ಬೆಟ್ಟ ಅಥವಾ ಗುಡ್ಡದ ಮೇಲೆ ದೇವಾಲಯಗಳಿರುವುದು ಭಾರತದಲ್ಲಿ ಸರ್ವೇ ಸಾಮಾನ್ಯವಾದ ಸಂಗತಿ. ಆದರೆ ಒಂದೆ ಒಂದು ವಿಶಾಲವಾದ ಬೆಟ್ಟದಲ್ಲಿ ಸಾವಿರಕ್ಕೂ ಅಧಿಕ ದೇವಾಲಯಗಳಿವೆಯೆಂದರೆ! ದಿಗ್ಭ್ರಮೆ ಮೂಡಿಸುವಂತಹ ವಿಚಾರ. ಆದರೂ ಇದು ಸತ್ಯ ಸಂಗತಿ. ಹೌದು ಗುಜರಾತ್ ರಾಜ್ಯದ ಭಾವನಗರ್ ಜಿಲ್ಲೆಯ ಪಾಲಿತಾನಾ ಎಂಬಲ್ಲಿರುವ ಶತ್ರುಂಜಯ ಬೆಟ್ಟದ ಮೇಲೆ ಈ ಅಪರೂಪದ ಅಸಂಖ್ಯಾತ ದೇವಾಲಯಗಳನ್ನು ಕಾಣಬಹುದು. ಒಂದೊಮ್ಮೆ ಪದ್ಲಿಪ್ತಾಪುರ ಎಂದು ಕರೆಯಲ್ಪಡುತ್ತಿದ್ದ ಇಂದಿನ ಪಾಲಿತಾನಾ "ದೇವಾಲಯಗಳ ನಗರ" ಎಂಬ ಅಡ್ಡ ಹೆಸರನ್ನೂ ಪಡೆದಿದೆ.
ಅಗಾಧ ಪ್ರಮಾಣದಲ್ಲಿ ಜೈನ ದೇವಾಲಯಗಳಿರುವ ಈ ಪರ್ವತವು ಜಾರ್ಖಂಡ್ ನಲ್ಲಿರುವ ಶಿಖರ್ಜೀ ಜೊತೆಗೆ ಜೈನ ಸಮುದಾಯದವರ ಅತಿ ಪವಿತ್ರ ಯಾತ್ರಾ ಕೇಂದ್ರವಾಗಿದೆ. ಭಗವಂತನ ವಾಸಕ್ಕೆಂದೆ ನಿರ್ಮಿಸಲಾದ ಈ ದೇವಾಲಯ ಪಟ್ಟಣದಲ್ಲಿ ಅರ್ಚಕರನ್ನೂ ಹಿಡಿದು ಯಾವೋಬ್ಬ ಸಾಮಾನ್ಯನು ರಾತ್ರಿಯ ಹೊತ್ತು ತಂಗುವ ಹಾಗಿಲ್ಲ. ಜೀವನದಲ್ಲಿ ಒಮ್ಮೆಯಾದರೂ ಈ ತೀರ್ಥ ಕ್ಷೇತ್ರದ ಯಾತ್ರೆ ಮಾಡಿದಾಗ ಮಾತ್ರವೇ ನಿರ್ವಾಣ /ಮೋಕ್ಷ ಹೊಂದಲು ಸಾಧ್ಯ ಎಂಬ ಗಾಢವಾದ ನಂಬಿಕೆ ಜೈನ ಸಮುದಾಯದವರಲ್ಲಿದೆ. 1800 ಅಡಿಗಳಷ್ಟು ಎತ್ತರವಿರುವ ಈ ಬೆಟ್ಟವನ್ನು ಏರಲು 3745 ಮೆಟ್ಟಿಲುಗಳಿವೆ. ಈ ಲೇಖನವು ಈ ಅಪರೂಪದ ದೇವಾಲಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.
ಕಿರು ಇತಿಹಾಸ:
ರಾಜಪಿಪ್ಲಾ ಹಾಗು ಗೋಹಿಲ್ ರಜಪೂತ ವಂಶಗಳ ಸಾಮ್ರಾಜ್ಯವಾಗಿದ್ದ ಪಾಲಿತಾನಾ ಭಾರತ ಸ್ವಾತಂತ್ರ್ಯ ಹೊಂದುವುದಕ್ಕಿಂತ ಮುಂಚೆ ಒಂದು ಸ್ವತಂತ್ರ ರಾಜ್ಯವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದನಂತರ ಗುಜರಾತ್ ರಾಜ್ಯದಲ್ಲಿ ಇದನ್ನು ಲೀನ ಮಾಡಲಾಯಿತು.
ಚಿತ್ರಕೃಪೆ: Malaiya
ಅಮೋಘ ದೇವಾಲಯಗಳು:
ಈ ಪವಿತ್ರವಾದ ಶತ್ರುಂಜಯ ಬೆಟ್ಟದಲ್ಲಿ ಜೈನರ ನೂರಾರು ದೇವಾಲಯಗಳಿವೆ. 800 ಕ್ಕೂ ಅಧಿಕ ದೇವಾಲಯಗಳು ಅಮೃತ ಶಿಲೆಯಲ್ಲಿ ಕೆತ್ತಲ್ಪಟ್ಟಿವೆ. ಧರ್ಮದಲ್ಲಿ ಶೃದ್ಧೆಯುಳ್ಳ ಪ್ರತಿಯೊಬ್ಬ ಜೈನನು ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇದನ್ನು ದರ್ಶಿಸಲು ಅಪೇಕ್ಷಿಸುತ್ತಾನೆ.
ಚಿತ್ರಕೃಪೆ: Bernard Gagnon
ಏಕೆ ಪವಿತ್ರ?
ಜೈನ ಧರ್ಮದ 23 ತೀರ್ಥಂಕರರೂ ಈ ಪರ್ವತಕ್ಕೆ ಭೇಟಿ ನೀಡಿದ್ದಾರೆಂದು ಹೇಳಲಾಗಿದ್ದು ಮೊದಲ ತೀರ್ಥಂಕರರಾದ ರಿಷಭರು ತಮ್ಮ ಮೊದಲ ಧರ್ಮೋಪನ್ಯಾಸವನ್ನು ಇಲ್ಲಿಯೆ ನೀಡಿದರು ಎಂದು ನಂಬಲಾಗಿದೆ. ಆದ್ದರಿಂದ ಜೈನರ ಶ್ವೇತಾಂಬರ ಪಂಗಡದವರಿಗೆ ಇದು ಅತಿ ಪ್ರಮುಖವಾದ ಯಾತ್ರಾ ಕ್ಷೇತ್ರವಾಗಿದೆ.
ಚಿತ್ರಕೃಪೆ: Bernard Gagnon
ದೇವಾಲಯಗಳು:
ಜೈನ ಧರ್ಮದಲ್ಲಿ ಶ್ವೇತಾಂಬರ ಹಾಗು ದಿಗಂಬರ ಎಂಬ ಎರಡು ಪಂಗಡಗಳಿವೆ. ಮೂರ್ತಿ ಪೂಜಕ ಶ್ವೇತಾಂಬರ ಪಂಗಡದವರ ಅಸಂಖ್ಯಾತ ದೇವಾಲಯಗಳು ಇಲ್ಲಿದ್ದು ದಿಗಂಬರ ಪಂಗಡದ ಕೇವಲ ಒಂದು ದೇವಾಲಯ ಇಲ್ಲಿದೆ.
ಚಿತ್ರಕೃಪೆ: Nirajdharamshi
ವ್ಯುತ್ಪತ್ತಿ:
ಜೈನರು ತಮ್ಮ ದೇವಾಲಯಗಳನ್ನು ದೆರಾಸರಗಳೆಂದು ಕರೆಯುತ್ತಾರೆ. ಸಾವಿರ ದೇವಾಲಯಗಳಿರುವ ಈ ಶತ್ರುಂಜಯ ಬೆಟ್ಟಕ್ಕೆ 108 ಇತರೆ ಹೆಸರುಗಳಿವೆ. ಮುಖ್ಯವಾಗಿ ಶತ್ರುಂಜಯ ಎಂದರೆ ಶತ್ರುಗಳ ಮೇಲೆ ವಿಜಯ ಸಾಧಿಸಿದವನು ಎಂಬರ್ಥ.
ಚಿತ್ರಕೃಪೆ: Bernard Gagnon
ಪ್ರಾಚೀನತೆ:
11 ನೇಯ ಶತಮಾನದಿಂದ ಪ್ರಾರಂಭವಾಗಿ ಸುಮಾರು 900 ವರ್ಷಗಳ ಕಾಲಾವಧಿಯಲ್ಲಿ ಈ ದೇವಾಲಯಗಳನ್ನು ನಿರ್ಮಿಸಲಾಗಿದೆ. ನಂತರ ಟರ್ಕಿಶ್ ಮುಸ್ಲಿಮರ ಆಕ್ರಮಣಕ್ಕೊಳಗಾದ ಈ ದೇವಾಲಯಗಳು 16 ನೇಯ ಶತಮಾನದಲ್ಲಿ ಮರುನಿರ್ಮಿತಗೊಂಡವು.
ಚಿತ್ರಕೃಪೆ: Bernard Gagnon
ಪುಂಡರೀಕ ಗಿರಿ:
ಜೈನರ ಮೊದಲ ತೀರ್ಥಂಕರರಾದ ರಿಶಭರು ತಮ್ಮ ಮೊದಲ ಧರ್ಮೋಪನ್ಯಾಸವನ್ನು ಇಲ್ಲಿ ನೀಡಿದ್ದರು. ಅವರ ಮೊಮ್ಮಗನಾದ ಪುಂಡರೀಕನು ಈ ಸ್ಥಳದಲ್ಲಿ ನಿರ್ವಾಣ ಪಡೆದನು. ಆದ್ದರಿಂದ ಮೂಲವಾಗಿ ಇದನ್ನು ಪುಂಡರೀಕಗಿರಿ ಎಂಬ ನಾಮದಿಂದ ಕರೆಯಲಾಗುತ್ತಿತ್ತು.
ಚಿತ್ರಕೃಪೆ: Nirajdharamshi
ಅನನ್ಯ ಸಂಬಂಧ:
ಇತಿಹಾಸದ ಪ್ರಕಾರ, ಒಂದೊಮ್ಮೆ ಅಜ್ಮೇರ್ ನ ಲುನಿಯಾ ಸೇಟ್ ತಿಲೋಕ್ಚಂದ್ ಎಂಬ ಶ್ರೀಮಂತ ವ್ಯಾಪಾರಿ ಹಲವು ಜನ ಭಕ್ತರೊಂದಿಗೆ ಈ ದೇವಾಲಯಕ್ಕೆ ತೆರಳುತ್ತಿದ್ದನು. ಬೆಟ್ಟ ಹತ್ತುವಾಗ ಅಂಗಾರ್ ಶಾ ಪೀರ್ ಎಂಬ ಪವಿತ್ರವಾದ ಮುಸ್ಲಿಮ್ ಸ್ಥಳದ ಮೂಲಕ ಹಾದು ಹೋಗುವಾಗ ಕೆಲ ಸಮಯ ಅಹಿತಕಾರಿ ಸಂದರ್ಭ ಒದಗಲಾಗಿ ಅದಕ್ಕೆ ವ್ಯಾಪಾರಿಯು ಸಂತನಿಗೆ ಬೆಲೆಯುಳ್ಳ ಕಾಣಿಕೆಗಳನ್ನು ಅರ್ಪಿಸಿದನು. ಇದರಿಂದ ಸಂತ ಸಂತಸ ಹೊಂದಲಾಗಿ ಇಂದಿಗೂ ಕೂಡ ಯಾತ್ರಾರ್ಥಿಗಳು ಬೆಟ್ಟ ಹತ್ತುವಾಗ ಸಿಗುವ ಸಮಾಧಿಗೆ ಬೆಲೆ ಬಾಳುವ ಹೊದಿಕೆಗಳನ್ನು ಸಮರ್ಪಿಸಿ ಮುನ್ನಡೆಯುತ್ತಾರೆ.
ಚಿತ್ರಕೃಪೆ: Shaileshpatel
ಮೋಕ್ಷ:
ಜೈನರ 23 ತೀರ್ಥಂಕರರು ಇಲ್ಲಿಗೆ ಭೇಟಿ ನೀಡಿರುವುದರಿಂದ ಈ ಕ್ಷೇತ್ರವು ಜೈನ ಶ್ವೇತಾಂಬರ ಪಂಗಡವರಿಗೆ ಅತಿ ಪವಿತ್ರವಾದ ಯಾತ್ರಾ ಕೇಂದ್ರವಾಗಿದೆ. ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಕ್ಷೇತ್ರ ದರುಶನ ಮಾಡಿದರೆ ನಿರ್ವಾಣ/ಮೋಕ್ಷ ಪಡೆಯಲು ಆ ವ್ಯಕ್ತಿ ಅರ್ಹನಾಗುತ್ತಾನೆ ಎಂಬ ನಂಬಿಕೆ ಜೈನ ಧರ್ಮದವರಲ್ಲಿದೆ.
ಚಿತ್ರಕೃಪೆ: Trinidade
ತೆರಳುವ ಕ್ರಮ:
ಗುಂಪು ಗುಂಪಾಗಿ ನಿರ್ಮಿಸಲಾದ ಈ ದೇವಾಲಯಗಳನ್ನು ಟಂಕಗಳು ಎಂದು ಕರೆಯಲಾಗುತ್ತದೆ. ಜೈನರು ಬರಿಗಾಲಿನಲ್ಲೆ ಈ ಕ್ಷೇತ್ರ ದರುಶನಕ್ಕೆ ತೆರಳುತ್ತಾರೆ. ಪ್ರಸ್ತುತ, ಬೆಟ್ಟವನ್ನು ಹತ್ತಲು ಮೂರು ಮಾರ್ಗಗಳಿವೆ.
ಚಿತ್ರಕೃಪೆ: Kalpeshzala59
ಧಾರ್ಮಿಕ ಆಚರಣೆಗಳು:
ಕ್ಷೇತ್ರ ದರ್ಶನಕ್ಕೆ ತೆರಳುವಾಗ ಕಟ್ಟು ನಿಟ್ಟಾಗಿ ಶಾಂತಿಯನ್ನು ಕಾಯ್ದುಕೊಳ್ಳಲಾಗುತ್ತದೆ. ಜೈನ ಧರ್ಮದ ಪ್ರಕಾರ, ಗಾಳಿಯಲ್ಲಿರುವ ಬಹು ಚಿಕ್ಕದಾದ ಕ್ರಿಮಿ ಕೀಟಗಳು, ಬಾಯಿಯೊಳಗೆ ಪ್ರವೇಶಿಸಿ ಅಥವಾ ಬಿಟ್ಟ ಉಸಿರಿನಿಂದ ಸಾಯಬಾರದೆಂಬುವ ದೃಷ್ಟಿಯಿಂದ ಒಂದು ಪಟ್ಟಿಯಿಂದ ಬಾಯಿಯನ್ನು ಮುಚ್ಚಿಕೊಂಡಿರಲಾಗಿರುತ್ತದೆ. ಹೋಗಿ ಬರುವವರೆಗೂ ಕಟ್ಟು ನಿಟ್ಟಾದ ಉಪವಾಸವನ್ನು ಆಚರಿಸಲಾಗುತ್ತದೆ. ಇನ್ನೂ ಹಿರಿಯರು ಅಥವಾ ಚಿಕ್ಕ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರು ಮೊಸರನ್ನು ಮಾತ್ರ ತೆಗೆದುಕೊಳ್ಳಬಹುದು. ಬೆಟ್ಟದ ತುದಿಯಲ್ಲಿ ಇದು ದೊರೆಯುತ್ತದೆ. ಹಿರಿಯ ವಯಸ್ಸಿನವರಿಗೆ ಬೆಟ್ಟ ಏರಲು ಕಷ್ಟವಾಗುತ್ತಿದ್ದರೆ ಪಲ್ಲಕ್ಕಿಯಲ್ಲಿ ಕುರಿಸಿಕೊಂಡು ಹೋಗುವ ಸೌಲಭ್ಯವನ್ನು ಅವರ ತೂಕದ ಅನುಸಾರವಾಗಿ ನಿಗದಿಪಡಿಸಲಾದ ಶುಲ್ಕವನ್ನು ಪಾವತಿಸುವುದರ ಪಡೆದುಕೊಳ್ಳಬಹುದು
ಚಿತ್ರಕೃಪೆ: Bernard Gagnon
ಆಚರಣೆಗಳು:
ಹೀಗೆ ಈ ಕ್ಷೇತ್ರ ದರ್ಶನವನ್ನು ಒಂದೆ ದಿನದಲ್ಲೆ ಪೂರ್ಣಗೊಳಿಸಿಕೊಳ್ಳಬೇಕು. ಏಕೆಂದರೆ ದೇವರಿಗಾಗಿ ನಿರ್ಮಿಸಲಾಗಿರುವ ಕ್ಷೇತ್ರ ಇದಾಗಿರುವುದರಿಂದ ರಾತ್ರಿಯ ಹೊತ್ತು ಅರ್ಚಕರೂ ಕೂಡ ಇಲ್ಲಿ ತಂಗುವ ಹಾಗಿಲ್ಲ. ಆಹಾರವನ್ನು ಕ್ಷೇತ್ರ ದರ್ಶಿಸಿದ ಬಳಿಕವೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಆನಂದಜಿ ಕಲ್ಯಾಣಜಿ ಟ್ರಸ್ಟ್ ನ ಸಭಾಂಗಣದಲ್ಲಿ ಸೇರಬಹುದು.
ಚಿತ್ರಕೃಪೆ: Bernard Gagnon
ಮರುನವೀಕರಣ:
ಶ್ರೀಮಂತ ಭಕ್ತಾದಿಗಳು ಇಷ್ಟವಿದ್ದಲ್ಲಿ ತಮ್ಮ ದೆಗುಲಗಳನ್ನು ನಿರ್ಮಿಸಬಹುದು. ಗತಕಾಲದಲ್ಲಿ ಹಲವಾರು ವ್ಯಾಪಾರಿಗಳು ಇಲ್ಲಿ ಭೇಟಿ ನೀಡಿ ಚಿಕ್ಕ ಚಿಕ್ಕ ದೇವಾಲಯಗಳನ್ನು ನಿರ್ಮಿಸಿರುವುದರಿಂದ ಇಲ್ಲಿ ಸಾವಿರಕ್ಕೂ ಅಧಿಕವಾದ ದೇವಾಲಯಗಳನ್ನು ಕಾಣಬಹುದು. ಒಟ್ಟಾರೆಯಾಗಿ ಇಲ್ಲಿರುವ ಪ್ರಮುಖ ದೇವಾಲಯಗಳೆಂದರೆ ಆದಿನಾಥ, ಕುಮಾರಪಾಲ, ಸಂಪ್ರತಿರಾಜಾ, ವಿಮಲ ಶಾಹ್, ಸಹಸ್ರಕೂಟ, ಅಷ್ಟಪದ ಹಾಗು ಚೌಮುಖ ದೇವಾಲಯಗಳು. ಇವುಗಳಲ್ಲಿ ಸಾಕಷ್ಟು ದೇವಾಲಯಗಳು ಹದಿನಾರನೇಯ ಶತಮಾನದಲ್ಲಿ ಮರು ನವೀಕರಣಗೊಂಡಿವೆ.
ಚಿತ್ರಕೃಪೆ: Bernard Gagnon
ತೆರಳುವ ಬಗೆ:
ಒಟ್ಟಾರೆ ಈ ಬೆಟ್ಟದ ಎತ್ತರ 3.5 ಕಿ.ಮೀ. ಏನಿಲ್ಲವೆಂದರೂ ಎರಡರಿಂದ ಮೂರು ಘಂಟೆಗಳಷ್ಟು ಕಾಲ್ನಡಿಗೆಯ ಪ್ರಯಾಣವಾಗಿದೆ ಇದು. ಭಾವನಗರ್ ಪಟ್ಟಣದ ನೈಋತ್ಯಕ್ಕೆ ಸುಮಾರು 50 ಕಿ.ಮೀ ದೂರದಲ್ಲಿ ಪಾಲಿತಾನ ಕ್ಷೇತ್ರವಿದೆ. ಇಲ್ಲಿ ಚಿಕ್ಕದಾದ ರೈಲು ನಿಲ್ದಾಣವಿದ್ದು ಸೋನ್ಗಡ್ ಹಾಗು ಭಾವನಗರ್ ಗಳೊಂದಿಗೆ ಸಂಪರ್ಕ ಹೊಂದಿದೆ. ಅಲ್ಲದೆ ಘಂಟೆಗೊಮ್ಮೆಯಂತೆ ಪಾಲಿತಾನಾಗೆ ಭಾವನಗರ್ ಪಟ್ಟಣದಿಂದ ಬಸ್ ಸೇವೆಯಿದೆ.
ಚಿತ್ರಕೃಪೆ: Cakothari