ರಾಮನಾಥ ಸ್ವಾಮಿ ಅಥವಾ ರಾಮೇಶ್ವರ ದೇವಾಲಯ ಭಾರತ ದೇಶದಲ್ಲಿನ ತಮಿಳುನಾಡು ರಾಜ್ಯದಲ್ಲಿದೆ. ಈ ದೇವಾಲಯವು ರಾಮೇಶ್ವರ ದ್ವೀಪದಲ್ಲಿ ಇರುವ ಪ್ರಸಿದ್ಧ ಹಿಂದೂ ಶೈವ ಕ್ಷೇತ್ರ. ಈ ದೇವಾಲಯದಲ್ಲಿರುವ ಲಿಂಗವು 12 ಜ್ಯೋತಿರ್ ಲಿಂಗ ಒಂದಾಗಿದೆ.
ಈ ದೇವಾಲಯವನ್ನು 12 ನೇ ಶತಮಾನದಲ್ಲಿ ಪಾಂಡ್ಯಂ ಎಂಬ ರಾಜವಂಶವು ಈ ದೇವಾಲಯವನ್ನು ಅಭಿವೃದ್ಧಿ ಪಡಿಸಿದರು. ವಿಶೇಷವೆನೆಂದರೆ ಈ ದೇವಾಲಯವು ಭಾರತದಲ್ಲಿನ ಎಲ್ಲಾ ಹಿಂದೂ ದೇವಾಲಯಗಳಿಗಿಂತ ಉದ್ದವಾದ ಕಾರಿಡಾರ್ ಹೊಂದಿದೆ. ರಾಮೇಶ್ವರದಲ್ಲಿನ ಈ ದೇವಾಲಯವು ಶೈವ, ವೈಷ್ಣವರ ಪವಿತ್ರವಾದ ಯಾತ್ರಾ ಸ್ಥಳವೆಂದು ಪರಿಗಣಿಸಲಾಗಿದೆ.
ಪ್ರಸ್ತುತ ಲೇಖನದ ಮೂಲಕ ರಾಮೇಶ್ವರ ಕ್ಷೇತ್ರದ ಪವಿತ್ರವಾದ ಮಹಿಮೆಯ ಬಗ್ಗೆ ತಿಳಿಯೋಣ.
ರಾಮೇಶ್ವರ ಜ್ಯೋರ್ತಿಲಿಂಗ
ರಾಮನಾಥೇಶ್ವರ ರಾಮಶ್ವೇರದಲ್ಲಿನ ರಾಮನಾಥಸ್ವಾಮಿ ದೇವಾಲಯದಲ್ಲಿನ ಮುಖ್ಯ ದೇವತೆ. ಇಲ್ಲಿನ ಲಿಂಗವು 12 ಜ್ಯೋತಿರ್ ಲಿಂಗಗಳಲ್ಲಿ ಒಂದಾಗಿದೆ. ವಿಶೇಷವೆನೆಂದರೆ ಶಿವನನ್ನು ಇಲ್ಲಿ ರಾಮನಾಥೇಶ್ವರನಾಗಿ ಪೂಜಿಸಲಾಗುತ್ತದೆ.
ಯಾತ್ರೆ
ರಾಮೇಶ್ವರದ ರಾಮನಾಥೇಶ್ವರನ ಹಾಗು ಕಾಶಿಯ ವಿಶ್ವನಾಥನನ್ನು ಜೀವನದಲ್ಲಿ ಒಮ್ಮೆಯಾದರೂ ದರ್ಶನ ಮಾಡಬೇಕೆಂದು ಪುರಾಣಗಳು ತಿಳಿಸುತ್ತವೆ. ಹಾಗಾಗಿಯೇ ಹಲವಾರು ಭಕ್ತರು ಮೋಕ್ಷಕ್ಕಾಗಿ ಈ ಎರಡು ದೇವಾಲಯದ ಸ್ವಾಮಿಯ ದರ್ಶನ ಪಡೆಯುತ್ತಾರೆ.
ಪುರಾಣ
ಈ ದೇವಾಲಯಕ್ಕೆ ಒಂದು ಸುಂದರವಾದ ಕಥೆ ಇದೆ. ಅದೆನೆಂದರೆ ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಿಸುತ್ತಾನೆ. ರಾಮಾಯಣದ ಪ್ರಕಾರ ರಾಮನು ರಾವಣನ್ನು ಸಂಹರಿಸುತ್ತಾನೆ. ರಾವಣನು ಬ್ರಾಹ್ಮಣನಾಗಿರುತ್ತಾನೆ. ಸಾಮಾನ್ಯವಾಗಿ ಬ್ರಾಹ್ಮಣರನ್ನು ಕೊಲ್ಲುವುದು ಮಹಾ ಪಾಪ.
ಲಿಂಗ
ರಾವಣ ಬ್ರಾಹ್ಮಣನಾದ್ದರಿಂದ ಬ್ರಾಹ್ಮಣರ ಪಾಪ ಅಂಟಬಾರದು ಎಂದು ರಾಮನು ಇಲ್ಲಿ ಲಿಂಗವನ್ನು ಪ್ರತಿಷ್ಟಾಪನೆ ಮಾಡುತ್ತಾನೆ. ಇಲ್ಲಿ ಲಿಂಗ ಸ್ವರೂಪಿಯಾಗಿರುವ ಪರಮ ಶಿವನು ರಾಮ ಹಾಗೂ ಸೀತೆಯ ಕೈಯಲ್ಲಿ ಪ್ರತಿಷ್ಟಾಪನೆಗೊಂಡಿರುವ ಲಿಂಗ ಎಂದು ಉಲ್ಲೇಖಗಳಿವೆ.
ಹನುಮಂತ
ಈ ಲಿಂಗಕ್ಕೆ ಒಂದು ಸುಂದರವಾದ ಕಥೆ ಇದೆ. ಅದೇನೆಂದರೆ ಈ ಸ್ಥಳದಲ್ಲಿ ಲಿಂಗವನ್ನು ಪ್ರತಿಷ್ಟಾಪಿಸಲು ರಾಮನು ಹನುಮಂತನಿಗೆ ಕೈಲಾಸದಿಂದ ಲಿಂಗವನ್ನು ತರಲು ಹೇಳುತ್ತಾನೆ. ಹಾಗಾಗಿ ಹನುಮಂತನು ಲಿಂಗಕ್ಕಾಗಿ ಕೈಲಾಸಕ್ಕೆ ತೆರಳುತ್ತಾನೆ.
ಮೂಹುರ್ತ
ರಾಮನು ಲಿಂಗದ ಪ್ರತಿಷ್ಟಾಪನೆ ಮಾಡುವ ಸಮಯ ಸಮೀಪಿಸುತ್ತಿದ್ದರು ಕೂಡ ಕೈಲಾಸದಿಂದ ಹನುಮಂತ ಬರುವುದು ತಡವಾಗುತ್ತದೆ. ಮೂಹುರ್ತವನ್ನು ನೆನಪಿನಲ್ಲಿ ಇಟ್ಟುಕೊಂಡು ರಾಮನು ಸ್ವತಃ ತನ್ನ ಕೈಯಲ್ಲಿ ಮರಳಿನಲ್ಲಿ ಶಿವ ಲಿಂಗವನ್ನು ಮಾಡಿ ಪ್ರತಿಷ್ಟಾಪಿಸುತ್ತಾನೆ.
ಹನುಮಂತ
ಪ್ರತಿಷ್ಟಾಪನೆ ಮುಗಿದ ನಂತರ ಬಂದ ಹನುಮಂತ ಲಿಂಗವನ್ನು ಕಂಡು ಕೋಪಗೊಳ್ಳುತ್ತಾನೆ. ಇದನ್ನು ಗಮನಿಸಿದ ರಾಮನು ಹನುಮಂತನ ಕೈಯಲ್ಲಿದ್ದ ಕೈಲಾಸದ ಲಿಂಗವನ್ನು ಕೂಡ ಪ್ರತಿಷ್ಟಾಪನೆ ಮಾಡುತ್ತಾನೆ.
ನಾಲ್ಕು ಪವಿತ್ರ ಕ್ಷೇತ್ರ
ಭಾರತದಲ್ಲಿ ಪವಿತ್ರವಾದ ಕ್ಷೇತ್ರಗಳಲ್ಲಿ ಶ್ರೀ ರಾಮೇಶ್ವರವೂ ಒಂದು. ಉಳಿದವು ಉತ್ತರದ ಬದರಿನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕಾನಾಥ.
ವಾಸ್ತು ಶಿಲ್ಪ
ರಾಮೇಶ್ವರ ದೇವಾಲಯವು ಭಾರತದಲ್ಲಿಯೇ ಅತಿ ದೊಡ್ಡದಾದ ದೇವಾಲಯವೆಂದು ಪ್ರಸಿದ್ಧಿಯನ್ನು ಪಡೆದಿದೆ. ದೇವಾಲಯದ ಹೊರಭಾಗದಲ್ಲಿ ಸುಮಾರು 100 ಸ್ತಂಭಗಳಿವೆ. ಅಪೂರ್ವವಾದ ಕೆತ್ತನೆಗಳಿಂದ ಸ್ತಂಭಗಳು ಕಂಗೊಳಿಸುತ್ತಿವೆ. ದೇವಾಲಯದ ಒಳ ಹಾಗೂ ಹೊರ ಆವರಣದಲ್ಲಿ ಒಟ್ಟು 24 ತೀರ್ಥಗಳಿವೆ.
ವಿಸ್ತೀರ್ಣ
ದೇವಾಲಯದ ವಿಸ್ತೀರ್ಣ ವಿಶಾಲವಾದುದು ಹಾಗು ಅದ್ಭುತವಾದ ರಚನೆಯನ್ನು ಹೊಂದಿದೆ. ಪೂರ್ವದಿಂದ ಪಶ್ಚಿಮವಾಗಿ 865 ಅಡಿ ಹಾಗು ಉತ್ತರದಿಂದ ದಕ್ಷಿಣವಾಗಿ 657 ಅಡಿ ವಿಸ್ತೀರ್ಣ ಹೊಂದಿದೆ. 4 ಕಡೆಯೂ ಬೃಹತ್ ಗೋಪುರಗಳು ಇವೆ.
ಪೂಜೆ
ಪ್ರತಿದಿನ ಬೆಳಗ್ಗೆ ರಾಮೇಶ್ವರ ದೇವಾಲಯದಲ್ಲಿ 4 ಗಂಟೆಗೆ ಭಕ್ತರಿಗೆ ಸ್ಪಟಿಕದ ಲಿಂಗದ ದರ್ಶನವನ್ನು ಮಾಡಬಹುದಾಗಿದೆ. ಇಲ್ಲಿ ಪ್ರತಿದಿನವೂ ವಿಶೇಷವಾದ ಪೂಜೆಗಳು ಇರುತ್ತವೆ. ಉತ್ತರ ಗಂಗದಲ್ಲಿ ಸ್ನಾನ ಮಾಡಿ ಅಲ್ಲಿಂದ ತುಂಬಿಕೊಂಡ ಜಲವನ್ನು ರಾಮೇಶ್ವರನಿಗೆ ಅಭಿಷೇಕ ಮಾಡಿ ಪೂಜಿಸುತ್ತಾರೆ.
ತೇಲುವ ಕಲ್ಲು
ರಾಮನ ಪುರಾಣವಿರುವ ಈ ದೇವಾಲಯದಲ್ಲಿ 15 ಕೆ.ಜಿ ಭಾರವಿರುವ ಕಲ್ಲು ನೀರಿನಲ್ಲಿ ತೇಲಾಡುತ್ತದೆ. ಪುರಾಣಗಳ ಪ್ರಕಾರ ಇಂಥಹ ಕಲ್ಲುಗಳನ್ನು ಬಳಸಿಯೇ ರಾಮನು ತನ್ನ ವಾನರ ಸೈನ್ಯದ ಸಹಾಯದಿಂದ ಲಂಕಕ್ಕೆ ರಾಮ ಸೇತುವೆಯನ್ನು ನಿರ್ಮಿಸಿದ ಎನ್ನಲಾಗಿದೆ.
ಇತರೆ ದೇವಾಲಯಗಳು
ಈ ದೇವಾಲಯದಲ್ಲಿಯೇ ವಿಶಾಲಾಕ್ಷಿ ಮಂದಿರ, ಪಾರ್ವತಿ ದೇವಾಲಯ ಹಾಗೂ ಇತರೆ ದೇವತೆಗಳ ಮಂದಿರವಿದೆ. ವಿಶೇಷವೆನೆಂದರೆ ಆಂಜನೇಯ ಕೈಲಾಸದಿಂದ ತಂದ ಲಿಂಗವಿದೆ. ಗರ್ಭಗುಡಿಯ ಎದುರಿಗೆ ನಂದಿ ವಿಗ್ರಹವಿದೆ. ಈ ವಿಗ್ರಹವು ಸುಮಾರು 13 ಅಡಿ ಎತ್ತರವಿದ್ದು ಭವ್ಯವಾಗಿದೆ.
ರಾಮೇಶ್ವರಕ್ಕೆ ಹೇಗೆ ಸಾಗಬೇಕು?
ವಿಮಾನ ಮಾರ್ಗದ ಮೂಲಕ: ರಾಮೇಶ್ವರಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮದುರೈ. ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್ನ ಮೂಲಕ ಸುಲಭವಾಗಿ ರಾಮೇಶ್ವರಕ್ಕೆ ತಲುಪಬಹುದಾಗಿದೆ.
ರೈಲು ಮಾರ್ಗದ ಮೂಲಕ
ಚೆನ್ನೈನಿಂದ ರಾಮೇಶ್ವರಕ್ಕೆ ಪ್ರತಿ ದಿನ 2 (ಮಂಗಳವಾರ ಹಾಗು ಶನಿವಾರ) ಒಟ್ಟು 4 ರೈಲುಗಳು ಚಲಿಸುತ್ತವೆ. ಮೊದಲೇ ಟಿಕೆಟ್ ಕಾಯ್ದಿಕರಿಸುವುದು ಉತ್ತಮವಾದುದು.