ ಚಕ್ರತೀರ್ಥ ಸ್ಥಳದಲ್ಲೆ ಪಾಂಡವರಲ್ಲೊಬ್ಬನಾಗಿದ್ದ ಅರ್ಜುನನು ತನ್ನ ಪ್ರಾಣ ತ್ಯಾಗ ಮಾಡಿದ್ದನೆಂಬ ಪ್ರತೀತಿಯಿದೆ.
ಚಿತ್ರಕೃಪೆ: Soumit ban
ಭೀಮನ ಸರದಿ
ಹೀಗೆ ಚಕ್ರತೀರ್ಥ ತಲುಪಿ ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಚಾರಣವನ್ನು ಸಹಸ್ರಧಾರಾದೆಡೆ ಪ್ರಾರಂಭಿಸಬೇಕು. ಸಹಸ್ರಧಾರಾದಲ್ಲೆ ಭೀಮನು ತನ್ನ ಪ್ರಾಣ ತ್ಯಜಿಸಿದ ಎಂಬ ಪ್ರತೀತಿಯಿದೆ.
ಚಿತ್ರಕೃಪೆ: Gouravmsh
ಬಲು ಪವಿತ್ರ
ಹೀಗೆ ಸಹಸ್ರಧಾರಾದ ನಂತರ ಮೇಲೇರುತ್ತ ಚಾರಣ ಮುಂದುವರೆಸಿ ಕೊನೆಯದಾಗಿ ತಲುಪುವ ತಾಣವೆ ಸಾತೋಪಂಥ್ ಸರೋವರ. ಸತ್ಯಪಂಥ ಎಂತಲೂ ಕರೆಯಲಾಗುತ್ತದೆ ಈ ಅದ್ಭುತ ಸರೋವರವನ್ನು. ಸತ್ಯಕ್ಕೆ ದಾರಿ ಈ ಸರೋವರ ಎಂದು ವಿವರಿಸಲಾಗಿದೆ. ಇಲ್ಲಿಯೆ ಇಂದ್ರನು ತನ್ನ ರಥದ ಸಮೇತ ಧರ್ಮರಾಯನ ಮುಂದೆ ಬಂದು ಅವನನ್ನು ಸ್ವರ್ಗಕ್ಕೆ ಕರೆದೊಯ್ದನೆಂಬ ನಂಬಿಕೆಯಿದೆ.
ಚಿತ್ರಕೃಪೆ: Sharada Prasad CS
ಗಂಧರ್ವರು ಕಾಯುತ್ತಾರೆ!
ಈ ತ್ರಿಕೋನಾಕಾರದ ಸರೋವರ ಎಷ್ಟೊಂದು ಪವಿತ್ರವಾಗಿದೆ ಎಂದರೆ ಏಕಾದಶಿಗಳಂದು ಸ್ವತಃ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರೆ ಈ ಸರೋವರದ ಒಂದೊಂದು ಮೂಲೆಗಳನ್ನು ಆಕ್ರಮಿಸಿಕೊಂಡು ಸ್ನಾನ ಮಾಡಿ ತೆರಳುತ್ತಾರೆನ್ನಲಾಗಿದೆ. ಇದನ್ನು ಗಂಧರ್ವರು ಪಕ್ಷಿಗಳ ರೂಪದಲ್ಲಿ ಕಾಯುತ್ತಿದ್ದು ಇದರಲ್ಲಿ ಒಂದು ಕಡ್ಡಿಯೂ ಸಹ ಬೀಳದಂತೆ ನೋಡಿಕೊಳ್ಳುತ್ತವೆ ಎನ್ನಲಾಗಿದೆ. ಇಲ್ಲಿಗೆ ಈ ಚಾರಣ ಮುಕ್ತಾಯವಾಗುತ್ತದೆ. ಸರೋವರ ದರ್ಶನಗೈದು ಬಂದ ದಾರಿಯಲ್ಲೆ ಹಿಂತಿರುಗಬೇಕು.
ಚಿತ್ರಕೃಪೆ: Soumit ban
ಕುತೂಹಲಕರ
ಈ ಸರೋವರಕ್ಕೆ ಬಂದಾಗ ಪಂಚ ಪಾಂಡವರಲ್ಲಿ ಕೇವಲ ಧರ್ಮರಾಯ ಹಾಗೂ ನಾಯಿಯೊಂದೆ ಉಳಿದಿತ್ತು. ಆಗ ಇಂದ್ರನು ತನ್ನ ರಥದ ಸಮೇತ ಪ್ರತ್ಯಕ್ಷನಾಗಿ ಧರ್ಮರಾಯನೊಬ್ಬನಿಗೆ ಮಾತ್ರ ರಥದಲ್ಲಿ ಕೂರಲು ಹೇಳಿದ. ಅದಕೆ ಧರ್ಮರಾಯನು ತನ್ನ ಜೊತೆಯಲ್ಲೆ ಕಷ್ಟಗಳಿಗೆ ಜೊತೆಯಾಗಿ, ಸ್ನೇಹಿತನಾಗಿ ನಾಯಿ ಬಂದಿರುವುದರಿಂದ ಅದನ್ನೂ ಸಹ ಕೂರಲು ಅನುಮತಿಸಬೇಕು ಇಲ್ಲವಾದಲ್ಲಿ ಆ ನಾಯಿಯನ್ನು ಬಿಟ್ಟು ತಾನೊಬ್ಬನೆ ಹೋಗುವುದು ಧರ್ಮವಲ್ಲ ಅಂದಾಗ, ಈಮ್ದ್ರನು ಅವನನ್ನು ಮೆಚ್ಚಿದನು. ನಿಜ ಹೇಳಬೇಕೆಂದರೆ ಧರ್ಮ ದೇವತೆಯ ಅವನನ್ನು ಪರೀಕ್ಷಿಸಲು ನಾಯಿಯ ರೂಪದಲ್ಲಿ ಬಂದಿದ್ದ.
ಚಿತ್ರಕೃಪೆ: Ramanarayanadatta astri