ಕಡಲ ತೀರಗಳ ಸಾಲು, ಮಧ್ಯೆ ಪವಿತ್ರ ತೀರ್ಥಕ್ಷೇತ್ರಗಳನ್ನು ಒಳಗೊಂಡಿರುವ ತಾಣ ಉಡುಪಿ. ಪಶ್ಚಿಮ ಘಟ್ಟಗಳಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಅನೇಕ ಗಿರಿಧಾಮಗಳು ಹಾಗೂ ಐತಿಹಾಸಿಕ ತಾಣಗಳಿವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಉಡುಪಿ ಪ್ರವಾಸಿಗರಿಗೊಂದು ಸ್ವರ್ಗ ತಾಣ. ಈ ಕ್ಷೇತ್ರದ ರಮಣೀಯ ದೇಗುಲಗಳು ಮನಸ್ಸಿಗೆ ನೆಮ್ಮದಿಯ ಅನುಭವ ನೀಡುತ್ತದೆ.
ಪ್ರತಿದಿನ ಸಾವಿರಾರು ಯಾತ್ರಿಕರನ್ನು ಸ್ವಾಗತಿಸುವ ಈ ಪ್ರದೇಶದಲ್ಲಿ ಅನುಕೂಲಕ್ಕೆ ತಕ್ಕಂತಹ ವಸತಿ ಸೌಲಭ್ಯ ಹಾಗೂ ಸಾರಿಗೆ ವ್ಯವಸ್ಥೆಯನ್ನು ಹೊಂದಬಹುದು. ದೋಸೆ, ರಸಂ, ಪಲ್ಯ, ಉಪ್ಪಿನಕಾಯಿ, ಮುರುಕು ಹಾಗೂ ರವಾ ಇಡ್ಲಿ ಉಡುಪಿಯ ವಿಶೇಷ ತಿನಿಸುಗಳು. ಇಲ್ಲಿಗೆ ಬಂದಾಗ ಇವುಗಳನ್ನು ಸವಿಯಲೇ ಬೇಕು. ಬೆಂಗಳೂರಿನಿಂದ 403 ಕಿ.ಮೀ. ದೂರದಲ್ಲಿರುವ ಈ ತಾಣದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ವಿಶೇಷ ವೈಶಿಷ್ಟ್ಯಗಳಿಂದ ಕೂಡಿರುವ ಈ ತಾಣಕ್ಕೆ ಭೇಟಿ ನೀಡಿದರೆ ನೋಡಲೇ ಬೇಕಾದ ಕೆಲವು ಸ್ಥಳಗಳ ಮಾಹಿತಿ ಕಲೆಹಾಕೋಣ...
ಶ್ರೀಕೃಷ್ಣ ದೇವಸ್ಥಾನ
12ನೇ ಶತಮಾನದ ಇತಿಹಾಸ ಹೊಂದಿರುವ ಈ ದೇಗುಲ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಶ್ರೀಕೃಷ್ಣ ದೇವಾಲಯವನ್ನು ಕೃಷ್ಣ ಮಠ ಎಂತಲೂ ಕರೆಯುತ್ತಾರೆ. ಇಲ್ಲಿರುವ ಕೃಷ್ಣನ ಮೂರ್ತಿಯನ್ನು ಮಧ್ವಾಚಾರ್ಯರು ಸ್ಥಾಪಿಸಿದರು ಎನ್ನಲಾಗುತ್ತದೆ. ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇಗುಲದ ಪೂಜಾ ಉಸ್ತುವಾರಿಯನ್ನು ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಸುಂದರ ಪುರಾಣ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಮುಖ್ಯ ಪ್ರಾಣ, ಗರುಡ, ಸುಬ್ರಹ್ಮಣ್ಯ ಮತ್ತು ನವಗ್ರಹ ಗುಡಿಗಳಿವೆ.
ಅನಂತೇಶ್ವರ ದೇಗುಲ
ಬಹಳ ಪುರಾತನ ಕಾಲದ ಈ ದೇಗುಲ 8ನೇ ಶತಮಾನದ್ದು. ಇಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಶಿವರಾತ್ರಿಯನ್ನು ಬಹಳ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಆ ವೇಳೆ ಭಕ್ತರ ಹರಿವು ಜೋರಾಗಿಯೇ ಇರುತ್ತದೆ.
ನಾಣ್ಯಗಳ ಸಂಗ್ರಹಾಲಯ
ಇದು ಬಹಳ ಅಪರೂಪದ ಹಾಗೂ ವಿಶೇಷವಾದ ಸಂಗ್ರಹಾಲಯ. ಇದನ್ನು ಕಾರ್ಪೊರೇಶನ್ ಬ್ಯಾಂಕ್ ಪರಂಪರೆಯ ಸಂಗ್ರಹಾಲಯ ಎಂದು ಕರೆಯುತ್ತಾರೆ. 400 ವರ್ಷಗಳ ಹಿಂದಿನ ನಾಣ್ಯಗಳಿಂದ ಹಿಡಿದು ಪ್ರಸ್ತುತ ಕಾಲದ ನಾಣ್ಯಗಳ ಸಂಗ್ರಹ ಇಲ್ಲಿದೆ. ಹೆಚ್ಚು ಕಡಿಮೆ 1800 ಬಗೆಯ ನಾಣ್ಯಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಉಡುಪಿ ನಗರದ ಹೃದಯಭಾಗದಲ್ಲೇ ಇರುವುದರಿಂದ ಇದರ ಭೇಟಿ ಸುಲಭವಾಗಿ ಆಗುತ್ತದೆ.
ಭುಜಂಗ ಉದ್ಯಾನ
ಈ ಉದ್ಯಾನವು ಉಡುಪಿಯ ನಗರದ ಮಧ್ಯ ಭಾಗದಲ್ಲಿದೆ. ವಿವಿಧ ಬಗೆಯ ಹೂಗಿಡಗಳು, ನೀರಿನ ಕೊಳ, ಪ್ರಾಣಿಗಳ ಪ್ರತಿಮೆ ಹಾಗೂ ವಿಶ್ರಾಂತಿ ಕಟ್ಟೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಂಜೆಯ ವಿಹಾರಕ್ಕೆ ಉತ್ತಮ ಸ್ಥಳ.
ಆನೆಗುಡ್ಡೆ ವಿನಾಯಕ ದೇವಸ್ಥಾನ
ಈ ದೇಗುಲ ಉಡುಪಿಯ ಕುಂದಾಪುರ ತಾಲೂಕಿನಲ್ಲಿರುವ ಆನೆಗುಡ್ಡ ಎನ್ನುವ ಹಳ್ಳಿಯಲ್ಲಿದೆ. ಇದನ್ನು ಕುಂಭಾಶಿ ಎಂತಲೂ ಕರೆಯುತ್ತಾರೆ. ಉಡುಪಿಯಿಂದ 20 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಸಾರಿಗೆ ವ್ಯವಸ್ಥೆಯಿದೆ. ಈ ವಿನಾಯಕ ಭಕ್ತರ ಬೇಡಿಕೆಯನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ.
ಕಾಪು ಕಡಲ ತೀರ
ಕಾಪು ಎನ್ನುವುದು ತುಳು ಭಾಷೆಯ ಶಬ್ದ. ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಕಡಲ ತೀರ ಕಂಗೊಳಿಸುತ್ತದೆ. ಉಡುಪಿಯ ದಕ್ಷಿಣ ಭಾಗದಿಂದ 13ಕಿ.ಮೀ. ದೂರದಲ್ಲಿರುವ ಈ ಸಮುದ್ರ ಜನಜಂಗುಳಿಯಿಂದ ದೂರ ಉಳಿದಿದೆ. ಈ ದಡದಲ್ಲಿ ಲೈಟ್ ಹೌಸ್ ಇರುವುದನ್ನು ನೋಡಬಹುದು. ಸುಂದರವಾದ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಕುಡ್ಲು ತೀರ್ಥ ಜಲಪಾತ
ಉಡುಪಿಯಿಂದ 47 ಕಿ.ಮೀ. ದೂರದಲ್ಲಿರುವ ಈ ಜಲಪಾತ ಪಶ್ಚಿಮ ಘಟ್ಟದ ಸಾಲು ಹೆಬ್ರಿ ಹತ್ತಿರದಲ್ಲಿದೆ. ಇದನ್ನು ಸೀತಾ ಜಲಪಾತ ಎಂತಲೂ ಕರೆಯುತ್ತಾರೆ. ಈ ತಾಣ ಚಾರಣಕ್ಕೂ ಸೂಕ್ತವಾಗಿದೆ. 150 ಅಡಿ ಎತ್ತರದಿಂದ ಧುಮುಕುವ ಈ ಜಲಧಾರೆಯನ್ನು ನೋಡಿ ಕಣ್ತುಂಬಿಕೊಳ್ಳುವುದೇ ಒಂದು ಸಂತಸ.