ಈ ದೇವಾಲಯ ಒಂದು ರೀತಿಯಲ್ಲಿ ವಿಶೇಷವೆಂದೆ ಹೇಳಬಹುದು. ಬಹುಶಃ ಇಲ್ಲಿ ಕಂಡುಬರುವ ನೋಟ ದೇಶದ ಮತ್ತಿನ್ಯಾವ ದೇವಾಲಯಗಳಲ್ಲಿಯೂ ಕಂಡುಬರಲಿಕ್ಕಿಲ್ಲ. ಆ ನಿಟ್ಟಿನಿಂದಲೂ ಇದು ಸಾಕಷ್ಟು ಜನರ ಗಮನ ಸೆಳೆಯುತ್ತದೆ. ಇದನ್ನೊಮ್ಮೆ ನೋಡಿದರೆ ಇದು ದೇವಾಲಯವೋ ಅಥವಾ ಘಂಟಾಲಯವೋ ಎಂಬ ಸಂದೇಹ ಮೂಡಿದರೆ ಅಚ್ಚರಿ ಪಡಬೇಕಾಗಿಲ್ಲ.
ಮೂಗಿನ ಮೇಲೆ ಬೆರಳಿಡುವಂತೆ ಮಾಡುವ ವಿಚಿತ್ರ ದೇವಾಲಯಗಳು
ಈ ದೇವಾಲಯದಲ್ಲಿ ಎಲ್ಲಿ ನೋಡಿದರಲ್ಲಿ ಬರಿ ಘಂಟೆಗಳೆ ಕಾಣಸಿಗುತ್ತವೆ. ಇದು ಘಂಟೆಗಳಿಗೆಂದೆ ಮುಡಿಪಾದ ದೇವಾಲಯವಾಗಿರಬಹುದೆಂದು ಅನಿಸುವುದು ಸಹಜ. ಆದರೆ ಇದೊಂದು ಶಕ್ತಿ ದೇವಿಯ ದೇವಾಲಯವಾಗಿದೆ. ಈ ಶಕ್ತಿ ದೇವಿಯನ್ನು ಘಂಟೇಶ್ವರಿ ಎಂಬ ಹೆಸರಿನಿಂದಲೆ ಆರಾಧಿಸಲಾಗುತ್ತದೆ.
ಚಿತ್ರಕೃಪೆ: Aditya Mahar
ಒಡಿಶಾ ರಾಜ್ಯದ ಸಂಬಲಪುರ ಪಟ್ಟಣದಲ್ಲಿರುವ ಘಂಟೇಶ್ವರಿಯ ಈ ದೇವಾಲಯವು ಸಂಬಲಪುರ ಜಿಲ್ಲೆಯಲ್ಲೆ ಹೆಚ್ಚು ಪ್ರಖ್ಯಾತವಾಗಿದ್ದು ಒಡಿಶಾ ರಾಜ್ಯದ ಹಲವಾರು ಭಾಗಗಳಿಂದ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತಾದಿಗಳು ಈ ದೇವಾಲಯಕ್ಕೆ ಭೆಟಿ ನೀಡುತ್ತಾರೆ ಹಾಗೂ ದೇವಿಗೆ ತಮ್ಮ ಪ್ರಾರ್ಥನೆ ಅರ್ಪಿಸುತ್ತಾರೆ.
ಚಿತ್ರಕೃಪೆ: Aditya Mahar
ಇಲ್ಲಿನ ವಿಶೇಷವೆಂದರೆ, ಈ ಶಕ್ತಿ ದೇವಿಯು ದುರದಿಂದ ಬಂದ ಭಕ್ತರ ಕಷ್ಟ-ದುಖಗಳನ್ನು ಕೇಳುತ್ತಾಳೆ ಹಾಗೂ ಅವರ ಬೇಡಿಕೆ, ಆಸೆಗಳು ನ್ಯಾಯಯುತವಾಗಿದ್ದಲ್ಲಿ ಅಲ್ಲದೆ ಅವರು ಸಂಪೂರ್ಣವಾಗಿ ದೇವಿಯನ್ನು ಭಕ್ತಿಯಿಂದ ನಂಬಿದ್ದಲ್ಲಿ ಅವರ ಎಲ್ಲ ಆಸೆಗಳು ಅತಿ ಶೀಘ್ರದಲ್ಲೆ ಈ ದೇವಿಯಿಂದ ಈಡೇರಿಸಲ್ಪಡುತ್ತದೆ.
ಚಿತ್ರಕೃಪೆ: Aditya Mahar
ಹೀಗೆ ಹರಕೆಗಳು, ಆಸೆಗಳು ಈಡೇರಿದ ನಂತರ ಆಯಾ ಭಕ್ತರು ಈ ದೇವಾಲಯಕ್ಕೆ ಮತ್ತೊಮ್ಮೆ ಭೇಟಿ ನೀಡಿ ಘಂಟೆಯೊಂದನ್ನು ದೇವಿಗೆ ಸಮರ್ಪಿಸಬೇಕೆಂಬ ನಿಯಮ, ಪದ್ಧತಿ ಮೊದಲಿನಿಂದಲೂ ಪ್ರಚಲಿತದಲ್ಲಿದೆ ಎಂದು ಹೇಳಲಾಗುತ್ತದೆ. ಹೀಗೆ ಎಲ್ಲೆಡೆ ನೋಡಿದರೂ ಈ ದೇವಾಲಯದಲ್ಲಿ ಘಂಟೆಗಳೆ ಹೆಚ್ಚು ಹೆಚ್ಚು ಕಂಡುಬರುತ್ತವೆ.
ಚಿತ್ರಕೃಪೆ: Aditya Mahar
ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ದೇವಿಯು ಅಪಾರ ಶಕ್ತಿಯ ಕುರಿತು. ಇಲ್ಲಿ ಕಂಡುಬರುವ ಅಪಾರ ಸಂಖ್ಯೆಯಲ್ಲಿರುವ ಘಂಟೆಗಳೆ ಇದಕ್ಕೆ ಸಾಕ್ಷಿಯಾಗಿವೆ. ಇದರರ್ಥ ಇಲ್ಲಿಗೆ ಭೇಟಿ ನೀಡಿ ದೇವಿಯನ್ನು ಬೇಡಿಕೊಂಡಿರುವ ಸಾಕಷ್ಟು ಜನರ ಇಚ್ಛೆಗಳು ಪೂರ್ಣಗೊಂಡಿರುವುದೆ ಇದಕ್ಕೆ ಉತ್ತರವಾಗಿದೆಯಲ್ಲವೆ?
ಚಿತ್ರಕೃಪೆ: Aditya Mahar
ಮೂರು ನೀರಿನ ತೊರೆಗಳು ಕೂಡಿ ಉಂಟಾಗಿರುವ ಮಹಾನದಿಯ ತಟದಲ್ಲಿ ಈ ಘಂಟೇಶ್ವರಿಯ ದೇವಾಲಯವಿದೆ. ಹಿಂದೆ ದೋಣಿಯಲ್ಲಿ ವಿಹರಿಸುತ್ತಿದ್ದವರಿಗೆ ಈ ದೇವಾಲಯ ಸಾಕಷ್ಟು ಸಹಾಯ ಮಾಡುತ್ತಿತ್ತು. ಇದನ್ನು ನಾವಿಕರು ದೀಪವಿಲ್ಲದ ದೀಪಗೃಹ (ಲೈಟ್ ಹೌಸ್) ಎಂದು ಕರೆಯುತ್ತಿದ್ದರು. ಕಾರಣ ಲೈಟ್ ಹೌಸ್ ನೀರಿನಲ್ಲಿರುವ ನಾವಿಕರಿಗೆ ದೀಪದ ಪ್ರಕಾಶದಿಂದ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿತ್ತು.
ಶಕ್ತಿಸ್ವರೂಪಿಣಿಯ ಶಕ್ತಿಶಾಲಿ ದೇವಾಲಯಗಳು
ಆದರೆ, ಈ ದೇವಾಲಯದಲ್ಲಿ ತೂಗಿ ಹಾಕಲಾದ ಅಪಾರ ಸಂಖ್ಯೆಯ ಘಂಟೆಗಳಿಂದ ಗಾಳಿ ಬೀಸುವಾಗ ಅದ್ಭುತವಾದ ಶಬ್ದವು ಸಾಕಷ್ಟು ದೂರದವರೆಗೆ ಕೇಳಿಬರುತ್ತಿತ್ತು. ಇದರಿಂದ ಇಲ್ಲಿ ಭೂಮಿಯಿರುವುದರ ಕುರಿತು ನಾವಿಕರು ಎಚ್ಚೆತ್ತುಕೊಳ್ಳುತ್ತಿದ್ದರು. ಅಲ್ಲದೆ ಮಹಾನದಿಯು ಬಿರುಗಾಳಿಯ ಸಂದರ್ಭದಲ್ಲಿ ಸಾಕಷ್ಟು ಉಗ್ರರೂಪ ತಾಳುತ್ತಿತ್ತು. ಈ ಸಂದರ್ಭದಲ್ಲಿ ರಾತ್ರಿಯ ಸಮಯದಲ್ಲಿ ದೊಡ್ಡದಾದ ಘಂಟಾನಾದ ಉಂಟಾಗಿ ದೋಣಿಯಲ್ಲಿರುವವರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸಹಾಯವಾಗಿತ್ತು.