ಇದು ಶೈಲೋದ್ಭವರು ಆಳುತ್ತಿದ್ದ ಸಮಯದಲ್ಲಿ ನಿರ್ಮಿತವಾದ ದೇವಾಲಯ ಎನ್ನಲಾಗುತ್ತದೆ. ಶೈಲೋದ್ಭವರು ಇಂದಿನ ಒಡಿಶಾ ಪ್ರಾಂತ್ಯವನ್ನು ಸುಮಾರು 7-8 ಶತಮಾದಲ್ಲಿ ಆಳಿದ್ದರೆನ್ನಲಾಗಿದೆ. ಅಂದರೆ ಸುಮಾರು ಎಂಟನೇಯ ಶತಮಾನದಲ್ಲಿ ನಿರ್ಮಿತವಾದ ದೇವಾಲಯವಿದು ಎನ್ನಲಾಗಿದೆ. ಕೆಲವು ಇತಿಹಾಸ ತಜ್ಞರ ಪ್ರಕಾರ 650 ರಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎಂತಲೂ ಹೇಳಲಾಗಿದೆ.
ಪರಶುರಾಮರ 108 ಶಿವಾಲಯಗಳು
ಪರಶುರಾಮರ ತಪಸ್ಸಿಗೆ ಮೆಚ್ಚಿ ಶಿವನು ಅವರಿಗೆ ಒಲಿದು ಪರಶುರಾಮೇಶ್ವರನಾಗಿ ನೆಲೆಸಿರುವ ಪುರಾತನ ದೇವಾಲಯ ಇದಾಗಿದೆ. ಭಾರತದ ವಿವಿಧ ಭಾಗಗಳನ್ನು ಕಾಲದ ವಿವಿಧ ಸ್ತರಗಳಲ್ಲಿ ವಿವಿಧ ಸಾಮ್ರಾಜ್ಯಗಳು ಆಳಿವೆ. ಆಯಾ ಸಾಮ್ರಾಜ್ಯಗಳು ತಾವಾಳುತ್ತಿದ್ದ ಸಂದರ್ಭದಲ್ಲಿ ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ದೇವಾಲಯ, ಗುಡಿ-ಗುಂಡಾರಗಳನ್ನು ನಿರ್ಮಿಸಿದ್ದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಚಿತ್ರಕೃಪೆ: Itikanta Mohapatra
ಅದರಂತೆ ಅವರ ವಾಸ್ತು ವಿನ್ಯಾಸದ ಶೈಲಿಗಳೂ ಸಹ ಅವರಿಗಷ್ಟೆ ಸೀಮಿತವಾಗಿದ್ದವೆಂದು ಇಂದು ಅಂತಹ ರಚನೆಗಳಿಗೆ ಭೇಟಿ ನೀಡಿದಾಗ ಕಂಡುಕೊಳ್ಳಬಹುದಾದ ವಿಷಯವಾಗಿದೆ. ಅದೆ ರೀತಿಯಾಗಿ ಈ ಪರಶುರಾಮೇಶ್ವರನ ದೇವಾಲಯದ ವಿನ್ಯಾಸವು ವಿಶಿಷ್ಟವಾಗಿದೆ. ನಿಜ ಹೇಳಬೇಕೆಂದರೆ ಒಡಿಶಾ ಶೈಲಿಯ ವಾಸ್ತುಶಿಲ್ಪ ಕಲೆಯ ಪ್ರಪ್ರಥಮ ಕಲೆಯಾಗಿ ಈ ದೇವಾಲಯವನ್ನು ಬಣ್ಣಿಸಲಾಗುತ್ತದೆ.
ಸಪ್ತಮಾತೃಕೆಯರು, ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Daderot
ಪ್ರಾಯಶಃ ಭುವನೇಶ್ವರದಲ್ಲೆ ಅತ್ಯಂತ ಪ್ರಾಚೀನವಾದ ದೇವಾಲಯ ಇದಾಗಿದೆ ಎಂದು ನಂಬಲಾಗುತ್ತದೆ. ಹೌದು ಈ ದೇವಾಲಯವು ಒಡಿಶಾ ರಾಜ್ಯದ ಭುವನೇಶ್ವರ ನಗರದಲ್ಲಿದೆ. ಈ ದೇವಾಲಯದ ಇನ್ನೊಂದು ವಿಶೇಷತೆ ಎಂದರೆ ಸಪ್ತಮಾತೃಕೆಯರ ಶಿಲೆಗಳನ್ನು ಇಲ್ಲಿ ಕೆತ್ತಲಾಗಿರುವುದು. ಒಡಿಶಾ ರಾಜ್ಯದಲ್ಲೆ ಸಪ್ತಮಾತೃಕೆಯರ ಶಿಲ್ಪಗಳನ್ನು ಕೆತ್ತಲಾದ ಮೊದಲ ದೇವಾಲಯ ಇದಾಗಿದೆ ಎಂಬ ಖ್ಯಾತಿಗೂ ಪಾತ್ರವಾಗಿದೆ.
ಚಿತ್ರಕೃಪೆ: Bernard Gagnon
ದಂತಕಥೆಯಂತೆ ಈ ದೇವಾಲಯಕ್ಕೆ ಹೆಸರು ವಿಷ್ಣುವಿನ ಅವತಾರವಾದ ಪರಶುರಾಮರಿಂದ ಬಂದಿದೆ ಎನ್ನಲಾಗಿದೆ. ಪರಶುರಾಮರು ಮಾಡಿದ್ದರೆನ್ನಲಾದ ಕಠಿಣವಾದ ತಪಸ್ಸಿಗೆ ಮೆಚ್ಚಿದ ಶಿವನು ಇಲ್ಲಿ ಪರಶುರಾಮೇಶ್ವರನಾಗಿ ನೆಲೆಸ್ದನೆಂಬ ಪ್ರತೀತಿಯಿದೆ. ಅಲ್ಲದೆ ಶೈಲೋದ್ಭವರ ಕುಲದೇವ ಶಿವನೆ ಆಗಿದ್ದನು.
ಆಕರ್ಷಕ ಶಿಲ್ಪಕಲೆ, ಚಿತ್ರಕೃಪೆ: Bernard Gagnon
ಇದು ಮೂಲತಃ ಶಿವನಿಗೆ ಮುಡಿಪಾದ ದೇವಾಲಯವಾದರೂ ಶಾಸ್ತ ಪಂಗಡದ ಹಲವರು ದೇವ ದೇವತೆಯರ ಕೆತ್ತನೆಗಳು ಇಲ್ಲಿರುವುದನ್ನು ಕಾಣಬಹುದು. ಇದರಿಂದ ಶೈಲೋದ್ಭವರು ಇತರೆ ದೇವ ದೇವತೆಯರಿಗೂ ಸಹ ಸಮನಾದ ಗೌರವಾದರಗಳನ್ನು ನೀಡುತ್ತಿದ್ದರೆಂದು ತಿಳಿದುಬರುತ್ತದೆ.
ಪರಶುರಾಮರ ಕೊಡಲಿಗಂಟಿದ್ದ ರಕ್ತಕಲೆ ನಿವಾರಿಸಿದ ತೀರ್ಥಕ್ಷೇತ್ರ!
ಇಂದು ಈ ದೇವಾಲಯವು ಒಡಿಶಾ ರಾಜ್ಯದಲ್ಲೆ ಸಾಕಷ್ಟು ಮನ್ನಣೆಗಳಿಸಿರುವ ಜನಪ್ರೀಯ ಧಾರ್ಮಿಕ ತಾಣವಾಗಿದೆ. ಅಲ್ಲದೆ ಭುವನೇಶ್ವರದಲ್ಲಿ ನೋಡಬಹುದಾದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದ್ದು ಪ್ರವಾಸಿಗರ ಗಮನಸೆಳೆಯುತ್ತದೆ.