ವಿಶಿಷ್ಟ ಆಚರಣೆ, ಸಂಪ್ರದಾಯಗಳನ್ನು ಹೊಂದಿರುವ ನಾಥ ಸಂಪ್ರದಾಯವನ್ನು ಇನ್ನೂ ಉತ್ತುಂಗಕ್ಕೊಯ್ದ ಬಾಬಾ ಗೋರಕನಾಥರಿಗೆ ಮುಡಿಪಾದ ಶಕ್ತಿಶಾಲಿ ದೇವಾಲಯವೊಂದು ಒಡಿಶಾ ರಾಜ್ಯದ ಜಗತ್ಸಿಂಗ್ಪುರ್ ಪಟ್ಟಣದಲ್ಲಿದ್ದು ಗೋರಕನಾಥ ದೇವಾಲಯವೆಂದೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಜಗತ್ಸಿಂಗ್ಪುರವು ಒಡಿಶಾದ ರಾಜಧಾನಿ ಭುವನೇಶ್ವರದಿಂದ 65 ಕಿ.ಮೀ ಗಳಷ್ಟು ದೂರದಲ್ಲಿದೆ.
ಮತ್ಸ್ಯೇಂದ್ರನಾಥರು ಮೂಲತಃ ನಾಥ ಸಂಪ್ರದಾಯದ ಸಂಸ್ಥಾಪಕರಾಗಿದ್ದರೂ ಅವರ ಮುಖ್ಯ ಶಿಷ್ಯರಾದ ಗೋರಕನಾಥರು ಆ ಸಂಪ್ರದಾಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿದರು. ಸಾಮಾನ್ಯ ಮನುಷ್ಯನ ಜೀವನದ ಮುಖ್ಯ ಉದ್ದೆಶವೆ ಸತ್ಯಾನ್ವೇಷಣೆಯಾಗಿರಬೇಕೆಂದು ಸಾರಿದವರು.
ಚಿತ್ರಕೃಪೆ: Anandanath
ತಮ್ಮ ಜೀವನವನ್ನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಭದ್ರಪಡಿಸಿಕೊಂಡಿದ್ದ ಬಾಬಾ ಗೋರಕರು ಹಠ ಯೋಗಿಗಳು. ಯೋಗದಲ್ಲಿ ಮಹೋನ್ನತ ಸಾಧನೆಗೈದವರು. ಇವರನ್ನು ಪರಿಪಾಲಿಸುವವರನ್ನು ಗೋರಕನಾಥಿಗಳು, ಯೋಗಿಗಳು ಎಂದೆಲ್ಲ ಕರೆಯಲ್ಪಡುತ್ತಾರೆ. ಉತ್ತರ ಪ್ರದೇಶದ ಗೋರಖಪುರವು ನಾಥ ಸಂಪ್ರದಾಯದ ಕೇಂದ್ರವಾಗಿದೆ.
ಶಕ್ತಿಶಾಲಿ ಕಬ್ಬಾಳಮ್ಮನ ಕ್ಷೇತ್ರ
ಅಲ್ಲದೆ ಒಡಿಶಾ, ಅಸ್ಸಾಂ, ನೇಪಾಳಗಳಲ್ಲೂ ನಾಥ ಸಂಪ್ರದಾಯದವರನ್ನು ಕಾಣಬಹುದು. ಒಡಿಶಾದ ಜಗತ್ಸಿಂಗಪುರದಲ್ಲಿರುವ ಬಾಬಾ ಗೋರಕನಾಥ ದೇವಾಲಯವು ಸಾಕಷ್ಟು ಶಕ್ತಿಶಾಲಿ ದೇವಾಲಯ ಎಂದು ಪರಿಗಣಿಸಲಾಗುತ್ತದೆ. ಈ ಸ್ಥಳದಲ್ಲಿ ಗೋರಕನಾಥರು ತಪಗೈದಿದ್ದರೆನ್ನಲಾಗಿದೆ.
ಚಿತ್ರಕೃಪೆ: Kamalakanta777
ಇಲ್ಲಿ ಗೋರಕನಾಥರು ತಮ್ಮ ಮೇಲೆ ಹುತ್ತ ಬೆಳೆದರೂ ಲಕ್ಷಿಸದೆ ತಪ ಗೈದು ಸಿದ್ಧ ಶಕ್ತಿಯನ್ನು ಪಡೆದುಕೊಂಡವರು. ಹೀಗಾಗಿ ಈ ದೇವಾಲಯವು ಬಹಳ ಜಾಗೃತವಾಗಿದೆ ಎನ್ನಲಾಗುತ್ತದೆ ಹಾಗೂ ಗೋರಕ ಬಾಬಾರನ್ನು ಮನಸಿನಿಂದ ಪ್ರಾರ್ಥಿಸಿದರೆ ಎಲ್ಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎನ್ನಲಾಗಿದೆ. ಇಲ್ಲಿನ ಆಲದ ಮರದ ಕೆಳಗೆ ಅವರು ತಪಗೈದಿದ್ದರಿಂದ ಅಲ್ಲಿ ಇಂದು ಹರಕೆಯ ರೂಪವಾಗಿ ಧಾರಗಳನ್ನು ಕಟ್ಟಲಾಗುತ್ತದೆ.
ಶಕ್ತಿ ಸ್ವರೂಪಿಣಿಯ ಶಕ್ತಿಶಾಲಿ ದೇವಾಲಯಗಳು
ಚಿತ್ರಕೃಪೆ: Kamalakanta777
ಜಗತ್ಸಿಂಗ್ಪುರದ ಜೈಪುರ ಚೌಕ್ ನಿಂದ ಸುಮಾರು ಐದು ಕಿ.ಮೀ ದೂರದಲ್ಲಿ ಈ ದೇವಾಲಯವಿದ್ದು, ಇದನ್ನು ರಘುನಾಥಪುರದ ಮೂಲಕ ಕಟಕ್-ಪರದೀಪ್ ರಸ್ತೆಯ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಇನ್ನೊಂದು ವಿಷಯವೆಂದರೆ ಇಲ್ಲಿ ಕೋತಿಗಳ ಹಾವಳಿ ವಿಪರೀತವಾಗಿದ್ದು ಜಾಗರೂಕರಾಗಿರುವುದು ಉತ್ತಮ. ಇವು ಜನರಿಗೆ ದೈಹಿಕವಾಗಿ ತೊಂದರೆ ಕೊಡುವುದಿಲ್ಲವಾದರೂ ಪ್ರಸಾದವನ್ನು ಕಸಿದುಕೊಳ್ಳುತ್ತವೆ.
ಸರಳಾದೇವಿ ದೇವಾಲಯ, ಚಿತ್ರಕೃಪೆ: Sujit kumar
ಈ ದೇವಾಲಯಕ್ಕೇನಾದರೂ ಭೇಟಿ ನೀಡಿದರೆ ಇದಕ್ಕೆ ಹತ್ತಿರದಲ್ಲಿರುವ ಸರಳಾ ದೇವಿಯ ಸರಳ ಪೀಠಕ್ಕೂ ಭೇಟಿ ನೀಡಲು ಮರೆಯದಿರಿ. ಸರಳಾ ದೇವಿ ದುರ್ಗೆ ಹಾಗೂ ಸರಸ್ವತಿಯ ಸಂಯೋಜಿತ ರೂಪ ಎಂದು ಹೇಳಲಾಗಿದೆ. ಶೈವ, ವೈಷ್ಣವ ಹಾಗೂ ತಾಂತ್ರಿಕ ವಿಧಾನಗಳ ಸಮ್ಮಿಶ್ರಣವಾಗಿದೆ ಈ ಸಂಪ್ರದಾಯ.