ಇಲ್ಲಿ ಬಾಲಾಜೀ ಎಂದರೆ ವಿಷ್ಣು ಅಥವಾ ನಾರಾಯಣನಲ್ಲ. ಈ ಸ್ಥಳದಲ್ಲಿ ಆಂಜನೇಯ ಸ್ವಾಮಿಯನ್ನು ಬಾಲಾಜಿ ಎಂತಲೆ ಕರೆಯುತ್ತಾರೆ. ಈ ಹನುಮ ಅಭಯ ಹಸ್ತದವ. ನಂಬಿಕೊಂಡು ಬಂದ ಭಕ್ತರನ್ನು ನಿರಾಸೆ ಗೊಳಿಸದವ. ರಕ್ಷಣೆ ಬಯಸಿ ಬರುವ ಭಕ್ತರ ತ್ರಿಕಾಲ ರಕ್ಷಕ. ಹೀಗೆಲ್ಲ ಇಲ್ಲಿ ಬರುವ ಭಕ್ತಾದಿಗಳು ಈ ಆಂಜನೇಯ ಸ್ವಾಮಿಯನ್ನು ಕೊಂಡಾಡುತ್ತಾರೆ.
ಬೆರುಗುಗೊಳಿಸುವ ವಿಶಾಲಕಾಯದ ಪ್ರತಿಮೆಗಳು
ಇನ್ನೊಂದು ವಿಶೇಷವೆಂದರೆ ಈ ಆಂಜನೇಯ ಸ್ವಾಮಿ ಮಿಕ್ಕೆಲ್ಲ ಹನುಮನ ತರಹ ಇಲ್ಲವೆ ಇಲ್ಲ. ಗಡ್ಡ-ಮೀಸೆಯುಳ್ಳ ದುಂಡು ಮುಖದ ಸ್ವಾಮಿ. ಒಂದೆ ಕಲ್ಲಿನಲ್ಲಿ ಸ್ವಯಂಭು ಆಗಿ ಪ್ರಕಟವಾದವ. ಅಂತೆಯೆ ಇವನ ಮಹಿಮೆಗಳು ಅಪಾರ ಎಂದು ಇಲ್ಲಿಗೆ ಭೇಟಿ ನೀಡುವ ಭಕ್ತರ ನಂಬಿಕೆ. ಈ ಹನುಮನ ದರ್ಶನ ಕೋರಿಯೆ ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ.
ಚಿತ್ರಕೃಪೆ: Dausaanoop
ಈ ಆಂಜನೇಯ ಸ್ವಾಮಿಯ ದಿವ್ಯ ನೆಲೆಯಿರುವುದು ರಾಜಸ್ಥಾನದ ಚುರು ಜಿಲ್ಲೆಯ ಸಾಲಾಸರ್ ಎಂಬ ಪಟ್ಟಣದಲ್ಲಿ. ಹೀಗಾಗಿ ಈ ಆಂಜನೇಯಸ್ವಾಮಿಯು ಭಕ್ತರ ನಡುವೆ ಸಾಲಾಸರ್ ಬಾಲಾಜೀ ಎಂತಲೆ ಪ್ರಸಿದ್ಧಿ ಪಡೆದಿದ್ದಾನೆ. ಹರಕೆಗಳನ್ನು ಹೊತ್ತರೆ, ಕಷ್ಟಗಳಿದ್ದರೆ ಖಂಡಿತವಾಗಿಯೂ ಈ ಹನುಮ ಅದಕ್ಕೆ ಸ್ಪಂದಿಸುತ್ತಾನೆ ಎಂಬ ನಂಬಿಕೆ ಶತಮಾನಗಳಿಂದಲೂ ಇದೆ.
ಹಿಂದೊಮ್ಮೆ ನಗೌರ್ ಜಿಲ್ಲೆಯ ಅಸೋಟಾ ಎಂಬ ಗ್ರಾಮದಲ್ಲಿ ರೈತನೊಬ್ಬ ಹೊಲವನ್ನುಳುತ್ತಿದ್ದಾಗ ನೇಗಿಲಿಗೆ ಏನೋ ವಸ್ತು ನಾಟಿದ ಅನುಭವವಾಗಿ ಸದ್ದಾಯಿತು. ಅದೆನೆಂದು ತೆಗೆದು ನೋಡಿದಾಗ ಬಾಲಾಜೀಯ ಮುಖವಿರುವ ಶಿಲೆ ಅದಾಗಿತ್ತು ಹಾಗೂ ರೈತ ದಂಪತಿಗಳು ಅದನ್ನು ಭಕ್ತಿಯಿಂದ ನಮಿಸಿ ಪೂಜಿಸತೊಡಗಿದರು.
ಚಿತ್ರಕೃಪೆ: Abhishek Baxi
ಈ ವಿಷಯವು ಗ್ರಾಮದ ಗೌಡನಿಗೆ ತಿಳಿಯಿತು. ಮರು ದಿನ ಆ ಗೌಡನಿಗೆ ಆ ಪ್ರಾಂತ್ಯದ ಮಹಾರಾಜನಾದ ಮೋಹನದಾಸನಿಂದ ಆದೇಶವೊಂದು ಹೋಯಿತು. ಅದೇನೆಂದರೆ ಬಾಲಾಜೀಯ ಮೂರ್ತಿ ಸಿಕ್ಕಿದ್ದು ಕನಸಿನ ಮೂಲಕ ಅವರಿಗೆ ಗೊತ್ತಾಗಿದ್ದು ಅದನ್ನು ಸಾಲಾಸರ್ ಗೆ ತಲುಪಿಸುವಂತೆ ಹೇಳಲಾಗಿತ್ತು. ಇದು ಬಾಲಾಜೀಯ ಮಹಿಮೆಯಂದೆ ತಿಳಿದು ಆ ಗೌಡನು ಸಾಲಾಸರ್ ಗೆ ಈ ವಿಗ್ರಹವನ್ನು ಕಳುಹಿಸಿದನು.
ಇನ್ನೊಂದು ಸುಧಾರಿತ ಕಥೆಯ ಪ್ರಕಾರ, ಆ ಗ್ರಾಮದ ಗೌಡನು ಎರಡು ಎತ್ತುಗಳ ಬಂಡಿಯಲ್ಲಿ ಆ ವಿಗ್ರಹವಿಟ್ಟು ಆ ಎತ್ತುಗಳು ಎಲ್ಲಿ ನಿಲ್ಲುವುದೊ ಅಲ್ಲಿ ಬಾಲಾಜೀಗೆ ದೇವಾಲಯ ನಿರ್ಮಿಸಲಾಗುವುದೆಂದು ನಿರ್ಧರಿಸಿದನು. ಅದರಂತೆ ಆ ಎತ್ತುಗಳ ನಿಂತ ಸ್ಥಳಕ್ಕೆ ಗ್ರಾಮದ ಎಲ್ಲ ಜನರು ವಲಸೆ ಹೋಗಿ ನೆಲೆಸಿದರು. ಆ ಸ್ಥಳವೆ ಇಂದಿನ ಸಾಲಾಸರ್ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Abhishek Baxi
ಇಂದು ಇಲ್ಲಿ ಪ್ರಮುಖವಾಗಿ ಎರಡು ಸೇವೆಗಳನ್ನು ಅರ್ಪಿಸಲಾಗುತ್ತದೆ. ಒಂದು ಕಾಯಿ ಕಟ್ಟುವುದು ಹಾಗೂ ಇನ್ನೊಂದು ಸವಮನಿ ಅರ್ಪಿಸುವುದು. ಹರಕೆ ಹೊತ್ತು ಕಾಯಿಗಳನ್ನು ಕೆಂಪು ಬಟ್ಟೆಯೊಡನೆ ಸುತ್ತಿ ಕಟ್ಟಿ ಸಮರ್ಪಿಸಬೇಕು. ಸವಮನಿ ಸೇವೆಯಲ್ಲಿ ಸಾಮಾನ್ಯವಾಗಿ ತಿನ್ನುವ ಖಾದ್ಯಗಳನ್ನು 50 ಕೆಜಿಯಲ್ಲಿ ಸಮರ್ಪಿಸಬೇಕು.
ಬುಂದೆ, ಚೂಡ, ಸೇವು, ದಾಲ್, ಬಾತಿ, ಚೂರ್ಮ, ಪೇಡ ಮುಂತಾದ ತಿಂಡಿ-ತಿನಿಸುಗಳನ್ನು 50 ಕೆಜಿಗಳಷ್ಟು ಅಳತೆಯಲ್ಲಿ ಶ್ರೀ ಬಾಲಾಜೀ ಗೆ ಸಮರ್ಪಿಸಲಾಗುತ್ತದೆ. ಭಾರತದ ಯಾವುದೆ ಭಾಗಗಳಿಂದ ಸಾಲಾಸರ್ ಗೆ ತಲುಪಲು ಮೊದಲಿಗೆ ದೆಹಲಿ ಇಲ್ಲವೆ ಜಯಪುರಕ್ಕೆ ತೆರಳಬೇಕು. ಅಲ್ಲಿಂದ ಸಾಲಾಸರ್ ಗೆ ಹೊರಡಲು ಬಸ್ಸುಗಳು ದೊರೆಯುತ್ತವೆ. ಸಾಲಾಸರ್ ದೆಹಲಿಯಿಂದ 362 ಕಿ.ಮೀ ಹಾಗೂ ಜಯಪುರದಿಂದ 176 ಕಿ.ಮೀ ದೂರವಿದೆ.
- ದೆಹಲಿಗಿರುವ ರೈಲುಗಳ ವೇಳಾಪಟ್ಟಿ
- ಜಯಪುರಕ್ಕಿರುವ ರೈಲುಗಳ ವೇಳಾಪಟ್ಟಿ