ಸನಾತನ ಧರ್ಮದ ತವರಾಗಿರುವ ಭಾರತದಲ್ಲಿ ಆಗಿ ಹೋದ, ಧರ್ಮ ಪಥದಲ್ಲಿ ನಡೆಯುವ ಮಾರ್ಗ ತೋರಿದ, ನಿಸ್ವಾರ್ಥ ಸೇವೆ ಮಾಡಿ, ನಿಷ್ಕಲ್ಮಷ ಪ್ರೀತಿ ಹಂಚಿ, ಹಂಚಲೂ ಪ್ರೇರೇಪಿಸಿ, ಮನು ಕುಲದ ಕಲ್ಯಾಣಕ್ಕೆ ಜೀವನವನ್ನೆ ಮುಡಿಪಾಗಿಟ್ಟ ಸಂತರು, ದಾರ್ಶನಿಕರು ಹಾಗೂ ಗುರುಗಳು ಅದೆಷ್ಟೊ. ಇಂದಿಗೂ ಅಪಾರ ಸಂಖ್ಯೆಯಲ್ಲಿ ಜನರು ಕಲಿಯುಗದ ಘೋರಾತೀಘೋರ ಘಟನೆಗಳ ಮಧ್ಯೆಯೂ ತದೇಕ ಚಿತ್ತರಾಗಿ ಪ್ರೀತಿ,ಶಾಂತಿಗಳಿಂದ ಬದುಕುತ್ತಿರುವುದಕ್ಕೆ ಕಾರಣ ಈ ಸಂತರು, ಗುರುಗಳು ಭೋದಿಸಿದ ನೀತಿ ಮಾರ್ಗಗಳು, ಉಪದೇಶಗಳು ಅವರಲ್ಲಿ ಗಟ್ಟಿಯಾಗಿ ಬೆರೆತಿರುವುದು.
ಹೀಗೆ ಮನುಕುಲದ ಕಲ್ಯಾಣಕ್ಕಾಗಿ, ದಿನ ದಲಿತರ ಸೇವೆಗಾಗಿ, ಸರ್ವ ಧರ್ಮಗಳ ಪ್ರೀಯರಾಗಿ, ಸತ್ಯ, ಧರ್ಮ, ಶಾಂತಿ, ಪ್ರೀತಿ ಹಾಗೂ ಅಹಿಂಸೆ ಎಂಬ ಐದು ಅದ್ಭುತ ತತ್ವಗಳನ್ನುಆಯುಧಗಳನ್ನಾಗಿ ಮಾಡಿಕೊಂಡು ಜೀವನಪೂರ್ತಿ ಸೇವೆಗೈದ ಒಬ್ಬ ಮಹಾನ್ ಗುರುವಾಗಿ ಶ್ರೀ ಸತ್ಯ ಸಾಯಿ ಬಾಬಾರವರು ಕಂಡುಬರುತ್ತಾರೆ. ಇವರ ಮಾರ್ಗದಲ್ಲಿ ನಡೆಯುತ್ತಿರುವ ಅದೆಷ್ಟೊ ಲಕ್ಷಾಂತರ ಭಕ್ತರು ಇವರನ್ನು ದೇವರ ಅವತಾರವೆಂದೆ ನಂಬುತ್ತಾರೆ. ಕೆಲವರು ಇವರ ದೈವತ್ವದ ಕುರಿತು ಹಿಂದೆ ಸಾಕಷ್ಟು ಪ್ರಶ್ನೆ, ಚರ್ಚೆಗಳನ್ನು ಮಾಡಿದ್ದಾರಾದರೂ, ಇವರು ಮಾಡಿದ ನಿಸ್ವಾರ್ಥದ ಸೇವೆ ಇವರನ್ನು ಭಾರತ ಕಂಡ ಮಹಾನ್ ಗುರುಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಇನ್ನೂ ಹಿಂದು ಧರ್ಮದ ನಂಬಿಕೆಯಂತೆ ಗುರು, ದೈವ ಸ್ವರೂಪಿಯೆ ಹೌದು.
ವಿಶೇಷ ಲೇಖನ : ಸಾಯಿ ನೆಲೆಯ ದಿವ್ಯ ಸೆಲೆ ಶಿರಡಿ ಕ್ಷೇತ್ರ
ಇವರು ದೇವರು ಹೌದೊ ಅಥವಾ ಅಲ್ಲವೊ ಎನ್ನುವುದಕ್ಕಿಂತಲೂ ಒಬ್ಬ ಮನುಷ್ಯನಾಗಿ ಬಡವರ, ನಿರ್ಗತಿಕರ ನೋವುಗಳಿಗೆ ಸ್ಪಂದಿಸಿ ಅವರನ್ನು ಉದ್ಧರಿಸುವ ನಿಟ್ಟಿನಲ್ಲಿ ತಮ್ಮ ಶಕ್ತಿಯನ್ನೆಲ್ಲ ಧಾರೆ ಎರೆದು, ಪ್ರತಿಯೊಬ್ಬರಿಗೂ ಉಪಯೋಗವಾಗಲೆಂದೂ ಅದೆಷ್ಟೊ ಸಮಾಜಮುಖಿ ಸೇವೆಗಳನ್ನು ಕಿಂಚಿತ್ತೂ ವ್ಯಯಕ್ತಿಕ ಲಾಭಗಳಿಲ್ಲದೆ, ಸ್ವಾರ್ಥವಿಲ್ಲದೆ ಲೋಕಕ್ಕೆ ನೀಡಿರುವುದನ್ನು ಕಂಡಾಗ ಸಾಮಾನ್ಯರಲ್ಲಿ ಅಸಾಮಾನ್ಯರಾಗಿ, ದೊಡ್ಡ ವ್ಯಕ್ತಿಯಾಗಿ ಬೆಳೆದು ನಿಲ್ಲುತ್ತಾರೆ. ಲೋಕ ಕಂಡ ಅದ್ಭುತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಶ್ರೀ ಸತ್ಯ ಸಾಯಿಯವರು ಜನಸಿದ ಸ್ಥಳವೆ ಇಂದಿನ ಪುಟ್ಟಪರ್ತಿ.
ಇವರು ಹುಟ್ಟಿ ಬೆಳೆದ ಹಿಂದಿನ ಪುಟ್ಟಪರ್ತಿಯು ಇಂದು ಅಭಿವೃದ್ಧಿ ಹೊಂದಿ ಯಾವ ಸ್ಥಿತಿಗೆ ಬಂದು ತಲುಪಿದ್ದನ್ನು ನೋಡಿದಾಗ ಅಚ್ಚರಿಯಾಗಿ ಅದರ ಹಿಂದಿರುವ ಬಾಬಾರವರ ಅಪಾರ ಶ್ರಮ, ಸಹನೆ, ಪ್ರೀತಿ-ವಾತ್ಸಲ್ಯಗಳನ್ನು ಕೊಂಡಾಡಬೇಕೆನಿಸುತ್ತದೆ. ಪ್ರಸ್ತುತ ಲೇಖನದ ಮೂಲಕ ಪುಟ್ಟಪರ್ತಿಯಲ್ಲಿ ಏನೇಲ್ಲ ಮಾಡಬಹುದು ಹಾಗೂ ನೋಡಬಹುದೆಂಬುದರ ಕುರಿತು ತಿಳಿಯಿರಿ. ನೀವು ಬಾಬಾರವರ ಭಕ್ತರಾದರೂ ಸರಿ ಇಲ್ಲದಿದ್ದರೂ ಸರಿ ಸಮಯ ಸಿಕ್ಕಾಗ ಈ ಪುಟ್ಟ ಹಳ್ಳಿ ಯಾವ ರೀತಿ ಬೆಳೆದಿದೆ ಎಂಬುದರ ಕುರಿತು ಕುತೂಹಲ ನಿಮಗಿದ್ದರೆ ಭೇಟಿ ನೀಡಿ. ಇದು ಬೆಂಗಳೂರಿನಿಂದ 120 ಕಿ.ಮೀ ಗಳಷ್ಟು ಮಾತ್ರವೆ ದೂರದಲ್ಲಿದೆ.
ಸಾಯಿ ನೆಲೆಯೆ ಪುಟ್ಟಪರ್ತಿ:
ಹಿಂದೆ ಪುಟ್ಟಪರ್ತಿ, ಗೊಲ್ಲಪಲ್ಲಿಯಾಗಿದ್ದ ಸಮಯದಲ್ಲಿ ಒಂದು ಕುಗ್ರಾಮವಾಗಿತ್ತೆಂದೆ ಹೇಳಬಹುದು. ಯಾವ ಮೂಲಭೂತ ವ್ಯವಸ್ಥೆಗಳ ಕಿಂಚಿತ್ತು ಲಕ್ಷಣವೂ ಇಲ್ಲದ, ದುಸ್ತರವಾದ ಜೀವನ ಸ್ಥಿತಿ ಹೊಂದಿರುವ ಹಳ್ಳೀಗಾಡು ಪ್ರದೇಶವಾಗಿತ್ತು. ಇದಕ್ಕೆ ಅಣಕವಾಗುವಂತೆ ಇಂದು ಪುಟ್ಟಪರ್ತಿಯನ್ನು ನೋಡಿದಾಗ ಯಾರಾದರೂ ಸರಿ ಮೂಕವಿಸ್ಮಿತರಾಗುವುದು ಖಂಡಿತ.
ಚಿತ್ರಕೃಪೆ: J929
ಸಾಯಿ ನೆಲೆಯೆ ಪುಟ್ಟಪರ್ತಿ:
ಒಂದಾನೊಂದು ಕಾಲದ ಭಾರತದ ಈ ಕುಗ್ರಾಮವು ಇಂದು ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಬೆಳೆದಿರುವುದು ಖಂಡಿತವಾಗಿಯೂ ಸಾಮಾನ್ಯದ ವಿಷಯವಲ್ಲ. ಇಂದು ಅಲ್ಲಿ ವಾಸಿಸುತ್ತಿರುವ ಬಾಬಾರವರ ಅಪರಿಮಿತ ಭಕ್ತರು ಹೇಳುವಂತೆ ಈ ಗ್ರಾಮವು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣ ಸ್ವತಃ ಶ್ರೀ ಸತ್ಯ ಸಾಯಿ ಬಾಬಾರವರೆ ಕಾರಣ.
ಚಿತ್ರಕೃಪೆ: Herry Lawford
ಸಾಯಿ ನೆಲೆಯೆ ಪುಟ್ಟಪರ್ತಿ:
ಇಂದು ಪುಟ್ಟಪರ್ತಿಯು ಧಾರ್ಮಿಕ ಪ್ರವಾಸಿ ದೃಷ್ಟಿಯಿಂದ ಹೆಚ್ಚು ಭೇಟಿ ನೀಡಲ್ಪಡುವ ಕ್ಷೇತ್ರಗಳ ಪೈಕಿ ಒಂದಾಗಿದೆ. ಇಲ್ಲಿ ಗಮನಾರ್ಹವಾಗಿ ಆದ ಸಾಧನೆಗಳು, ಯೋಜನೆಗಳು ಹಾಗೂ ನಿರ್ಮಾಣಗಳನ್ನು ಕಂಡಾಗ ಮನಸ್ಸಿಗೆ ಆನಂದ ಉಂಟಾಗದೆ ಇರಲಾರದು. ಜಗತ್ತಿನಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ವೃಂದವನ್ನು ಹೊಂದಿರುವ ಬಾಬಾರಾವರು ಅವರಿಂದ ಬಂದ ಕಾಣಿಕೆ, ದೇಣಿಗೆಗಳಿಂದಲೆ ಅವ್ಯಾಹತವಾಗಿ ಸಮಾಜ ಕಲ್ಯಾಣ ಸೇವೆಗಳನ್ನು ಮಾಡಿದ್ದಾರೆ.
ಚಿತ್ರಕೃಪೆ: Miran Rijavec
ಸಾಯಿ ನೆಲೆಯೆ ಪುಟ್ಟಪರ್ತಿ:
ಪುಟ್ಟಪರ್ತಿಯು ಇಂದು ಸಾಕಷ್ಟು ಸಂಖ್ಯೆಯಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಅದೆಷ್ಟೊ ಪ್ರವಾಸಿಗರು ಇಲ್ಲಿ ಬಂದಾಗ ಅದೇನೊ ಧನಾತ್ಮಕ ಭಾವನೆಯನ್ನು ಹೊಂದುವುದಾಗಿ ಹೇಳಿಕೊಳ್ಳುತ್ತಾರೆ. ಆ ಕಾರಣದಿಂದ ಈ ತಾಣಕ್ಕೆ ಪದೆ ಪದೆ ಭೇಟಿ ನೀಡಲು ಬಯಸುತ್ತಾರೆ.
ಚಿತ್ರಕೃಪೆ: Miran Rijavec
ಸಾಯಿ ನೆಲೆಯೆ ಪುಟ್ಟಪರ್ತಿ:
ಅಲ್ಲದೆ ಇಲ್ಲಿ ಸಾಕಷ್ಟು ವಿಶೇಷ ಆಕರ್ಷಣೆಗಳನ್ನೂ ಸಹ ಕಾಣಬಹುದಾಗಿದೆ. ವಿಶಾಲವಾದ ಕ್ರೀಡಾಂಗಣ, ಪ್ರಶಾಂತಿನಿಲಯಂ, ಪ್ಲಾನೆಟೋರಿಯಮ್, ವಸ್ತುಸಂಗ್ರಹಾಲಯ, ಧ್ಯಾನದ ಮರ, ಗೋಪಾಲಸ್ವಾಮಿ ದೇವಾಲಯ, ಕಲ್ಪತರು, ಸತ್ಯಭಾಮಾ ದೇವಾಲಯ, ಹನುಮಾನ್ ದೇವಾಲಯ, ಶ್ರೀ ಸತ್ಯ ಸಾಯಿಬಾಬಾರವರ ಸಮಾಧಿ ಹೀಗೆ ಅನೇಕ ತಾಣಗಳಿಗೆ ಭೇಟಿ ನೀಡಬಹುದಾಗಿದೆ.
ಚಿತ್ರಕೃಪೆ: Herry Lawford
ಸಾಯಿ ನೆಲೆಯೆ ಪುಟ್ಟಪರ್ತಿ:
ಚೈತನ್ಯ ಜ್ಯೋತಿ : ನವಂಬರ್ 2000 ರಂದು ಬಾಬಾರವರ 75 ನೇಯ ಜನ್ಮದಿನದಗೌರವಾರ್ಥವಾಗಿ ಉದ್ಘಾಟಿಸಲ್ಪಟ್ಟ ಚೈತನ್ಯ ಜ್ಯೋತಿಯು ಬಾಬಾರ ಜೀವನ ಹಾಗೂ ಉದ್ದೇಶದ ಕುರಿತು ಮಾಹಿತಿ ಒದಗಿಸುವ ಸಂಗ್ರಹಾಲಯವಾಗಿದೆ. ಸೋಮವಾರ ಹೊರತುಪಡಿಸಿ ಪ್ರತಿ ದಿನ ಬೆಳಿಗ್ಗೆ ಹತ್ತರಿಂದ ಹನ್ನೆರಡು ಘಂಟೆಯವರೆಗೂ ಹಾಗೂ ಮಧ್ಯಾಹ್ನ ಮೂರರಿಂದ ಸಂಜೆ ಐದು ಘಂಟೆಯವರೆಗೂ ಇದು ತೆರೆದಿರುತ್ತದೆ.
ಚಿತ್ರಕೃಪೆ: Mefodiyz
ಸಾಯಿ ನೆಲೆಯೆ ಪುಟ್ಟಪರ್ತಿ:
ಸನಾತನ ಸಂಸ್ಕೃತಿ ಸಂಗ್ರಹಾಲಯ : ಹೆಸರೆ ಹೇಳುವ ಹಾಗೆ ಇಲ್ಲಿ ಜಗತ್ತಿನ ಎಲ್ಲ ಧರ್ಮಗಳ, ಸಂತರ ಉಪದೇಶಗಳು, ಸಾರಿರುವ ತತ್ವಗಳು ಕುರಿತು ತಿಳಿಸುವ ಸಂಗ್ರಹಾಲಯವಾಗಿದೆ. ಅಲ್ಲದೆ ಭಗವಾನ್ ಬಾಬಾ ಅವರು ಉಪ್ದೇಶಿಸಿದ, ಭೋದಿಸಿದ ತತ್ವಗಳ ಕುರಿತೂ ಮಾಹಿತಿ ದೊರೆಯುತ್ತದೆ. ಬುಧವಾರ ಹೊರತುಪಡಿಸಿ ಪ್ರತಿ ದಿನ ಬೆಳಿಗ್ಗೆ ಹತ್ತರಿಂದ ಹನ್ನೆರಡು ಘಂಟೆಯವರೆಗೆ ಈ ಸಂಗ್ರಹಾಲಯ ತೆರೆದಿರುತ್ತದೆ.
ಚಿತ್ರಕೃಪೆ: srisathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ಶ್ರೀ ಸತ್ಯ ಸಾಯಿ ಪ್ಲಾನೆಟೋರಿಯಂ : ಇದೊಂದು ಬಾಹ್ಯಾಕಾಶದ ಕುರಿತು ಮಾಹಿತಿ ನೀಡುವ ಭವನವಾಗಿದೆ. ಸೌರ ವ್ಯೂಹದಲ್ಲಿ ಅಥವಾ ಬಾಹ್ಯಾಕಾಶದಲ್ಲಿ ಜರುಗುವ ರೋಚಕ ವಿದ್ಯಮಾನಗಳ ಕುರಿತು ಪರದೆಯ ಮೂಲಕ ಪರಿಣಾಮಕಾರಿಯಾಗಿ ತಿಳಿಸುವ ವ್ಯವಸ್ಥೆಯನ್ನು ಒಳಗೊಂಡಿದೆ. ಸುಮಾರು 200 ಜನರು ಏಕಕಾಲಕ್ಕೆ ಕುಳಿತು ಕೊಳ್ಳುವ ಸಾಮರ್ಥ್ಯ ಹೊಂದಿರುವ ಭವನ ಇದಾಗಿದೆ. ಇದು ಖಗೋಳ ಶಾಸ್ತ್ರ, ಭೌತ ಶಾಸ್ತ್ರ ಹಾಗೂ ಗಣಿತಕ್ಕೆ ಸಂಬಂಧಿಸಿದಂತೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಚಿತ್ರಕೃಪೆ: srisathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ : 230 ಹಾಸಿಗೆಗಳುಳ್ಳ, ಅತ್ಯಾಧುನಿಕ ಸೌಲಭ್ಯಗಳುಳ್ಳ, ಗುಣಮಟ್ಟದ ಚಿಕಿತ್ಸೆ ಹಾಗೂ ಪ್ರೀತಿಯಿಂದ ಕೂಡಿದ ಆರೈಕೆಯುಳ್ಳ ವಿಶಾಲವಾದ ಆಸ್ಪತ್ರೆ ಇದಾಗಿದೆ. ಗಮನಿಸಬೇಕಾದ ವಿಷಯವೆಂದರೆ ಇಲ್ಲಿ ಯಾವುದೆ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಬಾಬಾರವರ 66 ನೇಯ ಜನ್ಮದಿನದ ಗೌರವಾರ್ಥವಾಗಿ ಅಂದಿನ ಭಾರತದ ಪ್ರಧಾನ ಮಂತ್ರಿಗಳಿಂದ ಈ ಆಸ್ಪತ್ರೆಯ ಉದ್ಘಾಟನೆಯಾಗಿದೆ. ಇಲ್ಲಿ ಹೃದ್ಯ, ಯುರೊಲಾಜಿ ಹಾಗೂ ನೇತ್ರಶಾಸ್ತ್ರಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುತ್ತದೆ. ಜನರು ಇದನ್ನು ಪ್ರೀತಿಯಿಂದ "ಟೆಂಪಲ್ ಆಫ್ ಹೀಲಿಂಗ್" ಅಥವಾ ಚಿಕಿತ್ಸಾ ದೇಗುಲ ಎಂದು ಕರೆಯುತ್ತಾರೆ.
ಚಿತ್ರಕೃಪೆ: srisathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ಪ್ರಶಾಂತಿನಿಲಯಂ : ಇದು ಶ್ರೀ ಸತ್ಯ ಸಾಯಿ ಬಾಬಾ ಅವರು ನೆಲೆಸಿದ್ದ ಪ್ರಮುಖ ಆಶ್ರಮವಾಗಿದೆ. ಇಂದು ಇಲ್ಲಿ ಅವರ ಸಮಾಧಿಯೂ ಸೇರಿದಂತೆ, ಜನ್ಮ ಸ್ಥಳ, ಕುಲವಂತ್ ಹಾಲ್, ಪೂರ್ಣಚಂದ್ರ ಹಾಲ್, ದೇವಾಲಯಗಳು ಹಾಗೂ ಇತರೆ ಅನೇಕ ರಚನೆಗಳನ್ನು ಕಾಣಬಹುದು. ಬಾಬಾರವರು ಇಲ್ಲಿಯೆ ತಮ್ಮ ಭಕ್ತರಿಗೆ ದರುಶನ ನೀಡುತ್ತಿದ್ದರು. ಇಂದಿಗೂ ಶಿಸ್ತು ಬದ್ಧವಾಗಿ ನಿಗದಿತ ಸಮಯಗಳಲ್ಲಿ ಭಜನೆಗಳು, ಪ್ರಾರ್ಥನೆಗಳು ನಡೆಯುತ್ತಿವೆ. ಬಾಬಾರವರ ಸಮಾಧಿ ದರುಶನ ಕೋರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಂದಿಗೂ ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: sathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ಶ್ರೀ ಸತ್ಯ ಸಾಯಿ ವಿಶ್ವ ವಿದ್ಯಾಲಯ : ವಿವಿಧ ಪದವಿ ಹಾಗೂ ಸ್ನಾತಕೊತ್ತರ ಪದವಿ ನೀಡುವ ಸರ್ಕಾರದಿಂದ ಅಂಗೀಕೃತವಾದ ವಿಶ್ವ ವಿದ್ಯಾಲಯ ಇದಾಗಿದೆ. ಕೇವಲ ಶಿಕ್ಷಣ ಅಥವಾ ಪದವಿಯೊಂದೆ ಗುರಿಯಾಗಿರಿಸದೆ ಬಾಬಾರವರ ಆಶಯದಂತೆ ಉತ್ತಮ ಜೀವನ ನಡೆಸಲು ಬೇಕಾದ ಎಲ್ಲ ಸದ್ಗುಣಗಳನ್ನು, ಶಿಸ್ತುಬದ್ಧ ಜೀವನವನ್ನು, ನೈತಿಕ ವಿಚಾರಗಳನ್ನು ಕಲಿಸಿ ಯುವ ಪಿಳಿಗೆಯನ್ನು ಮುಂದಿನ ದಿನಗಳಲ್ಲಿ ಸಶಕ್ತ ಮಾಡುವಲ್ಲಿ ಈ ವಿದ್ಯಾಲಯ ನಿರತವಾಗಿದೆ. ವಿಶೇಷವೆಂದರೆ ಇಲ್ಲಿ ನೀಡಲಾಗುವ ಶಿಕ್ಷಣವೂ ಉಚಿತ ಮತ್ತು ಆದಾಯ, ಜಾತಿ, ಮತ ಭೇದವಿಲ್ಲದೆ ಅರ್ಹತೆಯ ಆಧಾರದ ಮೇಲೆ ಪ್ರವೇಶ. ಇದು ಅಧಿಕೃತವಾಗಿ ಶ್ರೀ ಸತ್ಯ ಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ಎಂದು ಕರೆಸಿಕೊಳ್ಳುತ್ತದೆ.
ಚಿತ್ರಕೃಪೆ: Herry Lawford
ಸಾಯಿ ನೆಲೆಯೆ ಪುಟ್ಟಪರ್ತಿ:
ವಿಶಾಲವಾದ ಕ್ರೀಡಾಂಗಣ : ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ವಾರ್ಷಿಕವಾಗಿ ಹಮ್ಮಿಕೊಳ್ಳಲಾಗುವ ವಿವಿಧ ಕ್ರೀಡಾ ಕೂಟಗಳಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಸುಂದರವಾದ ಕ್ರೀಡಾಂಗಣದ ನಿರ್ಮಾಣವನ್ನು ಬಾಬಾರವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ.
ಚಿತ್ರಕೃಪೆ: srisathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ಬೆಟ್ಟಗಳಿಂದ ಸುತ್ತುವರೆದಿರುವ ಈ ವಿಶಾಲ ಮೈದಾನವು ಅದ್ಭುತವಾದ ನೋಟವನ್ನು ಒದಗಿಸುತ್ತದೆ. ಅಲ್ಲದೆ ಬೆಟ್ಟಗಳ ಅಲ್ಲಲ್ಲಿನ ಕೆಲ ಸ್ಥಳಗಳಲ್ಲಿ ಸುಂದರವಾದ ಎತ್ತರ ಮೂರ್ತಿಗಳನ್ನು ನಿರ್ಮಿಸಲಾಗಿದ್ದು ಭೇಟಿ ನೀಡಿದವರಿಗೆ ರೋಮಾಂಚನಗೊಳಿಸುತ್ತದೆ. ಅದರಲ್ಲೂ ವಿಶೇಷವಾಗಿ ಆಂಜನೇಯನ ಪ್ರತಿಮೆಯು ಆಕರ್ಷಕವಾಗಿ ಕಂಗೊಳಿಸುತ್ತದೆ.
ಚಿತ್ರಕೃಪೆ: srisathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ಸತ್ಯ ಸಾಯಿಬಾಬಾ ಹುಟ್ಟಿದ ಸ್ಥಳ : ಸ್ವಾಮಿಯವರು ಹುಟ್ಟಿದ ಕರಾರುವಕ್ಕಾದ ಸ್ಥಳದಲ್ಲಿ ಇಂದು ಶಿವಾಲಯ ನಿರ್ಮಿಸಲಾಗಿರುವುದನ್ನು ಕಾಣಬಹುದು. ಸ್ವಾಮಿಯವರು 1926, ನವಂಬರ್ 23 ರಂದು ಜನಿಸಿದ್ದು ಇಂದು ಆ ದಿನವನ್ನು ಪುಟ್ಟಪರ್ತಿಯಲ್ಲಿ ಅತ್ಯಂತ ಭಕ್ತಿ, ಶೃದ್ಧೆ ಹಾಗೂ ಸಡಗರದಿಂದ ದೇವ ನಾಮಸ್ಮರಣೆ, ಭಜನೆಗಳು, ವೇದ ಘೋಷಣೆ ಇನ್ನೂ ಹಲವಾರು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸೇವಾದಿ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಅರ್ಥಬದ್ಧವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ಶಿವಾಲಯದಲ್ಲಿ ಶಿವನನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ.
ಚಿತ್ರಕೃಪೆ: srisathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ಪ್ರಶಾಂತಿ ನಿಲಯಂ ಆವರಣದಲ್ಲೆ ದತ್ತಾತ್ರೇಯರಿಗೆ ಮುಡಿಪಾದ ಸುಂದರ ದೇವಾಲಯವನ್ನು ಕಾಣಬಹುದು. ಇಲ್ಲಿ ದತ್ತಾತ್ರೇಯನು ನವನಾಥ ಸಂಪ್ರದಾಯದ ನವ ಗುರುಗಳ ಉಪಸ್ಥಿತಿಯಲ್ಲಿ ಔದುಂಬರ ಮರದ ಕೆಳಗೆ ವಿರಾಜಮಾನನಾಗಿದ್ದಾನೆ.
ಚಿತ್ರಕೃಪೆ: srisathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ಸತ್ಯಭಾಮಾ ದೇವಾಲಯ : ಕೃಷ್ಣನ ಮಡದಿಯಾದ ಸತ್ಯಭಾಮೆಗೆ ಮುಡಿಪಾದ ದೇವಾಲಯ ಇದಾಗಿದೆ. ಈ ರೀತಿಯ ದೇಗುಲ ಪ್ರಾಯಶಃ ಎಲ್ಲಿಯೂ ಕಂಡುಬರಲಾರದು. ಸತ್ಯ ಸಾಯಿ ಬಾಬಾರ ಅಜ್ಜರಾಗಿದ್ದ ರತ್ನಾಕರ ಕೊಡಮರಾಜು ಅವರಿಂದ ಈ ದೇವಾಲಯದ ನಿರ್ಮಾಣವಾಗಿದೆ. ಅವರಿಗೆ ಬಿದ್ದ ಒಂದು ವಿಚಿತ್ರ ಕನಸಿನಲ್ಲಿ ಸತ್ಯಭಾಮೆಯು ಕೃಷ್ಣನ ದಾರಿ ಕಾಯುತ್ತ ದುಖಗೊಂಡಾಗ ಎಲ್ಲೆಡೆ ಮಳೆ ಗಾಳಿ ಬೀಸಲಾರಂಭಿಸುತ್ತದೆ. ಈ ಸಂದರ್ಭದಲ್ಲಿ ಸತ್ಯಭಾಮೆಯ ಕಣ್ಣು ನಡೆದುಕೊಂಡು ಹೋಗುತ್ತಿದ್ದ ಇವರ ಮೇಲೆ ಬಿದ್ದು ತನಗೊಂದು ಆಶ್ರಯ ಕೊಡಬೇಕೆಂದು ಹೇಳುತ್ತಾಳೆ. ಈ ಕನಸಿನಿಂದ ಪ್ರಭಾವಿತರಾಗಿ ಸತ್ಯಭಾಮೆಗೆಂದು ಈ ದೇವಾಲಯವನ್ನು ರತ್ನಾಕರಂ ಕೊಂಡಮರಾಜು ಅವರು ನಿರ್ಮಿಸುತ್ತಾರೆ.
ಚಿತ್ರಕೃಪೆ: srisathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ಆಂಜನೇಯನ ದೇವಸ್ಥಾನ : ಪುಟ್ಟಪರ್ತಿಯ ಉತ್ತರ ದಿಕ್ಕಿನ ಗೋಪುರಂ ರಸ್ತೆಯಲ್ಲಿ ಈ ದೇವಸ್ಥಾನವಿದೆ.
ಚಿತ್ರಕೃಪೆ: srisathyasai.org
ಸಾಯಿ ನೆಲೆಯೆ ಪುಟ್ಟಪರ್ತಿ:
ವಟವೃಕ್ಷ/ಧ್ಯಾನದ ಮರ : ಸ್ವಾಮಿಯವರು ಸ್ವತಃ ತಮ್ಮ ಕೈಯಿಂದಲೆ 1959 ರಲ್ಲಿ ನೆಟ್ಟ ಆಲದ ಮರ ಇದಾಗಿದ್ದು ಇಂದು ಇದು ವಟ ವೃಕ್ಷ ಅಥವಾ ಧ್ಯಾನದ ಮರ ಹಾಗೂ ಆಂಗ್ಲದಲ್ಲಿ ಮೆಡಿಟೇಷನ್ ಟ್ರೀ ಎಂದು ಕರೆಸಿಕೊಳ್ಳುತ್ತದೆ. ಸ್ವಾಮಿಯವರು ಈ ಮರದ ಕೆಳಗೆ ಒಂದು ಯಂತ್ರವನ್ನು ಪ್ರತಿಷ್ಠಾಪಿಸಿದ್ದಾರೆ. ಇಲ್ಲಿ ಯಾರೆ ಕುಳಿತು ಕೆಲ ಹೊತ್ತು ಧ್ಯಾನ ಮಾಡಿದರೆ ಅವರಿಗೆ ಅಲೌಕಿಕವಾದ ಅನುಭೂತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Miran Rijavec
ಸಾಯಿ ನೆಲೆಯೆ ಪುಟ್ಟಪರ್ತಿ:
ಆಕರ್ಷಣೆಗಳಲ್ಲದೆ ನೀವು ಪ್ರಶಾಂತಿ ನಿಲಯಂಗೆ ಭೇಟಿಗೆಂದು ತೆರಳಿದಾಗ ಸ್ವಾಮಿಯ ಸದುದ್ದೇಶಗಳ ಫಲವಾಗಿ ಇದರ ಆವರಣದಲ್ಲಿರುವ ಶಾಪಿಂಗ್ ಮಳಿಗೆಗೂ ಸಹ ಭೇಟಿ ನೀಡಿ ನಿಮಗೆ ವಿವಿಧ ರೀತಿಯ ವಸ್ತುಗಳನ್ನು ಖರೀದಿಸಬಹುದು. ವಿಶೇಷವೆಂದರೆ ಉತ್ತಮ ಗುಣಮಟ್ಟದ ವಸ್ತುಗಳ ಬೆಲೆಗಳನ್ನು ನೀವು ಕೇಳಿದಾಗ ಒಂದು ಕ್ಷಣ ನಿಮಗೆ ಅಚ್ಚರಿಯಾಗಬಹುದು. ಏಕೆಂದರೆ ಮೌಲ್ಯಕ್ಕೆ ತಕ್ಕಂತೆ ಅತಿ ಕಡಿಮೆ ಬೆಲೆಗಳಲ್ಲಿ ಇಲ್ಲಿ ವಸ್ತುಗಳು ದೊರೆಯುತ್ತವೆ. ಇನ್ನೂ ಸಾಯಿ ಕ್ಯಾಂಟೀನಿನಲ್ಲಿ ಊಟದ ಶುಲ್ಕ ಕೇಳಿದರೆ ನೀವು ಸ್ಥಂಬಿಭೂತರಾಗುತ್ತೀರಿ. ಸ್ವಾದಿಷ್ಟಮಯ ಆಹಾರ ಅಷ್ಟೊಂದು ಕಡಿಮೆ ಬೆಲೆಗೆ ಇಲ್ಲಿ ದೊರೆಯುತ್ತವೆ.
ಚಿತ್ರಕೃಪೆ: Herry Lawford
ಸಾಯಿ ನೆಲೆಯೆ ಪುಟ್ಟಪರ್ತಿ:
ಪುಟ್ಟಪರ್ತಿಯನ್ನು ಭಾರತದ ಯಾವ ಮೂಲೆಯಿಂದಾದರೂ ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿಗೆ ಹತ್ತಿರದಲ್ಲಿರುವ ಮುಖ್ಯ ನಗರವೆಂದರೆ ಬೆಂಗಳೂರು. ಬೆಂಗಳೂರು ನಗರವು ಉತ್ತಮವಾದ ರೈಲು ನಿಲ್ದಾಣ, ಬಸ್ಸು ನಿಲ್ದಾಣ ಹಾಗೂ ವಿಮಾನ ನಿಲ್ದಾಣವನ್ನು ಹೊಂದಿದ್ದು ದೇಶದ ಯಾವುದೆ ಭಾಗದಿಂದಲೂ ಇಲ್ಲಿಗೆ ಸುಲಭವಾಗಿ ಬರಬಹುದಾಗಿದೆ. ಬೆಂಗಳೂರಿನಿಂದ ಸುಮಾರು 120 ಕಿ.ಮೀ ಗಳಷ್ಟು ದೂರದಲ್ಲಿರುವ ಪುಟ್ಟಪರ್ತಿಗೆ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳೆರಡೂ ಲಭ್ಯ. ಅಲ್ಲದೆ ಬೆಂಗಳೂರಿನಿಂದ ಪುಟ್ಟಪರ್ತಿಗೆ ತೆರಳಲು ರೈಲು ಸಹ ಲಭ್ಯವಿದೆ. ಪ್ರಶಾಂತಿನಿಲಯಂ ಇಲ್ಲಿರುವ ರೈಲು ನಿಲ್ದಾಣ. ಬೇಕಾದರೆ ಬಾಡಿಗೆ ಕಾರುಗಳಲ್ಲಿಯೂ ಸಹ ತೆರಳಬಹುದು.
ಚಿತ್ರಕೃಪೆ: Nikhilb239