ಕೃಷಿ ಪ್ರಧಾನ ಜಿಲ್ಲೆ ಎನಿಸಿಕೊಂಡಿರುವ ಹಾವೇರಿ ಕರ್ನಾಟಕದ ಮಧ್ಯ ಭಾಗದಲ್ಲಿದೆ. ಬ್ಯಾಡಗಿ ಮೆಣಸಿಗೆ ಪ್ರಸಿದ್ಧಿ ಪಡೆದ ಈ ತಾಣ ಐತಿಹಾಸಿಕ ವಿಚಾರದಲ್ಲೂ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಇಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಯು ಜನರ ಜೀವನಾಡಿ. ಏಳು ತಾಲೂಕು ಕೇಂದ್ರಗಳನ್ನು ಹೊಂದಿರುವ ಈ ತಾಣದಲ್ಲಿ ರಮ್ಯ ಕಲಾಕೃತಿಯಿಂದ ಕೂಡಿರುವ ದೇಗುಲ ಹಾಗೂ ವನ್ಯ ಜೀವಿಧಾಮಗಳನ್ನು ನೋಡಬಹುದು.
ಬೆಂಗಳೂರಿನಿಂದ 335 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ 5 ತಾಸುಗಳ ಪ್ರಯಾಣ ಮಾಡಬೇಕು. ಕಲೆಯ ಮೆರಗು, ವಿವಿಧ ಬಗೆಯ ಕೃಷಿ ಉತ್ಪನ್ನಗಳು, ಮಹಿಳೆಯರೇ ಸಿದ್ಧಗೊಳಿಸುವ ಉತ್ಪನ್ನಗಳು ಹಾಗೂ ವಿವಿಧ ಮಾರಾಟ ಮಳಿಗೆಗಳನ್ನು ಒಳಗೊಂಡಿರುವ ಹಾವೇರಿಯಲ್ಲಿ ನೋಡಬಹುದಾದ ಪ್ರಮುಖ ಪ್ರವಾಸ ತಾಣಗಳ ಪರಿಚಯ ಇಲ್ಲಿದೆ.
ತಾರಕೇಶ್ವರ ದೇಗುಲ
12ನೇ ಶತಮಾನದ ಇತಿಹಾಸ ಹೊಂದಿರುವ ಈ ದೇಗುಲ ಶಿವನಿಗೆ ಮೀಸಲಾಗಿದೆ. ಚಾಲುಕ್ಯರ ಶಿಲ್ಪ ಕಲೆಯನ್ನು ಹೋಲುವ ಹೊಯ್ಸಳರ ಕಲಾಕೃತಿಯಿಂದ ದೇಗುಲ ಕಂಗೊಳಿಸುತ್ತದೆ. ಇಲ್ಲಿ ಶಿವನ ಆರಾಧನೆಯ ಜೊತೆಗೆ ಗಣೇಶ ಹಾಗೂ ನಂದಿಯನ್ನು ಪೂಜಿಸಲಾಗುತ್ತದೆ. ವಿಶಾಲವಾದ ಜಾಗದಲ್ಲಿ ಕಂಗೊಳಿಸುವ ಈ ದೇವಾಲಯದ ಸಭಾಂಗಣದಲ್ಲಿ 12 ಕಂಬಗಳಿವೆ. ಪ್ರತಿಯೊಂದರ ಮೇಲೂ ಅಪರೂಪದ ಕೆತ್ತನೆಗಳಿರುವುದು ವಿಶೇಷ.
PC: en.wikipedia.org
ಮುಕ್ತೇಶ್ವರ ದೇವಾಲಯ
ಜಕ್ಕಣಾಚಾರಿ ಶೈಲಿಯಲ್ಲಿ ನಿರ್ಮಾಣಗೊಂಡ ಅಪರೂಪದ ದೇಗುಲ ಇದು. 12ನೇ ಶತಮಾನದ ಈ ದೇಗುಲದಲ್ಲಿ ಉದ್ಭವ ಶಿವಲಿಂಗವನ್ನು ಆರಾಧಿಸಲಾಗುತ್ತದೆ. ಕಲ್ಯಾಣ ಚಾಲುಕ್ಯರ ಆಡಳಿತದ ಅವಧಿಯಲ್ಲಿ ನಿರ್ಮಾಣಗೊಂಡ ಈ ದೇವಾಲಯ ಸೂಕ್ಷ್ಮ ಕಲಾಕೃತಿಯಿಂದ ಕೂಡಿದೆ. ಆ ಕಾಲಕ್ಕೆ ಸಂಬಂಧಿಸಿದ ಕೆಲವು ಶಾಸನಗಳು ಹಾಗೂ ಬರಹಗಳನ್ನು ಇಲ್ಲಿ ಕಾಣಬಹುದು.
PC: en.wikipedia.org
ಗಳಗನಾಥ ದೇಗುಲ
ಹಾವೇರಿಯ ಪವಿತ್ರ ಕ್ಷೇತ್ರಗಳಲ್ಲೊಂದಾದ ಈ ದೇಗುಲ ವರದಾ ಮತ್ತು ತುಂಗಭದ್ರಾ ನದಿಯ ಸಂಗಮ ಸ್ಥಳದಲ್ಲಿದೆ. ಗಳಗೇಶ್ವರ ದೇಗುಲದಿಂದಲೇ ಈ ಊರಿಗೆ ಗಳಗನಾಥ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ. ಈ ದೇವಾಲಯ 28ಮೀ. ಉದ್ದ, 14ಮೀ. ಅಗಲವನ್ನು ಹೊಂದಿದೆ. ದೇವಸ್ಥಾನದ ಸುತ್ತಲೂ ಪೌರಾಣಿಕ ಕಥೆಯನ್ನು ಕೆತ್ತಲಾಗಿದೆ. ಇದರ ವಿಶೇಷತೆ ಎಂದರೆ ಅಡಿಪಾಯವು ಪಿರಾಮಿಡ್ ರೀತಿಯಲ್ಲಿರುವುದು. ಗರ್ಭಗೃಹದಲ್ಲಿ ಶಿವಲಿಂಗ ಹಾಗೂ ಸುಂದರ ಕೆತ್ತನೆಗಳಿರುವುದನ್ನು ವೀಕ್ಷಿಸಬಹುದು.
PC: en.wikipedia.org
ಕೃಷ್ಣ ಮೃಗ ಅಭಯಾರಣ್ಯ
ದಟ್ಟವಾದ ಗಿಡಮರಗಳು ಹಾಗೂ ಪೊದೆಗಳಿಂದ ಕೂಡಿರುವ ಈ ಅಭಯಾರಣ್ಯದಲ್ಲಿ ಕೃಷ್ಣ ಮೃಗಗಳನ್ನು ಸಂರಕ್ಷಿಸಲಾಗುತ್ತದೆ. 14.87 ಸ್ಕ್ವೇರ್ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಅಭಯಾರಣ್ಯ ಬೆಂಗಳೂರಿನಿಂದ 301 ಕಿ.ಮೀ. ದೂರದಲ್ಲಿದೆ. ಕೃಷ್ಣ ಮೃಗಗಳ ಸುಂದರ ದೃಶ್ಯವನ್ನು ಸೆರೆಹಿಡಿಯಲು ಸೂಕ್ತ ಸ್ಥಳವಿದು.
PC: en.wikipedia.org
ಸಿದ್ಧೇಶ್ವರ ದೇವಾಲಯ
ಶಿವನ್ನು ಆರಾಧಿಸುವ ಈ ದೇಗುಲ ಹಾವೇರಿಯ ನಗರ ಪ್ರದೇಶದಲ್ಲಿದೆ. ಪಶ್ಚಿಮ ಮುಖವಾಗಿರುವ ಈ ದೇಗುಲ 11ನೇ ಶತಮಾನದ್ದು. ವಿಶೇಷ ಕೆತ್ತನೆಗಳಿಂದ ಕೂಡಿರುವ ಈ ದೇಗುಲದ ಸಭಾಂಗಣದಲ್ಲಿ ಉಮಾ ಮಹೇಶ್ವರ, ವಿಷ್ಣು, ಲಕ್ಷ್ಮಿ, ಸೂರ್ಯದೇವ, ನಾಗದೇವತೆಗಳು ಹಾಗೂ ಗಣಪತಿಯ ಕೆತ್ತನೆಗಳಿರುವುದನ್ನು ಕಾಣಬಹುದು.
PC: en.wikipedia.org
ಕದಂಬೇಶ್ವರ ದೇಗುಲ
ಚೋಳರ ವಾಸ್ತುಶಿಲ್ಪವನ್ನು ಒಳಗೊಂಡಿರುವ ಕದಂಬೇಶ್ವರ ದೇಗುಲ ಹಾವೇರಿಯ ರಟ್ಟಿಹಳ್ಳಿ ವ್ಯಾಪ್ತಿಯಲ್ಲಿದೆ. ಸೂಕ್ಷ್ಮ ಕಲಾಕೃತಿಯನ್ನು ಹೊಂದಿರುವ ಈ ದೇಗುಲ ಸುಂದರ ಇತಿಹಾಸವನ್ನು ಹೊಂದಿದೆ. ನಗರ ಪ್ರದೇಶದದಿಂದ 60 ಕಿ.ಮೀ. ದೂರದಲ್ಲಿರುವ ಈ ದೇಗುಲ ರಾಷ್ಟ್ರಕೂಟರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊಂಡಿತು ಎನ್ನಲಾಗುತ್ತದೆ.
ಬಂಕಾಪುರ ನವಿಲುಧಾಮ
ಹಾವೇರಿ ನಗರದಿಂದ 22 ಕಿ.ಮೀ. ದೂರದಲ್ಲಿರುವ ಈ ತಾಣ ಬಂಕಾಪುರ ಎನ್ನುವ ಹಳ್ಳಿಯಲ್ಲಿದೆ. 139 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಧಾಮ ನೋಡುಗರಿಗೆ ಸುಂದರ ಅನುಭವ ನೀಡುತ್ತದೆ. ಇಲ್ಲಿರುವ ಒಂದು ಕೋಟೆಯು ನವಿಲುಗಳಿಗೆ ವಾಸಸ್ಥಾನ ವಾಗಿದೆ. ವಿವಿಧ ಬಗೆಯ ನವಿಲುಗಳನ್ನು ಇಲ್ಲಿ ಕಾಣಬಹುದು.
PC: en.wikipedia.org