ಬಯಲು ಸೀಮೆ ಆವೃತ್ತಿಯಲ್ಲಿ ಬರುವ ಚಿತ್ರದುರ್ಗ ಐತಿಹಾಸಿಕ ತಾಣಗಳಿಗೆ ಹೆಸರಾಗಿದೆ. ಅದ್ಭುತ ಚರಿತ್ರೆಯನ್ನು ಹೊಂದಿರುವ ಈ ಪ್ರದೇಶದಲ್ಲಿ ಅನೇಕ ರಾಜ ಮಹರಾಜರು ಆಳಿ ಹೋಗಿದ್ದಾರೆ. ಮೊದಲು ಈ ಪ್ರದೇಶಕ್ಕೆ ಚಿತ್ತಾಲ್ ದುರ್ಗ ಎಂದು ಕರೆಯಲಾಗುತ್ತಿತ್ತು. ಇಲ್ಲಿಯ ಪ್ರತಿಯೊಂದು ವಿಶೇಷ ಸ್ಥಳಗಳು ರಾಜರುಗಳ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವರಿಸುತ್ತವೆ. ಇದರೊಟ್ಟಿಗೆ ರಮ್ಯವಾದ ಪ್ರಕೃತಿ ಮನಸ್ಸಿಗೆ ನಿರಾಳ ಅನುಭವ ನೀಡುತ್ತದೆ.
ಬೆಂಗಳೂರು ನಗರದಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ಎಲ್ಲಾ ಕಾಲದಲ್ಲೂ ಬರಬಹುದು. 18ನೇ ಶತಮಾನದ ಇತಿಹಾಸ ಹೊಂದಿರುವ ಈ ತಾಣದಲ್ಲಿ ಹೈದರಾಲಿ ಹಾಗೂ ನಾಯಕ ಅರಸರ ಆಳ್ವಿಕೆಯ ಕಥೆಯು ಹೆಚ್ಚು ಖ್ಯಾತಿಯನ್ನು ಪಡೆದಿದೆ. ರಾಜ ವೈಭವದಲ್ಲಿ ಮೆರೆಯುತ್ತಿದ್ದ ಕೋಟೆಯ ಭೂತ ಹಾಗೂ ವರ್ತಮಾನದ ವಿಚಾರದ ಬಗ್ಗೆ ಮೆಲುಕು ಹಾಕೋಣ ಬನ್ನಿ...
ಹಿಂದಿನ ಕಥೆ
ತಿಮ್ಮಪ್ಪ ನಾಯಕ ಎನ್ನುವವರು ಈ ಕೋಟೆಯನ್ನು ಆಳುತ್ತಿದ್ದ ಮೊದಲ ಅರಸರು. 1799ರಲ್ಲಿ ಮದಕರಿ ನಾಯಕ ಹಾಗೂ ಹೈದರಾಲಿಯ ನಡುವೆ ಯುದ್ಧ ನಡೆಯಿತು. ಈ ಯುದ್ಧಗಳಲ್ಲಿ ಹೈದರಾಲಿಯ ಸೇನೆಯೇ ಜಯಶಾಲಿಯಾಯಿತು. ನಾಯಕ ಅರಸರು ಗತಿಯಿಲ್ಲದೆ ತಮ್ಮ ಅಧೀನದಲ್ಲಿದ್ದ ಅನೇಕ ಪ್ರದೇಶಗಳನ್ನು ಹೈದರಾಲಿಗೆ ಬಿಟ್ಟುಕೊಡಬೇಕಾಯಿತು.
ನಾಯಕರ ವಂಶ
ಕೋಟೆಯ ಮೊದಲ ನಾಯಕ ತಿಮ್ಮಪ್ಪ ನಾಯಕ. ಇವರ ನಂತರ ಮಗನಾದ ಮದಕರಿ ನಾಯಕ ಆಳುತ್ತಿದ್ದ. ಅವರ ಬಳಿಕ ಭರಮಪ್ಪ ನಾಯಕ ಆಡಳಿತಕ್ಕೆ ಬಂದ. ಈ ವಂಶದವರಲ್ಲೇ ಭರಮಪ್ಪ ನಾಯಕ ಹೆಚ್ಚು ಪ್ರಸಿದ್ಧಿ ಪಡೆದಿದ್ದ. ತನ್ನ ಕಾಲದಲ್ಲಿ ಅನೇಕ ದೇವಾಲಯ, ಅರಮನೆಗಳು ಹಾಗೂ ಕೋಟೆಗಳನ್ನು ನಿರ್ಮಿಸಿದ್ದ ಎನ್ನಲಾಗುತ್ತದೆ.
ದಂತಕಥೆ
ದಂತ ಕಥೆಯ ಪ್ರಕಾರ ಹಿಡಿಂಬಸುರ ಎನ್ನುವ ನರಭಕ್ಷಕ ಈ ಚಿತ್ರದುರ್ಗ ಬೆಟ್ಟದ ಮೇಲೆ ವಾಸಿಸುತ್ತಿದ್ದ. ಪಾಂಡವರು ತಮ್ಮ ಅಜ್ಞಾತ ವಾಸದ ಸಮಯದಲ್ಲಿ ಭೀಮ-ಮಧು ನಡುವೆ ದ್ವಂದ್ವ ಯುದ್ಧ ನಡೆಯಿತು. ಆ ಸಮಯದಲ್ಲಿ ಮಧು ಹತನಾದ. ಈ ಸನ್ನಿವೇಶಗಳು ನಡೆದಿದ್ದು ಈ ಬೆಟ್ಟದಲ್ಲಿಯೇ ಎನ್ನುವ ಕಥೆಯಿದೆ.
PC: en.wikipedia.org
ಭವ್ಯ ಕೋಟೆ
ಚಿತ್ರದುರ್ಗದ ಕೋಟೆ ಎಂದು ಪ್ರಸಿದ್ಧಿ ಪಡೆದ ಈ ಕೋಟೆಯನ್ನು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಏಳು ಸುತ್ತಿನ ಈ ಕೋಟೆ ವಿಶೇಷ ರಚನೆಯಿಂದ ಕೂಡಿದೆ. ಗುಪ್ತ ಸಂಚಾರದ ಸುರಂಗ ಮಾರ್ಗ, ಅನೇಕ ಮೆಟ್ಟಿಲುಗಳ ಸಾಲು, ದೇಗುಲಗಳು ಹಾಗೂ ಆಕರ್ಷಕ ಚಿತ್ತಾರಗಳ ಕೆತ್ತನೆಗಳಿಂದ ಕೂಡಿದೆ.
ಕೋಟೆಯ ಸುತ್ತ
ವೇದಾವತಿ ನದಿಯ ದಡದ ಮೇಲೆ ನಿಂತಿರುವ ಈ ಕೋಟೆಯ ವಾಯುವ್ಯ ಭಾಗದಲ್ಲಿ ತುಂಗಭದ್ರ ನದಿ ಹರಿಯುತ್ತದೆ. ಬೃಹದಾಕಾರದ ಕಲ್ಲು ಬಂಡೆಗಳ ಸಾಲು ಹಾಗೂ ಕಣಿವೆಗಳಿಂದ ಕೂಡಿದೆ.
PC: en.wikipedia.org
ಕೋಟೆಯ ನಿರ್ಮಾಣ
ಈ ಕೋಟೆಯ ನಿರ್ಮಾಣದಲ್ಲಿ ರಾಷ್ಟ್ರಕೂಟರು, ಚಾಲುಕ್ಯರು ಹಾಗೂ ನಾಯಕರುಗಳ ಶ್ರಮವಿದೆ. ಕೋಟೆಯ ಕೆಲವು ಭಾಗದಲ್ಲಿ ಚಾಲುಕ್ಯರ ಕೆತ್ತನೆಗಳಿರುವುದನ್ನು ಕಾಣಬಹುದು.
PC: en.wikipedia.org
ಕೋಟೆಯ ವಿವಿಧ ಹೆಸರು
ಸುಂದರ ಇತಿಹಾಸವನ್ನು ಸಾರುವ ಈ ಕೋಟೆಗೆ ಉಕ್ಕಿನ ಕೋಟೆ, ಏಳು ಸುತ್ತಿನ ಕೋಟೆ ಹಾಗೂ ಕಲ್ಲಿನ ಕೋಟೆ ಎಂತಲೂ ಕರೆಯುತ್ತಾರೆ.
PC: en.wikipedia.org
ಕೋಟೆಯ ಒಳಗೆ
ಈ ಕೋಟೆಯನ್ನು ಮೇಲಿನ ಕೋಟೆ ಹಾಗೂ ಕೆಳಗಿನ ಕೋಟೆ ಎಂದು ಎರಡು ವಿಭಾಗ ಮಾಡಲಾಗಿದೆ. ಮೇಲಿನ ಕೋಟೆಯ ವ್ಯಾಪ್ತಿಯಲ್ಲಿ 18 ದೇವಾಲಯಗಳಿವೆ. ಕೆಳಗಿನ ಕೋಟೆಯಲ್ಲಿ ಹಿಡಂಬೇಶ್ವರ ಎನ್ನುವ ಒಂದು ಪ್ರಮುಖ ದೇವಾಲಯವಿದೆ. ಹೈದರಾಲಿಯ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾದ ಅನೇಕ ಮಸೀದಿಗಳಿರುವುದನ್ನು ಕಾಣಬಹುದು.
PC: en.wikipedia.org
ಓಬವ್ವನ ಘಟನೆ
ವೀರ ಮಹಿಳೆ ಎಂದು ಹೆಸರಾದ ಓಬವ್ವ ಮದ್ದ ಹನುಮಂತಪ್ಪ ಎನ್ನುವ ಸೈನಿಕನ ಹೆಂಡತಿ. ಪತಿಗೆ ಊಟಕ್ಕೆ ನೀಡಿ, ನೀರು ತರಲು ಹೋಗುತ್ತಿದ್ದಳು. ಆ ಸಂದರ್ಭದಲ್ಲಿ ಗುಪ್ತ ಕಿಂಡಿಯೊಂದರಿಂದ ಶತ್ರುಗಳು ಕೋಟೆಯ ಒಳ ಪ್ರವೇಶ ಮಾಡುತ್ತಿರುವುದನ್ನು ನೋಡಿದಳು. ಧೈರ್ಯಗೆಡದೆ ಮರೆಯಲ್ಲಿ ನಿಂತು ಶತ್ರುಗಳನ್ನು ಒಬ್ಬೊಬ್ಬರನ್ನಾಗಿಯೇ ಒನಕೆಯಲ್ಲಿ ಹೊಡೆದು ಉರುಳಿಸಿದಳು. ಈ ಸನ್ನಿವೇಶವನ್ನು ನೋಡಿದ ಅವಳ ಪತಿ, ಉಳಿದ ಸೈನಿಕರನ್ನು ಕೂಗಿ ಕೋಟೆಯನ್ನು ರಕ್ಷಿಸಿದನು. ಈ ಕಥೆಯಿಂದ ಓಬವ್ವ ವೀರ ಮಹಿಳೆ ಎನ್ನುವ ಹೆಸರು ಪಡೆದಳು ಎನ್ನಲಾಗುತ್ತದೆ.
PC: en.wikipedia.org
ಇಂದಿನ ಸ್ಥಿತಿ
ಗತಕಾಲದ ಇತಿಹಾಸಕ್ಕೆ ಸಾಕ್ಷಿಯಾಗಿರುವ ಈ ಕೋಟೆ ಇಂದು ಸುಂದರ ಪ್ರವಾಸ ತಾಣವಾಗಿದೆ. ಅಲ್ಲದೆ ಚಲನ ಚಿತ್ರಕಾರರಿಗೆ ರಮಣೀಯ ಸ್ಥಳವೂ ಹೌದು. ಅನೇಕ ಭಾಷೆಗಳ ಚಲನ ಚಿತ್ರದ ಚಿತ್ರೀಕರಣಗಳನ್ನು ಇಲ್ಲಿ ಮಾಡಲಾಗಿದೆ.
PC: en.wikipedia.org