ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಇದಾಗಿದೆ. ಇದು ತುಸು ವಿಭಿನ್ನವಾದ ದೇವಾಲಯ. ಉತ್ತರ ಭಾರತದ ರಾಜ್ಯವೊಂದರಲ್ಲಿದೆ. ಈ ದೇವಿಯನ್ನು ಪರಹುಲ್ ದೇವಿ ಎಂದೆ ಕರೆಯುತ್ತಾರೆ. ಶಕ್ತಿಯ ಅವತಾರ ಈಕೆಯಾಗಿದ್ದಾಳೆಂದು ನಂಬಲಾಗುತ್ತದೆ ಅಲ್ಲದೆ ಈಕೆ ಅಪಾರ ಪ್ರಭಾವಶಾಲಿ ದೇವಿ ಎಂದೂ ಸಹ ಕೊಂಡಾಡಲಾಗುತ್ತದೆ.
ಮುಖ್ಯವಾಗಿ ಮನೋಕಾಮನೆಗಳಿರುವವರು ಅಥವಾ ಜೀವನದಲ್ಲಿ ಎಡೆ ಬಿಡದೆ ತೊಂದರೆ, ಕಷ್ಟಗಳಿಗೆ ಒಳಗಾಗುತ್ತಿರುವವರು ಈ ದೇವಿಯನ್ನು ಕುರಿತು ಹರಕೆ ಹೊತ್ತುಕೊಳ್ಳುತ್ತಾರೆ. ಸ್ಥಳೀಯವಾಗಿ ಹೇಳುವಂತೆ ಹೀಗೆ ಹರಕೆ ಹೊತ್ತಿಕೊಂಡವರು ಶತಪ್ರತಿಶತದಷ್ಟು ದೇವಿಯನ್ನು ನಂಬಿದ್ದೆ ಆದಲ್ಲಿ ಅವರ ಎಲ್ಲ ಬಯಕೆಗಳು ಈಡೇರಲ್ಪಡುತ್ತವೆ ಅಲ್ಲದೆ ಕಷ್ಟಗಳು ಧಿಡೀರನೆ ಮಂಗ ಮಾಯವಾಗುತ್ತವಂತೆ!
ಚಿತ್ರಕೃಪೆ: Teacher1943
ಉತ್ತರ ಪ್ರದೇಶ ರಾಜ್ಯದ ಕಾನಪುರ ದೇಹಾತ್ ಜಿಲ್ಲೆಯಲ್ಲಿ ಈ ಪುರಾತನ ದೇವಾಲಯವಿದೆ. ರೂರಾ-ಶಿವಲಿ ರಸ್ತೆಯಿಂದ ಮೂರು ಕಿ.ಮೀ ಗಳಷ್ಟು ದೂರದಲ್ಲಿರುವ ಲಮಹರಾ ಎಂಬ ಗ್ರಾಮದ ಸರಹದ್ದಿನಲ್ಲಿ ಹರಿದಿರುವ ರಿಂದ್ ನದಿಯ ತಟದ ಮೇಲೆ ಈ ಪರಹುಲ್ ದೇವಿಯ ದೇವಾಲಯವಿದೆ. ಅಲ್ಲದೆ ಮಹಾದೇವನ ದೇವಾಲಯವು ಇಲ್ಲಿನ ಸಂಕೀರ್ಣದಲ್ಲಿದೆ.
ಪರಹುಲ್ ದೇವಿಯು ಸಾಕಷ್ಟು ಪ್ರಭಾವಿ ದೇವಿಯಾಗಿದ್ದು ಉತ್ತರ ಪ್ರದೇಶ ರಾಜ್ಯದ ಮೂಲೆ ಮೂಲೆಗಳಿಂದ ಕಷ್ಟಗಳನ್ನು ದೂರ ಮಾಡು ತಾಯೆ ಎಂದು ಬೇಡಿ ಕೊಂಡು ಬರುವ ಭಕ್ತರ ಸಂಖ್ಯೆ ಅಪಾರ. ಈ ಪ್ರದೇಶದ ಐತಿಹಾಸಿಕ ನಾಯಕರಾದ ಅಲಾಹ್ ಮತ್ತು ಉದ್ಧಳ ಎಂಬುವವರ ಕಥೆ ಈ ದೇವಾಲಯದೊಂದಿಗೆ ಬಲು ರೋಚಕವಾಗಿ ತಳುಕು ಹಾಕಿಕೊಂಡಿದೆ.
ರಿಂದ್ ನದಿ ಹಾಗೂ ದೇವಾಲಯ, ಚಿತ್ರಕೃಪೆ: Teacher1943
ಅಲಾಹ್ ಎಂಬ ಯೋದ್ಧನು ಈ ದೇವಿಯ ಪರಮ ಭಕ್ತನಾಗಿದ್ದನು. ತಾನ್ ವಿಜಯಿಯಾಗಬೇಕೆಂದು ದೇವಿಯಲ್ಲಿ ಬೇಡಿಕೊಂಡು ಅದರಂತೆ ಯುದ್ಧವೊಂದರಲ್ಲಿ ಜಯ ಸಾಧಿಸಿದನು. ಇದರಿಂದ ಸಂತಸ ಹೊಂದಿದ ಆತ ಕೆಜಿ ಗಟ್ಟಲೆ ಬಂಗಾರವಿರುವ ದೀಪ ಉರಿಸುವ ಕುಂಡವೊಂದನ್ನು ದೇವಿಗೆ ಕಾಣಿಕೆಯಾಗಿ ಅರ್ಪಿಸಿದ. ಆ ಸುವರ್ಣವು ಸಾಕಷ್ಟು ಹೊಳೆಯುತ್ತಿತ್ತು.
ಅದರ ಹೊಳಪು ಹೇಗಿತ್ತೆಂದರೆ ಅದರಿಂದ ಪ್ರತಿಫಲಿತವಾದ ಬೆಳುಕು ದೂರದ ಕನ್ನೌಜ್ ಅರಮನೆಗೆ ತಲುಪಿ ಅಲ್ಲಿ ರಾಣಿ ಪದ್ಮಾವತಿ ಮಲಗಲು ಅದು ಅಡ್ಡಿಪಡಿಸುತ್ತಿತ್ತು. ಅಲ್ಲಿನ ದೊರೆಯಾದ ಉದ್ಧಳ ಎಂಬಾತನು ಇದನ್ನು ಕಂಡು ಆ ಕುಂಡವನ್ನು ರಿಂದ್ ನದಿಯ ಮಧ್ಯಭಾಗದಲ್ಲಿ ಎಸೆದಿದ್ದನಂತೆ. ಹೀಗೆ ಈ ಕಥೆಯು ಇಲ್ಲಿನ ಜನರು ತಮ್ಮ ಪೂರ್ವಜರಿಂದ ಕೇಳಿಕೊಂಡು ಬಂದಿದ್ದಾರಂತೆ.
ದಕ್ಷಿಣದ ಜನರು ಹೆಚ್ಚಾಗಿ ಭೇಟಿ ನೀಡುವ ಉತ್ತರದ ಸ್ಥಳಗಳು!
ಅಷ್ಟಕ್ಕೂ ಇದರಲ್ಲಿರುವ ರೋಚಕತೆ ಎಂದರೆ, ಇಲ್ಲಿನ ಹಿರಿಯರು ಹೇಳುವ ಪ್ರಕಾರ ಇಂದಿಗೂ ಮಧ್ಯರಾತ್ರಿಯ ಸಮಯದಲ್ಲಿ ಆ ಸುವರ್ಣಕುಂಡದಿಂದ ದೇವಿಯ ಸನ್ನಿಧಿಯಲ್ಲಿ ದೀಪ ಬೆಳಗುತ್ತದೆ ಹಾಗೂ ಪ್ರತಿ ದಿನ ಮುಂಜಾವಿನ ಸಂದರ್ಭದಲ್ಲಿ ಅರ್ಚಕರು ದೇವಿಯ ಸನ್ನಿಧಿಗೆ ಬಂದಾಗ ತಾಜಾ ಗುಲಾಬು ಹೂವುಗಳು ದೇವಿಗೆ ಏರಿಸಲ್ಪಟ್ಟಿರುತ್ತವಂತೆ!