ಭಾರತದ ಕೇಂದ್ರ ಭಾಗದಲ್ಲಿ ಅದರಲ್ಲೂ ಪಶ್ಚಿಮ ದಿಕ್ಕಿನೆಡೆ ಅರಬ್ಬಿ ಸಮುದ್ರಕ್ಕೆ ತಗುಲಿಕೊಂಡಂತೆ ನೆಲೆಸಿರುವ ಭವ್ಯ ಹಾಗೂ ದೊಡ್ಡ ರಾಜ್ಯಗಳ ಪೈಕಿ ಒಂದಾಗಿರುವ ಮಹಾರಾಷ್ಟ್ರ ರಾಜ್ಯವು ಪ್ರವಾಸಿಗರಿಗೆ ತನ್ನದೆ ಆದ ವಿಶೇಷ ಕೊಡುಗೆಗಳನ್ನು ಸ್ಥಳಗಳ ರೂಪದಲ್ಲಿ ಕರುಣಿಸುತ್ತದೆ.
ಮರಾಠಿ ಆಡಳಿತ ಭಾಷೆಯಿರುವ ಈ ರಾಜ್ಯದಲ್ಲಿ ಸಾಕಷ್ಟು ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಸವಿಯಬಹುದಾಗಿದೆ. ಕೊಂಕಣ ಕರಾವಳಿಯಿಂದ ಹಿಡಿದು ಹಸಿರು ಸಂಪತ್ತಿನಿಂದ ದಟ್ಟವಾಗಿ ಕೂಡಿದ ಪಶ್ಚಿಮ ಘಟ್ಟದ ಕೋಟೆ ತಾಣಗಳವರೆಗೂ ಹಲವು ವಿವಿಧ ಪ್ರವಾಸಿ ತಾಣಗಳನ್ನು ಇಲ್ಲಿ ಕಾಣಬಹುದಾಗಿದೆ.
ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದ ಕೆಲ ಪ್ರವಾಸಿ ಆಕರ್ಷಣೆಗಳು ಮಳೆಗಾಲದ ಸಂದರ್ಭದಲ್ಲಂತೂ ಅತ್ಯಂತ ಸುಂದರವಾಗಿ ಕಂಗೊಳಿಸುತ್ತವೆ. ಮಳೆ ಏಷ್ಟೇ ಗಾಢವಾಗಿದ್ದರೂ ಸರಿ, ಈ ಸ್ಥಳಗಳನ್ನು ನೋಡಲೇಬೆಂದು ಮನ ಹಂಬಲಿಸುವುದಂತು ಖಂಡಿತ. ಹಾಗಾದರೆ ಬನ್ನಿ....ಪ್ರಸ್ತುತ ಲೇಖನದ ಮೂಲಕ ಮಳೆಗಾಲದ ಮಹಾರಾಷ್ಟ್ರವನ್ನು ನೋಡಿ ಬರೋಣ, ಏನಂತಿರಿ?
ಕೊಂಕಣ ಕಡಾ:
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಹರಿಶ್ಚಂದ್ರಗಡ್ ಬೆಟ್ಟ ಕೋಟೆಯ ಪ್ರದೇಶದಲ್ಲಿ ಈ ಸುಂದರ ಹಾಗೂ ಆಸಕ್ತಿಕರ ಕೊಂಕಣ ಕಡಾ ಎಂಬ ಶಿಖರ ಪ್ರದೇಶವನ್ನು ಕಾಣಬಹುದಾಗಿದೆ. ರೋಚಕದ ಸಂಗತಿ ಎಂದರೆ ಇದು ಲಂಬವಾಗಿರುವುದಲ್ಲದೆ ನಾಗರ ಹಾವಿನ ಹೆಡೆಯಂತೆ ಮೊನಚಾಗಿ ಬಾಗಿದೆ.
ಚಿತ್ರಕೃಪೆ: Ankur P
ಭಂಡಾರಧಾರಾ:
ಮಹಾರಾಷ್ಟ್ರದ ಅಹ್ಮದ ನಗರ ಜಿಲ್ಲೆಯಲ್ಲೆ ಭಂಡಾರಧಾರಾ ಎಂಬ ಸುಮ್ದರವಾದ ಪ್ರವಾಸಿ ಆಕರ್ಷಣೆಯುಳ್ಳ ಹಳ್ಳಿಯನ್ನು ಕಾಣಬಹುದಾಗಿದೆ. ಪ್ರವರ ನದಿಗೆ ಅಡ್ಡಲಾಗಿ ವಿಲ್ಸನ್ ಗಾರ್ಡನ್ ಎಂಬ ಅಣೆಕಟ್ಟನ್ನು ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಈ ಹಳ್ಳಿಯ ಪರಿಧಿಯಲಿ ಕೆಲ ಜಲಪಾತಗಳು ಹಾಗೂ ಆಕರ್ಷಕವಾದ ಕೆರೆಯನ್ನು ಸಹ ಕಾಣಬಹುದಾಗಿದೆ. ಮಳೆಗಾಲದ ಸಂದರ್ಭದಲ್ಲಿ ಮೈದುಂಬಿ ಹರಿಯುವ ಜಲಪಾತ, ಅಣೆಕಟ್ಟೆಯ ನೀರು, ಪ್ರಕೃತಿಯ ದಟ್ಟ ಹಸಿರು ಇದನ್ನು ಒಂದು ಸ್ವರ್ಗವನ್ನೆ ಮಾಡಿಬಿಡುತ್ತದೆ.
ಚಿತ್ರಕೃಪೆ: Desktopwallpapers
ಕಳಸುಬಾಯಿ:
ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರ ಜಿಲ್ಲೆಯ ಅಕೋಲೆ ತಾಲೂಕಿನಲ್ಲಿ ಕಂಡುಬರುವ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರವಾದ ಶಿಖರವೆ ಕಳಸುಬಾಯಿ ಶಿಖರ. ಮಳೆಗಾಲದ ಮತ್ತೊಂದು ಮನೋಹರವಾದ ತಾಣ. ಶಿಖರದ ತುದಿಯಲ್ಲಿ ಕಳಸುಬಾಯಿ ದೇವಿಗೆ ಮುಡಿಪಾದ ಪುಟ್ಟ ದೇವಾಲಯವೊಂದನ್ನು ಕಾಣಬಹುದು.
ಚಿತ್ರಕೃಪೆ: Mvkulkarni23
ಲಾವಸಾ:
ಲಾವಸಾ ಪುಣೆ ನಗರದ ಬಳಿ ಯೋಜನಾಬದ್ಧವಾಗಿ ನಿರ್ಮಿಸಲಾಗುತ್ತಿರುವ ಒಂದು ಹೈಟೆಕ್ ಉಪನಗರ. ಸುಂದರವಾದ ಪ್ರಕೃತಿಯ ನಡುವೆ ಈ ಉಪನಗರ ಕಂಗೊಳಿಸುತ್ತದೆ ಹಾಗೂ ಮಳೆಗಾಲದ ಸಂದರ್ಭದಲ್ಲಿ ಇದರ ಅಂದ ಚೆಂದ ಮತ್ತಷ್ಟು ಇಮ್ಮಡಿಗೊಂಡಿರುತ್ತದೆ.
ಚಿತ್ರಕೃಪೆ: Ankur P
ಪನ್ಶೇಟ್ ಅಣೆಕಟ್ಟು:
ಪುಣೆ ನಗರದಿಂದ 50 ಕಿ.ಮೀ ದೂರದಲ್ಲಿ ಹರಿದಿರುವ ಅಂಬಿ ನದಿಗೆ ಕಟ್ಟಲಾಗಿರುವ ಅಣೆಕಟ್ಟೆಯೆ ಪನ್ಶೇಟ್ ಅಣೆಕಟ್ಟು. ಇದರ ಜಲಾಶಯವನ್ನು ತಾನಾಜಿ ಸಾಗರ ಜಲಾಶಯ ಎಂತಲೂ ಕರೆಯಲಾಗುತ್ತದೆ. ಮುಂಬೈ ಹಾಗೂ ಪುಣೆ ನಗರಗಳ ಜನರಿಗೆ ಇದೊಂದು ಪ್ರಖ್ಯಾತವಾದ ಪಿಕ್ನಿಕ್ ತಾಣವಾಗಿದೆ.
ಚಿತ್ರಕೃಪೆ: chinmay22
ಕೊಯ್ನಾ ಅಣೆಕಟ್ಟು:
ಮಹಾರಾಷ್ಟ್ರದಲ್ಲಿ ಕಂಡುಬರುವ ಬೃಹತ್ ಆಣೆಕಟ್ಟುಗಳ ಪೈಕಿ ಒಂದಾಗಿರುವ, ಕೊಯ್ನಾ ನದಿಗೆ ಅಡ್ಡಲಾಗಿ ನಿರ್ಮಿಸಲ್ಪಟ್ಟು ಅದೇ ನದಿಯ ಹೆಸರನ್ನು ಪಡೆದಿರುವ ಕೊಯ್ನಾ ಅಣೆಕಟ್ಟೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೊಯ್ನಾ ನಗರದಲ್ಲಿದೆ.
ಚಿತ್ರಕೃಪೆ: Ramakrishna Reddy Y
ಮುಳಶಿ ಅಣೆಕಟ್ಟು:
ಪುಣೆ ಜಿಲ್ಲೆಯ ಮುಳಶಿ ತಾಲೂಕಿನಲ್ಲಿ ಹರಿದಿರುವ ಮೂಲ ನದಿಗೆ ಅಡ್ಡಲಾಗಿ ಈ ಅಣೆಕಟ್ಟೆಯ ನಿರ್ಮಾಣ ಮಾಡಲಾಗಿದೆ. ನೀರಾವರಿ ಹಾಗು ವಿದ್ಯುತ್ ಉತ್ಪಾದನೆಯ ಎರಡೂ ಉದ್ದೇಶಗಳಿಗಾಗಿ ನಿರ್ಮಿಸಲಾಗಿರುವ ಈ ಅಣೆಕಟ್ಟೆ ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ.
ಚಿತ್ರಕೃಪೆ: Photography@Mihir
ಅಂಬೋಲಿ:
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲಿರುವ ಅಂಬೋಲಿಯು ಮಳೆಗಾಲದಲ್ಲೂ ಭೇಟಿ ನೀಡಬಹುದಾದಂತಹ ಸುಂದರ ಗಿರಿಧಾಮ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಮಳೆಗಾಲದ ಸಂದರ್ಭದಲ್ಲಿ ಅಲ್ಲಲ್ಲಿ ಕೃತಕ ಚಿಕ್ಕ ಪುಟ್ಟ ಜಲಪಾತಗಳು ರೂಪಗೊಂಡು ಈ ಪ್ರದೇಶವನ್ನು ಧರೆಗಿಳಿದ ಸ್ವರ್ಗದಂತೆ ಮಾಡುತ್ತವೆ. ಅಂಬೋಲಿ ಜಲಪಾತವಂತೂ ಮಳೆಗಾಲದ ಇನ್ನಿಲ್ಲದ ಆಕರ್ಷಣೆ. ಅಂಬೋಲಿ ಕುರಿತು ಹೆಚ್ಚಿಗೆ ತಿಳಿಯಿರಿ.
ಚಿತ್ರಕೃಪೆ: Ishan Manjrekar
ದಾಪೋಳಿ:
ದಾಪೋಳಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಕರಾವಳಿ ಭಾಗದಲ್ಲಿದ್ದರೂ ಸಹ ವರ್ಷಪೂರ್ತಿ ಈ ಪಟ್ಟಣವು ತಂಪಾದ ವಾತವರಣವನ್ನು ಹೊಂದಿರುವುದರಿಂದ ಇದಕ್ಕೆ "ಮಿನಿ ಮಹಾಬಲೇಶ್ವರ" ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ.
ಚಿತ್ರಕೃಪೆ: Parag Purandare
ಬುಶಿ ಅಣೆಕಟ್ಟು:
ಮಹಾರಾಷ್ಟ್ರದ ಲೋನಾವ್ಲಾ ಹಾಗೂ ಖಂಡಾಲಾ ಸಾಕಷ್ಟು ಹೆಸರುವಾಸಿಯಾಗಿರುವ ಪ್ರವಾಸಿ ತಾಣಗಳು. ಅದರಲ್ಲೂ ಲೋನಾವ್ಲಾ ಪ್ರದೇಶವು ಮಳೆಗಾಲದ ಸಂದರ್ಭದಲ್ಲಿ ಸಾಲಂಕೃತ ಕನ್ಯೆಯಂತೆ ವೈಭವಯುತವಾಗಿ ಗೋಚರಿಸುತ್ತದೆ. ಅಲ್ಲದೆ ಲೋನಾವ್ಲಾ ಸುತ್ತಮುತ್ತಲಿನಲ್ಲಿ ವಿವಿಧ ಇತರೆ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಅವುಗಳಲ್ಲೊಂದಾಗಿದೆ ಬುಶಿ ಜಲಾಶಯ ಹಾಗೂ ಅಣೆಕಟ್ಟು. ಮಳೆಗಾಲದ ಸಂದರ್ಭದಲ್ಲಿ ಹಾಲ್ನೊರೆಯಂತೆ ಉಕ್ಕುವ ನೀರು ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ.
ಚಿತ್ರಕೃಪೆ: Sobarwiki
ಗಣಪತಿಪುಳೆ:
ರತ್ನಾಗಿರಿ ಜಿಲ್ಲೆಯ ಕೊಂಕಣ ಕರಾವಳಿ ತೀರದ ಒಂದು ಚಿಕ್ಕ ಪಟ್ಟಣವಾಗಿದೆ ಗಣಪತಿಪುಳೆ. ಈ ಕಡಲ ತಡಿಯ ಪಟ್ಟಣವು ಧಾರ್ಮಿಕ ಆಕರ್ಷಣೆಯೂ ಸಹ ಆಗಿದ್ದು ಸುಮಾರು 400 ವರ್ಷಗಳಷ್ಟು ಪುರಾತನವಾದ ಸ್ವಯಂ ಉದ್ಭವಗೊಂಡ ಗಣಪತಿಯ ವಿಗ್ರಹಕ್ಕೆ ಪ್ರಸಿದ್ಧವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಪರಿಸರದ ಅಂದವು ಮತ್ತಷ್ಟು ಇಮ್ಮಡಿಗೊಂಡು ಶಾಂತಮಯವಾಗಿರುತ್ತದೆ.
ಚಿತ್ರಕೃಪೆ: myriad ways
ದೈವಗರ್:
ರಾಯಗಡ್ ಜಿಲ್ಲೆಯ ಶ್ರೀವರ್ಧನ ತಾಲೂಕಿನಲ್ಲಿದೆ ದೈವಗರ್ ಕಡಲ ತಡಿಯ ಪುಟ್ಟ ಪಟ್ಟಣ. ಪ್ರಶಾಂತವಾದ ಕಡಲ ತೀರ ಮನಕ್ಕೆ ಮುದವನ್ನು ಕರುಣಿಸುತ್ತದೆ.
ಚಿತ್ರಕೃಪೆ: UrbanWanderer
ಕಾಶಿದ್:
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ನೆಲೆಸಿರುವ ಕಾಶಿದ್ ಒಂದು ಕಡಲ ತೀರದ ಪಟ್ಟಣವಾಗಿದೆ. ಪ್ರಖ್ಯಾತ ಪ್ರವಾಸಿ ತಾಣವಾದ ಅಲಿಬಾಗ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿ ಈ ಪಟ್ಟಣ ನೆಲೆಸಿದೆ.
ಚಿತ್ರಕೃಪೆ: Abhijit Tembhekar
ಪಾಂಡವಕಡಾ ಜಲಪಾತ:
ನವಿ (ನವೀನ್ ಅಂದರೆ ಹೊಸ ಎಂಬರ್ಥ) ಮುಂಬೈನ ಉಪನಗರವಾದ ಖಾರಘರ್ ಎಂಬಲ್ಲಿ ಈ ಮನಮೋಹಕ ಜಲಪಾತವಿದೆ. 107 ಮೀ ಗಳಷ್ಟು ಎತ್ತರದಿಂದ ಧರೆಗೆ ಉಕ್ಕುವ ನೀರು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿಬಿಡುತ್ತದೆ.
ಚಿತ್ರಕೃಪೆ: Uruj Kohari
ತೋಶೆಘರ್ ಜಲಪಾತ:
ಮಹಾರಾಷ್ಟ್ರದ ಸತಾರಾದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ತೋಶೆಘರ್ ಎಂಬ ಹಳ್ಳಿಯಲ್ಲಿ ಈ ನಯನ ಮನೋಹರ ಜಲಪಾತ ತಾಣವಿದೆ. ಮಳೆಗಾಲದ ಸಂದರ್ಭದಲ್ಲಿ ಇದರಿಂದ ಭೋರ್ಗೆರೆಯುವ ನೀರು ಎಂಥವರಲ್ಲೂ ಸಹ ರೋಮಾಂಚನವನ್ನುಂಟು ಮಾಡುತ್ತದೆ.
ಚಿತ್ರಕೃಪೆ: VikasHegde
ಕುಣೆ ಜಲಪಾತ:
ಲೋನಾವಲಾದ ಕುಣೆ ಎಂಬ ಹಳ್ಳಿಯಲ್ಲಿ ಈ ಸುಂದರ ಜಲಪಾತವಿದೆ. ಮಳೆಗಾಲದ ಸಂದರ್ಭದಲ್ಲಿ ನೀರು ಹಾಲ್ನೊರೆಯಂತೆ ಧರೆಗುರುಳುತ್ತ ಆನಂದವನ್ನುಂಟು ಮಾಡುತ್ತದೆ.
ಚಿತ್ರಕೃಪೆ: Avinash Lewis
ವಜ್ರಾಯಿ ಜಲಪಾತ:
ಸತಾರಾ ಜಿಲ್ಲೆಯ ಭಂಬೋವಲಿ ಎಂಬ ಹಳ್ಳಿಯಲ್ಲಿ ಈ ಸುಂದರ ಜಲಪಾತವಿದೆ.
ಚಿತ್ರಕೃಪೆ: Vinayakmore
ತೋರ್ಣಾ:
ಪ್ರಚಂಡಗಡ್ ಅಥವಾ ತೋರ್ಣಾ ಒಂದು ಕೋಟೆಯ ತಾಣವಾಗಿದ್ದು ಪುಣೆ ಜಿಲ್ಲೆಯಲ್ಲಿದೆ. ಮಳೆಗಾಲದ ಸಂದರ್ಭದಲ್ಲಿ ಈ ಬೆಟ್ಟ ಕೋಟೆಯು ರಮಣೀಯವಾಗಿ ಗೋಚರಿಸುತ್ತದೆ.
ಚಿತ್ರಕೃಪೆ: Shrikant
ಸಿಂಹಗಡ್:
ಪುಣೆಯಿಂದ ಸುಮಾರು 30 ಕಿ.ಮೀ ದೂರವಿರುವ ಸಿಂಹಗಡ್ ಒಂದು ಪ್ರಬುದ್ಧ ಬೆಟ್ಟ ಕೋಟೆಯ ತಾಣವಾಗಿದೆ. ಸಹ್ಯಾದ್ರಿ ಪರ್ವತ ಶ್ರೇಣಿಗಳ ಅನುಪಮವಾದ ನೋಟವನ್ನು ಇಲ್ಲಿಂದ ಆಸ್ವಾದಿಸಬಹುದಾಗಿದೆ. ಇದೊಂದು ಪ್ರಸಿದ್ಧ ವಾರಾಂತ್ಯ ರಜೆಯ ತಾಣವೂ ಸಹ ಹೌದು.
ಚಿತ್ರಕೃಪೆ: SasmitV
ರಾಜಗಡ್:
ಪುಣೆಯಿಂದ ಸುಮಾರು 15 ಕಿ.ಮೀ ದೂರದಲ್ಲಿ ಸಹ್ಯಾದ್ರಿಯ ಗಿರಿ ಪರ್ವತ ಶ್ರೇಣಿಗಳಲ್ಲಿ 40 ಕಿ.ಮೀ ಉದ್ದದ ಈ ಕೋಟೆಯ ತಾಣವಿದೆ. ಹಿಂದೆ ಶಿವಾಜಿ ಮಹಾರಾಜನ ಕಾಲದಲ್ಲಿ ಸುಮಾರು 26 ವರ್ಷಗಳ ಕಾಲ ಈ ಕೋಟೆ ಪ್ರದೇಶ ಅವನ ರಾಜಧಾನಿಯಾಗಿ ಮೆರೆದಿತ್ತು.
ಚಿತ್ರಕೃಪೆ: Abhijeet Safai
ತಾಮ್ಹಿನಿ ಘಾಟ್:
ಮಹಾರಾಷ್ಟ್ರದ ಪುಣೆಗೆ ಹತ್ತಿರವಿರುವ ಮುಲಶಿ ಹಾಗೂ ತಾಮ್ಹಿನಿ ಎಂಬ ಪ್ರದೇಶಗಳ ಮಧ್ಯದಲ್ಲಿ ಈ ಸುಂದರವಾದ ಘಟ್ಟ ಪ್ರದೇಶವನ್ನು ಕಾಣಬಹುದಾಗಿದೆ. ಮಳೆಗಾಲದ ಸಂದರ್ಭದಲ್ಲಿ ಈ ಪ್ರದೇಶದ ವಾತಾವರಣವು ಜೀವ ಬಂದಂತೆ ಗೋಚರಿಸುತ್ತದೆ.
ಚಿತ್ರಕೃಪೆ: Priyanka Roy Chaudhury
ಮಾಥೇರಾನ್:
ಮಹಾರಾಷ್ಟ್ರ ರಾಜ್ಯದಲ್ಲಿರುವ ಮಾಥೇರಾನ್ ಒಂದು ತಂಪು ತಂಪಾದ ಹಚ್ಚ ಹಸಿರಿನಿಂದ ಕೂಡಿದ ಸುಂದರ ಗಿರಿಧಾಮ ಪ್ರದೇಶ. ಕೇವಲ ಬೇಸಿಗೆಯಲ್ಲದೆ ಮಳೆಗಾಲದ ಸಂದರ್ಭದಲ್ಲೂ ಅಪಾರವಾದ ಪ್ರಕೃತಿ ಸೊಬಗಿನಿಂದ, ಇಬ್ಬನಿಯ ಹಾಸಿಗೆಯಿಂದ ಇದರ ವಾತಾವರಣ ನಾಚಿಕೆಯ ಶೃಂಗಾರ ಹೊತ್ತ ಹೆಣ್ಣಿನಂತೆ ಕಂಗೊಳಿಸುತ್ತದೆ. ಮಾಥೇರಾನ್ ಕುರಿತು ತಿಳಿಯಿರಿ.
ಚಿತ್ರಕೃಪೆ: praveensagarc
ಮಹಾಬಳೇಶ್ವರ:
ಕೆಲವು ಗಮ್ಯ ಗಿರಿಧಾಮಗಳ ಪೈಕಿ ಒಂದಾಗಿದೆ, ಮಹಾರಾಷ್ಟ್ರದ ಮಹಾಬಲೇಶ್ವರ ಅರ್ಥಾತ್ "ಮಹಾಶಕ್ತಿಯ ಈಶ್ವರ" ಎಂಬ ಅರ್ಥ ಕೊಡುವ ತಾಣ. ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲೆಯಲ್ಲಿರುವ ಈ ಭವ್ಯ ಗಿರಿಧಾಮವು ಪಶ್ಚಿಮ ಘಟ್ಟಗಳ ಸುಂದರ ವನ ಸಂಪತ್ತಿನಿಂದ ಕಂಗೊಳಿಸುವ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ. ಇದರ ಕುರಿತು ಹೆಚ್ಚಿಗೆ ತಿಳಿಯಿರಿ.
ಚಿತ್ರಕೃಪೆ: Ankur P
ಲೋನಾವಲಾ-ಖಂಡಾಲಾ:
ಮುಂಬೈ ಹಾಗೂ ಪುಣೆ ಈ ಎರಡೂ ಮಹಾ ನಗರಗಳಿಗೆ ಹತ್ತಿರದಲ್ಲಿ ನೆಲೆಸಿವೆ ಈ ಸುಂದರ ಲೋನಾವಲಾ - ಖಂಡಾಲಾ ಘಟ್ಟ ಪ್ರದೇಶಗಳು ಹಾಗೂ ಗಿರಿಧಾಮಗಳು. ಮಳೆಗಾಲದಲ್ಲಂತೂ ಈ ಪ್ರದೇಶಗಳ ಸಸ್ಯ ಹಾಗೂ ಸುತ್ತ ಮುತ್ತಲಿನ ಪರಿಸರ ಸಂಪತ್ತು ಸಂತೋಷದಿಂದ ನರ್ತಿಸುತ್ತಿರುವಂತೆ ಅನುಭೂತಿಯನ್ನು ಕರುಣಿಸುತ್ತವೆ. ಲೋನಾವಲಾ ಕುರಿತು ತಿಳಿಯಿರಿ.
ಚಿತ್ರಕೃಪೆ: Ravinder Singh Gill