ಸಾಹಸ ಪ್ರವೃತ್ತಿ ಎಂಬುದು ಪ್ರತಿಯೊಬ್ಬ ಮನುಷ್ಯನಲ್ಲಿ ಅಡಕವಾಗಿರುತ್ತದೆ. ಆದರೆ ಅದಕ್ಕೆ ಸರಿಯಾದ ಸಮಯ ಹಾಗೂ ಸಂದರ್ಭ ಸಿಗಬೇಕಷ್ಟೆ ಹೊರಬರಲು. ಅದರಂತೆ ಸಾಹಸಮಯ ಪ್ರವಾಸವೂ ಸಹ ಸಾಕಷ್ಟು ರೋಮಾಂಚನಗೊಳಿಸುವ ಅದ್ಭುತ ಚಟುವಟಿಕೆಯಾಗಿದೆ.
ಮನೋಸ್ಥೈರ್ಯ, ಸಹನೆ, ಧೈರ್ಯ ಹಾಗೂ ಆತ್ಮವಿಶ್ವಾಸಗಳನ್ನು ಹೆಚ್ಚಿಸುವ ಚಾರಣ ಅಥವಾ ಟ್ರೆಕ್ಕಿಂಗ್ ನಂತಹ ಪ್ರವಾಸಿ ಚಟುವಟಿಕೆಗಳು ಯುವ ಹಾಗೂ ಮಧ್ಯ ವಯಸ್ಕರಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ. ಅದಕ್ಕೆ ಪೂರಕವೆಂಬಂತೆ ಭಾರತದಲ್ಲಿ ಸಾಕಷ್ಟು ಅದ್ಭುತ, ಪ್ರವಾಸಿಗರಿಗೆ ಸವಾಲೆಸೆಯುವಂತಹ ಚಾರಣ ಮಾರ್ಗಗಳಿವೆ.
ಭಯಾನಕ ರಸ್ತೆಗಳಲ್ಲೊಂದು ಪ್ರವಾಸ!
ಅಲ್ಲದೆ ಭಾರತದಲ್ಲಿರುವ ಕೆಲವು ವಿಶೇಷ ಪ್ರವಾಸಿ ತಾಣಗಳು ಅಪರೂಪಕ್ಕೊಮ್ಮೆಯಷ್ಟೆ ಭೇಟಿ ನೀಡಬಹುದಾದ ಸ್ಥಳಗಳಂತಿವೆ. ಅವುಗಳಲ್ಲಿ ಕೆಲವು ಸಾಹಸ ಹಾಗೂ ಸದೃಢ ಆರೋಗ್ಯವನ್ನು ಅಪೇಕ್ಷಿಸುವಂತಿದ್ದರೆ ಇನ್ನೂ ಕೆಲವು ಬಹುತೇಕ ಜನರಿಗೆ ಸುಲಲಿತವಾಗಿ ಬೇಕೆಂದಾಗ ಹೋಗಿ ಅರಲು ಅನುಕೂಲವಿರುವಂತೆ ಇಲ್ಲ.
ಇನ್ನೂ ಮನುಷ್ಯನು ಸಾಮಾನ್ಯವಾಗಿ 40 ವರ್ಷ ದಾಟಿದ ನಂತರ ದೈಹಿಕವಾಗಿ ಸಾಕಷ್ಟು ಬದಲಾವಣೆಗೊಳಪಡುತ್ತಾನೆ. ಕ್ರಮೇಣವಾಗಿ ಮುಂಚೆಯಿರುತ್ತಿದ್ದ ಅದ್ಭುತ ಆರೋಗ್ಯ, ಹುರುಪು, ಉತ್ಸಾಹ ನಂತರದಲ್ಲಿಯೂ ಇರುವುದು ಕಷ್ಟ. ಹಾಗಾಗಿ ಹೆಚ್ಚು ಹೆಚ್ಚು ಚಾರಣವಿರುವ, ವಿಪರೀತ ಹವಾಮಾನವಿರುವ, ಸಿಕ್ಕ ಸಿಕ್ಕ ವಾಹನಗಳಲ್ಲಿ ಸಂಚರಿಸ ಬೇಕಾದ ಸ್ಥಳಗಳಿಗೆ ಭೇಟಿ ನೀಡಲು ಬಲು ಕ್ಷ್ಟದಾಯಕವಾಗಬಹುದು.
ಆದ್ದರಿಂದ ನಿಮಗೆ ಶಕ್ತಿ, ಸಾಮರ್ಥ್ಯ ಹೆಚ್ಚಿರುವ ವಯಸ್ಸಿನಲ್ಲೆ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಅದರ ಆನಂದವನ್ನು ಅನುಭವಿಸಬಹುದು. ಈ ನಿಟ್ಟಿನಲ್ಲಿ ನೀವು ಪ್ರವಾಸಿ ಪ್ರೀಯರಾಗಿದ್ದರೆ ಈ ಕೆಳಗಿನ ಸ್ಥಳಗಳಿಗೆ ಒಮ್ಮೆಯಾದರೂ ನೀವು 40 ದಾಟುವ ಮುಂಚೆಯೆ ಭೇಟಿ ನೀಡಲು ಸಜ್ಜಾಗಿ. ಆ ಸ್ಥಳಗಳು ಯಾವುವು ಹಾಗೂ ಎಲ್ಲಿವೆ ಎಂಬುದರ ಕುರಿತು ಲೇಖನದ ಚಿತ್ರಗಳ ಮೂಲಕ ತಿಳಿಯಿರಿ.
ಸ್ಪಿತಿ ಕಣಿವೆ
ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಸ್ಪಿತಿ ಕಣಿವೆಯು ಮರಭೂಮಿ ಪರ್ವತವಾಗಿದೆ. ವಿಪರೀತ ಹವಾಮಾನದಿಂದ ಕೂಡಿರುವ ಈ ಸ್ಥಳಕ್ಕೆ ತೆರಳಲು ಸಾಕಷ್ಟು ಕಷ್ಟಕರವಾದ ರಸ್ತೆಯ ಮುಲಕ ತೆರಳಬೇಕಾಗುತ್ತದೆ.
ಚಿತ್ರಕೃಪೆ: Carlos Adampol Galindo
ಬೈಕ್ ಮೂಲಕ
ಎರಡು ರಾಜ್ಯಗಳ ಮಧ್ಯದ ಪಯಣವಿದು ಹಾಗೂ ಅಷ್ಟೆ ಪ್ರಖ್ಯಾತಿಗಳಿಸಿದ ಪಯಣವೂ ಇದು! ಹಿಮಾಚಲದ ಮನಾಲಿಯಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ಪ್ರಾಂತ್ಯದ ಲೇಹ್ ಗೆ ತಲುಪಿಸುವ ರಸ್ತೆ ಮಾರ್ಗ. ಅತ್ಯದ್ಭು೦ತವಾದ ರೋಮಾಂಚನದ ಅನುಭವ ಈ ಪ್ರಯಾಣ ನೀಡುತ್ತದೆ.
ಚಿತ್ರಕೃಪೆ: Narender9
ಜಮ್ಮು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ಪ್ರಾಂತ್ಯದ ಝನ್ಸ್ಕಾರ್ ಭಾಗದ ಹಿಮ ಹಾಸಿಗೆಯ ಮೇಲೆ ಚಳಿಗಾಲದಲ್ಲಿ ಮಾಡಲಾಗುವ ಟ್ರೆಕ್ ಇದಾಗಿದೆ. ಹುಷಾರು! ಇದು ಹಿಮನದಿ! ಘನಿಕೃತ ಹೊಂದಿದ ಈ ನದಿಯ ಹಾಸಿಗೆಯ ಮೇಲೆ ಜಾಗರೂಕತೆಯಿಂದ ಸಾಗಬೇಕು!
ಚಿತ್ರಕೃಪೆ: Goutam1962
ಶ್ರೀನಗರ
ಜಮ್ಮು ಕಾಶ್ಮೀರದ ಶ್ರೀನಗರ ಹಾಗೂ ಲೆಹ್ ಮಧ್ಯದ ಮಾರ್ಗವು ಜೋಜಿಲಾ ಪಾಸ್ ಮೂಲಕ ಹಾದು ಹೋಗುತ್ತದೆ. ಈ ಪರ್ವತದಾರಿಯನ್ನು ಒಮ್ಮೆ ನೋಡಿದರೆ ಸಾಕು, ತಲೆ ತಿರುಗಿ ಬರುವಂತಿದೆ. ಇನ್ನೂ ಇಲ್ಲಿ ಪ್ರಯಾಣಿಸುವಾಗ ಸಾಕಷ್ಟು ಜೋಪಾನವಾಗಿ ವಾಹನ ಚಲಾಯಿಸಬೇಕು.
ಚಿತ್ರಕೃಪೆ: VinayakPhadatare
ರೂಪಕುಂಡ
ಉತ್ತರಾಖಂಡದ ಚಮೋಲಿ ಜಿಲ್ಲೆಯ ಪ್ರಖ್ಯಾತ ಚಾರಣ ಮಾರ್ಗಗಳ ಪೈಕಿ ಒಂದಾಗಿದೆ ರೂಪಕುಂಡ್ ಟ್ರೆಕ್ಕಿಂಗ್. ಹಿಮಾಲಯ ಪರ್ವತ ಶ್ರೇಣಿಯ ತ್ರಿಶೂಲ್ ಹಾಗೂ ನಂದಾ ಘಂಟಿ ಪರ್ವತಗಳ ಮಧ್ಯ ನೆಲೆಸಿರುವ ಈ ಸರೋವರದಲ್ಲಿ ಹಿಂದೆ ನೂರಾರು ಮನುಷ್ಯರ ಅಸ್ಥಿಪಂಜರಗಳು ದೊರಕಿದ್ದುದರಿಂದ ರಹಸ್ಯ ಸರೋವರ ಎಂಬ ಹೆಸರು ಪಡೆದಿದೆ. ಈ ಟ್ರೆಕ್ಕಿಂಗ್ ಸಾಕಷ್ಟು ಅಪಾಯಕಾರಿಯಾಗಿದ್ದು ನಿಪುಣ ಮಾರ್ಗದರ್ಶನದಲ್ಲೆ ಕೈಗೊಳ್ಳಬೇಕು.
ಚಿತ್ರಕೃಪೆ: Djds4rce
ಬೃಂದಾವನ
ಸಾಮಾನ್ಯವಾಗಿ ಮಾರ್ಚ್ ಸಮಯದಲ್ಲಿ ಬರುವ ಬಣ್ಣದ ಹಬ್ಬ, ಹದಿ ಹರೆಯದವರ ಪಾಲಿಗೆ ಅತ್ಯುತ್ಸಾಹ ನೀಡುವ ಹಬ್ಬವಾಗಿದೆ. ಸ್ನೇಹಿತರೆಲ್ಲರೂ ಸೇರಿ ಲಿಂಗ ಬೇಧವಿಲ್ಲದೆ ಪ್ರತಿಯೊಬ್ಬರೂ ಬಲು ಉತ್ಸಾಹದಿಂದ ಒಬ್ಬರ ಮೇಲೊಬ್ಬರು ಬಣ್ಣ ಅರಚುತ್ತ ಆನಂದಿಸುತ್ತಾರೆ. ಆದರೆ ಉತ್ತರ ಪ್ರದೇಶದ ಮಥುರಾದ ಬಳಿಯಿರುವ ಬೃಂದಾವ/ವೃಂದಾವನದಲ್ಲಿ ಒಮ್ಮೆಯಾದರೂ ಈ ಹಬ್ಬವನ್ನು ನೋಡಲೇಬೇಕು. ಇಡಿ ದೇಶದಲ್ಲೆ ಅತ್ಯಂತ ಅದ್ಭುತವಾಗಿ ಓಕುಳಿ ಹಬ್ಬವನ್ನಾಚರಿಸುವ ಸ್ಥಳ ಇದಾಗಿದೆ. ಜನಜಂಗುಳಿ ಸಾಕಷ್ಟಿರುವುದರಿಂದ ಜಾಗರೂಕವಾಗಿರಬೇಕು!
ಚಿತ್ರಕೃಪೆ: Abhijit Kar Gupta
ರೋಮಾಂಚನಭರಿತ
ಗೋವಾ ವಿಶ್ವ ಪ್ರಖ್ಯಾತಿಗಳಿಸಿರುವ ಅದ್ಭುತ ಪ್ರವಾಸಿ ತಾಣವಾಗಿದೆ. ಕಡಲ ತೀರಗಳ ಈ ಸ್ಥಳಕ್ಕೆ ಭಾರತದ ಇತರೆ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸಹ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಹಲವಾರು ಕಡಲ ತೀರಗಳಲ್ಲಿ ನಡೆಯುವ ಜಲಕ್ರೀಡೆಗಳು ಸಾಕಷ್ಟು ಸಾಹಸಭರಿತವಾಗಿದ್ದು ರೋಮಾಂಚನ ಉಂಟು ಮಾಡುತ್ತವೆ.
ಚಿತ್ರಕೃಪೆ: devcr
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ರಾಜ್ಯದ ಅತಿ ಎತ್ತರದ ಶಿಖರ ಶೃಂಗವಾದ ಸಂಡಕ್ಫು ಅಥವಾ ಸಂಡಕಪುರ ಚಾರಣ ಹೆಸರುವಾಸಿಯಾದ ಚಾರಣ ಪಥವಾಗಿದೆ. ದಾರ್ಜೀಲಿಂಗ್ ಜಿಲ್ಲೆಯ ಸಿಂಗಲೀಲಾ ಪರ್ವತದ ಭಾಗವಾಗಿರುವ ಈ ಶೃಂಗ ಅದ್ಭುತ ಅನುಭವವನ್ನು ನೀಡುತ್ತದೆ.
ಚಿತ್ರಕೃಪೆ: solarshakti
ಥಾರ್ ಮರಭೂಮಿ
ರಾಜಸ್ಥಾನದ ಥಾರ್ ಮರಭೂಮಿಯು ತನ್ನದೆ ಆದ ವಿಶ್/ಎಶತೆಯನ್ನು ಹೊಂದಿದ ಭಾರತದ ಒಂದು ವಿಶಿಷ್ಟ ಮರಭೂಮಿಯಾಗಿದೆ. ಮೊದಲಿನಿಂದಲೂ ಥಾರ್ ಮರಭೂಮಿಯ ಮರಳಿನ ದಿಬ್ಬಗಳು, ಒಂಟೆ ಸವಾರಿಗಾಗಿ ಪ್ರಸಿದ್ಧಿ ಪಡೆದಿದೆ. ಇನ್ನೂ ಇಲ್ಲಿ ರಾತ್ರಿಯ ವಸತಿ ಇನ್ನೂ ಹೆಚ್ಚು ಜನಪ್ರೀಯವಾಗಿತ್ತಿರುವ ಚಟುವಟಿಕೆಯಾಗುತ್ತಿದೆ. ಆಗಸದ ಕೆಳಗೆ ವಿಶಾಲವಾದ ಬಯಲಿನಲ್ಲಿ ಲಕ್ಷ ಲಕ್ಷ ನಕ್ಷತ್ರಗಳ ಕೆಅಳಗೆ ಮಲುಗುವುದೆ ಒಂದು ಚೆಂದದ ಅನುಭವ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Bryan_T
ಚಾರಣಗಳ ಅಪ್ಪ
ಭಾರತದ ಹಿಮಾಲಯ ಪರ್ವತ ಪ್ರದೇಶಗಳಾದ ಹಿಮಾಚಲ, ಉತ್ತರಾಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಕೆಲವು ಸಾಹಸಪ್ರಧಾನವಾದ ಚಾರಣ ಮಾರ್ಗಗಳಿಗೆ ಹೆಸರುವಾಸಿಯಾಗಿವೆ. ಕಲಿಂದಿಖಾಲ್ ಟ್ರೆಕ್ ಒಂದು ಸವಾಲೆಸೆಯುವ ಹಾಗೂ ಅಪಾಯಕಾರಿಯಾದ ಟ್ರೆಕ್ ಎಂದೆ ಹೇಳಬಹುದು. ಈ ಚಾರಣವನ್ನು "ಚಾರಣಗಳ ಅಪ್ಪ" ಎಂದೂ ಸಹ ಸಂಭೋದಿಸುತ್ತಾರೆಂದರೆ ತಿಳಿಯಬಹುದು ಯಾವ ರೀತಿಯ ಸವಾಲನ್ನು ಇದು ಚಾರಣಿಗರಿಗೆ ಹಾಕುತ್ತದೆ ಎಂದು.
ಚಿತ್ರಕೃಪೆ: Sharada Prasad CS
ಅಪಾಯಕಾರಿ!
ವಿಶ್ವದ ಅಪಾಯಕಾರಿ ಚಾರಣಗಳ ಪೈಕಿ ಇದೂ ಸಹ ಒಂದು. ಅತ್ಯಂತ ವಿಪರೀತವಾದ ಹವಾಮಾನ, ಅಕ್ಷರಶಃ ಮೈಯನ್ನು ಗರಗಸದ ಹಾಗೆ ಕೊರೆಯುವ ಚಳಿ, ಕನಿಷ್ಠ ಮಟ್ಟಕ್ಕಿಂತಲೂ ಕೆಳಗೆ ಕುಸಿದಿರುವ ತಾಪಮಾನ, ಮೊನಚಾದ, ಅಂಕುಡೊಂಕಾದ ಹಿಮದಿಂದ ಕೂಡಿದ ಬೆಟ್ಟ ಪರ್ವತಗಳು, ಆಮ್ಲಜನಕದ ಕೊರತೆ, ಊಟ ತಿಂಡಿಗಳ ಕೊರತೆ, ನಿರ್ಜನ ಪ್ರದೇಶ, ಆಯ ತಪ್ಪಿ ಬಿದ್ದರೂ ಕೊಚ್ಚಿ ಹೋಗುವಂತೆ ಮಾಡುವ ರಭಸದಿ ಹರಿಯುವ ನದಿ ಇವೆಲ್ಲವೂ ಈ ಚಾರಣದ ವಿಶಿಷ್ಟತೆ. ಈ ಚಾರಣ ಮಾರ್ಗವು ಗಂಗೋತ್ರಿಯನ್ನು ಕೇದಾರನಾಥದೊಂದಿಗೆ ಬೆಸೆಯುತ್ತದೆ.
ಚಿತ್ರಕೃಪೆ: Barry Silver
ಬೆಟ್ಟ-ಗುಡ್ಡಗಳ ಮಧ್ಯೆ
ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಸಾಗುವುದೆ ರೋಮಾಂಚನವಾಗಿರುವಾಗ ಅದರಲ್ಲಿ ಹಿಮಗಟ್ಟಿದ ನದಿಯ ಮೂಲಕ ಟ್ರೆಕ್ ಮಾಡಿದರೆ ಹೇಗಿರಬೇಡ. ಅಲ್ಲವೆ ಇಂತಹ ಒಂದು ಅನುಭವ ಈ ಮಾರ್ಗದಲ್ಲಿ ಪಡೆಯಬಹುದು. ಅತಿಯಾದ ಚಳಿ, ಹಿಮಗಟ್ಟಿದ ನದಿ, ಅಲ್ಪೈನ್ ಗಿಡ ಮರಗಳ ಕಾಡು, ಹಿಮ ಪ್ರಾಣಿಗಳು, ಕೇವಲ ಪ್ರಕೃತಿಯ ಭವ್ಯತೆ, ರಮ್ಯತೆ ಹಾಗೂ ಗಾಂಭೀರ್ಯತೆ. ಜನಸಾಗರದಿಂದ ಬಲು ದೂರ. ಕನಸಿನ ಲೋಕವೆಂಬ ಭ್ರಮೆ. ಆ ಭ್ರಮೆಯಲ್ಲಿ ಎಚ್ಚರ ತಪ್ಪಿದರೆ ಸ್ವರ್ಗ ನರಕಗಳ ದರ್ಶನ. ಹೀಗೆ ಒಂದು ಭಯ ಮಿಶ್ರಿತ ರೋಮಾಂಚನದ ಅನುಭೂತಿಯನ್ನು ಇದು ಕರುಣಿಸುತ್ತದೆ.
ಚಿತ್ರಕೃಪೆ: Todd vanGoethem
ರಿವರ್ ರಾಫ್ಟಿಂಗ್
ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ರಿಷಿಕೇಶವು ಒಂದು ಧಾರ್ಮಿಕ ಮಹತ್ವ ಪಡೆದ ಸುಂದರ ಸ್ಥಳವಾಗಿದೆ. ಯೋಗ ಕೇಂದ್ರದಿಂದಾಗಿಯೂ ಹೆಸರುವಾಸಿಯಾದ ರಿಷಿಕೇಶದಲ್ಲಿ ಇತ್ತೀಚಿನ ಕೆಲ ಸಮಯದಿಂದ ವ್ಹೈಟ್ ವಾಟರ್ ರಾಫ್ಟಿಂಗ್ (ರಭಸವಾಗಿ ಹರಿಯುವ ನದಿಯಲ್ಲಿ ದೋಣಿ ಸವಾರಿ) ಸಾಕಷ್ಟು ಪ್ರಸಿದ್ಧಿಗಳಿಸುತ್ತಿದೆ. ಸಾಂದರ್ಭಿಕ.
ಚಿತ್ರಕೃಪೆ: Autentico Adventures Costa Rica
ಸ್ಕೂಬಾ ಡೈವಿಂಗ್
ಸ್ಕೂಬಾ ಡೈವಿಂಗ್, ಸ್ನೊರ್ಕೆಲಿಂಗ್ ಮುಂತಾದ ಸಾಹಸಮಯ ಜಲ ಚಟುವಟಿಕೆಗಳು ಹಲವು ಇತರೆ ದೇಶಗಳಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದರೂ ಭಾರತದಲ್ಲಿ ಕ್ರಮೇಣವಾಗಿ ಇದರ ಜನಪ್ರಿಯತೆಯು ಬೆಳೆಯುತ್ತಿದೆ. ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿವೆ. ಸಾಂದರ್ಭಿಕ.
ಚಿತ್ರಕೃಪೆ: bhinddalenes
ಮನಮೋಹಕ
ಪಶ್ಚಿಮ ಹಿಮಾಲಯದ ಕಣಿವೆ ಪ್ರದೇಶವೂಂದರಲ್ಲಿ ಕಂಡುಬರುತ್ತದೆ ಈ ಅದ್ಭುತ ಸ್ವರ್ಗದಂತಹ ಸ್ಥಳ. ಇದೊಂದು ರಾಷ್ಟ್ರೀಯ ಉದ್ಯಾನವಾಗಿದ್ದು ಉತ್ತರಾಖಂಡ ರಾಜ್ಯದಲ್ಲಿದೆ. ಈ ರಾಷ್ಟ್ರೀಯ ಉದ್ಯಾನವನ್ನು ಟ್ರೆಕ್ ಮೂಲಕವೆ ತಲುಪಬೇಕಾಗುತ್ತದೆ. ವಿಪರೀತ ಚಳಿಯ ವಾತಾವರಣ ಮೈನಡುಗಿಸುವಂತಿರುತ್ತದೆ. ಹರಿದ್ವಾರದಿಂದ ಜೋಶಿಮಠ ಅಥವಾ ಗೋವಿಂದಘಾಟ್ ವರೆಗೆ ವಾಹನ ಸೌಲಭ್ಯವಿದ್ದು ಅಲ್ಲಿಂದ ಸುಮಾರು 15 ಕಿ.ಮೀ ಗಳಷ್ಟು ಉದ್ದದ ಚಾರಣವನ್ನು ಮಾಡಿ ಈ ಸ್ವರ್ಗವನ್ನು ತಲುಪಬಹುದಾಗಿದೆ.
ಚಿತ್ರಕೃಪೆ: Kushaal
ಜಿಮ್ ಕಾರ್ಬೆಟ್
ಇಂದಿಗೂ ಪ್ರತಿ ಋತುಮಾನಗಳಲ್ಲಿ 70,000 ಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆಯುವ ಈ ಅದ್ಭುತ ರಾಷ್ಟ್ರೀಯ ಉದ್ಯಾನವು ಉತ್ತರಾಖಂಡ ರಾಜ್ಯದ, ನೈನಿತಾಲ್ ಜಿಲ್ಲೆಯ ರಾಮನಗರ್ ಎಂಬಲ್ಲಿ ಸುಮಾರು 520 ಚ.ಕಿ.ಮೀ ಗಳಷ್ಟು ವಿಶಾಲವಾದ ಸ್ಥಳದಲ್ಲಿ ಸೊಂಪಾಗಿ ವ್ಯಾಪಿಸಿದೆ. ಕಾಡಿನ ಪ್ರಾಣಿಗಳ ಚಟುವಟಿಕೆ, ಮನೋಹರವಾದ ಪ್ರಕೃತಿ ಸೌಂದರ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿದೆ ಈ ಸುಂದರ ರಾಷ್ಟ್ರೀಯ ಉದ್ಯಾನ. ಜಂಗಲ್ ಸಫಾರಿ ಮಾಡುವಾಗ ಸಾಕಷ್ಟು ಧೈರ್ಯವಿರಬೇಕು. ಒಮ್ಮೊಮ್ಮೆ ಹಟಾತ್ತಾಗಿ ಕಾಡು ಪ್ರಾಣಿಗಳು ನಿಮ್ಮ ವಾಹನದ ಸನೀಹಕ್ಕೆ ಬರಬಹುದು!
ಚಿತ್ರಕೃಪೆ: Vikram Gupchup
ಕರ್ನಾಟಕ
ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮ ಪ್ರದೇಶವೆ ಕುದುರೆಮುಖ. ದಟ್ಟ ಹಸಿರಿನ ಶೋಲಾ ಕಾಡುಗಳಿಂದ ಹಾಸು ಹೊಕ್ಕಾಗಿರುವ ಭೂದೃಶ್ಯಾವಳಿಗಳು ನೋಡುಗರ ಮನ ಕದಿಯುತ್ತವೆ. ಕುದುರೆಮುಖ ಟ್ರೆಕ್ ಸಾಕಷ್ಟು ರೋಮಾಂಚನದಿಂದ ಕೂಡಿದ್ದು ಸುಂದರ ಅನುಭವ ನೀಡುತ್ತದೆ.
ಚಿತ್ರಕೃಪೆ: Ramesh Desai
ಸೋಲಂಗ್ ಕಣಿವೆ
ಸೋಲಂಗ್ ನಾಲಾ ಎಂತಲೂ ಕರೆಯಲ್ಪಡುವ ಈ ಅದ್ಭುತ ಕಣಿವೆ ಹಿಮದಿಂದ ಕೂಡಿದ ಪರ್ವತಗಳ ಅದ್ಭುತ ದೃಶ್ಯಾವಳಿಗಳನ್ನು ಹಿನ್ನೆಲೆಯಾಗಿ ಹೊಂದಿದ್ದು ರಮಣೀಯ ಪ್ರಕೃತಿ ಸೌಂದರ್ಯದಿಂದ ನಳನಳಿಸುತ್ತದೆ. ಇದು ಪ್ಯಾರಾಗ್ಲೈಡಿಂಗ್ ನಂತಹ ಸಾಹಸಭರಿತ ಚಟುವಟಿಕೆಗೆ ಹೆಸರುವಾಸಿಯಾಗಿದೆ. ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯ ಭಾಗವಾಗಿರುವ ಈ ಕಣಿವೆ ಮನಾಲಿಯಿಂದ 15 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Raman Virdi
ಚಿರಾಪುಂಜಿ
ಮೇಘಾಲಯ ರಾಜ್ಯವು ಹೆಸರಿಗೆ ತಕ್ಕ ಹಾಗೆ ಸದಾ ಮೇಘಗಳ ನೃತ್ಯದಿಂದಲೆ ಕೂಡಿರುತ್ತದೆ. ಅಲ್ಲದೆ ಇಲ್ಲಿ ಬೀಳುವ ಮಳೆಯ ಪ್ರಮಾಣವೂ ಅಪಾರ. ಹಾಗಾಗಿ ಪ್ರಕೃತಿಯ ಅತಿ ಭವ್ಯ ನೋಟಗಳನ್ನು, ಸೊಂಪಾಗಿ ಬೆಳೆದ ಅಗಾಧ ಸಸ್ಯ ಸಂಪತ್ತನ್ನು ಇಲ್ಲಿ ಕಾಣಬಹುದಾಗಿದೆ. ಇನ್ನೊಂದು ವಿಷಯವೆಂದರೆ ಚಿರಾಪುಂಜಿ ಬಳಿಯಿರುವ ನೈಸರ್ಗಿಕವಾಗಿ ಮರದ ಬೇರುಗಳಿಂದ ಸೇತುವೆಯಾಗಿ ಪ್ರವಾಸಿಗರನ್ನು ಆಕರ್ಷಿಸುವ ಈ ಪ್ರಾಕೃತಿಕ ವಿಸ್ಮಯವನ್ನು ನೋಡಲು ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.
ಚಿತ್ರಕೃಪೆ: Bitopan
ರೈಲು ಮಾರ್ಗ
ಬೆಂಗಳೂರು-ಮಂಗಳೂರು ರೈಲು ಮಾರ್ಗದ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದೆ ಈ ಅದ್ಭುತ ಚಾರಣ ಮಾರ್ಗ. ರೈಲು ಕಂಬಿಗಳ ಮೂಲಕವೆ ಸಾಗ ಹೋಗಬೇಕಾದ ರೋಮಾಂಚನ ಮೂಡಿಸುವ ಮಾರ್ಗ ಇದಾಗಿದ್ದು ಸಾಕಷ್ಟು ಜನಪ್ರೀಯತೆಗಳಿಸಿದೆ. ಈ ಮಾರ್ಗದಲ್ಲಿ ಸಕಲೇಶಪುರದಿಂದ ಪ್ರಾರಂಭವಾಗುವ ಚಾರಣ ಮಾರ್ಗವು ಕುಕ್ಕೆ ಸುಬ್ರಹ್ಮಣ್ಯದವರೆಗೂ ಪಥ ಹೊಂದಿದೆ. ಈ ಸಮಯ್ಯದಲ್ಲಿ ಪ್ರಕೃತಿಯ ಅಗಾಧ ಸಮ್ಪತ್ತನ್ನು ಕಣ್ಣಾರೆ ಅನುಭವಿಸಬಹುದಾಗಿದೆ.
ಚಿತ್ರಕೃಪೆ: Iamg